ನವದೆಹಲಿ :ದೇಶದ ಸುಧಾರಣೆಗಾಗಿ ನಾಗರಿಕರು ಮುಂದಾಗಬೇಕು. ಸುಮ್ಮನೆ ಬಾಯಿ ಮಾತಿನಿಂದ ಹೇಳಿದರೆ ಭಾರತ ಸ್ವಾವಲಂಬಿಯಾಗುವುದಿಲ್ಲ. ಯುವಕರ ಕಾರ್ಯಗಳಿಂದ ಅದನ್ನು ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶನ ನೀಡಲಿರುವ ಕಲಾವಿದರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ದೇಶದ ಸಾಮಾಜಿಕ-ಸಾಂಸ್ಕೃತಿಕ ಪರಂಪರೆ ಶ್ಲಾಘಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಅವಕಾಶ ನಮಗೆ ಸಿಗಲಿಲ್ಲ. ಆದರೆ, ಖಂಡಿತವಾಗಿಯೂ ನಮ್ಮ ಅತ್ಯುತ್ತಮ ದೇಶಸೇವೆ ನೀಡಲು ನಮಗೆ ಅವಕಾಶ ನೀಡಲಾಗಿದೆ. ಭಾರತವನ್ನು ಬಲಪಡಿಸಲು ಎಲ್ಲರೂ ಶ್ರಮಿಸೋಣ ಎಂದರು.
ಗಣರಾಜ್ಯೋತ್ಸವದ ಸಿದ್ಧತೆಗಳ ಸಮಯದಲ್ಲಿ, ನಮ್ಮ ದೇಶ ಎಷ್ಟು ವೈವಿಧ್ಯಮಯವಾಗಿದೆ ಎಂಬುದನ್ನು ನೀವು ಅರಿತುಕೊಂಡಿರಬೇಕು. ಅನೇಕ ಭಾಷೆಗಳು, ಅನೇಕ ಉಪ ಭಾಷೆಗಳು ಮತ್ತು ವಿಭಿನ್ನ ಆಹಾರಗಳು ನಮ್ಮಲ್ಲಿವೆ.
ಆದರೆ, ಭಾರತವು ಮಾತ್ರ ಒಂದು ಎಂದರು. ಗಣರಾಜ್ಯೋತ್ಸವದ ಮೆರವಣಿಗೆ ನಮ್ಮ ದೇಶದ ಶ್ರೇಷ್ಠ ಸಾಮಾಜಿಕ-ಸಾಂಸ್ಕೃತಿಕ ಪರಂಪರೆಯ ಶಕ್ತಿ ಎಂದು ಹೇಳಿದರು.