ನವದೆಹಲಿ: ಕೊರೊನಾ ಮಹಾಮಾರಿ ಭಾರತದ ಹಣಕಾಸು ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಲಿದೆ. ಸ್ವಾತಂತ್ರ್ಯಾನಂತರ ದೇಶ ಅತಿ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಭವಿಷ್ಯ ನುಡಿದಿದ್ದಾರೆ.
ಲಿಂಕ್ಡ್ ಇನ್ನ ನೋಟ್ನಲ್ಲಿ ಈ ಕುರಿತು ಮಾತನಾಡಿರುವ ಅವರು, ಭಾರತವು ಈಗ ಸ್ವಾತಂತ್ರ್ಯದ ನಂತರದ ಅತ್ಯಂತ ದೊಡ್ಡ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. 2008-09ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಬಂದಿದ್ದರೂ ಭಾರತ ದೃಢವಾಗಿತ್ತು. ಹಣಕಾಸು ವ್ಯವಸ್ಥೆಗೆ ಅಷ್ಟೇನೂ ತೊಂದರೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದಿದ್ದು, ಕೊರೊನಾ ವಿರುದ್ಧ ಹೋರಾಡಲು ಮನವಿ ಮಾಡಿದ್ದಾರೆ.
ಕೊರೊನಾ ಹಾವಳಿಯಿಂದ ನಾವು ಯಾವುದೇ ರೀತಿಯ ಹತಾಶೆಗೊಳ್ಳಬಾರದು. ಸರಿಯಾದ ಸಂಕಲ್ಪವಿದ್ದರೆ ಕೊರೊನಾವನ್ನು ಹತ್ತಿಕ್ಕಬಹುದು. ಆದಷ್ಟು ಬೇಗ ಸೋಂಕಿನ ಪರೀಕ್ಷೆ ವ್ಯಾಪಕವಾಗಿ ನಡೆಯಬೇಕು. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹೀಗಾದಾಗ ಮಾತ್ರ ಕೊರೊನಾದಿಂದಾಗುವ ಆರ್ಥಿಕ ಸಂಕಷ್ಟವನ್ನು ನಿವಾರಿಸಿ ಭವಿಷ್ಯದ ಬಗ್ಗೆ ಉತ್ತಮ ಕನಸು ಇಟ್ಟುಕೊಳ್ಳಬಹುದೆಂದಿದ್ದಾರೆ.
ಈ ವೈರಸ್ ಅನ್ನು ಸೋಲಿಸದಿದ್ದರೆ ಲಾಕ್ ಡೌನ್ ನಂತರ ದೇಶವನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಲಾಕ್ಡೌನ್ ಮೊದಲ ಹಂತವಾಗಿದ್ದು ಈ ವೇಳೆ ಸರ್ಕಾರ ಎಲ್ಲದಕ್ಕೂ ತಯಾರಿ ನಡೆಸಬೇಕು. ವೈದ್ಯಕೀಯ ಸೌಲಭ್ಯಗಳು ಎಲ್ಲರಿಗೂ ದೊರೆಯುವಂತಾಗಬೇಕು. ತುಂಬಾ ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡುವುದು ಕಷ್ಟವಾಗಲಿದೆ. ಸೋಂಕಿನ ಹಾವಳಿ ಕಡಿಮೆಯಿರುವ ಪ್ರದೇಶಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸಬೇಕೆಂದು ಈ ವೇಳೆ ರಘುರಾಮ್ ರಾಜನ್ ಮನವಿ ಮಾಡಿದ್ದಾರೆ.
ನೇರ ನಗದು ವರ್ಗಾವಣೆಯಿಂದ ಬಹುಪಾಲು ಜನರಿಗೆ ಹಣ ತಲುಪಿಸಬಹುದಾದರೂ ಎಲ್ಲರಿಗೂ ಈ ಹಣ ತಲುಪುವುದಿಲ್ಲ ಎಂದಿರುವ ಅವರು ಬಡವರು, ನಿರ್ಗತಿಕರಿಗೆ ಮೂಲಸೌಕರ್ಯಕ್ಕೆ ಕೊರತೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಅನಾವಶ್ಯಕವಾದ ಖರ್ಚುಗಳನ್ನು ಕಡಿಮೆಗೊಳಿಸಿ, ತುರ್ತು ಅವಶ್ಯಕತೆಗಳ ಬಗ್ಗೆ ಗಮನಹರಿಸಬೇಕು ಎಂದಿದ್ದಾರೆ. ಇದರ ಜೊತೆ ಜೊತೆಗೆ ಬಂಡವಾಳ ಹೂಡಿಕೆದಾರರಲ್ಲಿ ಭರವಸೆ ಮೂಡಿಸುವ ಕೆಲಸಗಳಾಗಬೇಕು, ಎನ್.ಕೆ.ಸಿಂಗ್ ಆಯೋಗದ ಶಿಫಾರಸ್ಸಿನಂತೆ ಸ್ವತಂತ್ರ ವಿತ್ತೀಯ ಮಂಡಳಿಯನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.