ನವದೆಹಲಿ: ದೇಶದ ಪ್ರಜಾಪ್ರಭುತ್ವವನ್ನು 'ಹೋಟೆಲ್ ರಾಜತಾಂತ್ರಿಕತೆ'ಯಿಂದ ಸೋಲಿಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ನಿಂದ ಈ ಹೇಳಿಕೆ ಬಂದಿದೆ.
ಶುಕ್ರವಾರ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕೆಂದು ನಿನ್ನೆ ಸುಪ್ರೀಂಕೋರ್ಟ್ ರಾಜ್ಯ ವಿಧಾನಸಭಾ ಸ್ಫೀಕರ್ಗೆ ಸೂಚಿಸಿತ್ತು. ಈ ಆದೇಶ ಬಂದ ಒಂದು ದಿನದ ನಂತರ ಕಮಲ್ ನಾಥ್ ರಾಜೀನಾಮೆ ನೀಡಿದ್ದಾರೆ. ಸುಮಾರು 15 ತಿಂಗಳ ಕಮಲ್ ನಾಥ್ ಅವಧಿ ಈ ಮೂಲಕ ಮುಕ್ತಾಯವಾಗಿದೆ.
"ಇಂದು ಪ್ರಜಾಪ್ರಭುತ್ವವನ್ನು ಹೋಟೆಲ್ ರಾಜತಾಂತ್ರಿಕತೆಯಿಂದ ಸೋಲಿಸಲಾಯಿತು" ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ಪ್ರಜಾಪ್ರಭುತ್ವವನ್ನು ಹಗಲಲ್ಲಿ ಹತ್ಯೆ ಮಾಡಲಾಗಿದೆ. ಅಧಿಕಾರದ ಆಸೆಗಾಗಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಕಿತ್ತುಹಾಕುವುದು ಬಿಜೆಪಿಗೆ ಅಭ್ಯಾಸವಾಗಿದೆ ಎಂದು ಅವರು ಟ್ವೀಟರ್ನಲ್ಲಿ ತಿಳಿಸಿದ್ದಾರೆ.
"ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ರಾಜೀನಾಮೆ ನೀಡುತ್ತಾರೆ. ಅದರೊಂದಿಗೆ ಪ್ರಜಾಪ್ರಭುತ್ವ ಹಾಗೂ ಚುನಾವಣೆಯ ಪರಿಕಲ್ಪನೆಯು ಸಾಯುತ್ತದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಹೇಳಿದ್ದಾರೆ.