ಮಯೂರ್ಭಂಜ್(ಒಡಿಶಾ): ಚಿಕ್ಕಮ್ಮನ ಶಿರಚ್ಛೇದ ಮಾಡಿರುವ ವ್ಯಕ್ತಿ ಆಕೆಯ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಒಡಿಶಾದ ಮಯೂರ್ಭಂಜ್ನ ಕರಾಕಾಚಿಯಾ ಗ್ರಾಮದಲ್ಲಿ ನಡೆದಿದೆ.
ವಾಮಾಚಾರ ನಡೆಸುತ್ತಿದ್ದಳು ಎಂಬ ಅನುಮಾನದ ಮೇಲೆ ಚಿಕ್ಕಮ್ಮನ ತಲೆ ಕತ್ತರಿಸಿರುವ 30 ವರ್ಷದ ವ್ಯಕ್ತಿ 13 ಕಿಲೋ ಮೀಟರ್ ನಡೆದು ಬಂದು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದ ವ್ಯಕ್ತಿ! ಚಿಕ್ಕಮ್ಮ ಮಾಡಿರುವ ವಾಮಾಚಾರದಿಂದಾಗಿ ಮೂರು ದಿನಗಳ ಹಿಂದೆ ಮಗಳು ಸಾವನ್ನಪ್ಪಿದ್ದಾಳೆ ಎಂದು ಆಕ್ರೋಶಗೊಂಡ ಚಂಪಾ ಸಿಂಗ್ ಎಂಬಾತ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಇವರಿಬ್ಬರು ಬುಡಕಟ್ಟು ಜನಾಂಗದವರಾಗಿದ್ದು, ಮಹಿಳೆ ಮನೆಯಲ್ಲಿ ಮಲಗಿದ್ದ ವೇಳೆ ಆಕೆಯನ್ನ ಹೊರಗೆ ಎಳೆದುಕೊಂಡು ಬಂದು ಕೊಲೆ ಮಾಡಿದ್ದಾನೆ. ಕೊಲೆ ಮಾಡಲು ಕೊಡಲಿ ಬಳಕೆ ಮಾಡಿದ್ದಾನೆ ಎಂದು ಅಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಘಟನೆ ವೇಳೆ ಅನೇಕರು ಸ್ಥಳದಲ್ಲೇ ಉಪಸ್ಥಿತರಿದ್ದರೂ ಈ ಕೃತ್ಯವನ್ನ ಯಾರೂ ತಡೆದಿಲ್ಲ ಎಂದು ತಿಳಿದು ಬಂದಿದೆ. ಈಗಾಗಲೇ ಆತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.