ಇಂಫಾಲ್ (ಮಣಿಪುರ) :ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಮಣಿಪುರ ವಿಧಾನಸಭೆಯ ಏಳು ಶಾಸಕರ ಅನರ್ಹತೆ ಅರ್ಜಿಯನ್ನು ಸ್ಪೀಕರ್ ಇತ್ಯರ್ಥಪಡಿಸುವವರೆಗೆ ಅವರು ವಿಧಾನಸಭೆಗೆ ಪ್ರವೇಶಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿದ್ದ 7 ಶಾಸಕರಿಗೆ ಸದನ ಪ್ರವೇಶಿಸದಂತೆ ಹೈಕೋರ್ಟ್ ಆದೇಶ - ಏಳು ಜನ ಶಾಸಕರು ಸದನ ಪ್ರವೇಶಿಸದಂತೆ ಮಣಿಪುರ ಹೈಕೋರ್ಟ್ ಆದೇಶ
2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಳಿಕ ಬಿಜೆಪಿಗೆ ಹಾರಿದ್ದ ಏಳು ಶಾಸಕರು, ಸ್ಪೀಕರ್ ತಮ್ಮ ಮುಂದಿರುವ ಅನರ್ಹತೆ ಅರ್ಜಿಯನ್ನು ಇತ್ಯರ್ಥಪಡಿಸುವವರೆಗೂ ಸದನ ಪ್ರವೇಶಿಸದಂತೆ ಮಣಿಪುರ ಹೈಕೋರ್ಟ್ ಆದೇಶಿಸಿದೆ.

2017 ರ ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿದ್ದ ಏಳು ಜನ ಶಾಸಕರು ಸರ್ಕಾರ ರಚಿಸುವಲ್ಲಿ ಸಹಕರಿಸಿದ್ದರು. ಹೀಗಾಗಿ ಅವರನ್ನು ಅನರ್ಹ ಮಾಡಬೇಕೆಂದು ಒತ್ತಾಯಿಸಿ 2018ರಲ್ಲಿ ಕಾಂಗ್ರೆಸ್ ಸ್ಪೀಕರ್ ಯಮ್ನಮ್ ಖೇಮ್ಚಂದ್ಗೆ ಮನವಿ ಸಲ್ಲಿಸಿತ್ತು. ಆದರೆ, ಈ ಬಗ್ಗೆ ಸ್ಪೀಕರ್ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಹೀಗಾಗಿ ಕೋರ್ಟ್ ಈ ಏಳು ಜನ ಶಾಸಕರು ಸ್ಪೀಕರ್ ತಮ್ಮ ಮುಂದಿರುವ ಅನರ್ಹತೆ ಅರ್ಜಿ ಇತ್ಯರ್ಥಪಡಿಸುವವರೆಗೂ ಸದನ ಪ್ರವೇಶಿಸದಂತೆ ಆದೇಶಿಸಿದೆ.
ಇದಕ್ಕೂ ಮೊದಲು ತನ್ನ ಅಪರೂಪದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ರಾಜ್ಯ ಅರಣ್ಯ ಸಚಿವರಾಗಿದ್ದ ಶ್ಯಾಮ್ ಕುಮಾರ್ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಿತ್ತು. ಶ್ಯಾಮ್ ಕುಮಾರ್ ಕೂಡ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು.