ಹೈದರಾಬಾದ್: ಸಮಸ್ಯೆ ಇರುವುದು ನಿರುದ್ಯೋಗದಲ್ಲಿ, ಅದನ್ನು ಬಗೆಹರಿಸಲಾಗದ ನಿಮಗೆ ದೇಶದಲ್ಲಿ ದಂಪತಿಗೆ ಎರಡು ಮಕ್ಕಳ ನೀತಿ ಕಡ್ಡಾಯದ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ರ ಹೇಳಿಕೆ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.
ತೆಲಂಗಾಣದ ನಗರಸಭೆ ಚುನಾವಣೆ ಕುರಿತು ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಹೈದರಾಬಾದ್ ಸಂಸದ ಒವೈಸಿ, ಕಳೆದ ಐದೂವರೆ ವರ್ಷಗಳಲ್ಲಿ ಉದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ವಿಫಲವಾಗಿದೆ. ದೇಶದಲ್ಲಿ ಶೇ.60 ರಷ್ಟು ಜನರು 40 ವರ್ಷಕ್ಕಿಂತ ಒಳಪಟ್ಟವರಿದ್ದಾರೆ. ಯುವಕರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 2018 ರಲ್ಲಿ ಪ್ರತಿದಿನಕ್ಕೆ 36 ಯುವಕರು ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 36 ಮಕ್ಕಳನ್ನು ಬದುಕಿಸುವಲ್ಲಿ ವಿಫಲರಾದ ನಿಮಗೆ ಈಗ ಎರಡು ಮಕ್ಕಳ ನೀತಿ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಮೋಹನ್ ಭಾಗವತ್ ವಿರುದ್ಧ ಗುಡುಗಿದ್ದಾರೆ.