ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ತಪ್ಪು ನಿರ್ಣಯ.. ಪ್ರಧಾನಿಗೆ ಕಮಲಹಾಸನ್​ ಬಹಿರಂಗ ಪತ್ರ! - ಡಿಮಾನೆಟೈಸೇಶನ್

ಮಧ್ಯಮ ವರ್ಗ ಹಾಗೂ ಶ್ರೀಮಂತರ ಜೀವನದ ಅಡಿಪಾಯ ನಿಂತಿರುವುದೇ ಬಡವರಿಂದ. ದೇಶ ಕಟ್ಟುವಲ್ಲಿ ಬಡವರ ಶ್ರಮ ಅಪಾರ. ಸಮಾಜದ ಕೆಳವರ್ಗವನ್ನು ತುಳಿಯುವ ಪ್ರಯತ್ನಗಳಾದರೆ ಅದರಿಂದ ಮೇಲಿನ ಹಂತ ಕುಸಿಯುವುದು ಖಂಡಿತ ಎಂಬುದಕ್ಕೆ ಇತಿಹಾಸವೇ ಸಾಕ್ಷಿ ಎಂದು ಪ್ರಧಾನಿಗೆ ನಟ ಕಮಲ್‌ ಹಾಸನ್‌ ಎಚ್ಚರಿಸಿದ್ದಾರೆ.

Kamalahasan's open letter to PM
Kamalahasan's open letter to PM

By

Published : Apr 6, 2020, 7:56 PM IST

ಚೆನ್ನೈ:ನಟ, ರಾಜಕಾರಣಿ ಕಮಲಹಾಸನ್​, ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಮೋದಿ ಒಬ್ಬ ಮಾಸ್​ ಲೀಡರ್​ ಆಗಿದ್ದಾರೆ ಎಂದು ಹೊಗಳಿದ ಬೆನ್ನಲ್ಲೇ 21 ದಿನಗಳ ಕಾಲ ದೇಶವನ್ನು ಲಾಕ್​ಡೌನ್​ ಮಾಡಿರೋದು ತಪ್ಪು ಎಂದು ಜರಿದಿದ್ದಾರೆ.

ಭಾರತದ ಓರ್ವ ಜವಾಬ್ದಾರಿಯುತ ಹಾಗೂ ನಿರಾಸೆಗೊಂಡ ನಾಗರಿಕನಾಗಿ ಈ ಪತ್ರ ಬರೆಯುತ್ತಿರುವೆ ಎಂದು ಒಕ್ಕಣೆ ಆರಂಭಿಸಿರುವ ಕಮಲಹಾಸನ್, ಸಮಾಜದ ಕೆಳವರ್ಗದ ಜನತೆಯ ಹಿತ ಕಾಪಾಡುವಂತೆ ಮಾ.23ರಂದು ಪತ್ರ ಬರೆದಿದ್ದೆ. ಆದರೆ, ಅದರ ಮರುದಿನವೇ ತಾವು ಡಿಮಾನೆಟೈಸೇಷನ್ ಮಾದರಿಯಲ್ಲಿಯೇ ಲಾಕ್​ಡೌನ್​ ಘೋಷಣೆ ಮಾಡಿದಿರಿ. ಡಿಮಾನೆಟೈಸೇಷನ್ ಸಂದರ್ಭದಲ್ಲಿ ಆ ನಿರ್ಧಾರವನ್ನು ನಾನೂ ಬೆಂಬಲಿಸಿದ್ದೆ. ಆದರೆ, ಕಾಲಾಂತರದಲ್ಲಿ ನಾನು ತಪ್ಪು ಮಾಡಿದ್ದೆ ಎಂಬುದು ಅರಿವಾಗಿತ್ತು. ಹಾಗೆಯೇ ನೀವೂ ಸಹ ತಪ್ಪು ಮಾಡಿದ್ದೀರಿ ಎಂಬುದು ಸಾಬೀತಾಗಿತ್ತು ಎಂದು ಪತ್ರದಲ್ಲಿ ಹೇಳಿದ್ದಾರೆ.

ನಿಮ್ಮ ಕರೆಯ ಮೇರೆಗೆ ಉಳ್ಳವರು ತಮ್ಮ ಬಾಲ್ಕನಿಗಳಲ್ಲಿ ಎಣ್ಣೆಯ ದೀಪಗಳನ್ನು ಬೆಳಗಿಸುತ್ತಿದ್ದಾರೆ. ಆದರೆ, ಮತ್ತೊಂದೆಡೆ ನಾಳೆಯ ರೊಟ್ಟಿ ಬೇಯಿಸಲು ಎಣ್ಣೆ ತರುವುದೆಲ್ಲಿಂದ ಎಂದು ಬಡವರು ಚಿಂತಿಸುತ್ತಿದ್ದಾರೆ ಎಂದು ಕಮಲಹಾಸನ್​ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮದು ಬಾಲ್ಕನಿ ಜನರಿಗಾಗಿನ ಬಾಲ್ಕನಿ ಸರ್ಕಾರವಾಗದಿರಲಿ. ಮಧ್ಯಮ ವರ್ಗ ಹಾಗೂ ಶ್ರೀಮಂತರ ಜೀವನದ ಅಡಿಪಾಯ ನಿಂತಿರುವುದೇ ಬಡವರಿಂದ. ದೇಶ ಕಟ್ಟುವಲ್ಲಿ ಬಡವರ ಶ್ರಮ ಅಪಾರ. ಸಮಾಜದ ಕೆಳವರ್ಗವನ್ನು ತುಳಿಯುವ ಪ್ರಯತ್ನಗಳಾದರೆ ಅದರಿಂದ ಮೇಲಿನ ಹಂತ ಕುಸಿಯುವುದು ಖಂಡಿತ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಚೀನಾದಲ್ಲಿ ಡಿಸೆಂಬರ್ 8ರಂದು ಮೊದಲ ಕೊರೊನಾ ವೈರಸ್​ ಪ್ರಕರಣ ಪತ್ತೆಯಾಗಿತ್ತು. ಜನವರಿ 30ರಂದು ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾಯಿತು. ಆದರೂ ತಾವು ಬೇಗನೆ ಕ್ರಮಕ್ಕೆ ಮುಂದಾಗಲಿಲ್ಲ. ಕೊನೆಗೂ ತಾವು ಎಚ್ಚೆತ್ತುಕೊಂಡು ಕೇವಲ 4 ಗಂಟೆಗಳಲ್ಲಿ ಇಡೀ ದೇಶದಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದಿರಿ. ನೀವು ಎಚ್ಚೆತ್ತುಕೊಳ್ಳಲು ಮಾತ್ರ ನಾಲ್ಕು ತಿಂಗಳೇ ಬೇಕಾದವು. ದೂರದೃಷ್ಟಿಯುಳ್ಳ ನಾಯಕರಾದವರು ಸಮಸ್ಯೆ ಬೃಹದಾಕಾರ ತಾಳುವ ಮುನ್ನವೇ ಅದಕ್ಕೆ ಉತ್ತರ ಕಂಡುಕೊಳ್ಳುತ್ತಾರೆ ಎಂದು ಕಮಲಹಾಸನ್​ ಲಾಕ್​ಡೌನ್​ ನಿರ್ಣಯವನ್ನು ಖಂಡಿಸಿದ್ದಾರೆ.

ಭಾರತದ ಜನಶಕ್ತಿಯೇ ದೇಶದ ಶಕ್ತಿಯಾಗಿದೆ. ಈ ಮುನ್ನವೂ ನಾವು ಹಲವಾರು ಸಂಕಷ್ಟಗಳನ್ನು ಪಾರು ಮಾಡಿದ್ದೇವೆ. ಈ ಬಾರಿಯೂ ಯಶಸ್ವಿಯಾಗಲಿದ್ದೇವೆ. ಆದರೆ, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಸಮಯ ಇದಾಗಿದೆ ಎಂದು ಬರೆದಿರುವ ಕಮಲಹಾಸನ್​, ತಮಗೆ ಕೋಪವಿದ್ದರೂ ಈ ಸಮಯದಲ್ಲಿ ಪ್ರಧಾನಿಯ ಬೆಂಬಲಕ್ಕೆ ನಿಂತಿದ್ದೇನೆ ಎಂದು ಪತ್ರ ಮುಗಿಸಿದ್ದಾರೆ.

ABOUT THE AUTHOR

...view details