ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಅಮಾನವೀಯ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳಿಗೆ ಹೊಸದಾಗಿ ಮರಣದಂಡನೆ ದಿನ ಘೋಷಣೆ ಮಾಡುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಮತ್ತೆ ಗುರುವಾರಕ್ಕೆ ಮುಂದೂಡಿದೆ.
ನಾಲ್ವರು ಅಪರಾಧಿಗಳಲ್ಲಿ ಓರ್ವನಾಗಿರುವ ಪವನ್ ಗುಪ್ತಾ, ನನ್ನ ಪರ ಯಾವುದೇ ವಕೀಲರಿಲ್ಲ ಎಂದು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ. ಈ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯ ತಕ್ಷಣದ ಕಾನೂನು ನೆರವು ನೀಡಲು ಮುಂದಾಗಿದೆ!
ಈ ಬಗ್ಗೆ ಅಸಹಾಯಕತೆ ತೋಡಿಕೊಂಡಿರುವ ನಿರ್ಭಯಾ ತಾಯಿ, ನನ್ನ ಹಕ್ಕುಗಳ ಕತೆ ಏನು? ನಾನು ಕೈಕಟ್ಟಿ ನ್ಯಾಯಕ್ಕಾಗಿ ನಿಂತಿದ್ದೇನೆ. ಪ್ರಕರಣ ನಡೆದು 7 ವರ್ಷಗಳು ಕಳೆದಿವೆ, ದಯವಿಟ್ಟು ಅಪರಾಧಿಗಳನ್ನು ಗಲ್ಲಿಗೆ ಹಾಕಲು ಡೆತ್ ವಾರಂಟ್ ನೀಡಿ ಎಂದು ನ್ಯಾಯಾಲಯದ ಮುಂದೆ ಅವರು ಬೇಡಿಕೊಂಡಿದ್ದಾರೆ. ನನ್ನ ಮಗಳಿಗೆ ನ್ಯಾಯ ಕೊಡಿಸುವ ಸಲುವಾಗಿ ಅಲೆದಾಡುತ್ತಿದ್ದೇನೆ. ಅಪರಾಧಿಗಳು ವಿಳಂಬ ಮಾಡುವ ಸಲುವಾಗಿ ಈ ರೀತಿ ಮಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ಏಕೆ ಈ ವಿಚಾರ ಅರ್ಥವಾಗುತ್ತಿಲ್ಲ? ಎಂದು ಕಣ್ಣೀರು ಸುರಿಸುತ್ತಾ ತೀವ್ರ ಬೇಸರ ವ್ಯಕ್ತಪಡಿಸಿದರು.
ಮರಣದಂಡನೆ ದಿನಾಂಕವನ್ನು ಈ ಮೊದಲು ಜನವರಿ 22 ಕ್ಕೆ ತಿಹಾರ್ ಜೈಲಿನಲ್ಲಿ ನಿಗದಿಪಡಿಸಲಾಗಿತ್ತು. ನಂತರ ಜನವರಿ 17 ರಂದು ನ್ಯಾಯಾಲಯದ ಆದೇಶದ ಪ್ರಕಾರ, ಫೆಬ್ರವರಿ 1 ರಂದು ಬೆಳಿಗ್ಗೆ 6 ಗಂಟೆಗೆ ಮುಂದೂಡಲಾಯಿತು. ವಿಚಾರಣಾ ನ್ಯಾಯಾಲಯವು ಜನವರಿ 31 ರಂದು ತಿಹಾರ್ ಜೈಲಿನಲ್ಲಿರುವ ಈ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿತ್ತು.