ಕರ್ನಾಟಕ

karnataka

ವಲಸೆ ಕಾರ್ಮಿಕರೊಂದಿಗೆ ರಾಹುಲ್ ನಡೆಸಿದ್ದು ಚರ್ಚೆಯಲ್ಲ, 'ನಾಟಕ': ನಿರ್ಮಲಾ ಸೀತಾರಾಮನ್

By

Published : May 17, 2020, 4:49 PM IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಲಸೆ ಕಾರ್ಮಿಕರೊಂದಿಗೆ ಚರ್ಚೆ ನಡೆಸಿದ್ದು ಒಂದು ನಾಟಕ ಎಂದು ಹಣಕಾಸು ಸಚಿವೆ ನಿರ್ಮಲಾ ಟೀಕಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಮಲಾ ಸೀತಾರಾಮನ್​ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

rahuls meeting with migrants
ರಾಹುಲ್ ಬಗ್ಗೆ ನಿರ್ಮಲಾ ಸೀತಾರಾಮನ್ ಹೇಳಿಕೆ

ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ವಲಸೆ ಕಾರ್ಮಿಕರೊಂದಿಗೆ ನಡೆಸಿದ ಚರ್ಚೆಯನ್ನು ನಾಟಕ ಎಂದು ಜರಿದಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಅಲ್ಲದೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದ್ದಾರೆ.

ವಲಸೆ ಕಾರ್ಮಿಕರ ಮಕ್ಕಳ ಜೊತೆ ಸಾಮಗ್ರಿಗಳನ್ನು ಹಿಡಿದುಕೊಂಡು ರಾಹುಲ್ ನಡೆದುಕೊಂಡು ಹೋಗಿದ್ದರೆ ಉತ್ತಮವಾಗಿರೋದು. ಕೇಂದ್ರ ಮಾಡುವ ಕೆಲಸವನ್ನು ಕಾಂಗ್ರೆಸ್ ನಾಟಕ ಎಂದು ಕರೆಯುತ್ತದೆ. ಹಾಗಾದರೆ ಕಾಂಗ್ರೆಸ್ ಮಾಡಿದ್ದಾದರೂ ಏನು? ರಸ್ತೆಗಳಲ್ಲಿ ನಡೆಯುತ್ತಿರುವ ವಲಸೆ ಕಾರ್ಮಿಕರೊಂದಿಗೆ ಕುಳಿತು ಮಾತನಾಡಲು ಇದು ಸೂಕ್ತ ಸಮಯವೇ. ಇದು ನಾಟಕ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳು ಹೆಚ್ಚಿನ ರೈಲುಗಳನ್ನು ಓಡಿಸಲು ಮತ್ತು ವಲಸೆ ಕಾರ್ಮಿಕರನ್ನು ತಮ್ಮ ಮನೆಗಳಿಗೆ ಸೇರಿಸುವತ್ತ ಗಮನ ಹರಿಸಬೇಕು. ವಲಸೆ ಕರ್ಮಿಕರನ್ನು ಕರೆತರಲು ರೈಲುಗಳ ವ್ಯವಸ್ಥೆ ಮಾಡುವಂತೆ ತಮ್ಮ ಪಕ್ಷಗಳ ಮುಖ್ಯಮಂತ್ರಿಗಳಿಗೆ ಏಕೆ ಕಾಂಗ್ರೆಸ್ ಸೂಚಿಸುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್​ ವಾಗ್ದಾಳಿ ನಡೆಸಿದ್ದಾರೆ.

ವಲಸೆ ಕಾರ್ಮಿಕರ ವಿಷಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಹಣಕಾಸು ಸಚಿವರು ಮನವಿ ಮಾಡಿದ್ದಾರೆ.

ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್​ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಗಾಯಕ್ಕೆ ಮುಲಾಮು ಹಚ್ಚುವ ಬದಲಿಗೆ ಉಪ್ಪು ಸವರುವ ಕೆಲಸವನ್ನು ನಿಲ್ಲಿಸಿ. ಕೆಲಸಗಾರನ ಅಸಹಾಯಕತೆ ನಿಮಗೆ ನಾಟಕದಂತೆ ತೋರುತ್ತಿದೆಯಾ? ಇದು ಸೂಕ್ಷ್ಮ ವಿಷಯವಾಗಿದ್ದು, ಕೇಂದ್ರ ಸರ್ಕಾರ ಕಾರ್ಮಿಕರ ಕ್ಷಮೆಯಾಚಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

ABOUT THE AUTHOR

...view details