ಕರ್ನಾಟಕ

karnataka

ಬೆಂಬಲ ಬೆಲೆ ಹೆಸರಲ್ಲಿ ರೈತರಿಗೆ ಲಕ್ಷಾಂತರ ಕೋಟಿ ರೂ. ನಷ್ಟ: ಅನ್ನದಾತನಿಗೆ ಇದೆಂಥ ವಂಚನೆ!?

ಪ್ರತಿ ವರ್ಷವೂ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಸರ್ಕಾರವು ಈ ಮೂಲಕ ತಾನು ರೈತರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತದೆ. ಆದರೆ ವಾಸ್ತವದಲ್ಲಿ ಅದು ಪ್ರತಿ ವರ್ಷವೂ ರೈತರಿಗೆ 2.65 ಲಕ್ಷ ಕೋಟಿ ರೂ.ಗಳಷ್ಟು ನಷ್ಟವನ್ನುಂಟು ಮಾಡುತ್ತಿದೆ. ಅದು ಹೇಗೆ ಎಂದು ನೀವೇ ನೋಡಿ...

By

Published : Sep 18, 2020, 10:01 AM IST

Published : Sep 18, 2020, 10:01 AM IST

Farmers
Farmers

ಅತ್ಯಂತ ಕಡುಕಷ್ಟದ ಸಮಯದಲ್ಲೂ ಇಡೀ ದೇಶಕ್ಕೆ ಆಹಾರದ ಕೊರತೆ ಎದುರಾಗದೇ ದೇಶದ ಪ್ರಜೆಗಳೆಲ್ಲರೂ ನೆಮ್ಮದಿಯಿಂದ ಇರುವಂತಾಗಿರುವುದಕ್ಕೆ ಮುಖ್ಯ ಕಾರಣ ಈ ದೇಶದ ರೈತಾಪಿ ವರ್ಗವು ಬಿಕ್ಕಟ್ಟಿನ ಸಮಯದಲ್ಲೂ ಹಗಲು ರಾತ್ರಿಯೆನ್ನದೇ ನೇಗಿಲು ಮತ್ತು ಎತ್ತುಗಳನ್ನು ಬಿಡದೇ ರಾಷ್ಟ್ರದ ಬೆನ್ನೆಲುಬಾಗಿ ಸ್ಥಿರವಾಗಿ ನಿಂತಿರುವುದೇ ಆಗಿದೆ. ಕೇಂದ್ರ ಸರ್ಕಾರವು ಕೋವಿಡ್ ನಷ್ಟಕ್ಕೆ ಒಳಗಾದ ಹಲವಾರು ಕ್ಷೇತ್ರಗಳಿಗೆಂದು ಆತ್ಮನಿರ್ಭರ್​ ಪ್ಯಾಕೇಜನ್ನು ಘೋಷಿಸಿತು. ಆದರೆ ದೇಶದ ಎಲ್ಲಕ್ಕಿಂತ ಮಿಗಿಲಾದ ಅನ್ನ ನೀಡುವ ರೈತನ ವಿಷಯದಲ್ಲಿ ಆತನ ಏಳಿಗೆ ಮತ್ತು ಉಳಿವಿಗೆ ಮಾರಕವಾದ ನೀತಿಯನ್ನು ಸರ್ಕಾರ ಅನುಸರಿಸುತ್ತಿರುವುದು ಅಕ್ಷಮ್ಯ.

ಎರಡು ವರ್ಷಗಳ ಹಿಂದಿನ ಕೃಷಿ ಸಮೀಕ್ಷೆ ತೋರಿಸುವ ಪ್ರಕಾರ ದೇಶಾದ್ಯಂತ ಶೇಕಡಾ 86.2 ರಷ್ಟು ರೈತರು ಸಣ್ಣ ಭೂಹಿಡುವಳಿ ಹೊಂದಿದವರಾಗಿದ್ದು, ಎರಡು ಹೆಕ್ಟೇರಿಗಿಂತಲೂ ಕಡಿಮೆ ಜಮೀನು ಹೊಂದಿದ್ದಾರೆ. 12 ಕೋಟಿ 60 ಲಕ್ಷ ರೈತರು ತಲಾ 0.6 ಹೆಕ್ಟೇರ್ ಗಳಷ್ಟು ಉಳುಮೆ ಯೋಗ್ಯ ಭೂಮಿಯನ್ನು ಮಾತ್ರ ಹೊಂದಿದ್ದಾರೆ. ಕನಿಷ್ಠ ಬೆಂಬಲ ಬೆಲೆಯ ಹೆಸರಿನಲ್ಲಿ ನಡೆಯುವ ರೈತರ ಶೋಷಣೆ ಎನ್ನುವುದು ಕೆಲವು ದಶಕಗಳಿಂದ ಮೇರೆ ಮೀರಿದೆ. ಕೃಷಿ ಮಾರುಕಟ್ಟೆಗಳಲ್ಲಿನ ಮಧ್ಯವರ್ತಿಗಳ ವಂಚನೆ ಅಸಹಾಯಕ ರೈತರ ಹಿತಾಸಕ್ತಿಯನ್ನು ಗಂಭೀರ ಸ್ವರೂಪದಲ್ಲಿ ಶೋಷಿಸುತ್ತಿದೆ. ಆ ಒಂದು ಅಸಂಘಟಿತ ವ್ಯವಸ್ಥೆಯನ್ನು ಎದುರಿಸಲು ಕೇಂದ್ರವು ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿದೆ. ಅದರ ಮೂಲಕ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ತಾವೇ ಮಾರಿಕೊಂಡು ಆಕರ್ಷಕ ಬೆಲೆ ಪಡೆಯಲು ಅದರಲ್ಲಿ ಅವಕಾಶ ನೀಡಿತು. ಆದರೆ ಎಂತಹ ವಿಪರ್ಯಾಸವೆಂದರೆ ಇದೇ ವೇಳೆಯಲ್ಲೇ ಸರ್ಕಾರ ಮಂಡಿಸಿರುವ ಮತ್ತೊಂದು ಮಸೂದೆಯ ಮೂಲಕ ವ್ಯಾಪಾರಿಗಳು ಮತ್ತು ರೈತರ ನಡುವೆ ಬೆಳೆಯ ಕಟಾವಿಗೂ ಮುಂಚಿತವಾಗಿ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಇದು ವ್ಯಾಪಾರಿಗೆ ಲಾಭ ಭದ್ರತೆ ನೀಡಿ ರೈತನ ಕೈಕಟ್ಟಿ ಹಾಕುತ್ತದೆ. ದೂರದೃಷ್ಟಿಯಿಲ್ಲದ ಈ ಮಸೂದೆಯ ಸಮಸ್ಯೆ ಏನೆಂದರೆ ಅದು ತಳಮಟ್ಟದಲ್ಲಿನ ವಾಸ್ತವತೆಗೆ ವಿರುದ್ಧವಾಗಿದೆ. ಮಾರುಕಟ್ಟೆ ಶಕ್ತಿಗಳ ನಡುವೆ ಪೈಪೋಟಿ ಏರ್ಪಟ್ಟು ಅದರಿಂದ ಬೆಳೆಗಳಿಗೆ ಯೋಗ್ಯವಾದ ಬೆಲೆ ನಿಗದಿಗೆ ದಾರಿ ಮಾಡಿಕೊಟ್ಟು ಇದು ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತದೆ ಎಂದು ಈ ಮಸೂದೆಯ ಮೂಲಕ ನಿರೀಕ್ಷಿಸಲಾಗಿದೆ. ಆದರೆ ನಿಜ ಜೀವನದ ಪರಿಸ್ಥಿತಿಗಳಿರುವುದೇ ಬೇರೆ. ಅಲ್ಲಿ ಬೀಜ ಕೊಳ್ಳಲು ಮತ್ತು ನಂತರದಲ್ಲಿ ಬೆಳೆ ಬೆಳೆಯಲು ಆರಂಭದಲ್ಲೇ ಹಣದ ತೀವ್ರ ಅಗತ್ಯತೆ ಎದುರಿಸುವ ಬಡ ರೈತ, ಬೇರೆ ವಿಧಿಯಿಲ್ಲದೇ ಸೀದಾ ವ್ಯಾಪಾರಿಯ ಬಳಿ ಹೋಗಿ ಲಾಭದಾಯಕವಲ್ಲದ ಹಣ ಪಡೆದುಕೊಂಡು, ಸುಗ್ಗಿಯ ನಂತರದಲ್ಲಿ ಪೂರಾ ಬೆಳೆಯನ್ನು ಆ ವ್ಯಾಪಾರಿಗೇ ಒಪ್ಪಿಸುವುದಾಗಿ ಒಪ್ಪಂದ ಮಾಡಿಕೊಂಡು ಬರುತ್ತಾನೆ. ಒಂದೊಮ್ಮೆ ಸುಗ್ಗಿಯಲ್ಲಿ ಅಧಿಕ ಫಸಲು ಬಂದಿದ್ದರೂ ಅದರಿಂದ ಆ ರೈತನಿಗೆ ಏನೂ ಪ್ರಯೋಜನವಾಗುವುದಿಲ್ಲ. ತಾನು ಬೆಳೆದ ಅಷ್ಟೂ ಬೆಳೆಯನ್ನು ಈ ಮುಂಚಿನ ಒಪ್ಪಂದಕ್ಕೆ ಅನುಗುಣವಾಗಿ ವ್ಯಾಪಾರಿ ಹೇಳಿದ ಬೆಲೆಗೆ ಒಪ್ಪಿಸಿ ಬರುತ್ತಾನೆ. ರಾಷ್ಟ್ರದ ಆಹಾರ ಭದ್ರತೆಗೆ ಕಾರಣರಾಗಿರುವ ರೈತರ ಕಲ್ಯಾಣವನ್ನು ಖಾತ್ರಿಗೊಳಿಸಬೇಕಾಗಿದ್ದ ಸರ್ಕಾರ ಈ ರೀತಿಯಲ್ಲಿ ಅನ್ನದಾತನನ್ನು ಮಾರುಕಟ್ಟೆ ಶಕ್ತಿಗಳ ಆಟಕ್ಕೆ ಬಲಿಯಾಗುವಂತೆ ಮಾಡಿರುವುದು ಮಾತ್ರ ಆಘಾತವನ್ನುಂಟು ಮಾಡುವ ಸಂಗತಿಯಾಗಿದೆ.

ಕೃಷಿ ಆರ್ಥಿಕ ತಜ್ಞ ಅಶೋಕ್ ಗುಲಾಟಿ ಅವರು ನಡೆಸಿರುವ ಒಂದು ಅಧ್ಯಯನದ ಪ್ರಕಾರ, ಪ್ರತಿ ವರ್ಷವೂ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಸರ್ಕಾರವು ಈ ಮೂಲಕ ರೈತರಿಗೆ ಸಹಾಯ ಮಾಡುತ್ತಿರುವುದಾಗಿ ಸರ್ಕಾರ ಬಿಂಬಿಸಿಕೊಳ್ಳುತ್ತದೆ. ಆದರೆ ವಾಸ್ತವದಲ್ಲಿ ಅದು ಪ್ರತಿ ವರ್ಷವೂ ರೈತರಿಗೆ 2.65 ಲಕ್ಷ ಕೋಟಿ ರೂ.ಗಳಷ್ಟು ನಷ್ಟವನ್ನುಂಟು ಮಾಡುತ್ತಿದೆ. 2000-17ರ ನಡುವಿನ ಅವಧಿಯಲ್ಲಿ ರೈತರ ಮೇಲೆ ವಿಧಿಸಲಾದ ಪರೋಕ್ಷ ತೆರಿಗೆಯ ಮೊತ್ತ 45 ಲಕ್ಷ ಕೋಟಿ ರೂಪಾಯಿಗಳು ಎಂಬ ಸಂಗತಿಯನ್ನು ಹೇಗೆ ನೋಡುವುದು?. ಮುಕ್ತ ಮಾರುಕಟ್ಟೆಗಳನ್ನು ಸಮೀಪಿಸಲು ಕೃಷಿ ಮಾರುಕಟ್ಟೆಯ ಸುಧಾರಣೆಯ ಕುರಿತು ಸಲಹೆಗಳೊಂದಿಗೆ ಕೇಂದ್ರವು ಕಾನೂನು ರೂಪಿಸಲು ಹೊರಟಿದೆ. ನಿಯಂತ್ರಿತ ಮಾರುಕಟ್ಟೆಯಲ್ಲಿಯೇ ಬಾಯಿ ತೆರೆಯಲು ಆಗದ ಸ್ಥಿತಿಯಲ್ಲಿರುವ ರೈತಾಪಿಯು ಇನ್ನು ಮುಕ್ತ ಮಾರುಕಟ್ಟೆಯಲ್ಲಿ ಹೇಗೆ ಉಳಿದು ಬೆಳೆದಾನು ಎಂಬ ಯೋಚನೆಯೂ ಸರ್ಕಾರಕ್ಕೆ ಇದ್ದಂತಿಲ್ಲ. ರೈತರ ಕಲ್ಯಾಣದ ದೃಷ್ಟಿಯಿಂದ ನಿಷ್ಪ್ರಯೋಜಕವಾಗಿರುವ ಬೆಂಬಲ ಬೆಲೆಯು ಒಂದು ಹೊರೆಯಾಗಿ ಪರಿಣಮಿಸಿದೆ ಎಂಬ ಸಂಗತಿಯ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಏಳಿಗೆ ಸಾಧಿಸಲು ಡಾ. ಸ್ವಾಮಿನಾಥನ್ ಸಮಿತಿಯ ಶಿಪಾರಸುಗಳನ್ನು ಯಾವ ಕಾರಣಕ್ಕೆ ಸರ್ಕಾರ ಜಾರಿಗೊಳಿಸದಾಗಿದೆ? ಎಂಬ ಪ್ರಶ್ನೆ ಉದ್ಭವಿಸುತ್ತೆ.

ಸ್ವತಃ ಹಸಿವಿನಿಂದಿದ್ದರೂ ದೇಶದ ಹಸಿವನ್ನು ನೀಗಿಸುವ ರೈತ ಆಹಾರ ಸ್ವಯಂ ಸಂಪೂರ್ಣತೆಯ ಸಾಧಕನಾಗಿರುವುದು ಮಾತ್ರವಲ್ಲದೇ ದೇಶದ ಸಾರ್ವಭೌಮತೆಯನ್ನು ಕಾಪಾಡುತ್ತಿರುವ ಸ್ವಯಂ ಸೈನಿಕನೇ ಆಗಿದ್ದಾನೆ. ತೆಲಂಗಾಣದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿರುವ ಬೆಳೆ ಕಾಲೋನಿಗಳನ್ನು ದೇಶಾದ್ಯಂತ ಅನುಸರಿಸುವ ತುರ್ತು ಈಗ ಒದಗಿ ಬಂದಿದೆಯಲ್ಲದೇ ರೈತಾಪಿ ವರ್ಗವನ್ನು ಕೇಂದ್ರವಾಗಿರಿಸಿಕೊಂಡು ಒಂದು ಸಮಗ್ರ ಕೃಷಿ ನೀತಿಯನ್ನು ರೂಪಿಸಬೇಕಾದ ಅಗತ್ಯವಿದೆ. ದೇಶದ ನೂರಕ್ಕೂ ಹೆಚ್ಚು ಹವಾಗುಣ ವಲಯಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಣ್ಣಿನ ಪರೀಕ್ಷೆ ನಡೆಸಿ, ಯಾವ ಮಣ್ಣು ಯಾವ ಬೆಳೆಗೆ ಯೋಗ್ಯವಾಗಿದೆ ಎಂಬುದನ್ನು ನಿರ್ಧರಿಸಬೇಕು. ಇದರ ಮೂಲಕ ದೇಶಿ ಬಳಕೆಗೆ ಮತ್ತು ರಫ್ತು ಅವಕಾಶಗಳಿಗೆ ಬೇಕಾದ ವಾರ್ಷಿಕ ಬೆಳೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ.

ಕೃಷಿ ಸಂಶೋಧನೆಗಳನ್ನು ನಡೆಸಿ ರೈತಾಪಿಯನ್ನು ಫಸಲು ನಷ್ಟ, ಗುಣಮಟ್ಟ ವಿಫಲತೆ, ಕೀಟಬಾಧೆ, ಬರಗಾಲ ಮತ್ತು ನೆರೆಗಳಂತಹ ಅನಾಹುತಗಳಿಂದ ರಕ್ಷಿಸಬೇಕಿದೆ. ಸರ್ಕಾರವು ರೈತ ಬೆಳೆದ ಬೆಳೆಯನ್ನು ತಾನೇ ಕೊಂಡು ರೈತರಿಗೆ ನ್ಯಾಯಬದ್ಧವಾದ ಆದಾಯವನ್ನು ಖಾತ್ರಿಗೊಳಿಸಿ ರಾಷ್ಟ್ರದ ಆಹಾರ ಭದ್ರತೆಯನ್ನು ಖಾತರಿಗೊಳಿಸಬೇಕು. ಅಸಹಾಯಕ ರೈತನನ್ನು ಸಮಸ್ಯೆಗಳ ಸುಳಿಯೊಳಕ್ಕೆ ಎಸೆದು ಮುಕ್ತ ಮಾರುಕಟ್ಟೆಯ ಹಂಗಿನಲ್ಲಿ ಬದುಕುವಂತೆ ಮಾಡಿದರೆ ರೈತರ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗುತ್ತದೆ. ಮಾತ್ರವಲ್ಲ, ಅವಾಸ್ತವಿಕ ಸುಧಾರಣೆಗಳು ಮತ್ತು ಕಾಯ್ದೆ - ಕಾನೂನುಗಳು ರೈತರ ಪಾಲಿಗೆ ವರವಾಗುವುದಕ್ಕಿಂತಲೂ ಹೆಚ್ಚಾಗಿ ಶಾಪವಾಗಿ ಪರಿಣಮಿಸುತ್ತವೆ.

ABOUT THE AUTHOR

...view details