ನವದೆಹಲಿ:ಎರಡು ದಿನಗಳ ಪ್ರವಾಸದ ನಿಮಿತ್ತ ಪ್ರಧಾನಿ ಮೋದಿ ಸೌದಿ ಅರೇಬಿಯಾದ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಇಂದು ಮೋದಿ ಸೌದಿ ರಾಜಮಕುಮಾರ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಹಲವಾರು ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಲಿವೆ.
ಪ್ರವಾಸದ ಎರಡನೇ ದಿನ 'ದಾವೋಸ್ ಇನ್ ಡೆಸರ್ಟ್' ಎಂದು ಕರೆಯಲ್ಪಡುವ ಭವಿಷ್ಯದ 3ನೇ ಹೂಡಿಕೆ ಉಪಕ್ರಮ(ಎಫ್ಐಐ)ದ ಉನ್ನತಮಟ್ಟದ ಸಮಗ್ರ ಅಧಿವೇಶನಕ್ಕೆ ಮೋದಿ ಹಾಜರಾಗಲಿದ್ದಾರೆ. ಅಲ್ಲದೆ ಈ ಪ್ರವಾಸದ ಸಮಯದಲ್ಲಿ ಭಾರತದ ಪಶ್ಚಿಮ ಕರಾವಳಿಯಲ್ಲಿ ಮೆಗಾ ರಿಫೈನರಿ ಯೋಜನೆಯನ್ನು ಸ್ಥಾಪಿಸಲು ಅಂತಿಮ ಒಪ್ಪಂದವನ್ನು ಮೋದಿ ಮಾಡಿಕೊಳ್ಳಲಿದ್ದಾರೆ.
ಇಂಧನ ವ್ಯವಹಾರಗಳ ತಾಯಿ...
'ಎಲ್ಲಾ ಇಂಧನ ವ್ಯವಹಾರಗಳ ತಾಯಿ' ಎಂದು ಹೆಸರಿಸಲಾದ ಯೋಜಿತ ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಯೋಜನೆಯು ಜಾಗತಿಕಮಟ್ಟದ ಪ್ರಮುಖ ಕಂಪನಿಗಳಾದ ಸೌದಿ ಅರಾಮ್ಕೊ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ಅಡ್ನೋಕ್), ಭಾರತೀಯ ಸರ್ಕಾರಿ ತೈಲ ಮಾರಾಟ ಕಂಪನಿಗಳ ಭಾರತೀಯ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್)ಗಳನ್ನು ಒಳಗೊಂಡಿದೆ.
ವೆಸ್ಟ್ ಕೋಸ್ಟ್ ರಿಫೈನರಿ ಪ್ರಾಜೆಕ್ಟ್ ಎಂದೂ ಕರೆಯಲ್ಪಡುವ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಸ್ಕರಣಾಗಾರವನ್ನು ಸ್ಥಾಪಿಸುವ ಸಲುವಾಗಿ ಮೂರು ರಾಷ್ಟ್ರಗಳ ಕಂಪನಿಗಳ ನಡುವೆ ಜಂಟಿ ಉದ್ಯಮವನ್ನು ಈಗಾಗಲೇ ರಚಿಸಲಾಗಿದೆ.
ಸದ್ಯದ ಮಾಹಿತಿಯ ಪ್ರಕಾರ 40 ಬಿಲಿಯನ್ ಯುಎಸ್ ಡಾಲರ್ (ಅಂದಾಜು 3 ಲಕ್ಷ ಕೋಟಿ ರೂ.) ನಂತೆ ಭಾರತೀಯ ಕಂಪನಿಗಳು ಶೇ. 50 ರಷ್ಟು ಪಾಲನ್ನು ಹೊಂದಿರುತ್ತವೆ.
ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರು ಸಾರ್ವಜನಿಕ ವಲಯದ ಕಂಪನಿಗಳು ಒಟ್ಟಾಗಿ ವಿಶ್ವದ ಅತಿದೊಡ್ಡ ಹಸಿರು ಸಂಸ್ಕರಣಾಗಾರವನ್ನು 40 ಬಿಲಿಯನ್ ಯುಎಸ್ ಡಾಲರ್ ವೆಚ್ಚದಲ್ಲಿ ಅಭಿವೃದ್ಧಿಪಡಿಸಿವೆ. ಇದು ಬದಲಾಗುತ್ತಿರುವ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲು ಭಾರತಕ್ಕೆ ಸಹಾಯ ಮಾಡಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟ್ರಾಟಜಿಕ್ ಪೆಟ್ರೋಲಿಯಂ ರಿಸರ್ವ್(ಎಸ್ಪಿಆರ್) ಪ್ರೋಗ್ರಾಮ್...
ಎಸ್ಪಿಆರ್, ಮೋದಿ ಸೌದಿ ಅರೇಬಿಯಾ ಭೇಟಿಯ ಮತ್ತೊಂದು ಪ್ರಮುಖ ಅಂಶ. ಸೌದಿ ಅರೇಬಿಯಾದ ಸಹಾಯದಿಂದ ಸರ್ಕಾರವು 5 ದಶಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಕಚ್ಚಾ ತೈಲ ಸಂಗ್ರಹಣಾಗಾರವನ್ನು ದೇಶದ ಮೂರು ಸ್ಥಳಗಳಲ್ಲಿ ಸ್ಥಾಪಿಸುತ್ತಿದೆ. ಮಂಗಳೂರು, ಉಡುಪಿ ಸಮೀಪದ ಪಡೂರು, ತೆಲಂಗಾಣದ ವಿಶಾಖಪಟ್ಟಣಂನಲ್ಲಿ ಸಂಗ್ರಹಣಾಗಾರ ಸ್ಥಾಪನೆಯಾಗಲಿದೆ. ಈಗಿರುವ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಕ್ಕೆ ಹೆಚ್ಚುವರಿಯಾಗಿ ಇದನ್ನು ಸ್ಥಾಪಿಸಲಾಗುತ್ತಿದೆ. ಬಾಹ್ಯ ಪೂರೈಕೆಯಲ್ಲಿ ಅಡೆತಡೆಗಳು ಉಂಟಾಗುವ ಸಂದರ್ಭದಲ್ಲಿ ಇಲ್ಲಿ ಶೇಖರಣೆಗೊಂಡ ತೈಲವನ್ನು ಬಳಸಲಾಗುತ್ತದೆ. ಇದು ಆಮದುಗಳ ಮೂಲಕ ಸುಮಾರು ಶೇ 70 ರಷ್ಟು ಕಚ್ಚಾ ತೈಲ ಅಗತ್ಯತೆಯನ್ನು ಪೂರೈಸುತ್ತದೆ.