ಕರ್ನೂಲ್ (ಆಂಧ್ರಪ್ರದೇಶ) : ಲಾಕ್ ಡೌನ್ ಆರಂಭವಾದ ಬಳಿಕ ದೇಶದಲ್ಲಿ ಉಂಟಾದ ವಲಸೆ ಕಾರ್ಮಿಕರ ದುಸ್ಥಿತಿ ಹೇಳ ತೀರದ್ದಾಗಿದೆ. ಯಾವುದೋ ರಾಜ್ಯದಿಂದ ಇನ್ಯಾವುದೋ ರಾಜ್ಯಕ್ಕೆ ತುತ್ತಿನ ಚೀಲ ತುಂಬಿಸಲು ತೆರಳಿದ್ದ ಬಡ ಜನ, ಸಾರಿಗೆ ವ್ಯವಸ್ಥೆ ಇಲ್ಲದೆ, ಇದ್ದರೂ ದುಬಾರಿ ವೆಚ್ಚ ತೆರಲಾಗದೆ ಸಾವಿರಾರು ಕಿ.ಮೀ ಕಾಲ್ನಡಿಗೆಯಲ್ಲಿ ನಡೆದು ತಮ್ಮ ಊರು ಸೇರಿದ್ದಾರೆ. ಈ ನಡುವೆ ಎಷ್ಟೋ ಜನ ಅನ್ನ, ಆಹಾರವಿಲ್ಲದೆ ಅರ್ಧ ದಾರಿಯಲ್ಲಿ ಉಸಿರು ಚೆಲ್ಲಿದ್ದಾರೆ.
ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಊರಿಗೆ ತೆರಳಲು ಕಂಡುಕೊಂಡ ಕೆಲ ದಾರಿಗಳು ಎಂತವರ ಮನ ಕಲಕುವಂತೆ ಇದೆ. ಕೆಲವರು ಸಿಕ್ಕ ಸಿಕ್ಕ ಲಾರಿಗಳಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ತೆರಳಿದ್ರೆ, ಇನ್ನು ಕೆಲವರು ಸೂಟ್ ಕೇಸ್, ಬ್ಯಾಗ್ಗಳಲ್ಲಿ ತಮ್ಮ ಪುಟ್ಟ ಕಂದಮ್ಮಗಳನ್ನು ಹೊತ್ತು ಸಾಗಿದ್ದಾರೆ. ಇಂತಹದ್ದೇ ಒಂದು ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದಲ್ಲೂ ನಡೆದಿದೆ.
ಮೂಲತಃ ಬಿಹಾರದವರಾದ ಓರ್ವ ವಲಸೆ ಕಾರ್ಮಿಕ ಆಂಧ್ರ ಪ್ರದೇಶದ ಕಡಪಕ್ಕೆ ಕೆಲಸಕ್ಕೆಂದು ಬಂದಿದ್ದ. ಲಾಕ್ ಡೌನ್ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದಿದ್ದಾಗ , 1 ಸಾವಿರ ಕಿ.ಮೀ ದೂರದ ಚತ್ತೀಸ್ಗಡದಲ್ಲಿರುವ ತನ್ನ ಮನೆಗೆ ಕುಟುಂಬದ 8 ಜನರೊಂದಿಗೆ ನಡೆಯಲು ಶುರು ಮಾಡಿದ್ದ. ಈ ವೇಳೆ ನಡೆಯಲು ಸಾಧ್ಯವಾಗದ ತನ್ನ ಇಬ್ಬರು ಪುಟ್ಟ ಕಂದಮ್ಮಗಳನ್ನು ಹೊತ್ತು ನಡೆಯಲು ನಿರ್ಧರಿಸಿದ ಆತ, ಒಂದು ಕೋಲಿನ ಎರಡು ತುದಿಗೆ ಡೋಲಿ ( ಎರಡು ಬುಟ್ಟಿಗಳು)ಗಳನ್ನು ಕಟ್ಟಿ ಅದರಲ್ಲಿ ತನ್ನ ಕಂದಮ್ಮಗಳನ್ನು ಕುಳ್ಳಿರಿಸಿ ಭುಜದ ಮೇಲೆ ಹೊತ್ತು ಸಾಗಿದ್ದಾನೆ. ಬಡ ಕಾರ್ಮಿಕನ ಸ್ಥಿತಿ ಹೇಗಿತ್ತೆಂದರೆ ಅಂದರಾದ ತನ್ನ ತಂದೆ ತಾಯಿಯನ್ನು ಬುಟ್ಟಿ ಕುಳ್ಳಿರಿಸಿ ಹೊತ್ತು ನಡೆದ ಶ್ರವಣಕುಮಾರನ ಕಥೆಯಂತಿತ್ತು.
ಕಡಪದಿಂದ ಹೊರಟ ಇವರ ಪ್ರಯಾಣ ಕರ್ನೂಲ್ ಜಿಲ್ಲೆಯ ಅಡೋನಿಯಿಂದ ಯೆಮಿಗನೂರ್ಗೆ ತಲುಪುತ್ತಿದ್ದಂತೆ, ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗಳಾದ ಜಗದೀಶ್, ಶಿವರಾಮ್ ಮತ್ತು ಮಲ್ಲಯ ಎಂಬವರು ಇವರನ್ನು ತಡೆದು ನಿಲ್ಲಿಸಿದ್ದಾರೆ. ವಿಚಾರಿಸಿದಾಗ ಕಾರ್ಮಿಕ ತಾವು ಊರಿಗೆ ತೆರಳುತ್ತಿರುವುದಾಗಿ ತಿಳಿಸಿದ್ದ. ಕಾರ್ಮಿಕನ ಸ್ಥಿತಿ ನೋಡಿ ಬೇಸರಗೊಂಡ ಪೊಲೀಸರು. ಆತನ ಕುಟುಂಬಸ್ಥರಿಗೆ ಆಹಾರದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಬಳಿಕ ಕರ್ನೂಲ್ ಕಡೆ ಹೋಗುವ ವಾಹನದಲ್ಲಿ ಅವರಿಗೆ ತೆರಳು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.