ನವದೆಹಲಿ: ಸೋಮವಾರದಿಂದ ಸಂಸತ್ನ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಹಲವು ವಿಷಯಗಳ ಕುರಿತ ಚರ್ಚೆ ನಡೆದಿದೆ. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಮತ್ತೆ ಸದನದ ಕಲಾಪ ಮಧ್ಯಾಹ್ನ 3 ಗಂಟೆಗೆ ಆರಂಭವಾಗಿದೆ.
ಜೆನ್ಯು ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರ...
ಸದನದಲ್ಲಿ ಜೆನ್ಯು ವಿಚಾರ ಪ್ರಸ್ತಾಪಿಸದ ಬಿಎಸ್ಪಿಯ ಡ್ಯಾನಿಶ್ ಅಲಿ ವಿಚಾರಕ್ಕೆ ಸ್ಪೀಕರ್ ಓಂ ಬಿರ್ಲಾ ಅವಕಾಶ ನಿರಾಕರಿಸಿದರು. ಶುಲ್ಕ ಹೆಚ್ಚಳ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜೆಎನ್ಯು ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದು ದುರದೃಷ್ಟಕರ. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಡ್ಯಾನಿಶ್ ಅಲಿ ಒತ್ತಾಯಿಸಿದರು. ಆದರೆ ಈ ವಿಷಯ ಸ್ಪೀಕರ್ ಪಟ್ಟಿ ಮಾಡಿದ ವಿಷಯ ಅಲ್ಲವಾದ್ದರಿಂದ ಸ್ಪೀಕರ್ ಓಂ ಬಿರ್ಲಾ ವಿಷಯದ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದರು.
ಗಾಂಧಿ ಕುಟುಂಬಕ್ಕೆ ಎಸ್ಪಿಜಿ ಭದ್ರತೆ ಹಿಂತೆಗೆದ ವಿಚಾರ ಚರ್ಚೆ...
ಗಾಂಧಿ ಕುಟುಂಬಕ್ಕೆ ಎಸ್ಪಿಜಿ ಭದ್ರತೆ ತೆಗೆದು ಹಾಕಿದ ವಿಚಾರವನ್ನು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಪ್ರಸ್ತಾಪಿಸಿದರು. ಗಾಂಧಿ ಕುಟುಂಬದ ಎಸ್ಪಿಜಿ ಭದ್ರತೆ ತೆಗೆದು ಹಾಕುವ ಅವಶ್ಯಕತೆಯಾದರೂ ಏನಿತ್ತು? ಅವರು ಸಾಮನ್ಯ ರಾಜಕಾರಣಿಗಳಲ್ಲ. ದಿಢೀರನೆ ಅದನ್ನು ತೆಗೆದುಹಾಕುವಂತಹದ್ದು ಏನಾಯ್ತು ಎಂದು ಪ್ರಶ್ನಿಸಿದರು. 1991ರಿಂದ 2019ರವರೆಗೂ ಎನ್ಡಿಎ ಸರ್ಕಾರ ಆಡಳಿತದಲ್ಲಿದ್ದಾಗ ಎಸ್ಪಿಜಿ ಭದ್ರತೆಯನ್ನು ತೆಗೆದು ಹಾಕಿರಲೇ ಇಲ್ಲ ಎಂದು ಅಧಿರ್ ರಂಜನ್ ಹೇಳಿದರು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ವಿಚಾರ...
2022ರ ವೇಳೆಗೆ ರೈತರ ಆದಯವನ್ನು ದ್ವಿಗುಣಗೊಳಿಸುವ ವಿಚಾರ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಗೊಂಡಿತು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಪ್ರತಿಪಕ್ಷದ ಸಂಸದರು ಸದನದ ಬಾವಿಗಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಭಾಪತಿಗಳು, ರೈತರ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರತಿಪಕ್ಷದ ಸದಸ್ಯರಿಗೆ ಮನವಿ ಮಾಡಿದರು.
ರೈತರು ನಮ್ಮ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ...
ಸದನದಲ್ಲಿ ರೈತರ ಬಗೆಗಿನ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ, ಕೃಷಿ ಹಾಗೂ ರೈತರ ಯೋಗಕ್ಷೇಮ ಸಚಿವ ನರೇಂದ್ರ ಸಿಂಗ್ ತೋಮರ್, ರೈತರ ಸಮಸ್ಯೆಗಳಿಗೆ ಪರಿಹಾರ ಕೊಡುವಲ್ಲಿ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಯೋಜನೆಗಳಿಂದ ದೇಶದ ಎಲ್ಲಾ ರೈತರು ಅನುಕೂಲ ಪಡೆದಿದ್ದಾರೆ ಎಂದರು.