ಕರ್ನಾಟಕ

karnataka

ETV Bharat / bharat

ಎನ್‌ಜಿಆರ್‌ಐನಿಂದ ಹೊಸ ತಂತ್ರಜ್ಞಾನ: ಡ್ರೋನ್ ಆಧಾರಿತ ಅಯಸ್ಕಾಂತೀಯ ಭೂ ಅನ್ವೇಷಣೆ - ಸಿಎಸ್‌ಐಆರ್ ಎನ್​‌ಜಿಆರ್‌ಐ ನಿರ್ದೇಶಕ ಡಾ ವಿ ಎಂ ತಿವಾರಿ

ರಾಷ್ಟ್ರೀಯ ಭೂ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಡ್ರೋನ್ ಹಾಗೂ ಆಯಸ್ಕಾಂತೀಯ ಅಲೆಗಳನ್ನು ಬಳಸಿಕೊಂಡು ಭೂ ಅನ್ವೇಷಣೆಗೆ ಸಂಬಂಧಿಸಿದಂತೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

Drone
ಡ್ರೋನ್

By

Published : Oct 13, 2020, 5:31 PM IST

ರಾಷ್ಟ್ರೀಯ ಭೂ ವೈಜ್ಞಾನಿಕ ಸಂಶೋಧನಾ ಸಂಸ್ಥೆ (ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ -ಎನ್‌ಜಿಆರ್‌ಐ) ಭೂ ಅನ್ವೇಷಣೆಗೆ ಸಂಬಂಧಿಸಿದಂತೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಡ್ರೋನ್ ಬಳಸಿಕೊಂಡು, ಆಯಸ್ಕಾಂತೀಯ ಅಲೆಗಳನ್ನು ಬಳಸಿಕೊಂಡು, ಇದು ಭೌಗೋಳಿಕ ಸಂಶೋಧನೆ, ಅನ್ವೇಷಣೆಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ. ಇದರ ಮೂಲಕ, ಖನಿಜ ಅನ್ವೇಷಣೆ, ಭೌಗೋಳಿಕ ರಚನೆ ವಿವರಣೆ ಮತ್ತು ಭೂನಕ್ಷೆಯ ತಯಾರಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.

ಈ ಹೊಸ ತಂತ್ರಜ್ಞಾನ, ಅದರ ವಿನ್ಯಾಸ ಹಾಗೂ ಅದರ ಕೆಲಸದ ಮಾದರಿಯನ್ನು ಸ್ವತಃ ಎನ್‌ಜಿಆರ್‌ಐ ನಡೆಸಿದೆ. ಈ ಹೊಸ ತಂತ್ರಜ್ಞಾನವು ಹೊಸ ಸಂಶೋಧನೆ, ಅನ್ವೇಷಣೆಗೆ ತೆಗೆದುಕೊಳ್ಳುತ್ತಿದ್ದ ಸಮಯವನ್ನು ಉಳಿಸುವ ಜೊತೆಗೆ, ದೂರದ, ತಲುಪಲು ಕಷ್ಟವಾಗ ಬಹುದಾದ ಪ್ರದೇಶಗಳಲ್ಲಿ ತ್ವರಿತವಾಗಿ ಸಂಶೋಧನೆ ಕೈಗೆತ್ತಿಕೊಳ್ಳಲು ನೆರವಾಗುತ್ತದೆ ಎಂದು ಸಿಎಸ್‌ಐಆರ್-ಎನ್‌ಜಿಆರ್‌ಐ ನಿರ್ದೇಶಕ ಡಾ.ವಿ.ಎಂ ತಿವಾರಿ ಮಾಹಿತಿ ನೀಡಿದ್ದಾರೆ.

ಈ ಕ್ರಾಂತಿಕಾರಿ, ಹೊಸ ಸಾಧನ ಹಾಗೂ ತಂತ್ರಜ್ಞಾನದ ಬಗ್ಗೆ, ಅಕ್ಟೋಬರ್ 11 ರಂದು ಸಂಸ್ಥೆಯ ವಜ್ರ ಮಹೋತ್ಸವದ ಸಂದರ್ಭದಲ್ಲಿ, ಡಾ. ತಿವಾರಿ ಮಾಹಿತಿ ನೀಡಿದ್ದಾರೆ. ಈ ನಾಡು ಜೊತೆಗಿನ ಸಂದರ್ಶನದಲ್ಲಿ ಅವರು ಈ ಬಗ್ಗೆ ವಿವರಿಸಿದ್ದಾರೆ.

ಭೌಗೋಳಿಕ ಸಂಶೋಧನೆಯಲ್ಲಿ ಈ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬಳಸಲಾಗುತ್ತಿದೆ?

ಈ ಹೊಸ ತಂತ್ರಜ್ಞಾನ, ಭೂಮಿಯ ಕೆಳಗಿನ, ಅಂತರ್ಜಲವನ್ನು ಪತ್ತೆ ಹಚ್ಚುವುದು, ಖನಿಜಗಳು ಮತ್ತು ಹೈಡ್ರೋಕಾರ್ಬನ್‌ಗಳನ್ನು ಅನ್ವೇಷಿಸುವುದು ಮತ್ತು ಭೂಕಂಪನ ವಲಯಗಳನ್ನು ಕಂಡುಹಿಡಿಯಲು ಸೂಕ್ತವಾಗಿದೆ. ನಾವು ಆಯಸ್ಕಾಂತೀಯ ಅಲೆಗಳನ್ನು ನಾನಾ ಅನ್ವೇಷಣೆಗಳಿಗೆ ಬಳಸಿಕೊಳ್ಳುತ್ತೇವೆ. ಆರಂಭದಲ್ಲಿ, ಸಂಶೋಧಕರು ಖನಿಜಗಳು ಮತ್ತು ಅಂತರ್ಜಲವನ್ನು ಹಸ್ತಚಾಲಿತ ಸಾಧನಗಳ ಮೂಲಕ ಪತ್ತೆ ಹಚ್ಚುತ್ತಿದ್ದರು. ಕೆಲವು ವರ್ಷಗಳ ಹಿಂದೆ, ಹೆಲಿಕಾಪ್ಟರ್‌ನ ಮೂಲಕ ಮ್ಯಾಗ್ನೆಟೋಮೀಟರ್ ಬಳಸಿ ನಾವು ಸಮೀಕ್ಷೆಗಳನ್ನು ನಡೆಸುತ್ತಿದ್ದೆವು. ಇದು ದುಬಾರಿ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ, ಎನ್‌ಜಿಆರ್‌ಐ ಡ್ರೋನ್ ಅಥವಾ ಮಾನವರಹಿತ ವೈಮಾನಿಕ ವಾಹನ (ಯುಎವಿ) ಆಧಾರಿತ ಅಯಸ್ಕಾಂತೀಯ ಪರಿಶೋಧನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಭಾರತದಲ್ಲಿ ಇದು ಮೊದಲನೆಯದು. ನಾವು ಯುಎವಿ - ಮ್ಯಾಗ್ನೆಟೋಮೀಟರ್ ಬಳಸಿ ಯಾಚರಾಮ್ (ಹೈದರಾಬಾದ್ ಉಪನಗರಗಳ ಪಟ್ಟಣ) ವನ್ನು ಸಮೀಕ್ಷೆ ಮಾಡಿದ್ದೇವೆ ಮತ್ತು ಈ ಸಮೀಕ್ಷೆಯ ಫಲಿತಾಂಶಗಳು ನಿಖರವಾಗಿವೆ. ಈ ತಂತ್ರಜ್ಞಾನದಿಂದ ದೂರದ ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಭೌಗೋಳಿಕ ಸಂಶೋಧನೆ, ಅಧ್ಯಯನ ಹಾಗೂ ಅನ್ವೇಷಣೆ ನಡೆಸುವುದು ಸುಲಭವಾಗುತ್ತದೆ.

ಆರು ದಶಕಗಳ ಭೂಕಂಪನ ಬಗ್ಗೆಗಿನ ಅಧ್ಯಯನ ಈಗ ಯಾವ ಹಂತ ತಲುಪಿದೆ?

ಭೂಕಂಪಗಳ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನಗಳು ನಡೆಯಬೇಕಿದೆ. ಪ್ರಸ್ತುತ, ನಾವು ಭೂಕಂಪನ ವಲಯಗಳನ್ನು ಮತ್ತು ನಡುಕಗಳ ತೀವ್ರತೆಯನ್ನು ಮಾತ್ರ ಗುರುತಿಸಬಹುದು. ಭೂಕಂಪಗಳ ಬಗ್ಗೆ ಮೊದಲೇ ಸುಳಿವು ನೀಡಬಲ್ಲ ತಂತ್ರಜ್ಞಾನವನ್ನು ನಾವು ಇನ್ನೂ ಅಭಿವೃದ್ಧಿಪಡಿಸಿಲ್ಲ. ಭೂಕಂಪಶಾಸ್ತ್ರದ ಸಂಶೋಧನೆಯಲ್ಲಿ ಜಿಪಿಎಸ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಪ್ರಮುಖ ಪಾತ್ರ ವಹಿಸುತ್ತಿವೆ.

ದೇಶದಲ್ಲಿ ಅಂತರ್ಜಲ ಹಾಗೂ ತೆರೆದ ನೀರಿನ ಮೂಲಗಳು ಆತಂಕಕಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ನಿಮ್ಮ ಸಂಶೋಧನೆಯ ಸಮಯದಲ್ಲಿ, ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ನೀವು ಯಾವುದೇ ತಂತ್ರಗಳನ್ನು ರೂಪಿಸಿದ್ದೀರಾ?

ಪಾತಾಳ ತಲುಪಿರುವ, ಅಂತರ್ಜಲ ಮಟ್ಟವನ್ನು ಕೃತಕವಾಗಿ ಪುನರ್ ಭರ್ತಿ ಮಾಡುವುದು (ಅಂತರ್ಜಲ ಮರುಪೂರಣ) ನಮ್ಮ ಮುಂದಿರುವ ತ್ವರಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಇದರ ಮೂಲಕ, ಶೀಘ್ರಗತಿಯಲ್ಲಿ ಅಂತರ್ಜಲ ಮಟ್ಟವನ್ನು ಮೇಲೆತ್ತಬಹುದು. ಈ ಪ್ರಕ್ರಿಯೆಯ ಮೂಲಕ ಚೌತುಪ್ಪಲ್‌ನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಎನ್‌ಜಿಆರ್‌ಐ ಸಹಾಯ ಮಾಡಿದೆ. ಭೂಮಿಯ ಮೇಲ್ಮೈಯಿಂದ ನೀರು ಎಲ್ಲಿ, ಹೇಗೆ ಭೂಮಿಯ ಒಳ ಪದರ ಸೇರುತ್ತದೆ ಅಥವಾ ಗಟ್ಟಿಯಾದ ಕಲ್ಲಿನ ಭೂಪ್ರದೇಶವಿದೆಯೇ ಎಂಬುದನ್ನು ತಿಳಿದುಕೊಳ್ಳುವುದು, ಉಪಯುಕ್ತ. ಈ ಎಲ್ಲ ಅಂಶಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಮಳೆ ನೀರು ಕೊಯ್ಲು ಮೂಲಕ, ಅಂತರ್ಜಲ ಮರುಪೂರಣ ಸಾಧ್ಯವಿದೆ. ಭೂಮಿಗೆ ಎಷ್ಟು ನೀರು ಸೇರುತ್ತದೆ ಮತ್ತು ಜಲ ಮೂಲಗಳನ್ನು ಅದು ತಲುಪುತ್ತದೆ ಎಂದು ನಮಗೆ ತಿಳಿದರೆ, ನಾವು ವಿವಿಧ ಬೆಳೆಗಳಿಗೆ ನೀರಿನ ಅಗತ್ಯವನ್ನು ನಿರ್ಣಯಿಸಿ, ಪೂರೈಸಲು ಸಾಧ್ಯವಿದೆ.

ತಮ್ಮ ಸಂಸ್ಥೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯಾವುದಾದರೂ ಸಂಶೋಧನೆ ನಡೆಸುತ್ತಿದೆಯೇ?

ಆಂಧ್ರ ಪ್ರದೇಶದ ಕೊವ್ವಾಡಾದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವಲ್ಲಿ ನಾವು ಸಂಬಂಧಪಟ್ಟ ಸಚಿವಾಲಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಪ್ರಸ್ತುತ, ನಾವು ತೆಲಂಗಾಣದಲ್ಲಿ ಯಾವುದೇ ಸಂಶೋಧನಾ ಯೋಜನೆ ಹೊಂದಿಲ್ಲ. ನಾವು ಅಮ್ರಾಬಾದ್‌ನ ಯುರೇನಿಯಂ ನಿಕ್ಷೇಪ ಅನ್ವೇಷಣೆಯ ಭಾಗವಾಗಿಲ್ಲ. ಆದರೆ, ನಾವು ಒಡಿಶಾ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಅದಿರು ನಿಕ್ಷೇಪ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದೇವೆ.

ನಿಮ್ಮ ಸಂಸ್ಥೆಯ ಭವಿಷ್ಯದ ಯೋಜನೆಗಳೇನು?

ಕೇಂದ್ರದ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ್ ಭಾರತದ ಒಂದು ಭಾಗವಾಗಿ, ದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಅನ್ವೇಷಿಸಲು ಅಗತ್ಯವಾದ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವತ್ತ ನಾವು ಗಮನ ಹರಿಸಿದ್ದೇವೆ.

ಜಿಯೋಫಿಸಿಕ್ಸ್ ಕ್ಷೇತ್ರದಲ್ಲಿ ಯುವಕರಿಗೆ ಲಭ್ಯವಿರುವ ಉದ್ಯೋಗಾವಕಾಶಗಳೇನು?

ಈ ಕ್ಷೇತ್ರವು ಸಾಕಷ್ಟು ಉದ್ಯೋಗ ಹಾಗೂ ಕೆರಿಯರ್ ಅವಕಾಶಗಳನ್ನು ಹೊಂದಿದೆ. ಕೆಲವು ವರ್ಷಗಳ ಹಿಂದೆ, ಐಐಟಿ ಖರಗ್‌ಪುರದ ಇಂಟಿಗ್ರೇಟೆಡ್ ಜಿಯೋಫಿಸಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಕ್ಯಾಂಪಸ್ ನಿಯೋಜನೆಗಳಲ್ಲಿ ಅತ್ಯಧಿಕ ಸಂಬಳದ ಅವಕಾಶ ಪಡೆಯಿದ್ದರು. ವಿದೇಶಗಳಲ್ಲಿಯೂ, ಹಲವಾರು ವೃತ್ತಿ ಆಯ್ಕೆಗಳಿವೆ. ತೈಲ, ಅನಿಲ, ಪೆಟ್ರೋಲಿಯಂ ಮತ್ತು ಕಲ್ಲಿದ್ದಲು ಉದ್ಯಮದಲ್ಲಿ ದೊಡ್ಡ ಮಟ್ಟದ ಉದ್ಯೋಗ ಅವಕಾಶಗಳಿವೆ. ಈ ವಲಯಗಳಲ್ಲಿ, ಈಗ ಮೌಲ್ಯ ಸರಪಳಿಯ ಪ್ರತಿಯೊಂದು ಹಂತದಲ್ಲೂ ನವೋದ್ಯಮಗಳಿವೆ. ಅಲ್ಲೆಲ್ಲ ದೊಡ್ಡ ಮಟ್ಟದ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ.

ABOUT THE AUTHOR

...view details