ಕರ್ನಾಟಕ

karnataka

ಸವಾಲುಗಳನ್ನು ಗೆದ್ದಿರುವ ಇತಿಹಾಸ ಭಾರತಕ್ಕಿದೆ; ಚೀನಾಗೆ ತಕ್ಕ ಉತ್ತರ ನೀಡಲಾಗಿದೆ: ಮೋದಿ

By

Published : Jun 28, 2020, 1:22 PM IST

Updated : Jun 28, 2020, 1:30 PM IST

ಇಂದು ನಡೆಸಿದ 66ನೇ ಆವೃತ್ತಿಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಕೋವಿಡ್​ ಬಿಕ್ಕಟ್ಟು, ಗಾಲ್ವಾನ್ ಸಂಘರ್ಷ, ಆತ್ಮ ನಿರ್ಭರ ಭಾರತ ಸೇರಿದಂತೆ ಅನೇಕ ವಿಷಯಗಳ ಕುರಿತು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

Modi in 'Mann Ki Baat'
ಮನ್ ಕಿ ಬಾತ್

ನವದೆಹಲಿ: ಸವಾಲುಗಳು ಬಂದಿವೆಯೆಂದು 2020 ಅನ್ನು ಕೆಟ್ಟದೆಂದು ಪರಿಗಣಿಸಲಾಗುವುದಿಲ್ಲ. ಸವಾಲುಗಳು ಯಾವುದೇ ಆಗಿರಬಹುದು, ಅದನ್ನು ಗೆದ್ದಿರುವ ಇತಿಹಾಸ ಭಾರತಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

66ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ಕೋವಿಡ್​ ಬಿಕ್ಕಟ್ಟು, ಗಾಲ್ವಾನ್ ಸಂಘರ್ಷ, ಆತ್ಮ ನಿರ್ಭರ ಭಾರತ ಸೇರಿದಂತೆ ಅನೇಕ ವಿಷಯಗಳ ಕುರಿತು ದೇಶವನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು.

ಕೊರೊನಾ ವಿಷಯದಲ್ಲಿ ನಿರ್ಲಕ್ಷ್ಯ ಬೇಡ

ಲಾಕ್​ಡೌನ್​​ ಸಮಯಕ್ಕಿಂತಲೂ ಈಗಿನ ಅನ್‌ಲಾಕ್ ಸಮಯದಲ್ಲಿ ನಾವು ಇನ್ನಷ್ಟು ಜಾಗರೂಕರಾಗಿರಬೇಕು. ಮಾಸ್ಕ್​​ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ನಿಮ್ಮ ಜೊತೆಗೆ ಇತರರನ್ನೂ ಅಪಾಯಕ್ಕೆ ದೂಡುತ್ತಿದ್ದೀರಿ. ಕೊರೊನಾ ವೈರಸ್​ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದು ಜನತೆಗೆ ಪ್ರಧಾನಿ ಮನವಿ ಮಾಡಿದರು.

ಸವಾಲುಗಳನ್ನು ಗೆದ್ದಿರುವ ಇತಿಹಾಸ ಭಾರತಕ್ಕಿದೆ

ಆರೇಳು ತಿಂಗಳ ಹಿಂದೆ ನಮಗೆ ಕೊರೊನಾದಂತಹ ಬಿಕ್ಕಟ್ಟು ಬರುತ್ತದೆ ಎಂದೇ ಗೊತ್ತಿರಲಿಲ್ಲ. ಕೋವಿಡ್​, ಅಂಫಾನ್​, ಮಿಡತೆಗಳ ಹಾವಳಿ, ಗಡಿ ಬಿಕ್ಕಟ್ಟು, .. ಹೀಗೆ ಈ ವರ್ಷ ಸವಾಲಿನ ವರ್ಷವಾಗಿದೆ. ಕೊರೊನಾ ವಿರುದ್ಧ ದೀರ್ಫಕಾಲದವರೆಗೆ ಹೋರಾಡಬೇಕಿದೆ. ಸಮಸ್ಯೆಗಳು, ಸವಾಲುಗಳು ಬಂದಿವೆಯೆಂದು 2020 ಅನ್ನು ಕೆಟ್ಟದೆಂದು ಪರಿಗಣಿಸಲಾಗುವುದಿಲ್ಲ. ಸವಾಲುಗಳು ಯಾವುದೇ ಆಗಿರಬಹುದು ಅದನ್ನು ಗೆದ್ದಿರುವ ಇತಿಹಾಸ ಭಾರತಕ್ಕಿದೆ. ಅಲ್ಲದೇ ಸವಾಲುಗಳನ್ನು ಎದುರಿಸಿದ ಬಳಿಕ ನಾವು ಇನ್ನಷ್ಟು ಬಲಶಾಲಿಯಾಗಿದ್ದೇವೆ.

ಹುತಾತ್ಮರ ಕುಟುಂಬದ ತ್ಯಾಗವನ್ನು ಪೂಜಿಸಬೇಕಿದೆ

ಪೂವ್ ಲಡಾಖ್​ನ ಗಾಲ್ವಾನ್ ಸಂಘರ್ಷದ ಬಳಿಕ ಮೋದಿ ನಡೆಸಿದ ಮೊದಲ ಮನ್ ಕಿ ಬಾತ್​ ಇದಾಗಿದೆ. ಈ ಕುರಿತು ಮಾತನಾಡಿದ ಅವರು, ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಪ್ರತಿಯೊಬ್ಬ ಯೋಧರ ಕುಟುಂಬದ ತ್ಯಾಗವನ್ನು ಪೂಜಿಸಬೇಕಿದೆ. ಬಿಹಾರ ಮೂಲದ ಹುತಾತ್ಮ ಕುಂದನ್ ಕುಮಾರ್ ಅವರ ತಂದೆ ದೇಶವನ್ನು ರಕ್ಷಿಸಲು ತಮ್ಮ ಮೊಮ್ಮಕ್ಕಳನ್ನು ಕೂಡ ಸೇನೆಗೆ ಕಳುಹಿಸುವುದಾಗಿ ಹೇಳಿದ್ದಾರೆ. ಇದು ಹುತಾತ್ಮ ಯೋಧರ ಕುಟುಂಬದ ಶಕ್ತಿಯಾಗಿದೆ, ಮಾತ್ರವಲ್ಲ ದೇಶದ ಶಕ್ತಿಯಾಗಿದೆ. ಲಡಾಖ್​ನಲ್ಲಿ ನಮ್ಮ ಪ್ರದೇಶಗಳನ್ನು ಅಪೇಕ್ಷಿಸುವವರಿಗೆ, ಆಕ್ರಮಿಸಲು ಹೊರಟ ಚೀನಾಗೆ ತಕ್ಕ ಉತ್ತರವನ್ನು ನೀಡಲಾಗಿದೆ ಎಂದರು.

'ವೋಕಲ್​ ಫಾರ್​ ಲೋಕಲ್'​

ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ದೇಶವನ್ನು ಬಲಪಡಿಸುವಲ್ಲಿ ಪಾತ್ರವಹಿಸುತ್ತಿರುವ ಸ್ಥಳೀಯ ವ್ಯಾಪಾರಿ, ಉಗ್ಯೋಗಿಗಳಿಗೆ ದನಿಯಾಗಿ. ಇದು ಕೂಡ ದೇಶಕ್ಕೆ ನಿಮ್ಮ ಒಂದು ಸೇವೆಯಾಗಿದೆ. ಈ ಮೂಲಕ ನೀವೂ ಕೂಡ ಸದೃಢ ಭಾರತ ನಿರ್ಮಾಣದ ಪಾಲುದಾರರಾಗಿ. ಇದಕ್ಕೆ ದೇಶದ ಅನೇಕ ಭಾಗಗಳಿಂದ ಜನರು ಪತ್ರ ಬರೆದು ಬೆಂಬಲ ಸೂಚಿಸುತ್ತಿದ್ದಾರೆ ಎಂದು ಹೇಳಿದ ಮೋದಿ, 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಖರೀದಿಸಲು ದೇಶದ ಜನತೆಗೆ ಕರೆ ನೀಡಿದ್ದಾರೆ.

'ಆತ್ಮ ನಿರ್ಭರ ಭಾರತ'ವೇ ನಮ್ಮ ಗುರಿ

ಸ್ವಾತಂತ್ರ್ಯಕ್ಕೂ ಮೊದಲು ನಮ್ಮ ದೇಶ ರಕ್ಷಣಾ ಕ್ಷೇತ್ರದಲ್ಲಿ ಇತರ ಹಲವು ದೇಶಗಳಿಗಿಂತ ಮುಂದಿತ್ತು. ನಮ್ಮಲ್ಲಿ ಹಲವಾರು ಆರ್ಡಿನೆನ್ಸ್ ಕಾರ್ಖಾನೆಗಳು ಇದ್ದವು. ಆದರೆ ಈಗ ನಮ್ಮ ಹಿಂದೆ ಇದ್ದ ಕೆಲವು ದೇಶಗಳು ನಮಗಿಂತ ಮುಂದೆ ಬಂದು ನಿಂತಿವೆ. ಆದರೆ ಇಂದು ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದೆ ಸಾಗಲು ಭಾರತ ನಿರಂತರವಾಗಿ ಪ್ರಯತ್ನಿಸುತ್ತಿದೆ, ಸ್ವಾವಲಂಬನೆಯತ್ತ ಸಾಗುತ್ತಿದೆ. ತನ್ನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಕಾಪಾಡುವುದು ಭಾರತದ ಸಂಕಲ್ಪವಾಗಿದೆ. ನಂಬಿಕೆ ಮತ್ತು ಸ್ನೇಹವೇ ಭಾರತದ ಸಂಪ್ರದಾಯ, ಭ್ರಾತೃತ್ವವೇ ದೇಶದ ಆತ್ಮವಾಗಿದೆ. ಹೀಗಾಗಿ ಆತ್ಮ ನಿರ್ಭರ ಭಾರತವೇ ನಮ್ಮ ಗುರಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಕರ್ನಾಟಕ ರೈತನ ನೆನೆದ ಪಿಎಂ

ಕೊರೊನಾ ಲಾಕ್​ಡೌನ್​ ವೇಳೆಯಲ್ಲಿ ಕರ್ನಾಟಕ ಉತ್ತರ ಪ್ರದೇಶ, ಅರುಣಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು, ರೈತರು, ಗ್ರಾಮಸ್ಥರ ಕೆಲವು ಸಾಧನೆಗಳು ಸ್ಫೂರ್ತಿದಾಯಕವಾಗಿದೆ ಎಂದು ಕೆಲ ವಿಷಯಗಳನ್ನು ಹಂಚಿಕೊಂಡರು. ಕರ್ನಾಟಕದ 80 ವರ್ಷದ ಕಾಮೇಗೌಡ ಎಂಬ ರೈತ ಇತರ ಗ್ರಾಮದ ಜನರಿಗೆ ಅನುಕೂಲವಾಗುವಂತೆ 16 ಕೆರೆಗಳನ್ನು ತೋಡಿದ್ದಾನೆ ಎಂದು ಅವರನ್ನು ಮೋದಿ ಶ್ಲಾಘಿಸಿದರು.

Last Updated : Jun 28, 2020, 1:30 PM IST

ABOUT THE AUTHOR

...view details