ಇತ್ತೀಚೆಗೆ ಡಯೇನ್ ಚಂಡಮಾರುತದಿಂದ ಉಂಟಾದ ವಿನಾಶದ ಹಿನ್ನೆಲೆಯಲ್ಲಿ ಸಣ್ಣ ದ್ವೀಪ ರಾಷ್ಟ್ರ ಮಡಗಾಸ್ಕರ್ಗೆ ಸಮಯೋಚಿತ ಮತ್ತು ಗಣನೀಯ ನೆರವು ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದಗಳು ಎಂದು ಆ ದೇಶದ ರಕ್ಷಣಾ ಸಚಿವ ಲೆಫ್ಟಿನೆಂಟ್ ಜನರಲ್ ರೊಕೊಟೊನಿರಿನಾ ರಿಚರ್ಡ್ ಹೇಳಿದ್ದಾರೆ. ಲಖನೌದಲ್ಲಿ ಡಿಫೆನ್ಸ್ಎಕ್ಸ್ಪೋ- 2020ರಲ್ಲಿ ಭಾಗಿಯಾಗಿ, ಜೊತೆಗೆ ಸಹವರ್ತಿ ರಾಜನಾಥ್ ಸಿಂಗ್ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಲೆಫ್ಟಿನೆಂಟ್ ಜೆನ್ ರಿಚರ್ಡ್, ಈಟಿವಿ ಭಾರತ್ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, ಭಾರತವನ್ನು ಉತ್ತಮ ಸ್ನೇಹಿತ ರಾಷ್ಟ್ರ ಎಂದು ಶ್ಲಾಘಿಸಿದ್ದಾರೆ.
ಕಳೆದ ಕೆಲವು ವಾರಗಳ ಹಿಂದೆ ಸಂಭವಿಸಿದ ಚಂಡಮಾರುತದಿಂದ ಸಂಕಷ್ಟಕ್ಕೊಳಗಾಗಿದ್ದ ಪೂರ್ವ ಆಫ್ರಿಕಾದ ಕರಾವಳಿಯಲ್ಲಿರುವ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರಕ್ಕೆ ಭಾರತೀಯ ನೌಕಾಪಡೆ ತನ್ನ ‘ಆಪರೇಷನ್ ವೆನಿಲ್ಲಾ’ ಮೂಲಕ ನೆರವು ನೀಡಿತ್ತು. ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದವರ ಪರಿಹಾರ ಕಾರ್ಯಾಚರಣೆಗಳಲ್ಲಿ ಬೆಂಬಲ ನೀಡಲು ಐಎನ್ಎಸ್ ಐರಾವತ್ ಅನ್ನು ಶೀಘ್ರವಾಗಿ ಅಲ್ಲಿಗೆ ಕಳುಹಿಸಲಾಯಿತು ಮತ್ತು ಸ್ಥಳೀಯರಿಗೆ ವೈದ್ಯಕೀಯ ಶಿಬಿರಗಳನ್ನು ಸಹ ಭಾರತೀಯ ನೌಕಾಪಡೆ ವತಿಯಿಂದ ಸ್ಥಾಪಿಸಲಾಯಿತು.
ಕಳೆದ ವಾರ ಲಖನೌದಲ್ಲಿ ನಡೆದ ಡಿಫೆನ್ಸ್ ಎಕ್ಸ್ಪೋ- 2020 ರ ಎರಡನೇ ದಿನದಂದು ರಾಜನಾಥ್ ಸಿಂಗ್ ಮತ್ತು ಲೆಫ್ಟಿನೆಂಟ್ ಜನರಲ್ ರಿಚರ್ಡ್ ನಡುವಿನ ಚರ್ಚೆಯಲ್ಲಿ ಈ ಪ್ರದೇಶದಲ್ಲಿ ಕಡಲ ಭದ್ರತಾ ಸಹಕಾರವನ್ನು ಹೆಚ್ಚಿಸುವ ಕುರಿತು ಪ್ರಮುಖ ಚರ್ಚೆ ನಡೆಯಿತು. ಕಡಲ ನೆರೆಹೊರೆಯವರಾಗಿ ‘ವ್ಯಾಪಾರ ಮತ್ತು ವಾಣಿಜ್ಯವು ಅಭಿವೃದ್ಧಿ ಹೊಂದುವಂತೆ ಸುರಕ್ಷಿತ ಕಡಲ ವಾತಾವರಣವನ್ನು ಖಾತರಿಪಡಿಸುವ ಜವಾಬ್ದಾರಿ ಎರಡೂ ದೇಶಗಳ ಮೇಲಿದೆ’ ಎಂದು ರಾಜನಾಥ್ ಸಿಂಗ್ ಚರ್ಚೆ ವೇಳೆ ಒತ್ತಿಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಲೆಫ್ಟಿನೆಂಟ್ ಜನರಲ್ ರಿಚರ್ಡ್ ಅವರು ‘ಹಿಂದೂ ಮಹಾಸಾಗರ ಕಡಲ ಪ್ರದೇಶದಲ್ಲಿ ಭದ್ರತೆ ನೀಡುವಲ್ಲಿ ಭಾರತಕ್ಕೆ ದೊಡ್ಡ ಪಾತ್ರವಿದೆ’ ಎಂದು ತಿಳಿಸಿದ್ದರು.
ಭಾರತವು ಮಾನವೀಯ ನೆರವು ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿ ಮಡಗಾಸ್ಕರ್ ಅಧ್ಯಕ್ಷ ರಾಜೋಲಿನಾ ಮಾಡಿದ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಹಿಂದೂ ಮಹಾಸಾಗರದಿಂದ ಮಡಗಾಸ್ಕರ್ಗೆ ಸಂಪರ್ಕ ಹೊಂದಿದ್ದು, ಇಂಥ ನೆರವಿನ ಮೂಲಕ ಗಟ್ಟಿಯಾಗಿ ಮಡಗಾಸ್ಕರ್ನೊಂದಿಗೆ ನಿಲ್ಲಲು ಭಾರತ ಬದ್ಧವಾಗಿದೆ. ಪ್ರದೇಶದ ಎಲ್ಲರ ಭದ್ರತೆ ಮತ್ತು ಬೆಳವಣಿಗೆಗಾಗಿ (‘ಸಾಗರ್’, ಹಿಂದಿಯಲ್ಲಿ ಅಂದರೆ ಸಾಗರ ಎಂದರ್ಥ) ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದರು.
ಜಿಬೌಟಿಯಲ್ಲಿನ ಮಿಲಿಟರಿ ನೆಲೆಯ ಮೂಲಕ ಪಶ್ಚಿಮ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಹೆಜ್ಜೆ ಗುರುತನ್ನು ಹೊಂದಿರುವಾಗ, ಭಾರತವು ತನ್ನ ಆಫ್ರಿಕದ ಪಾಲುದಾರರೊಂದಿಗೆ ಕಾರ್ಯತಂತ್ರದ ಸಹಕಾರವನ್ನು ಹೆಚ್ಚಿಸಿದೆ. ಈ ಕಾರ್ಯತಂತ್ರದ ಭಾಗವಾಗಿ 2020ರ ಫೆಬ್ರವರಿ 6ರಂದು ಲಕ್ನೋದಲ್ಲಿ ನಡೆದ ದ್ವೈವಾರ್ಷಿಕ ರಕ್ಷಣಾ ಪ್ರದರ್ಶನ ಡಿಫೆನ್ಸ್ ಎಕ್ಸ್ಪೋ ಇಂಡಿಯಾ 2020 ರ 11ನೇ ಆವೃತ್ತಿಯ ಸಂದರ್ಭದಲ್ಲಿ ಮೊದಲ ಬಾರಿಗೆ ಭಾರತವು ಆಫ್ರಿಕಾದ ರಕ್ಷಣಾ ಮಂತ್ರಿಗಳೊಂದಿಗೆ ಸಮಾವೇಶ ನಡೆಸಿದೆ. ಕಳೆದ ಕೆಲ ವರ್ಷಗಳಲ್ಲಿ ಭಾರತವು ನೈಜೀರಿಯಾ, ಇಥಿಯೋಪಿಯಾ ಮತ್ತು ತಾಂಜಾನಿಯಾದಲ್ಲಿ ರಕ್ಷಣಾ ಅಕಾಡೆಮಿಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದೆ; ಬೋಟ್ಸ್ವಾನ, ನಮೀಬಿಯಾ, ಉಗಾಂಡಾ, ಲೆಸೊಥೊ, ಜಾಂಬಿಯಾ, ಮಾರಿಷಸ್, ಸೀಶೆಲ್ಸ್, ತಾಂಜಾನಿಯಾ ಸೇರಿದಂತೆ ಹಲವಾರು ಆಫ್ರಿಕನ್ ದೇಶಗಳಲ್ಲಿ ತರಬೇತಿ ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಸ್ನೇಹಪರ ಹಡಗು ಭೇಟಿ ಮತ್ತು ರಕ್ಷಣಾ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸಿದೆ. ಇವೆಲ್ಲವೂ ಆಫ್ರಿಕದಲ್ಲಿ ಭಾರತದ ಹೆಜ್ಜೆ ಗುರುತಿನ ಕುರಿತು ತಿಳಿಸುತ್ತವೆ.
“2019 ರಲ್ಲಿ ಮೊಜಾಂಬಿಕ್ನಲ್ಲಿ ನಡೆದ ಇಡೈ ಚಂಡಮಾರುತದ ಸಂದರ್ಭದಲ್ಲಿ ಮತ್ತು 2018 ರಲ್ಲಿ ಜಿಬೌಟಿ ದುರಂತದಲ್ಲಿ ಸಿಲುಕಿದ್ದ ದೇಶದ 41 ವ್ಯಕ್ತಿಗಳನ್ನು ಸ್ಥಳಾಂತರಿಸುವುದರೊಂದಿಗೆ ಮತ್ತು ಮಡಗಾಸ್ಕರ್ ಸೇರಿದಂತೆ ಹಲವಾರು ಇತರ ಕಾರ್ಯಾಚರಣೆಗಳಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಭಾರತೀಯ ರಕ್ಷಣಾ ಪಡೆಗಳ ಕೊಡುಗೆಯನ್ನು ನಾವು ಸದಾ ಸ್ಮರಿಸುತ್ತೇವೆ ”ಎಂದು ರಕ್ಷಣಾ ಮಂತ್ರಿಗಳ ಸಭೆಯ ನಂತರ ಹೊರಡಿಸಿದ ಜಂಟಿ ಹೇಳಿಕೆ ತಿಳಿಸಿದೆ.
ಭಯೋತ್ಪಾದನೆ ಮತ್ತು ಉಗ್ರವಾದದ ಸಾಮಾನ್ಯ ಭದ್ರತಾ ಸವಾಲುಗಳನ್ನು ಗುರುತಿಸಿ, ಕಡಲ್ಗಳ್ಳತನ, ಮಾನವ ಕಳ್ಳಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಸಂಘಟಿತ ಅಪರಾಧಗಳನ್ನು ಗುರುತಿಸಿ ನಿಯಂತ್ರಿಸುವುದು ಸೇರಿದಂತೆ ಭದ್ರತಾ ಸಂಬಂಧಿ ಹಲವು ಮಹತ್ತರ ವಿಚಾರಗಳ ಚರ್ಚೆಯೊಂದಿಗೆ ರಕ್ಷಣಾ ಸಚಿವರ ಸಮಾವೇಶವು ರಕ್ಷಣಾ ವಲಯದಲ್ಲಿನ ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಿದೆ. "ಹೂಡಿಕೆ, ರಕ್ಷಣಾ ಸಲಕರಣೆಗಳ ಸಾಫ್ಟ್ವೇರ್, ಡಿಜಿಟಲ್ ಡಿಫೆನ್ಸ್, ಸಂಶೋಧನೆ ಮತ್ತು ಅಭಿವೃದ್ಧಿ, ರಕ್ಷಣಾ ಸಾಧನಗಳನ್ನು ಒದಗಿಸುವುದು, ಬಿಡಿಭಾಗಗಳು ಮತ್ತು ಸುಸ್ಥಿರ ಮತ್ತು ಪರಸ್ಪರ ಲಾಭದಾಯಕ ಷರತ್ತುಗಳ ನಿರ್ವಹಣೆ ಸೇರಿದಂತೆ ರಕ್ಷಣಾ ಉದ್ಯಮದ ಕ್ಷೇತ್ರದಲ್ಲಿ ಆಳವಾದ ಸಹಕಾರಕ್ಕಾಗಿ ನಾವು ಕರೆ ನೀಡುತ್ತೇವೆ" ಎಂದು ಸಮಾವೇಶದ ಔಪಚಾರಿಕ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗಿನ ಈ ಸಂವಾದದಲ್ಲಿ, ಉದಯೋನ್ಮುಖ ಆರ್ಥಿಕತೆಗಳ ರಕ್ಷಣಾ ಸಾಮರ್ಥ್ಯಗಳನ್ನು ಪರಿವರ್ತಿಸಲು ಭಾರತವು ಸಹಾಯ ಮಾಡುತ್ತದೆ ಎಂದು ರಕ್ಷಣಾ ಸಚಿವ ರಿಚರ್ಡ್ ಒತ್ತಿಹೇಳಿದ್ದಾರೆ. ಈ ಮಧ್ಯೆ ಜೂನ್ 26 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮಡಗಾಸ್ಕರ್ ಭಾರತೀಯ ರಕ್ಷಣಾ ಸಚಿವರನ್ನು ಆಹ್ವಾನಿಸಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಶ್ನೆ1: ಮಡಗಾಸ್ಕರ್ನಲ್ಲಿ ಇತ್ತೀಚಿನ ಚಂಡಮಾರುತಗಳು ಎಷ್ಟು ವಿನಾಶವನ್ನು ಉಂಟುಮಾಡಿದೆ ಎಂಬುದರ ಕುರಿತು ನಮಗೆ ವಿವರಿಸಿ?