ಕರ್ನಾಟಕ

karnataka

ಸರಿಯಾಗಿ ಬಳಕೆಯಾಗದೆ ಉಳಿದ ನಿರ್ಭಯಾ ನಿಧಿ: ಕರ್ನಾಟಕ ಬಳಸಿಕೊಂಡಿದ್ದು ಕೇವಲ ಶೇ 7!

By

Published : Mar 20, 2020, 1:54 PM IST

ನಿರ್ಭಯಾ ಪ್ರಕರಣ ತಾರ್ಕಿಕ ಅಂತ್ಯಕಂಡಿದೆ. ಮಹಿಳೆಯರ ಸುರಕ್ಷತೆಗಾಗಿ ಸ್ಥಾಪಿಸಲಾಗಿದ್ದ ನಿರ್ಭಯಾ ನಿಧಿ ಸರಿಯಾಗಿ ಬಳಕೆಯಾಗುತ್ತಿಲ್ಲ. ರಾಜ್ಯಗಳು ತಮ್ಮ ಪಾಲಿನ ನಿರ್ಭಯಾ ನಿಧಿಯನ್ನು ಬಳಸಿಕೊಳ್ಳಲು ನಿರಾಸಕ್ತಿ ತೋರಿವೆ.

ಸರಿಯಾಗಿ ಬಳಕೆಯಾಗದೇ ಉಳಿದ ನಿರ್ಭಯಾ ನಿಧಿ
Nirbhaya Fund remains underutilised

ನವದೆಹಲಿ:ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅಂತ್ಯ ಕಂಡಿದೆ. ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಆದರೆ ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ಹೆಸರಿನಲ್ಲಿ ಸ್ಥಾಪಿಸಲಾದ ನಿಧಿ ಮಾತ್ರ ಇನ್ನೂ ಸರಿಯಾಗಿ ಬಳಕೆಯಾಗದೇ ಉಳಿದಿದೆ.

2013ರಲ್ಲಿ ಯುಪಿಎ ಸರ್ಕಾರ ಸ್ಥಾಪಿಸಿ ರಾಜ್ಯಗಳಿಗೆ ಹಂಚಿದ್ದ ನಿರ್ಭಯಾ ನಿಧಿಯಲ್ಲಿ ಶೇ 25ಕ್ಕೂ ಕಡಿಮೆ ಬಳಕೆಯಾಗಿದೆ ಎಂದು ತಿಳಿದುಬಂದಿದೆ. ಉತ್ತರಾಖಂಡ್​ ಹಾಗೂ ಮಿಜೋರಾಂ ಸರ್ಕಾರಗಳು ತಮಗೆ ಹಂಚಿಕೆ ಮಾಡಿದ್ದ ಅನುದಾನದಲ್ಲಿ ಹೆಚ್ಚಿನ ಪಾಲು ಬಳಸಿಕೊಂಡಿವೆ.

ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಸುದ್ದಿಯಲ್ಲಿರುವ ಉತ್ತರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ದೆಹಲಿ ಅತಿ ಹೆಚ್ಚು 'ನಿರ್ಭಯ ನಿಧಿ'ಯನ್ನು ಪಡೆದ ಪಟ್ಟಿಯಲ್ಲಿವೆ. ಆದರೆ ತನಗೆ ನೀಡಿದ್ದ 191 ಕೋಟಿ ರೂಪಾಯಿಯಲ್ಲಿ ಶೇ 7ರಷ್ಟು ಅಂದರೆ 13.62 ಕೋಟಿ ರೂಪಾಯಿಯನ್ನು ಮಾತ್ರ ಕರ್ನಾಟಕ ಬಳಸಿದೆ.

ದೆಹಲಿಗೆ ನೀಡಿದ್ದ 390 ಕೋಟಿ ರೂಪಾಯಿಯಲ್ಲಿ 19.41 ಕೋಟಿ ರೂಪಾಯಿಯನ್ನು ಬಳಸಿಕೊಂಡಿದೆ. ತೆಲಂಗಾಣಕ್ಕೆ 103 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ ಬಳಸಿಕೊಂಡಿದ್ದು 4 ಕೋಟಿ ರೂಪಾಯಿ. ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ 13 ಕಾರ್ಯಕ್ರಮಗಳಿಗೂ ತೆಲಂಗಾಣ ಸರ್ಕಾರ ನಿರ್ಭಯಾ ನಿಧಿಯಿಂದ ಹಣ ಪಡೆದುಕೊಂಡಿದೆ. ತನಗೆ ಹಂಚಿಕೆಯಾದ ಹಣದಲ್ಲಿ ಶೇ 5ರಷ್ಟು ಹಣವನ್ನು ಮಾತ್ರ ಪಶ್ಚಿಮ ಬಂಗಾಳ ಬಳಸಿಕೊಂಡಿದೆ.ತಮಿಳುನಾಡಿಗೆ ನಿಗದಿಪಡಿಸಿದ್ದ 190.68 ಕೋಟಿ ರೂಪಾಯಿಯಲ್ಲಿ ಆರು ಕೋಟಿ ರೂಪಾಯಿಯನ್ನು ಮಾತ್ರ ಬಳಸಲಾಗಿದೆ.

ಅತೀ ಹೆಚ್ಚು ನಿಧಿ ಬಳಸಿಕೊಂಡ ರಾಜ್ಯಗಳು:

ಅತಿ ಹೆಚ್ಚು ನಿರ್ಭಯಾ ನಿಧಿಯನ್ನು ಬಳಸಿಕೊಂಡಿರುವ ರಾಜ್ಯಗಳಲ್ಲಿ ಉತ್ತರಾಖಂಡ್​ ಹಾಗೂ ಮಿಜೋರಾಂ ರಾಜ್ಯಗಳು ಮೊದಲ ಸ್ಥಾನದಲ್ಲಿದ್ದು ಶೇ 50ರಷ್ಟು ನಿಧಿಯನ್ನು ಬಳಸಿಕೊಂಡಿವೆ. ನಂತರದ ಸ್ಥಾನಗಳಲ್ಲಿ ಛತ್ತೀಸ್​ಗಢ (ಶೇ.43), ನಾಗಾಲ್ಯಾಂಡ್ (ಶೇ.39)​, ಹರಿಯಾಣ (ಶೇ.32) ರಾಜ್ಯಗಳಿವೆ. ಇದರ ಜೊತೆಗೆ ಕೇಂದ್ರ ಸರ್ಕಾರವೂ ಕೂಡಾ ತನ್ನ ಯೋಜನೆಗಳಿಗಾಗಿ ನಿರ್ಭಯಾ ನಿಧಿಯನ್ನು ವಿವಿಧ ಯೋಜನಗೆಳು ಹಾಗೂ ಕಾರ್ಯಕ್ರಮಗಳಿಗೆ ಬಳಸಿಕೊಂಡಿದೆ.

ನಿರ್ಭಯಾ ನಿಧಿಯ ಕಡಿಮೆ ಬಳಕೆ:

ಈಶಾನ್ಯ ರಾಜ್ಯಗಳಾದ ಮಣಿಪುರ, ಸಿಕ್ಕಿಂ, ತ್ರಿಪುರ ಮತ್ತು ಕೇಂದ್ರಾಡಳಿತ ದಮನ್ ಮತ್ತು ದಿಯು ತಮಗೆ ದೊರಕಿದ್ದ ನಿರ್ಭಯಾ ನಿಧಿಯಲ್ಲಿ ನಯಾಪೈಸೆಯನ್ನೂ ಬಳಸಿಲ್ಲ. ನಿರ್ಭಯಾ ನಿಧಿಯ ಕಡಿಮೆ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ನೊಬೆಲ್​ ಪುರಸ್ಕೃತ ಕೈಲಾಶ್​ ಸತ್ಯಾರ್ಥಿ '' ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಕೂಡಾ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಅನುದಾನವನ್ನು ಬಳಸಿಕೊಳ್ಳುವುದರಲ್ಲಿ ನಿರ್ಲಕ್ಷ್ಯ ತೋರುತ್ತಿವೆ. ಇದು ಮಹಿಳಾ ಸುರಕ್ಷತೆ ವಿಚಾರದಲ್ಲಿ ಸರ್ಕಾರಗಳ ಬೇಜವಾಬ್ದಾರಿಯನ್ನು ಇದು ಸೂಚಿಸುತ್ತದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details