ನವದೆಹಲಿ:ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹರಿಯಾಣದಲ್ಲಿ ಬಿಜೆಪಿ ಹಾಗೂ ಜನ್ ನಾಯಕ್ ಜನತಾ ಪಾರ್ಟಿ(ಜೆಜೆಪಿ) ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಗಿರುವ ಸಂದರ್ಭದಲ್ಲೇ ಜೆಜೆಪಿ ಮುಖ್ಯಸ್ಥ ದುಷ್ಯಂತ್ ಚೌಟಾಲ ತಂದೆ ಅಜಯ್ ಚೌಟಾಲ ಜೈಲಿನಿಂದ ಹೊರ ಬಂದಿದ್ದಾರೆ.
ಅಜಯ್ ಚೌಟಾಲರ ಪುತ್ರ ಹಾಗೂ ಜೆಜೆಪಿ ಮುಖ್ಯಸ್ಥ ದುಷ್ಯಂತ್ ಚೌಟಾಲ ಇಂದು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೂ ಪೂರ್ವಭಾವಿಯಾಗಿ ಈಗಾಗಲೇ ತಿಹಾರ್ ಜೈಲು ಸೇರಿದ್ದ ದುಷ್ಯಂತ್ ತಂದೆ ಅಜಯ್ ಚೌಟಾಲ ಎರಡು ವಾರಗಳ ಕಾಲ ಫರ್ಲೋ ಪಡೆದು ಹೊರ ಬಂದಿದ್ದಾರೆ.
'ಹಂಗಿ'ನ ಹರಿಯಾಣ: ಖಟ್ಟರ್ ಸಿಎಂ, ದುಷ್ಯಂತ್ ಡಿಸಿಎಂ ಆಗಿ ಇಂದು ಪ್ರಮಾಣ!
ಇಂದು ಮುಂಜಾನೆ ಜೈಲ್ನಿಂದ ಹೊರ ಬಂದಿರುವ ಅಜಯ್ ಚೌಟಾಲ, ತಮ್ಮ ಪುತ್ರ ದುಷ್ಯಂತ್ ಕೇವಲ 11 ತಿಂಗಳಲ್ಲೇ ಪಕ್ಷವನ್ನು ಸಂಘಟಿಸಿ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ..?
ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ಎಸಗಿದ ಆರೋಪದಲ್ಲಿ ಅಜಯ್ ಚೌಟಾಲ ಏಷ್ಯಾದ ಅತಿದೊಡ್ಡ ಜೈಲಾದ ತಿಹಾರ್ ಕಂಬಿ ಹಿಂದೆ ಬಂಧಿಯಾಗಿದ್ದರು.
2013ರ ಫೆಬ್ರವರಿಯಲ್ಲಿ ಆಗಿನ ಹರಿಯಾಣ ಸಿಎಂ ಓಂ ಪ್ರಕಾಶ್ ಚೌಟಾಲ ಹಾಗೂ ಅವರ ಪುತ್ರ ಅಜಯ್ ಚೌಟಾಲ ಹಾಗೂ ಮೂವರು ಸರ್ಕಾರಿ ಅಧಿಕಾರಿಗಳು ಶಿಕ್ಷಕರ ನೇಮಕಾತಿ ಅವ್ಯವಹಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಸಿಬಿಐನ ವಿಶೇಷ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ ಆದೇಶ ಹೊರಡಿಸಿತ್ತು. ನಕಲಿ ದಾಖಲೆಗಳ ಮೇಲೆ ಮೂರು ಸಾವಿರ ಶಿಕ್ಷಕರ ನೇಮಕಾತಿ ನಡೆಸಿದ ಗಂಭೀರ ಆರೋಪ ಅಜಯ್ ಚೌಟಾಲರ ಮೇಲಿದೆ.
ಅಜಯ್ ಚೌಟಾಲ ತಂದೆ ಓಂ ಪ್ರಕಾಶ ಚೌಟಾಲ
1989ನೇ ಬ್ಯಾಚಿನ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ದಾಖಲಿಸುವ ಮೂಲಕ ಈ ಅವ್ಯವಹಾರ ಬೆಳಕಿಗೆ ಬಂದಿತ್ತು. ಓಂ ಪ್ರಕಾಶ್ ಚೌಟಾಲ ನೇತೃತ್ವದ ಸರ್ಕಾರ ಸುಮಾರು 3208 ಪ್ರಾಥಮಿಕ ತರಬೇತಿ ಹೊಂದಿದ ಜೂನಿಯರ್ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗಿದೆ ಎಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಕಲ ಚೌಟಾಲ ಸರ್ಕಾರದ ಅವ್ಯವಹಾರ ಬಹಿರಂಗವಾಗಿತ್ತು.