ನಾಗ್ಪುರ (ಮಹಾರಾಷ್ಟ್ರ):ಸಾಮಾನ್ಯ ಅವಧಿಗೆ ಮುನ್ನವೇ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಮಿಡತೆಗಳು, ಹಲವು ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿಸಿದ್ದಲ್ಲದೆ ಕರ್ನಾಟಕಕ್ಕೂ ಭೀತಿ ಶುರುವಾಗಿದೆ.
ಸಾಮಾನ್ಯವಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಮಿಡತೆಗಳು ಈಗಾಗಲೇ ದೇಶಕ್ಕೆ ಆಗಮಿಸಿದ್ದು, ಹಲವು ರಾಜ್ಯಗಳ ರೈತರ ಜಮೀನಿನ ಮೇಲೆ ದಾಳಿ ನಡೆಸಿವೆ. ಮಹಾರಾಷ್ಟ್ರದ ನಾಗ್ಪುರ ಮತ್ತು ವಾರ್ಧಾ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಿಡತೆಗಳ ಹಿಂಡು ಕಿತ್ತಳೆ ಮತ್ತು ತರಕಾರಿ ಬೆಳೆ ಹಾನಿ ಮಾಡಿವೆ ಎಂದು ಕೃಷಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
17 ಕಿಲೋ ಮೀಟರ್ ಉದ್ದ ಮತ್ತು 2ರಿಂದ 2.5 ಕಿ.ಮೀ. ಅಗಲದಷ್ಟು ವ್ಯಾಪ್ತಿಯಲ್ಲಿ ಮಿಡತೆಗಳ ಹಿಂಡು ನಾಗ್ಪುರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ದಾಳಿ ನಡೆಸಿದ್ದು, ಕಿತ್ತಳೆ ಬೆಳೆಯನ್ನು ನಾಶ ಮಾಡಿವೆ.