ಕರ್ನಾಟಕ

karnataka

ರಾಜ್ಯಗಳ ಆರ್ಥಿಕ ಅಸಮಾನತೆಯ ಅಂತರದಲ್ಲಿ ಗಣನೀಯ ಇಳಿಕೆ: SBI ವರದಿ

By

Published : Jun 23, 2020, 5:59 PM IST

ಕೊರೊನಾ ಹಾಗೂ ಲಾಕ್​ಡೌನ್​ ದೇಶದ ಆರ್ಥಿಕತೆ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಬೀರಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ನಡುವಿನ ಆರ್ಥಿಕ ಅಸಮಾನತೆ ಇಳಿಮುಖವಾಗಿದೆ ಎಂದು ಎಸ್​ಬಿಐನ ಸಂಶೋಧನಾ ವರದಿಯೊಂದು ಹೇಳಿದೆ.

sbi
ಎಸ್​ಬಿಐ

ಮುಂಬೈ: ಕೊರೊನಾ ನಂತರ ದಿನಗಳಲ್ಲಿ ಆರ್ಥಿಕ ಅಸಮಾನತೆಯ ಅಂತರ ಕಡಿಮೆಯಾಗುತ್ತಿದೆ. ದೇಶದ ಶ್ರೀಮಂತ ರಾಜ್ಯಗಳು ಬಡರಾಜ್ಯಗಳಿಗಿಂತ ಆರ್ಥಿಕತೆಯಲ್ಲಿ ಕೆಳಮಟ್ಟಕ್ಕಿಳಿದಿವೆ ಎಂದು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಸಂಶೋಧನಾ ವರದಿಯಾದ ಎಕೋವ್ರ್ಯಾಪ್​ ಬಹಿರಂಗಪಡಿಸಿದೆ.

2020 ಹಣಕಾಸು ವರ್ಷದ ತಲಾದಾಯ ಶೇ 5.4ರಷ್ಟು ಕಡಿಮೆಯಾಗಲಿದೆ. ಅಂದರೆ ತಲಾದಾಯ 1.43 ಲಕ್ಷಕ್ಕೆ ಇಳಿಯಲಿದೆ ಎಂದು ಈ ಸಂಶೋಧನಾ ವರದಿ ಅಂದಾಜು ಮಾಡಿದೆ. ಶ್ರೀಮಂತ ರಾಜ್ಯಗಳ ಆದಾಯ ಕುಂಠಿತವಾಗುತ್ತಿದ್ದು, ರಾಜ್ಯಗಳ ನಡುವಿನ ಆರ್ಥಿಕ ಅಸಮಾನತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ವರದಿ ಹೇಳುತ್ತಿದೆ.

1989ರಲ್ಲಿ ಜರ್ಮನಿಯಲ್ಲಿ ನಡೆದ ಬರ್ಲಿನ್​ ಯುದ್ಧದ ವೇಳೆಯೂ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ತಲಾದಾಯದ ಜೊತೆಗೆ ಜಿಡಿಪಿಯೂ ಶೇ 3.8ಕ್ಕೆ ಇಳಿಕೆಯಾಗಿದೆ. ಜಿಡಿಪಿ ಹಾಗೂ ತಲಾದಾಯವನ್ನು ಹೋಲಿಕೆ ಮಾಡಿದರೆ ತಲಾದಾಯವೇ ಹೆಚ್ಚಿರುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಭಾರತ ಮಾತ್ರವಲ್ಲದೇ 2020ರ ವಿಶ್ವದ ಜಿಡಿಪಿ ಶೇ 5.2ರಷ್ಟು ಇಳಿಕೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ದೇಶದ ತಲಾದಾಯಕ್ಕಿಂತ ಹೆಚ್ಚಿನ ತಲಾದಾಯ ಹೊಂದಿದ್ದ ರಾಜ್ಯಗಳು ತಮ್ಮ ತಲಾದಾಯದಲ್ಲಿ ಸಾಕಷ್ಟು ಹಿನ್ನಡೆ ಕಂಡಿವೆ. ಒಟ್ಟು ಎಂಟು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಲಾದಾಯ 2021ರಲ್ಲಿ ಎರಡಂಕಿಯಷ್ಟು ಕುಸಿಯಲಿದೆ. ಈ ರಾಜ್ಯಗಳು ದೇಶದ ಒಟ್ಟು ಜಿಡಿಪಿಯ ಶೇ 47ರಷ್ಟು ಜಿಡಿಪಿ ಹೊಂದಿದ್ದವು ಎಂದು ಹೇಳಲಾಗಿದೆ.

ಕೊರೊನಾ ಹೆಚ್ಚಾಗಿ ಕಂಡು ಬಂದು ಕೆಂಪು ವಲಯಗಳಾಗಿ ಗುರುತಿಸಲಾದ ರಾಜ್ಯಗಳಲ್ಲಿ ಲಾಕ್​ಡೌನ್​ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಲಾಕ್​ಡೌನ್​ ವೇಳೆ ಮಾರುಕಟ್ಟೆ, ಶಾಪಿಂಗ್​ ಮಾಲ್​ಗಳು ಮುಚ್ಚಿದ್ದ ಕಾರಣದಿಂದ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಈಗಲೂ ಶೇ 70ರಿಂದ ಶೇ 80ರಷ್ಟು ಗ್ರಾಹಕರ ಕೊರತೆಯನ್ನು ವಾಣಿಜ್ಯ ಮಳಿಗೆಗಳು ಎದುರಿಸುತ್ತಿವೆ ಎನ್ನುತ್ತೆ ವರದಿ.

ಪ್ರಸ್ತುತ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರ, ಗುಜರಾತ್​, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಶೇ 10ರಿಂದ ಶೇ 12ರಷ್ಟು ತಲಾದಾಯ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಮಧ್ಯಪ್ರದೇಶ, ಗುಜರಾತ್​, ಉತ್ತರ ಪ್ರದೇಶ, ಬಿಹಾರ, ಒಡಿಶಾ ರಾಜ್ಯಗಳಲ್ಲಿ ರಾಷ್ಟ್ರದ ಸರಾಸರಿ ತಲಾದಾಯಕ್ಕಿಂತ ಕಡಿಮೆ ತಲಾದಾಯ ಹೊಂದಿದ್ದು, ಈ ಹಣಕಾಸು ವರ್ಷದಲ್ಲಿ ಶೇ 8ರಷ್ಟು ತಲಾದಾಯ ಕಡಿಮೆಯಾಗಬಹುದೆಂದು ಅಂದಾಜಿಸಲಾಗಿದೆ.

ABOUT THE AUTHOR

...view details