ಕರ್ನಾಟಕ

karnataka

By

Published : Jul 6, 2020, 10:29 AM IST

ETV Bharat / bharat

ದೇವರನಾಡಿನ ರಾಜಧಾನಿಯಲ್ಲಿ ಕೊರೊನಾರ್ಭಟ: ''ತ್ರಿವಳಿ ಲಾಕ್​ಡೌನ್​'' ಘೋಷಿಸಿದ ಸರ್ಕಾರ

ಕೇರಳದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದು, ರಾಜಧಾನಿ ತಿರುವನಂತಪುರದಲ್ಲಿ ತ್ರಿವಳಿ ಲಾಕ್​ಡೌನ್​ ಘೋಷಿಸಲಾಗಿದೆ.

kerala govt
ಕೇರಳ ಸರ್ಕಾರ

ತಿರುವನಂತಪುರ:ಕೇರಳದಲ್ಲಿ ಮತ್ತೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣದಿಂದ ಅಲ್ಲಿನ ಸರ್ಕಾರ ತಿರುವನಂತಪುರ ನಗರದಲ್ಲಿ ತ್ರಿವಳಿ ಲಾಕ್​ಡೌನ್ ಹೇರಲು ಮುಂದಾಗಿದೆ. ಜುಲೈ 6ರ ಬೆಳಗ್ಗೆ 6 ಗಂಟೆಯಿಂದ ಈ ಲಾಕ್​ಡೌನ್​ ಘೋಷಿಸಲಾಗಿದ್ದು, ಒಂದು ವಾರದ ಮಟ್ಟಿಗೆ ಈ ಲಾಕ್​ಡೌನ್ ಇರಲಿದೆ.

ಕೊರೊನಾ ವೈರಸ್​ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್​ '' ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದ ಒಂದು ವಾರದ ಮಟ್ಟಿಗೆ ಕಾಲ ಲಾಕ್​ಡೌನ್​ ಮಾಡಲಾಗುತ್ತದೆ'' ಎಂದಿರುವ ಅವರು ಜಿಲ್ಲೆ ಜ್ವಾಲಾಮುಖಿಯ ಮೇಲಿದೆ ಎಂದು ಆತಂಕ ವ್ಯಕ್ತಪಡಿಸಿ ''ಲಾಕ್​ಡೌನ್​ ವೇಳೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ'' ಎಂದಿದ್ದಾರೆ. ಈ ಮೂಲಕ ತಿರುವನಂತಪುರಂ ಮತ್ತೊಮ್ಮೆ ಲಾಕ್​ಡೌನ್​ ಸಂಕಷ್ಟ ಎದುರಿಸಬೇಕಾಗಿದೆ.

ಏನಿದು ತ್ರಿವಳಿ ಲಾಕ್​ಡೌನ್​..?

ಕೊರೊನಾ ವೈರಸ್​ ಹರಡದಂತೆ ತಡೆಯಲು ವಿಭಿನ್ನ ತಂತ್ರಗಳೊಂದಿಗೆ ಈ ಲಾಕ್​ಡೌನ್​ ಘೋಷಣೆ ಮಾಡಲಾಗಿದ್ದು, ಮೂರು ರೀತಿಯ ಹಂತಗಳನ್ನು ಹೊಂದಿರುತ್ತದೆ.

1.ಮೊದಲನೇ ಹಂತದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿರುವ ಜಿಲ್ಲೆಯನ್ನು ಯಾರೂ ಕೂಡಾ ಪ್ರವೇಶಿಸದಂತೆ ನೋಡಿಕೊಳ್ಳುವುದು ಹಾಗೂ ಆ ಜಿಲ್ಲೆಯಿಂದ ಯಾರೂ ಹೊರಹೋಗದಂತೆ ನಿರ್ಬಂಧಿಸುವುದು

2.ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿರುವ ಪ್ರದೇಶಗಳನ್ನು ಕ್ಲಸ್ಟರ್​ಗಳಾಗಿ ವಿಂಗಡಿಸುವುದು ಹಾಗೂ ಅಲ್ಲಿ ಸೋಂಕಿತರೊಂದಿಗೆ ಬೇರೆ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ತಡೆಯುವುದು

3.ಮೂರನೇ ಹಂತದಲ್ಲಿ ಸೋಂಕಿತರ ಮನೆಗಳನ್ನು ಸೀಲ್​ ಮಾಡುವುದು ಹಾಗೂ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಅವರ ಮನೆಗಳಲ್ಲೇ ಇರುವಂತೆ ನೋಡಿಕೊಳ್ಳುವುದು.

ಈ ಮೂರು ಹಂತಗಳ ಮೂಲಕ ಕೊರೊನಾ ಸೋಂಕನ್ನು ನಿಯಂತ್ರಿಸಲು ತಿರುವನಂತಪುರ ಜಿಲ್ಲಾಡಳಿತ ಮುಂದಾಗಿದೆ.

ಸದ್ಯ ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,429 ಇದ್ದು, ಈವರೆಗೆ 25 ಮಂದಿ ಮೃತಪಟ್ಟಿದ್ದಾರೆ. 3,174 ಮಂದಿ ಚೇತರಿಸಿಕೊಂಡಿದ್ದು, 2,230 ಮಂದಿ ಸೋಂಕಿತರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details