ನವದೆಹಲಿ:ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಪರಿಷ್ಕರಣೆ ಪ್ರಕ್ರಿಯೆ ವೇಳೆ ನಾಗರಿಕರಿಂದ ಯಾವುದೇ ದಾಖಲೆ ನೀಡುವಂತೆ ಒತ್ತಾಯ ಮಾಡುವುದಿಲ್ಲ. ದಾಖಲೆ ಇಲ್ಲದವರನ್ನು 'ಅನುಮಾನಾಸ್ಪದ' ವ್ಯಕ್ತಿಗಳು ಎಂದು ಪರಿಗಣನೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಅಮಿತ್ ಶಾ, ಜನರು ಮಾಹಿತಿ ಕೇಳುವವರು ಕೇಳುವ ಪ್ರಶ್ನೆಗಳಿಗೆ ಜನರು ಉತ್ತರಿಸಿದರೆ ಸಾಕು. ಸಿಎಎ ಮತ್ತು ಎನ್ಪಿಆರ್ ಬಗ್ಗೆ ಅಲ್ಪಸಂಖ್ಯಾತ ಸಮುದಾಯದವರು ಯಾರೂ ಕೂಡ ಅನುಮಾನ ಹೊಂದಿರುವುದು ಬೇಡ ಎಂದು ಅಮಿತ್ ಶಾ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಯಾವುದೇ ವಿಭಾಗವು ಯಾರೊಬ್ಬರ ಪೌರತ್ವವನ್ನೂ ಕೂಡ ಕಸಿದುಕೊಳ್ಳುವುದಿಲ್ಲ. ಎನ್ಪಿಆರ್ ದೇಶದ ಸಾಮಾನ್ಯ ನಿವಾಸಿಗಳ ನೋಂದಣಿಯಾಗಿದೆ. ಜನಗಣತಿ 2011ರ ಮನೆಗಳ ಮಾಹಿತಿ ಒಳಗೊಂಡಂತೆ, 2010ರಲ್ಲಿ ಎನ್ಪಿಆರ್ ಡೇಟಾವನ್ನು ಕೊನೆಯದಾಗಿ ಸಂಗ್ರಹಿಸಲಾಗಿದೆ ಎಂದರು.
ಪ್ರತಿಪಕ್ಷಗಳ ಮುಖಂಡರಿಗೆ ಸಿಎಎ ಮತ್ತು ಎನ್ಪಿಆರ್ ಬಗ್ಗೆ ಈಗಲೂ ಅನುಮಾನಗಳು ಇದ್ದರೆ, ಸ್ಪಷ್ಟನೆಗಾಗಿ ಸಮಯ ಕೇಳಿ. ಈ ಬಗ್ಗೆ ವಿವರಣೆ ನೀಡಲು ನಾವು ಸಿದ್ಧ. ನನಗೆ ಸಕಾರಾತ್ಮಕ ಚರ್ಚೆ ಬೇಕು. ಅನುಮಾನಗಳು ಹಾಗೆಯೇ ಉಳಿಯಬಾರದು ಎಂದು ಹೇಳಿದರು.
ದೆಹಲಿ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದ ಶಾ, ಸಿಎಎ ಪರ-ವಿರೋಧ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಭುಗಿಲೆದ್ದ ಹಿಂಸಾಚಾರಕ್ಕೆ ನಲುಗಿದ್ದ ಈಶಾನ್ಯ ದಿಲ್ಲಿಯಲ್ಲೀಗ ಶಾಂತಿ ನೆಲೆಸಿದೆ. ಸಾಕ್ಷಿಗಳ ಆಧಾರದ ಮೇಲೆ ಗಲಭೆಗೆ ಸಂಬಂಧಿಸಿದಂತೆ 700ಕ್ಕೂ ಹೆಚ್ಚು ಎಫ್ಐಆರ್ ದಾಖಲಿಸಲಾಗಿದೆ ಮತ್ತು 2,647 ಜನರನ್ನು ಬಂಧಿಸಲಾಗಿದೆ. 53 ಜೀವಗಳನ್ನು ಬಲಿಪಡೆದ ಹಿಂಸಾಚಾರದ ಹಿಂದಿರುವ ದೇಶ ವಿರೋಧಿ ಶಕ್ತಿಗಳನ್ನು ಮಟ್ಟಹಾಕಲಾಗುವುದು ಎಂದರು.
ಆಡಳಿತ ಪಕ್ಷದ ಕುಮ್ಮಕ್ಕಿನಿಂದಲೇ ದೆಹಲಿ ಹಿಂಸಾಚಾರ ನಡೆದಿದೆ ಎಂಬ ಪ್ರತಿಪಕ್ಷದವರ ಆರೋಪಕ್ಕೆ ವ್ಯಂಗ್ಯವಾಗಿ ಉತ್ತರಿಸಿದ ಅಮಿತ್ ಶಾ, ನೀವು ಸಾಮಾನ್ಯ ಜ್ಞಾನವನ್ನು ಬಳಸಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ಸರ್ಕಾರ ಏಕೆ ಅಂತಹ ಕೆಲಸವನ್ನು ಮಾಡುತ್ತದೆ ಎಂದು ಪ್ರಶ್ನಿಸಿದರು.
ಅಲ್ಲದೆ ಬಿಜೆಪಿ ಕೋಮು ಗಲಭೆಗಳನ್ನು ಪ್ರಚೋದಿಸುತ್ತದೆ ಎಂಬ ವಾದವನ್ನೂ ಅವರು ಖಂಡಿಸಿದರು, ಇದು ಸ್ವಾತಂತ್ರ್ಯದ ಸಮಯದಿಂದಲೂ ನಡೆಯುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಆಳ್ವಿಕೆಯಲ್ಲಿ ದೇಶದಲ್ಲಿ ಶೇಕಡಾ 76ರಷ್ಟು ಗಲಭೆಗಳು ನಡೆದಿವೆ. 2002ರಲ್ಲಿ ಮಾತ್ರ ಗುಜರಾತ್ನಲ್ಲಿ ಬಿಜೆಪಿ ಆಳುತ್ತಿದ್ದಾಗ ಗಲಭೆ ನಡೆದಿದ್ದವು ಎಂದು ಹೇಳಿದರು.