ಕರ್ನಾಟಕ

karnataka

ಕೃಷಿ ಕಾಯ್ದೆಗಳ ವಿರುದ್ಧ ಸುಪ್ರೀಂ ಕೋರ್ಟ್​​ ಮೊರೆ ಹೋಗಲು ಕೇರಳ ಸರ್ಕಾರ ಸಜ್ಜು!

By

Published : Dec 7, 2020, 8:54 PM IST

ರಾಜ್ಯದಲ್ಲಿ ಈ ಕಾಯ್ದೆಗಳನ್ನು ಅನುಷ್ಠಾನಗೊಳ್ಳಲು ಬಿಡುವುದಿಲ್ಲ. ಯಾವುದೇ ಪರಿಣಾಮ ಎದುರಿಸಲು ನಾವು ಸಿದ್ಧವಾಗಿದ್ದೇವೆ ಎಂದು ಕೇರಳ ಸಚಿವ ವಿ.ಎಸ್​.ಸುನಿಲ್ ಕುಮಾರ್ ಹೇಳಿದ್ದಾರೆ.

Kerala government
ಕೇರಳ ಸರ್ಕಾರ

ತಿರುವನಂತಪುರಂ (ಕೇರಳ):ಕೇಂದ್ರ ಸರ್ಕಾರ ರೂಪಿಸಿರುವ ನೂತನ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ಸುಪ್ರೀಂ ಕೋರ್ಟ್​ ಮೊರೆ ಹೋಗುವುದಾಗಿ ಕೇರಳ ಸರ್ಕಾರದ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕೃಷಿ ಕಾಯ್ದೆಗಳ ಕುರಿತು ಹಾಗೂ ಭಾರತ್​​ ಬಂದ್ ಕುರಿತು ಮಾತನಾಡಿದ ವಿ.ಎಸ್.ಸುನಿಲ್ ಕುಮಾರ್, ಇನ್ನೆರಡೇ ದಿನಗಳಲ್ಲಿ ಈ ವಿವಾದಾತ್ಮಕ ಕಾಯ್ದೆಗಳ ವಿರುದ್ಧ ಕೇರಳ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಿದೆ. ಈಗಾಗಲೇ ಸರ್ಕಾರದ ಅಡ್ವೋಕೇಟ್ ಜನರಲ್​​ಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಕೃಷಿ ಕಾನೂನು ವಿರುದ್ಧ ಪ್ರತಿಭಟನೆ: ಪ್ರತಿಪಕ್ಷಗಳ ಇಬ್ಬಗೆ ನೀತಿಗೆ ರವಿಶಂಕರ್ ಪ್ರಸಾದ್ ಕಿಡಿ

ರಾಜ್ಯದಲ್ಲಿ ಈ ಕಾಯ್ದೆಗಳನ್ನು ಅನುಷ್ಠಾನಗೊಳ್ಳಲು ಬಿಡುವುದಿಲ್ಲ. ಯಾವುದೇ ಪರಿಣಾಮ ಎದುರಿಸಲು ನಾವು ಸಿದ್ಧವಾಗಿದ್ದೇವೆ ಎಂದು ಸಚಿವ ವಿ.ಎಸ್​.ಸುನಿಲ್ ಕುಮಾರ್ ಹೇಳಿದ್ದು, ಕೇರಳ ಪ್ರತ್ಯೇಕ ಕಾನೂನುಗಳನ್ನು ರೈತರ ರಕ್ಷಣೆಗಾಗಿ ಜಾರಿಗೆ ತರುತ್ತದೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ಉಳಿಗಮಾನ್ಯ ಪದ್ಧತಿಯನ್ನು ಜಾರಿಗೊಳಿಸಲು ಯತ್ನಿಸುತ್ತಿದೆ. ಕಾರ್ಪೋರೇಟ್​ ಕಂಪನಿಗಳಿಗೆ ಕೃಷಿ ಮೇಲಿನ ಹಿಡಿತ ಸಿಕ್ಕಿದರೆ ಅವರ ಮುಂದೆ ಆಹಾರಕ್ಕಾಗಿ ಶರಣಾಗಬೇಕಾಗುತ್ತದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ತೆಂಗಿನಕಾಯಿ ಅಭಿವೃದ್ಧಿ ಮಂಡಳಿ, ರಬ್ಬರ್ ಮಂಡಳಿ, ಕಾಫಿ ಮಂಡಳಿ, ಚಹಾ ಮಂಡಳಿ ಮತ್ತು ಮಸಾಲೆ ಮಂಡಳಿಯಂತಹ ವಿವಿಧ ಕೃಷಿ ಅಭಿವೃದ್ಧಿ ಮಂಡಳಿಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಕೇರಳ ಕೃಷಿ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details