ಕರ್ನಾಟಕ

karnataka

ETV Bharat / bharat

ಭಾರತ - ಚೀನಾ ಸಂಘರ್ಷ ಕೇವಲ ಭೂಮಿಗಾಗಿ ಅಷ್ಟೇ ಅಲ್ಲ: ಪೂರ್ವ ಲಡಾಖ್​ನ ತೈಲ, ಅನಿಲಕ್ಕಾಗಿಯೂ ಹೌದು..!

ಪೆಟ್ರೋಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳಿಗೆ ವಿದೇಶವನ್ನೇ ಅವಲಂಬಿಸಿರುವ ಭಾರತ ಮತ್ತು ಚೀನಾಗೆ ಪೂರ್ವ ಲಡಾಖ್ ಯಾಕೆ ಅತಿ ಮುಖ್ಯ ಎನ್ನುವುದರ ಕುರಿತು ಹಿರಿಯ ಪತ್ರಕರ್ತ ಸಂಜೀಬ್ ಕೆ ಆರ್ ಬರುವಾ ಮಾಹಿತಿ ನೀಡಿದ್ದಾರೆ.

By

Published : Jul 28, 2020, 1:01 PM IST

India-China clash
ಭಾರತ-ಚೀನಾ ಸಂಘರ್ಷ

ಏಷ್ಯಾದ ಎರಡು ದೊಡ್ಡ ದೇಶಗಳಾದ ಭಾರತ ಮತ್ತು ಚೀನಾ ಮಧ್ಯೆ ಪೂರ್ವ ಲಡಾಖ್​ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷ ಕೇವಲ ಭೂಮಿ ಕಬಳಿಕೆ ಅಥವಾ ಭೌಗೋಳಿಕ ರಾಜಕೀಯ ವ್ಯೂಹಾತ್ಮಕ ತಂತ್ರವಷ್ಟೇ ಅಲ್ಲ. ಪೂರ್ವ ಭಾಗವೂ ಸೇರಿದಂತೆ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೈಸರ್ಗಿಕ ಅನಿಲ ಮತ್ತು ತೈಲ ಸೇರಿದಂತೆ ಹೈಡ್ರೋ ಕಾರ್ಬನ್ ಸಂಪನ್ಮೂಲ ಇದೆ. ಇದರ ಜೊತೆಗೆ, ಜಿಯೋ ಥರ್ಮಲ್ ಇಂಧನವನ್ನು ಹೊರತೆಗೆಯುವ ಭಾರಿ ಸಾಧ್ಯತೆಯೂ ಇಲ್ಲಿದೆ. ಈ ಭಾಗದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ಪೂರ್ವ ಲಡಾಖ್​ನ ಅಕ್ಸಾಯ್ ಚಿನ್ ಬಗ್ಗೆ ಭಾರತದ ಮೊದಲ ಪ್ರಧಾನಿ ಜವಾಹರ್​ ಲಾಲ್​​ ನೆಹರು ಹೇಳಿದ್ದಕ್ಕೂ ಅಧ್ಯಯನಗಳ ಪ್ರಕಾರ ಈ ಶೀತ ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಸಂಪನ್ಮೂಲ ಇದೆ ಎಂಬುದಕ್ಕೂ ತಾಳಮೇಳವಾಗುತ್ತಿಲ್ಲ. ಹೆಚ್ಚಾಗಿ ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತಿರುವ ಮತ್ತು ಪೆಟ್ರೋಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳಿಗೆ ವಿದೇಶವನ್ನೇ ಅವಲಂಬಿಸಿರುವ ಭಾರತ ಮತ್ತು ಚೀನಾಗೆ ಈ ನಿಧಿ ಅತ್ಯಂತ ಪ್ರಮುಖವಾಗಿದೆ.

ಭಾರತವು ತನ್ನ ಶೇ. 82 ರಷ್ಟು ಅಗತ್ಯವನ್ನು ಆಮದು ಮಾಡಿಕೊಳ್ಳುತ್ತಿದೆ. 2022ರ ವೇಳೆಗೆ ದೇಶೀಯ ನಿಕ್ಷೇಪ, ನವೀಕರಿಸಬಹುದಾದ ಇಂಧನ ಮತ್ತು ಎಥನಾಲ್ ಇಂಧನವನ್ನು ಬಳಸಿಕೊಂಡು ಆಮದು ಪ್ರಮಾಣವನ್ನು ಶೇ. 67 ಕ್ಕೆ ಇಳಿಸಲು ಯೋಜನೆ ರೂಪಿಸಿಕೊಂಡಿದೆ. ಇನ್ನೊಂದೆಡೆ, ಚೀನಾ ಈಗಾಗಲೇ ಶೇ. 77 ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಕುರಿತು ಮಾತನಾಡಿದ ಹೆಸರು ಹೇಳಲಿಚ್ಛಿಸದ ಒಎನ್​ಜಿಸಿ ಅಧಿಕಾರಿಯೊಬ್ಬರು ಈಟಿವಿ ಭಾರತದ ಜೊತೆ ಮಾತನಾಡಿದ್ದು, “ಲಡಾಖ್ ವಲಯದಲ್ಲಿನ ಅಪಾರ ಸಾಧ್ಯತೆಗಳ ಬಗ್ಗೆ ನಮಗೆ ಹಿಂದಿನಿಂದಲೂ ಅರಿವಿದೆ ಮತ್ತು ಇಲ್ಲಿ ಹೈಡ್ರೋಕಾರ್ಬನ್ ನಿಕ್ಷೇಪ ವ್ಯಾಪಕವಾಗಿದೆ. ಈ ಪ್ರದೇಶದ ಬಹುತೇಕ ಭಾಗವು ಟೆಥಿಸ್ ಸಮುದ್ರಕ್ಕೆ ಸೇರಿತ್ತು. ಸಾವಿರಾರು ವರ್ಷಗಳ ಹಿಂದೆ ಭೂ ಪದರಗಳು ಸರಿದಿದ್ದರಿಂದಾಗಿ ಇಲ್ಲಿ ಹಿಮಾಲಯ ಉಂಟಾಗಿದೆ. ಸಮುದ್ರದ ತಳದಲ್ಲಿ ಮಾತ್ರವೇ ಹೈಡ್ರೋಕಾರ್ಬನ್ ನಿಕ್ಷೇಪ ಇರುತ್ತದೆ ಎಂಬುದು ಸಾಮಾನ್ಯ ಸಂಗತಿ” ಎಂದಿದ್ದಾರೆ.

ಟೆಥಿನ್ ಹಿಮಾಲಯ ವಲಯವು ಲಡಾಖ್​ನ ಝಂಸ್ಕಾರ್ ಪರ್ವತ ವ್ಯಾಪ್ತಿಯ 70 ಕಿ.ಮೀಯಲ್ಲಿದೆ ಮತ್ತು ಈ ಭಾಗವೇ ಶೇಲ್ ಅನಿಲ ನಿಕ್ಷೇಪದ ಸಂಭಾವ್ಯ ಗುರಿಯಾಗಿದೆ. ಪಶ್ಚಿಮಕ್ಕೆ ಝಂಸ್ಕಾರ್ ಪರ್ವತವಿದ್ದರೆ ಪೂರ್ವಕ್ಕೆ ಟಿಬೆಟ್​ನ ದಕ್ಷಿಣ ಭಾಗವಿದೆ. ಪಶ್ಚಿಮ ಹಿಮಾಲಯದಲ್ಲಿ, ಟೆಥ್ಯನ್ ಹಿಮಾಲಯವು ಕಾಶ್ಮೀರ, ಝಂಸ್ಕಾರ, ಚಂಬಾ ಮತ್ತು ಸ್ಪಿತಿವರೆಗೂ ವ್ಯಾಪಿಸಿದೆ. 2018 ಸೆಪ್ಟೆಂಬರ್​ನಲ್ಲಿ ಒಎನ್​ಜಿಸಿ ವಿಜ್ಞಾನಿಗಳು, ಭಾರತದ ಪುರಾತತ್ವ ಇಲಾಖೆ, ಜಮ್ಮು ವಿವಿ, ಎನಿ ಅಪ್ಸ್ಟ್ರೀಮ್ ಮತ್ತು ಟೆಕ್ನಿಕಲ್ ಸರ್ವೀಸಸ್ (ಇಟಲಿ), ಪಾಕಿಸ್ತಾನ ಪೆಟ್ರೋಲಿಯಂ ಲಿಮಿಟೆಡ್ (ಪಿಪಿಎಲ್) ಮತ್ತು ಲಂಡನ್ ಯೂನಿವರ್ಸಿಟಿ ಕಾಲೇಜು ಸಲ್ಲಿಸಿದ ಸಮಗ್ರ ವರದಿಯಲ್ಲಿ ಈ ಹೈಡ್ರೋಕಾರ್ಬನ್ ನಿಕ್ಷೇಪದ ಸಾಧ್ಯತೆ ಹೆಚ್ಚಿರುವುದನ್ನು ಹೇಳಲಾಗಿದೆ.

‘ಭಾರತ ಮತ್ತು ಪಾಕಿಸ್ತಾನದ ವಾಯವ್ಯ ಹಿಮಾಲಯದಲ್ಲಿ ಪೆಟ್ರೋಲಿಯಂ ಮತ್ತು ಹೈಡ್ರೋಕಾರ್ಬನ್ ಸಾಧ್ಯತೆ’ ಎಂಬ ಶೀರ್ಷಿಕೆಯ 77 ಪುಟದ ಈ ವೈಜ್ಞಾನಿಕ ವರದಿಯಲ್ಲಿ “ವಾಯವ್ಯ ಹಿಮಾಲಯದಲ್ಲಿ ಹೈಡ್ರೋಕಾರ್ಬನ್ ನಿಕ್ಷೇಪವಿದೆ ಎಂದು ಊಹಿಸಲಾಗಿದೆ. ಯಾಕೆಂದರೆ, ಸೂಕ್ತ ಟೆಕ್ಟೋನೋ - ಸೆಡಿಮೆಂಟರಿ ಪರಿಸರದಲ್ಲಿನ ಹಲವು ಸ್ಟ್ರಾಟಿಗ್ರಾಫಿಕ್ ಮಟ್ಟದಲ್ಲಿ ಪೆಟ್ರೋಲಿಯಂ ವ್ಯವಸ್ಥೆಯ ಅಂಶಗಳು ಇವೆ. ನೈಸರ್ಗಿಕ ಅನಿಲ ಮತ್ತು ವಾಣಿಜ್ಯಿಕ ಬಳಕೆಯ ತೈಲ ಮತ್ತು ಅನಿಲವು ಇಲ್ಲಿ ಕಂಡುಬಂದಿದೆ” ಎಂದು ಹೇಳಲಾಗಿದೆ. “ಝಂಸ್ಕಾರ್ - ಸ್ಪಿತಿ ವಲಯದಲ್ಲಿನ ಮೆಸೋಝೋಯಿಕ್ -ಟೆರ್ಶಿಯರಿ ಸಕ್ಸೆಶನ್ನಲ್ಲಿ ಸಾವಯವ ಅಂಶಗಳು ಇವೆ. ಕ್ರೆಟಾಸಿಯಸ್ - ಇಯೋಸೀನ್ ಇಂಡಸ್ ರೂಪುಗೊಳ್ಳುವಿಕೆಯು ಹೈಡ್ರೋಕಾರ್ಬನ್ ಮೂಲದ ಕಲ್ಲುಗಳು ಇರುವುದನ್ನು ಸೂಚಿಸುತ್ತದೆ.” “ಪ್ರಾದೇಶಿಕ ಸಂಚಲನೆಯ ಜೊತೆಗೆ ಈ ಚಟುವಟಿಕೆಯಲ್ಲಿ ಉಂಟಾದ ರೂಪುಗೊಳ್ಳುವಿಕೆಯಿಂದಾಗಿ ತೈಲ ಮತ್ತು ನೈಸರ್ಗಿಕ ಅನಿಲ ಸಂಚಯಗೊಂಡಿರುವ ಸಾಧ್ಯತೆಯನ್ನು ಹೆಚ್ಚಿಸಿದೆ. ಇದೇ ರೀತಿ, ಹಿಮಾಲಯದ ಆಳದಲ್ಲಿ ಇನ್ನಷ್ಟು ಉತ್ಖನನ ನಡೆಸಬೇಕಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಹಿಮಾಲಯದ ವಾಯವ್ಯ ಭಾಗವನ್ನು ಹಿಂದಿನಿಂದಲೂ ಹೈಡ್ರೋಕಾರ್ಬನ್​ಗಳ ನಿಕ್ಷೇಪ ತಾಣ ಎಂದೇ ಪರಿಗಣಿಸಲಾಗಿದೆ. ಯಾಕೆಂದರೆ ಇದು ಟೆಕ್ಟೊನೊ - ಸೆಡಿಮೆಂಟರಿ ವಾತಾವರಣಕ್ಕೆ ಪೂರಕವಾಗಿದೆ. ಅಲ್ಲದೇ, ಮೇಲ್ಮೈ ಮೇಲೆ ಗ್ಯಾಸ್ ಅಸ್ತಿತ್ವವನ್ನೂ ನಾವು ಕಾಣಬಹುದು. ಜ್ವಾಲಾಮುಖಿ ಅಗ್ನಿ ದೇಗುಲ ಕೂಡ ಇಲ್ಲಿದೆ. ಇದು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ತೈಲ ನಿಕ್ಷೇಪಕ್ಕೆ ಹೋಲುವಂತಿದೆ..” ಎಂದು ವರದಿ ಹೇಳುತ್ತದೆ. ಈಶಾನ್ಯ ಹಿಮಾಲಯ ಪ್ರಾಂತ್ಯದಲ್ಲಿ ಹೈಡ್ರೋಕಾರ್ಬನ್ ನಿಕ್ಷೇಪವನ್ನು ಕಂಡುಕೊಳ್ಳುವ ಗಂಭೀರ ಪ್ರಯತ್ನಗಳಲ್ಲಿ ಈ ವರದಿ ಮೊದಲನೆಯದಾಗಿದೆ. ಭೌಗೋಳಿಕ ಸನ್ನಿವೇಶ, ಸಮುದ್ರ ಮಟ್ಟದಿಂದ ಭಾರಿ ಎತ್ತರದಲ್ಲಿರುವುದು, ವಿಪರೀತ ಶೀತ ಸೇರಿದಂತೆ ಹಲವು ಅಂಶಗಳೂ ಈ ಅಧ್ಯಯನಕ್ಕೆ ಪೂರಕವಾಗಿವೆ.

ದೊಡ್ಡ ಪ್ರಮಾಣದಲ್ಲಿ ರಚನಾತ್ಮಕ ಸಂಕೀರ್ಣತೆ ಮತ್ತು ವಿಪರೀತ ಟ್ಯಾಕ್ಟಾನಿಕ್ ರೂಪುಗೊಳ್ಳುವಿಕೆಯಿಂದ ಸಮಾನವಾಗಿ ಸಂಸ್ಕರಿಸಿದ, ಉನ್ನತ ಗುಣಮಟ್ಟದ ಸೀಸ್ಮಿಕ್ ಪ್ರೊಫೈಲ್​ಗಳು ಉಂಟಾಗಲು ಕಾರಣವಾಗಿದೆ. ಹೀಗಾಗಿ, ಈ ಭೌಗೋಳಿಕ ಸನ್ನಿವೇಶದಲ್ಲಿ ನಿಕ್ಷೇಪದ ಪ್ರಮಾಣವನ್ನು ಅಳೆಯುವುದು ಒಂದು ಸವಾಲಿನ ಸಂಗತಿಯಾಗಿದೆ. ಸರಿಯಾದ ನಿಕ್ಷೇಪ ವಿಶ್ಲೇಷಣೆಗಾಗಿ ಹಲವು ಪ್ರಕ್ರಿಯೆಗಳನ್ನು ನಡೆಸಬೇಕಿದೆ. ಈ ವೇಳೆ ಸ್ಫೋಟವನ್ನೂ ಮಾಡಬೇಕಾಗುತ್ತದೆ. ಆದರೆ, ಈ ಎತ್ತರದಲ್ಲಿ ಇದು ಸಾಧ್ಯವಿಲ್ಲ. ಈ ಪ್ರದೇಶವು ಭೂಕಂಪಕ್ಕೆ ಅತ್ಯಂತ ಸೂಕ್ಷ್ಮ ಮತ್ತು ಹಿಮಪಾತ ಸಾಧ್ಯತೆಯ ವಲಯವೂ ಆಗಿರುವುದರಿಂದ ಇಂಥ ಚಟುವಟಿಕೆಗಳನ್ನು ನಡೆಸುವುದು ಅಸಾಧ್ಯ ಎಂದು ಒಎನ್​ಜಿಸಿ ಅಧಿಕಾರಿಗಳು ಹೇಳಿದ್ದಾರೆ.

ಲೇಖಕರು - ಸಂಜೀಬ್ ಕೆ ಆರ್ ಬರುವಾ, ಹಿರಿಯ ಪತ್ರಕರ್ತ

ABOUT THE AUTHOR

...view details