ನವದೆಹಲಿ: ಖಾಕಿ ಧರಿಸಿದ ಪೊಲೀಸರ ಮೇಲೆ ವಕೀಲರು ನಡೆಸಿದ್ದಾರೆ ಎನ್ನಲಾದ ಹಲ್ಲೆ ಪ್ರಕರಣವನ್ನು ನಿಭಾಯಿಸಲು ಕಿರಣ್ ಬೇಡಿಯಂತ ಅಧಿಕಾರಿ ಬೇಕು ಎಂದು ದೆಹಲಿ ಪೊಲೀಸ್ ಸಂಘಟನಾ ಸದಸ್ಯರು ಕಿರಣ್ ಬೇಡಿ ಪರ ಘೋಷಣೆ ಕೂಗುತ್ತಿದ್ದಾರೆ.
ದೆಹಲಿ ಪ್ರಧಾನ ಕಚೇರಿ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಧರಣಿ ನಡೆಸುತ್ತಿರುವ ಪೊಲೀಸರು ತಮ್ಮ ಪ್ರತಿಭಟನೆ ಹಿಂಪಡೆಯುವಂತೆ ಅಲ್ಲಿನ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಕೋರಿದ್ದರು. ಅವರ ನಡೆಯನ್ನು ತಿರಸ್ಕರಿಸಿರುವ ಪ್ರತಿಭಟನಾನಿರತರು ಕಮಿಷನರ್ ಅವರು ಕಚೇರಿಯಿಂದ ಹೊರ ಬರುತ್ತಿದ್ದಂತೆ ‘ಪೊಲೀಸ್ ಕಮಿಷನರ್ ಕೈಸಾ ಹೋ, ಕಿರಣ್ ಬೇಡಿ ಜೈಸಾ ಹೋ’ (ಪೊಲೀಸ್ ಆಯುಕ್ತರು ಹೇಗಿರಬೇಕು? ಕಿರಣ್ ಬೇಡಿಯಂತೆ ಇರಬೇಕು) ಎಂದು ಘೋಷಣೆ ಕೂಗಿದರು.
ಈ ವೇಳೆ ಪ್ರತಿಭಟನಾನಿರತ ಪೊಲೀಸರಿಗೆ ಮತ್ತೆ ತಾಳ್ಮೆ ಹಾಗೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಪಟ್ನಾಯಕ್ ಮನವಿ ಮಾಡಿದರು. ಪೊಲೀಸ್ ಆಯುಕ್ತರೇ ಸ್ವತಃ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡುವವರೆಗೂ ನಾವು ಕರ್ತವ್ಯಕ್ಕೆ ಮರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
31 ವರ್ಷಗಳ ಹಿಂದಿನ ಕಲಹ
1988ರಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ಇದೇ ಮಾದರಿಯಲ್ಲಿ ಘರ್ಷಣೆ ನಡೆದಿದ್ದ ವೇಳೆ ಕಿರಣ್ ಬೇಡಿ ಅವರು ಉತ್ತರ ದೆಹಲಿಯ ಪೊಲೀಸ್ ಉಪ ಆಯುಕ್ತರಾಗಿದ್ದರು. ಸಣ್ಣ ಕಳ್ಳತನಕ್ಕಾಗಿ ವಕೀಲರ ಬಂಧನ ಮತ್ತು ಕೈಗೆ ಕೋಳ ತೊಡಿಸುವುದರ ಕುರಿತು ಆ ವರ್ಷದ ಜನವರಿಯಲ್ಲಿ ಹೋರಾಟ ಆರಂಭವಾಗಿತ್ತು. ತೀಸ್ ಹಜಾರಿ ನ್ಯಾಯಾಲಯದ ಸಂಕೀರ್ಣದ ವಕೀಲರು ತಕ್ಷಣ ಮುಷ್ಕರ ನಡೆಸಿದ್ದರು. ಅಂತಹ ಪ್ರಕರಣಗಳಲ್ಲಿ ವಕೀಲರಿಗೆ ಕೈಕೋಳ ತೊಡಿಸುವಂತಿಲ್ಲ ಎಂದು ಆಗ್ರಹಿಸಿದ್ದರು.
ಈ ಮುಷ್ಕರವು ವೇಗವಾಗಿ ರಾಷ್ಟ್ರವ್ಯಾಪಿ ಹರಡಿ ಎರಡು ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿತ್ತು. ಈ ಘರ್ಷಣೆಗಳನ್ನು ಬೇಡಿ ಅವರು ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಎಂದು ವಕೀಲರು ಆರೋಪಿಸಿದ್ದರು. ವಕೀಲರ ಗುಂಪಿನ ಮೇಲೆ ನಡೆದಿದ್ದ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಂದರ ದಾಳಿಯ ರೂಪುರೇಷೆಯನ್ನು ಬೇಡಿ ಅವರೇ ವಿನ್ಯಾಸಗೊಳಿಸಿದ್ದಾರೆ ಮತ್ತು ಇನ್ನೊಬ್ಬರು ಅವರ ಆದೇಶದಂತೆ ದಾಳಿ ನಡೆಸಿದ್ದರು ಎಂಬ ಬಲವಾದ ಆಪಾದನೆ ಕೇಳಿಬಂದಿತ್ತು.
ಮೊದಲ ಘರ್ಷಣೆಯು ಬೇಡಿ ಕಚೇರಿಯ ಹೊರಗೆ ಜನವರಿ 21ರಂದು ನಡೆದು, ಅದರಲ್ಲಿ 18 ಜನ ವಕೀಲರು ಪೊಲೀಸ್ ಲಾಠಿಗಳಿಂದ ಗಾಯಗೊಂಡಿದ್ದರು ಎನ್ನಲಾಗುತ್ತಿದೆ. ಪೊಲೀಸರು ತಮ್ಮ ವಿರುದ್ಧ ಬಲ ಪ್ರಯೋಗ ಮಾಡಿದ್ದಾರೆ ಎಂದು ವಕೀಲರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಬೇಡಿ, 'ವಕೀಲರು ಬಲವಂತವಾಗಿ ಕಚೇರಿಗೆ ನುಗ್ಗಿ ಅಶ್ಲೀಲವಾಗಿ ಕೂಗಿದ್ದರು. ಬಟ್ಟೆ ಕೀಳುವ ಬೆದರಿಕೆ ಹಾಕಿದ್ದರು. ಪೊಲೀಸರು ಅವರನ್ನು ಹಿಮ್ಮೆಟ್ಟಿಸುವಲ್ಲಿ ಸಮಂಜಸವಾದ ಬಲ ಪ್ರಯೋಗ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ಇದಾದ ಬಳಿಕ 1988ರ ಫೆಬ್ರವರಿ 17ರಂದು, ತೀಸ್ ಹಜಾರಿ ನ್ಯಾಯಾಲಯದ ಸಂಕೀರ್ಣದಲ್ಲಿ ಕನಿಷ್ಠ 30 ಸಾವಿರ ಜನರು ಭಾಗಿಯಾಗಿ ಗಲಭೆ ಮಾಡಿ ವಾಹನಗಳನ್ನು ಜಕಂಗೊಳಿಸಿ ಮತ್ತು ವಕೀಲರ ಕಚೇರಿಗಳ ಮೇಲೆ ದಾಳಿ ಮಾಡಿದ್ದರು ಎಂದು ವಕೀಲರು ಆರೋಪಿಸಿದ್ದರು. ಇದರ ಹಿಂದೆ ಬೇಡಿ ಅವರ ಕೈವಾಡವಿದ ಎಂದೂ ಹೇಳಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲು ಇಬ್ಬರು ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಲಾಗಿತ್ತು. ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳ ಕೊರತೆ ಇದೆ ಎಂದು ಕೋರ್ಟ್ ಹೇಳಿತ್ತು.