ಕರ್ನಾಟಕ

karnataka

By

Published : Oct 30, 2020, 8:18 PM IST

ETV Bharat / bharat

'ಮಹಾ' ಪರಿಷತ್‌ ಸ್ಥಾನಕ್ಕೆ ನಟಿ ಊರ್ಮಿಳಾ ಮಾತೋಂಡ್ಕರ್‌ ಆಯ್ಕೆಗೆ ಚಿಂತನೆ

ರಾಜ್ಯವಿಧಾನ ಪರಿಷತ್‌ಗೆ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರನ್ನು ಕಳುಹಿಸುವ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ತಿಳಿಸಿದ್ದಾರೆ. ರಾಜ್ಯಪಾಲರ ಕೋಟಾದಡಿ ಪರಿಷತ್‌ಗೆ ಆಯ್ಕೆಯಾಗುವ 12 ಮಂದಿಯ ಹೆಸರನ್ನು ಶಿಫಾರಸು ಮಾಡುವ ವಿಚಾರವಾಗಿ ಸಂಪುಟ ಸಭೆ ಚರ್ಚಿಸಿದ ಬಳಿಕ ಇವರು ಈ ಹೇಳಿಕೆ ನೀಡಿದ್ದಾರೆ.

Urmila
Urmila

ಮುಂಬೈ: ನಟಿ ಊರ್ಮಿಳಾ ಮಾತೋಂಡ್ಕರ್‌ ಅವರನ್ನು ಮಹಾರಾಷ್ಟ್ರ ಸರ್ಕಾರ ವಿಧಾನ ಪರಿಷತ್‌ಗೆ ಶಿಫಾರಸು ಮಾಡಲಿದೆ ಎಂಬ ಊಹಾಪೋಹದ ಸುದ್ದಿ ಹರಡಿತ್ತು. ಈ ಬಗ್ಗೆ ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು, ಈ ಕುರಿತಾಗಿ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದು ತಿಳಿಸಿದರು.

ಪರಿಷತ್ ಶಿಫಾರಸು ಮಾಡುವ 12 ವ್ಯಕ್ತಿಗಳ ಹೆಸರಿನ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿರುವ ವಿಚಾರಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ಯಾವುದೇ ಗೌಪ್ಯತೆ ಇಲ್ಲ. ಸರ್ಕಾರದ ಮೂರು ಮಿತ್ರಪಕ್ಷಗಳು ಹೆಸರುಗಳನ್ನು ಅಂತಿಮಗೊಳಿಸಿ ಸಿಎಂಗೆ ನೀಡಲಿದ್ದಾರೆ. ಸಿಎಂ ಈ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡುತ್ತಾರೆ ಎಂದು ತಿಳಿಸಿದರು.

ವಿಧಾನ ಪರಿಷತ್‌ನ 12 ಸ್ಥಾನಗಳು ಈ ವರ್ಷದ ಜೂನ್ ತಿಂಗಳಿನಿಂದ ಖಾಲಿ ಉಳಿದಿವೆ. ಸಂವಿಧಾನದ ವಿಧಿ 171 ರ ಪ್ರಕಾರ, ಕಲೆ, ಸಾಹಿತ್ಯ, ವಿಜ್ಞಾನ, ಸಹಕಾರಿ ಚಳವಳಿ ಹಾಗೂ ಸಮಾಜ ಸೇವೆ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ, ಪ್ರಾಯೋಗಿಕ ಅನುಭವ ಹೊಂದಿರುವ 12 ವ್ಯಕ್ತಿಗಳನ್ನು ರಾಜ್ಯಪಾಲರು ವಿಧಾನ ಪರಿಷತ್‌ಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದ್ದಾರೆ.

ಕಳೆದ 2019 ರ ಲೋಕಸಭೆ ಚುನಾವಣೆ ವೇಳೆ ಮಾತೋಂಡ್ಕರ್‌ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು. ಬಳಿಕ ಅವರು ಮುಂಬೈ ಕಾಂಗ್ರೆಸ್‌ನ ಕಾರ್ಯವೈಖರಿಯಿಂದ ಬೇಸತ್ತು ಪಕ್ಷ ತ್ಯಜಿಸಿದ್ದರು. ಇತ್ತೀಚೆಗೆ ಅವರು ಕಂಗನಾ ರಣಾವತ್‌ ವಿರುದ್ಧ ಸಾಕಷ್ಟು ಟೀಕಾಪ್ರಹಾರ ನಡೆಸಿ ಗಮನ ಸೆಳೆದಿದ್ದರು.

ABOUT THE AUTHOR

...view details