ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಕೋವಿಡ್-‌19 ಎಫೆಕ್ಟ್​​​​, ಕಾರ್ಮಿಕ ಕಾನೂನು ಸಡಿಲಿಕೆ - ಕೋವಿಡ್-‌19 ಎಫೆಕ್ಟ್

ಕಾರ್ಮಿಕ ಕಾನೂನುಗಳ ತಿದ್ದುಪಡಿ ಕ್ರಮಗಳನ್ನು ಮೊದಲು ವಿರೋಧಿಸಿದ್ದು ಬೇರೆ ಯಾರೂ ಅಲ್ಲ, ಬಿಜೆಪಿಯೊಂದಿಗೆ ಸಂಯೋಜಿತವಾಗಿರುವ ಭಾರತೀಯ ಮಜ್ದೂರ್‌ ಸಂಘ. ಇನ್ನೂ ಕೆಲವು ಕಾರ್ಮಿಕ ಸಂಘಟನೆಗಳು ಸಹ ಕೇಂದ್ರದ ಈ ನಡೆಗೆ ವಿರೋಧ ವ್ಯಕ್ತಪಡಿಸಿವೆ. ಈ ಕ್ರಮಗಳು “ಕಾರ್ಮಿಕ ವಿರೋಧಿ” ಹಾಗೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿವೆ ಎಂದು ಅವು ಖಂಡಿಸಿವೆ.

ಕಾರ್ಮಿಕ ಕಾನೂನು ಸಡಿಲಿಕೆ
Easing labour laws in wake of Covid 19

By

Published : May 19, 2020, 10:59 AM IST

ಹೈದರಾಬಾದ್: ಕೋವಿಡ್‌-19 ಸಾಂಕ್ರಾಮಿಕ ತಂದಿಟ್ಟಿರುವ ಆರ್ಥಿಕ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಸದ್ಯ ದೇಶದಲ್ಲಿ ಜಾರಿಯಲ್ಲಿರುವ ವಿವಿಧ ಕಾರ್ಮಿಕ ಕಾನೂನುಗಳಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ಹಲವಾರು ರಾಜ್ಯಗಳು ಕಳೆದ ವಾರ ಕೇಂದ್ರ ಸರಕಾರವನ್ನು ಆಗ್ರಹಿಸಿವೆ. ತನ್ನ ಕೆಲವೊಂದು ಕಾರ್ಮಿಕ ಕಾನೂನುಗಳನ್ನು ಸಡಿಲಿಸುವ ಮೂಲಕ ಮಧ್ಯಪ್ರದೇಶ ಈ ವಿಷಯದಲ್ಲಿ ನಾಯಕತ್ವ ವಹಿಸಿದಂತಿದ್ದು, ಕೋಮಾ ಸ್ಥಿತಿಗೆ ತಲುಪಿರುವ ಕೈಗಾರಿಕಾ ವಲಯವನ್ನು ಮತ್ತೆ ಜಾಗೃತಗೊಳಿಸುವ ಪ್ರಯತ್ನ ನಡೆಸಿದೆ. ಇದೇ ಮಾದರಿಯನ್ನು ವಿವಿಧ ಹಂತಗಳಲ್ಲಿ ಅನುಸರಿಸಿರುವ ಉತ್ತರಪ್ರದೇಶ, ಪಂಜಾಬ್‌, ರಾಜಸ್ತಾನ, ಗುಜರಾತ್‌, ಹರಿಯಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತಮ್ಮಲ್ಲಿರುವ ಕೈಗಾರಿಕೆಗಳ ಕೆಳಮುಖ ವೇಗವನ್ನು ನಿಯಂತ್ರಿಸುವ ಪ್ರಯತ್ನ ಮಾಡಿವೆ. ಒಡಿಶಾ, ಗೋವಾ ಮತ್ತು ಕರ್ನಾಟಕ ರಾಜ್ಯಗಳು ಕೂಡಾ ಕೆಲವು ವಿನಾಯಿತಿಗಳನ್ನು ಘೋಷಿಸಲು ಗಂಭೀರ ಚಿಂತನೆ ನಡೆಸಿವೆ.

ಕೆಲಸದ ಅವಧಿಯನ್ನು ಹೆಚ್ಚಿಸುವುದು, ಹೆಚ್ಚುವರಿ ಅವಧಿಯ ಮಿತಿಯಲ್ಲಿ ಹೆಚ್ಚಳ, ಅಧಿಕಾರಿಗಳಿಂದ ಘಟಕಗಳ ಪರಿಶೀಲನೆ ನಡೆಸುವುದನ್ನು ಕೈಬಿಡುವುದು ಹಾಗೂ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಮನ್ನಣೆಯನ್ನು ಮೂರು ತಿಂಗಳುಗಳಿಂದ ಒಂದು ವರ್ಷದವರೆಗೆ ಏರಿಸುವ ಮೂಲಕ ಸದಸ್ಯತ್ವ ಮಾನದಂಡದ ಅವಧಿಯನ್ನು ಹೆಚ್ಚಿಸುವ ಕ್ರಮಗಳನ್ನು ಇದು ಒಳಗೊಂಡಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನುಗಳ ಪೈಕಿ ಮೂರನ್ನು ಹೊರತುಪಡಿಸಿ ಉಳಿದೆಲ್ಲವನ್ನೂ 1000 ದಿನಗಳವರೆಗೆ ಅಮಾನತಿನಲ್ಲಿಡುವ ಮೂಲಕ ಉತ್ತರಪ್ರದೇಶ ರಾಜ್ಯವು ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಸರಕಾರದಿಂದ ವಿನಾಯಿತಿ ಪಡೆದುಕೊಂಡಿರುವ ಆ ಮೂರು ಕಾನೂನುಗಳೆಂದರೆ ಕಟ್ಟಡ ಮತ್ತು ನಿರ್ಮಾಣ ಕಾಯಿದೆ, ಜೀತ ಕಾರ್ಮಿಕ ಕಾಯಿದೆ ಹಾಗೂ ವೇತನ ಮತ್ತು ಕೂಲಿ ಕಾಯಿದೆಯ 5ನೇ ಖಂಡ. ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಹುಷಾರಿನ ಹೆಜ್ಜೆ ಇಟ್ಟಿರುವ ಕೇರಳ, ಒಂದು ವೇಳೆ ಹೂಡಿಕೆದಾರರು ತಮ್ಮೆಲ್ಲ ಔಪಚಾರಿಕತೆಗಳನ್ನು ಒಂದು ವರ್ಷದೊಳಗೆ ಪೂರೈಸಲು ಒಪ್ಪಿದ್ದೇ ಆದರೆ ಹೊಸ ಉದ್ಯಮಕ್ಕೆ ಒಂದು ವಾರದ ಅವಧಿಯೊಳಗೆ ಅನುಮತಿ ನೀಡಲಾಗುವುದು ಎಂದು ಘೋಷಿಸಿದೆ. ಹೀಗಿದ್ದರೂ, ಕಾರ್ಮಿಕ ಕಾಯಿದೆಗಳಿಗೆ ಯಾವುದೇ ಬದಲಾವಣೆಗಳನ್ನು ಅದು ಸೂಚಿಸದಿರುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ಆದರೆ, ಈ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ನಮ್ಮ ರಾಜ್ಯಗಳು ಈಗ ಏಕೆ ಎಚ್ಚೆತ್ತುಕೊಂಡಿವೆ ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಇದಕ್ಕೆ ಉತ್ತರವಾಗಿ ಎರಡು ಕಾರಣಗಳನ್ನು ನೀಡಬಹುದು. ಮೊದಲನೆಯದು, ದೊಡ್ಡಮಟ್ಟದಲ್ಲಿ ನಡೆದ ಕಾರ್ಮಿಕರ ಅಂತಾರಾಜ್ಯ ವಲಸೆಯಿಂದಾಗಿ, ಈಗಾಗಲೇ ತೀವ್ರ ಕೈಗಾರೀಕರಣಗೊಂಡಿರುವ ಮಹಾರಾಷ್ಟ್ರ ಮತ್ತು ಗುಜರಾತ್‌ನಂತಹ ರಾಜ್ಯಗಳಲ್ಲಿ ಸೃಷ್ಟಿಯಾಗಿರುವ ನಿರ್ವಾತ ಪರಿಸ್ಥಿತಿ. ಸಾಕಷ್ಟು ಪ್ರಮಾಣದ ಕೆಲಸಗಾರರ ಅವಶ್ಯಕತೆ ಈಡೇರದಿದ್ದರೆ, ನರಳುತ್ತಿರುವ ಕೈಗಾರಿಕೆಗೆ ಪುನಃಶ್ಚೇತನ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಘೋಷಿಸಿರುವ ವಿವಿಧ ಆರ್ಥಿಕ ಪ್ಯಾಕೇಜ್‌ಗಳ ಲಾಭ ಪಡೆಯುವುದು ಈ ರಾಜ್ಯಗಳಿಗೆ ಅಸಾಧ್ಯವಾಗುತ್ತದೆ. ವಲಸೆ ಕಾರ್ಮಿಕರು ಈಗಾಗಲೇ ದೊಡ್ಡಮಟ್ಟದಲ್ಲಿ ನಿರ್ಗಮಿಸಿದ್ದು, ಅವರೆಲ್ಲ ತಮ್ಮ ಮೂಲ ಘಟಕಗಳಿಗೆ ಹಿಂದಿರುಗುವುದು ಅನುಮಾನಾಸ್ಪದ. ಹೀಗಾಗಿ, ಅಳಿದುಳಿದ ಕೆಲಸಗಾರರ ಮೂಲಕವೇ ಕಾರ್ಖಾನೆಗಳು ಮತ್ತೆ ಪ್ರಾರಂಭವಾಗಬೇಕಿದೆ. ಕಾರ್ಮಿಕರನ್ನು ಸುದೀರ್ಘ ಅವಧಿಗೆ ದುಡಿಸಿಕೊಳ್ಳುವುದರ ಮೂಲಕ ಉತ್ಪಾದನೆಯನ್ನು ನಿರಂತರವಾಗಿರಿಸುವುದು ಹೊಸ ತಿದ್ದುಪಡಿಗಳಿಂದ ಸಾಧ್ಯವಾಗುತ್ತದೆ. ಇದು ಕೈಗಾರಿಕೆಯಷ್ಟೇ ಅಲ್ಲ, ಆರ್ಥಿಕತೆಯ ಪುನಃಶ್ಚೇತನಕ್ಕೂ ನೆರವಾಗುತ್ತದೆ. ಅಷ್ಟೇ ಅಲ್ಲ, ಈ ಬೆಳವಣಿಗೆಗಳಿಂದ ವಲಸೆ ಕಾರ್ಮಿಕರಲ್ಲಿ ವಿಶ್ವಾಸ ಮೂಡಿ ಅವರು ಮತ್ತೆ ಹಿಂದಿರುಗುವ ಸಾಧ್ಯತೆಯೂ ಇದೆ.

ಎರಡನೆಯದಾಗಿ, ಸದ್ಯ ಚೀನಾದಲ್ಲಿ ನೆಲೆಯಾಗಿರುವ ಹಲವಾರು ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಯೋಚಿಸುತ್ತಿವೆ. ಉದ್ಯೋಗದಾತರ ಪರವಾಗಿರುವ ಇಂತಹ ಕ್ರಮಗಳನ್ನು ಅನುಸರಿಸುವ ಮೂಲಕ ಭಾರತಕ್ಕೆ ಸ್ಥಳಾಂತರವಾಗಲು ಈ ಉತ್ಪಾದಕ ಘಟಕಗಳಲ್ಲಿ ಪ್ರೇರಣೆ ಮೂಡಿಸಬಹುದಾಗಿದೆ. ಅಮೆರಿಕದ ದೈತ್ಯ ಕಂಪನಿ ಆಪಲ್‌, ಚೀನಾದಲ್ಲಿರುವ ತನ್ನ ಕಾರ್ಯಾಚರಣೆಯ ಶೇಕಡಾ 25ರಷ್ಟು ಕೆಲಸಗಳನ್ನು ಭಾರತಕ್ಕೆ ಸ್ಥಳಾಂತರಿಸುವುದಾಗಿ ಈಗಾಗಲೇ ಘೋಷಿಸಿದೆ. ಚೀನಾದಲ್ಲಿರುವ ಅಂದಾಜು 1000 ಅಮೆರಿಕಾದ ಕಂಪನಿಗಳು ತಮ್ಮ ವಹಿವಾಟನ್ನು ಭಾರತಕ್ಕೆ ಸ್ಥಳಾಂತರಿಸುವ ಕುರಿತು ಭಾರತೀಯ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆಗಳನ್ನು ನಡೆಸಿರುವ ಕುರಿತ ವರದಿಗಳಿವೆ. ಭಾರತ ಸರಕಾರ ಕೂಡಾ ವಾಹನೋದ್ಯಮ, ಎಲೆಕ್ಟ್ರಾನಿಕ್ಸ್‌, ಹಾರ್ಡ್‌ ವೇರ್‌, ವೈದ್ಯಕೀಯ ಉಪಕರಣಗಳ ಸಹಿತ ಔಷಧೀಯ ಉದ್ಯಮಗಳು, ಚರ್ಮ, ಆಹಾರ ಸಂಸ್ಕರಣೆ ಮತ್ತು ಹೆವಿ ಎಂಜಿನಿಯರಿಂಗ್‌ ಕಂಪನಿಗಳನ್ನು ಗುರಿಯಾಗಿ ಇಟ್ಟುಕೊಂಡು, ಅವು ತಮ್ಮ ಘಟಕಗಳನ್ನು ಸ್ಥಳಾಂತರಿಸುವಂತೆ ಮನವೊಲಿಸುವ ಪ್ರಯತ್ನ ನಡೆಸಿದೆ ಎಂದೂ ಹೇಳಲಾಗುತ್ತಿದೆ.

ಈ ಅವಕಾಶಗಳನ್ನು ಗ್ರಹಿಸಿರುವ ಕೇಂದ್ರ ಸರಕಾರ, ಇಂತಹ ವಿದೇಶಿ ಹೂಡಿಕೆದಾರರಿಗಾಗಿ 4,61,589 ಹೆಕ್ಟೇರ್‌ನಷ್ಟು (461 ಚದರ ಕಿಮೀ) ಪ್ರದೇಶವನ್ನು ಈಗಾಗಲೇ ಕಾಯ್ದಿರಿಸಿದೆ. ಕೊಲ್ಲಿ ದೇಶಗಳಿಂದ ಹಿಂದಿರುಗುತ್ತಿರುವ ಭಾರತೀಯರಿಗೆ ಉಪಯುಕ್ತ ಉದ್ಯೋಗಗಳನ್ನು ಇದು ಒದಗಿಸಲಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಗುಜರಾತ್‌, ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳು ಈಗಾಗಲೇ ಸಿದ್ಧತೆಗಳನ್ನೂ ನಡೆಸಿವೆ. ಗುಜರಾತ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿರುವ ಜಪಾನ್‌, ಹಾಗೂ ದಕ್ಷಿಣ ಕೊರಿಯಾ ದೇಶಗಳು ಕೂಡಾ ಭಾರತದಲ್ಲಿ ಉತ್ತಮ ಆಯ್ಕೆಗಳಿಗಾಗಿ ಹುಡುಕಾಟ ನಡೆಸಿವೆ.

ಆದರೆ, ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿರುವ ಕಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳು ಯಾವುದೇ ಕಾನೂನನ್ನು ಜಾರಿಗೆ ತಂದರೂ, ಕೇಂದ್ರ ಹೊರಡಿಸಿರುವ ಕಾಯಿದೆಗೆ ಅದು ಒಂದು ವೇಳೆ ವಿರೋಧವಾಗಿದ್ದರೆ, ಆಗ ಅಂತಹ ಕಾನೂನು ತಂತಾನೇ ನಿಷ್ಕ್ರಿಯವಾಗುತ್ತದೆ. ಹೀಗಾಗಿ ಹಲವಾರು ರಾಜ್ಯಗಳು ಈ ತಿದ್ದುಪಡಿಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರುತ್ತಿವೆ. ಅಲ್ಲದೇ, ಬಿಜೆಪಿಯ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಮತ್ತು ಶಿವರಾಜ ಚೌಹಾಣ ಅವರು, ಸಂಭವನೀಯ ಸಂಘರ್ಷವನ್ನು ನಿವಾರಿಸುವ ದೃಷ್ಟಿಯಿಂದ, ಸುಗ್ರೀವಾಜ್ಞೆಗಳನ್ನು ಹೊರಡಿಸುವುದಕ್ಕೂ ಮುನ್ನ ಪ್ರಧಾನಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಂಸತ್ತು ಮತ್ತು ರಾಜ್ಯದ ವಿಧಾನಸಭೆಗಳು ಈಗ ಅಧಿವೇಶನದಲ್ಲಿ ಇಲ್ಲದಿರುವುದರಿಂದ, ಯಾವುದೇ ಅಡೆತಡೆ ಎದುರಿಸದೇ ಸುಗಮವಾಗಿ ಮುಂದೆ ಸಾಗಲು ಲಭ್ಯವಿರುವ ಸಮಯದ ಲಾಭವನ್ನು ರಾಜ್ಯ ಸರಕಾರಗಳು ಸದುಪಯೋಗ ಮಾಡಿಕೊಳ್ಳುತ್ತಿವೆ ಎಂಬುದು ಕೂಡಾ ವಾಸ್ತವವೇ.

ಹೀಗಿದ್ದರೂ ಅಡೆತಡೆಗಳು ಇದ್ದೇ ಇವೆ. ಕುತೂಹಲದ ಸಂಗತಿ ಎಂದರೆ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಕ್ರಮಗಳನ್ನು ಮೊದಲು ವಿರೋಧಿಸಿದ್ದು ಬೇರೆ ಯಾರೂ ಅಲ್ಲ, ಬಿಜೆಪಿಯೊಂದಿಗೆ ಸಂಯೋಜಿತವಾಗಿರುವ ಭಾರತೀಯ ಮಜ್ದೂರ್‌ ಸಂಘ. ಇನ್ನೂ ಕೆಲವು ಕಾರ್ಮಿಕ ಸಂಘಟನೆಗಳು ಸಹ ಈ ಕ್ರಮಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸಿವೆ. ಈ ಕ್ರಮಗಳು “ಕಾರ್ಮಿಕ ವಿರೋಧಿ” ಹಾಗೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿವೆ ಎಂದು ಅವು ಖಂಡಿಸಿವೆ.

ಕಾರ್ಮಿಕ ಸಂಘಟನೆಯೊಂದಕ್ಕೆ ಮಾನ್ಯತೆ ನೀಡುವ ಮಿತಿಯನ್ನು ಇನ್ನು ಕೆಲವು ರಾಜ್ಯಗಳು ಹೆಚ್ಚಿಸಿರುವುದು ಖಂಡಿತವಾಗಿಯೂ ಈ ಕಾರ್ಮಿಕ ಸಂಘಟನೆಗಳ ಹಿತಾಸಕ್ತಿಗೆ ಧಕ್ಕೆ ತರಲಿದೆ. ಸಂಸತ್ತು ಕಳೆದ ವರ್ಷ ಅಂಗೀಕರಿಸಿರುವ ವೇತನ ಸಂಹಿತೆಯನ್ನು ಈ ಹೊಸ ನಿರ್ಬಂಧನೆಗಳು ಉಲ್ಲಂಘಿಸುತ್ತಿವೆ ಎಂಬ ಕಾರಣಗಳನ್ನೊಡ್ಡಿ ಇವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಗಳೂ ಇವೆ. ಹೀಗಿದ್ದರೂ, ಈ ತಿದ್ದುಪಡಿಗಳನ್ನು ತರುವ ಅವಶ್ಯಕತೆಯನ್ನು ಮನಗಂಡಿರುವ ಪ್ರತಿಪಕ್ಷಗಳೂ ಸಹ ವಿವಿಧ ಮಟ್ಟದಲ್ಲಿ ರಾಜ್ಯ ಸರಕಾರಗಳ ಪ್ರಯತ್ನಕ್ಕೆ ಕೈ ಜೋಡಿಸಿರುವುದು ಈ ಕ್ರಮಕ್ಕೆ ವ್ಯಕ್ತವಾಗುತ್ತಿರುವ ವಿರೋಧವನ್ನು ತಗ್ಗಿಸಲಿರುವುದು ವಾಸ್ತವವೇ ಆಗಿದೆ.

ಸದ್ಯ ಒಪ್ಪಬಹುದಾದ ಒಂದು ತಕರಾರು ಇರುವುದು ಈ ತಿದ್ದುಪಡಿಗಳು ಜಾರಿಯಲ್ಲಿರುವ ಅವಧಿಯ ಕುರಿತಾಗಿದ್ದು, ಈ ಅವಧಿಯು ರಾಜ್ಯಗಳಿಂದ ರಾಜ್ಯಕ್ಕೆ ಬದಲಾಗುತ್ತದೆ. ಪ್ರಾರಂಭದ ಮೂರು ತಿಂಗಳುಗಳ ಮಿತಿಯನ್ನು ಹರಿಯಾಣ ಪ್ರಸ್ತಾಪಿಸಿದ್ದರೆ, ಸದರಿ ಕಾನೂನುಗಳನ್ನು ಉತ್ತರಪ್ರದೇಶ ರಾಜ್ಯ 1000 ದಿನಗಳ ಅವಧಿಗೆ ಅಮಾನತಿನಲ್ಲಿ ಇಟ್ಟಿದೆ. ಕೈಗಾರಿಕೆಗಳ ಪುನಃಶ್ಚೇತನಕ್ಕೆ ಮೂರು ತಿಂಗಳುಗಳ ಮಿತಿ ತೀರಾ ಕಡಿಮೆಯಾಗಿದ್ದರೆ, ಮೂರು ಅಥವಾ ಅದಕ್ಕೂ ಹೆಚ್ಚು ವರ್ಷಗಳ ಅವಧಿ ತೀರಾ ಹೆಚ್ಚಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಅದೇನೇ ಇದ್ದರೂ, ಈ ಹೊಸ ಕ್ರಮಗಳು ಅವರ ಹಿತಾಸಕ್ತಿಗಳಿಗೆ ವಿರುದ್ಧವಾಗಿಲ್ಲ ಎಂದು ತಮ್ಮ ಉದ್ದೇಶಗಳ ಕುರಿತು ಕಾರ್ಮಿಕರಿಗೆ ಸ್ಪಷ್ಟನೆ ನೀಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರಕಾರಗಳಿಗೆ ಇದು ಸಕಾಲ ಎನ್ನಬಹುದು.

ABOUT THE AUTHOR

...view details