ಕರ್ನಾಟಕ

karnataka

ETV Bharat / bharat

ಹೆಜ್ಜೆ ಹೆಜ್ಜೆಯಲ್ಲೂ ಗೌಪ್ಯತೆ, ಆಂತರಿಕ ಬಲವರ್ಧನೆ: ಇದು 'ಶಾ'ಣೆ ಲೆಕ್ಕಾಚಾರ! - ಗೃಹ ಸಚಿವ ಅಮಿತ್ ಶಾ

ಹಲವು ಸರ್ಕಾರಗಳು ಬಂದು ಹೋಗಿದ್ದರೂ 370 ವಿಧಿಯನ್ನು ಮುಟ್ಟುವ ಗೋಜಿಗೆ ಹೋಗಿರಲಿಲ್ಲ. ಆದರೂ ಈ ವಿಧಿ ತೆರವಿಗೆ ಕೂಗು ಕೇಳಿ ಬರುತ್ತಲೇ ಇತ್ತು. ಅಷ್ಟಕ್ಕೂ ಈ ಮಹತ್ತರ ನಿರ್ಧಾರ ಸಲೀಸಾಗಿ ನಡೆದಿದ್ದು ಹೇಗೆ ಅನ್ನುವ ರೋಚಕ ಮತ್ತು ಕುತೂಹಲಕಾರಿ ಮಾಹಿತಿ ಇಲ್ಲಿದೆ!

ಅಮಿತ್ ಶಾ

By

Published : Aug 6, 2019, 12:46 PM IST

ನವದೆಹಲಿ: ಹಲವು ದಶಕಗಳಿಂದ ದೇಶದ ಒಟ್ಟಾರೆ ವಿಚಾರದಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ತೆರವುಗೊಳಿಸುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದೆ.

ಸ್ವಾತಂತ್ರ್ಯಾ ನಂತರದಲ್ಲಿ ಹಲವು ಸರ್ಕಾರಗಳು ಬಂದು ಹೋಗಿದ್ದರೂ 370 ವಿಧಿಯನ್ನು ಮುಟ್ಟುವ ಗೋಜಿಗೆ ಹೋಗಿರಲಿಲ್ಲ. ಆದರೂ ಈ ವಿಧಿ ತೆರವಿಗೆ ಕೂಗು ಕೇಳಿ ಬರುತ್ತಲೇ ಇತ್ತು. ಅಷ್ಟಕ್ಕೂ ಈ ಮಹತ್ತರ ನಿರ್ಧಾರ ಸಲೀಸಾಗಿ ನಡೆದಿದ್ದು ಹೇಗೆ ಅನ್ನುವ ರೋಚಕ ಮತ್ತು ಕುತೂಹಲಕಾರಿ ಮಾಹಿತಿ ಇಲ್ಲಿದೆ.

ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ತಮ್ಮ ಆಪ್ತ ಅಮಿತ್ ಶಾ ಅವರಿಗೆ ಮಹತ್ವದ ಗೃಹ ಖಾತೆ ವಹಿಸಿದ್ದರು. ಗೃಹ ಖಾತೆ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅಮಿತ್ ಶಾ ಜಮ್ಮು ಕಾಶ್ಮೀರಕ್ಕೆ ತೆರಳಿ ವಿದ್ಯಮಾನಗಳನ್ನು ಕೂಲಂಕಷವಾಗಿ ಅವಲೋಕಿಸಿದ್ದರು. ಇದೇ ವೇಳೆ 370 ವಿಧಿಯ ತೆರವಿಗೆ ಮೋದಿ ಸರ್ಕಾರ ಮೊದಲ ಹೆಜ್ಜೆ ಇರಿಸಿತ್ತು.

ಪ್ರಧಾನಿ ಮೋದಿ ಜೊತೆ ಗೃಹ ಸಚಿವ ಅಮಿತ್ ಶಾ

ಪಕ್ಷ ಸಂಘಟನೆ, ಕಾರ್ಯಯೋಜನೆ ಸೇರಿದಂತೆ ಹಲವು ವಿಚಾರಗಳಲ್ಲಿ ಚಾಣಾಕ್ಷರಾಗಿರುವ ಗೃಹ ಸಚಿವ ಅಮಿತ್ ಶಾ ರಾಷ್ಟ್ರಿ ಭದ್ರತಾ ಸಲಹೆಗಾರ ಅಜಿತ್ ಧೋವಲ್​, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸೇರಿದಂತೆ ತಜ್ಞರ ಜೊತೆ ಹಲವು ಬಾರಿ ಮಾತುಕತೆ ನಡೆಸಿ ಕಾನೂನು ಸೇರಿದಂತೆ ಎದುರಾಗಬಹುದಾದ ಎಲ್ಲ ತೊಡಕುಗಳನ್ನು ಚರ್ಚಿಸಿ 370 ವಿಧಿ ತೆರವಿಗೆ ಮುಂದಡಿ ಇಡಲಾಗಿತ್ತು.

370 ವಿಧಿಯನ್ನು ರದ್ದು ಮಾಡಲು ಜುಲೈ 26ರಂದು ಕೊನೆಗೊಳ್ಳಬೇಕಿದ್ದ ಸಂಸತ್ ಕಲಾಪವನ್ನು ಆಗಸ್ಟ್ 7ರವರೆಗೆ ವಿಸ್ತರಣೆ ಮಾಡಲಾಯಿತು. ಬಾಕಿ ಉಳಿದಿರುವ ಮಸೂದೆಗಳ ಅಂಗೀಕಾರ ಎನ್ನುವ ಕಾರಣವನ್ನು ನೀಡಲಾಗಿತ್ತು.

ಅಮಿತ್ ಶಾ ತಮ್ಮ ಸಹೋದ್ಯೋಗಿ ಸಚಿವರಾದ ಪಿಯೂಷ್ ಗೋಯಲ್​​, ಧಮೇಂದ್ರ ಪ್ರಧಾನ್​​ರನ್ನು ಬಲವಾಗಿ ನೆಚ್ಚಿಕೊಂಡಿದ್ದರು. ಕೆಲ ತಿಂಗಳ ಹಿಂದೆ ರಾಜ್ಯಸಭೆಯಲ್ಲಿ ತಮ್ಮ ಪಕ್ಷ ತೊರೆದು ಬಿಜೆಪಿ ಸೇರಿದ್ದ ಟಿಡಿಪಿ ಸಂಸದರನ್ನು ರಾಜ್ಯಸಭೆಯಲ್ಲಿ ಬಹುಮತ ಬರುವಂತೆ ನೋಡಿಕೊಳ್ಳಲಾಯಿತು.

ಟಿಡಿಪಿ ಸಂಸದ ಸಿ.ಎಂ.ರಮೇಶ್​, ಪೋನ್​ ಕರೆ ಮುಖಾಂತರ ಬಿಜೆಡಿ ಮುಖ್ಯಸ್ಥ ನವೀನ್​ ಪಟ್ನಾಯಕ್​​​, ವೈಎಸ್​ಆರ್​ ಮುಖ್ಯಸ್ಥ, ಆಂಧ್ರ ಪ್ರದೇಶ ಸಿಎಂ ಜಗನ್​ ಮೋಹನ ರೆಡ್ಡಿ ಹಾಗೂ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್​​​ ಸಂಪರ್ಕಿಸಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು.

ತ್ರಿವಳಿ ತಲಾಖ್ ಮಸೂದೆ ಅಂಗೀಕಾರದಂತೆ ಇಲ್ಲೂ ಸಹ ಎಚ್ಚರಿಕೆಯ ಹೆಜ್ಜೆ ಜೊತೆಗೆ ವಿಶ್ವಾಸದಿಂದ ಎಲ್ಲ ಯೋಜನೆಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗಿತ್ತು. ಇದೇ ನಿಟ್ಟಿನಲ್ಲಿ ಬಿಜೆಪಿ ಇತರೇ ಪಕ್ಷಗಳ ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿತ್ತು. ಬಿಜೆಪಿಯನ್ನು ಬಲವಾಗಿ ವಿರೋಧಿಸುವ ಟಿಡಿಪಿ ಸೇರಿದಂತೆ ಕೆಲವು ಪ್ರಾದೇಶಿಕ ಪಕ್ಷಗಳೂ ಸಹ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದು ಅಮಿತ್ ಶಾ ಹಾಗೂ ಟೀಮ್​ನ ಹೆಚ್ಚುಗಾರಿಕೆ.

ಪ್ರಧಾನಿ ಮೋದಿ ಜೊತೆ ರಾಷ್ಟ್ರ ಭದ್ರತಾ ಸಲಹೆಗಾರ ಅಜಿತ್ ಧೋವಲ್

ಶುಕ್ರವಾರ ಪಾರ್ಲಿಮೆಂಟ್​ನಲ್ಲಿ 370 ವಿಧಿಯ ಕುರಿತಂತೆ ಗೃಹ ಸಚಿವ ಅಮಿತ್ ಶಾ ಇಡೀ ದಿನ ವಿವಿಧ ಸಚಿವರು ಹಾಗೂ ತಜ್ಞರ ಜೊತೆ ತಡರಾತ್ರಿಯವರೆಗೂ ನಡೆಸಿದ್ದರು. ಭಾನುವಾರ ಸಹ ಮಧ್ಯರಾತ್ರಿ ಒಂದು ಗಂಟೆಯವರೆಗೂ ಅಮಿತ್ ಶಾ ಸರಣಿ ಸಭೆಗಳನ್ನು ನಡೆಸಿದ್ದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜುಲೈ ಕೊನೆಯ ವಾರದಲ್ಲಿ ಕಣಿವೆ ರಾಜ್ಯಕ್ಕೆ ಭೇಟಿ ಭದ್ರತೆಯನ್ನು ಗಮನಿಸಿದ್ದರು. ಧೋವಲ್ ಹಿಂತಿರುಗುತ್ತಿದ್ದಂತೆ ಕಾಶ್ಮೀರಕ್ಕೆ ಹತ್ತು ಸಾವಿರ ಸೈನಿಕರನ್ನು ರವಾನಿಸಲಾಗಿತ್ತು. ಇದಾದ ಮೂರ್ನಾಲ್ಕು ದಿನದಲ್ಲಿ ಹೆಚ್ಚುವರಿ 28 ಸಾವಿರ ಸೈನಿಕರು ಕಾಶ್ಮೀರಕ್ಕೆ ರವಾನಿಸಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು. ಭಾನುವಾರ ತಡರಾತ್ರಿ ಶ್ರೀನಗರದಾದ್ಯಂತ ಸೆಕ್ಷನ್ 114 ಜಾರಿ ಮಾಡಿದ್ದಲ್ಲದೆ, ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ, ಫಾರೂಖ್​​ ಅಬ್ದುಲ್ಲಾ ಸೇರಿದಂತೆ ಕೆಲ ನಾಯಕರನ್ನು ಗೃಹ ಬಂಧನದಲ್ಲಿಡಲಾಯಿತು.

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ 370 ವಿಧಿಯ ತೆರವಿನ ಬಗ್ಗೆ ಸಚಿವ ಸಂಪುಟ ಕೇವಲ ನಾಲ್ಕರಿಂದ ಐದು ಮಂದಿಗೆ ಮಾತ್ರ ಸಂಪೂರ್ಣ ಮಾಹಿತಿ ತಿಳಿದಿತ್ತು. ಇಷ್ಟೊಂದು ಗೌಪ್ಯವಾಗಿ ಎಲ್ಲವನ್ನೂ ನಡೆಸಿಕೊಂಡು ಬಂದು ಸೋಮವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ 370 ವಿಧಿ ರದ್ದತಿಯನ್ನು ಪ್ರಸ್ತಾಪಿಸಿದ್ದರು.

ಭಾನುವಾರ ರಾತ್ರಿ ಎನ್​ಡಿಎ ಮೈತ್ರಿಕೂಟದ ನಾಯಕರು ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರನ್ನು ಸಂಪರ್ಕಿಸಲಾಗಿತ್ತು. 370ನೇ ರದ್ದತಿಯಲ್ಲಿ ತೆರೆಮರೆಯಲ್ಲಿ ಈಶಾನ್ಯ ರಾಜ್ಯಗಳ ನಾಯಕರ ಪಾತ್ರ ಬಹಳ ದೊಡ್ಡದಾಗಿತ್ತು ಎನ್ನುವುದು ಇದೀಗ ಬಹಿರಂಗವಾಗಿದೆ.

ರಾಜ್ಯಸಭೆ ಆರಂಭಕ್ಕೂ ಮುನ್ನ ಸೋಮವಾರ ಬೆಳಗ್ಗೆ 9.30ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆಯನ್ನು ನಡೆಸಲಾಗಿತ್ತು. ಈ ಸಭೆಯ ಯಾವುದೇ ವಿಚಾರದಲ್ಲಿ ಗೌಪ್ಯತೆ ಕಾಪಾಡಲಾಗಿತ್ತು.

ರಾಜ್ಯಸಭೆ ಪ್ರವೇಶಕ್ಕೂ ಮುನ್ನ ಮಾಧ್ಯಮದ ಮುಂದೆ ನಗೆಬೀರಿದ ಗೃಹ ಸಚಿವ ಅಮಿತ್ ಶಾ

ಹನ್ನೊಂದು ಗಂಟೆಗೆ ರಾಜ್ಯಸಭೆ ಆರಂಭವಾಗುತ್ತಿದ್ದಂತೆ ಸಂಸತ್ ಪ್ರವೇಶಿಸಿದ ಅಮಿತ್ ಶಾ ಮೊಗದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ದೊಡ್ಡ ಇತಿಹಾಸ ನಿರ್ಮಾಣದ ಕೆಲವೇ ಕ್ಷಣಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಮಾಧ್ಯಮದ ಮುಂದೆ ತಣ್ಣನೆಯ ನಗು ಬೀರಿ ರಾಜ್ಯಸಭೆ ಪ್ರವೇಶಿಸಿದ್ದರು.

ABOUT THE AUTHOR

...view details