ಪ್ರಾಮಾಣಿಕ ಆಡಳಿತ ವ್ಯವಸ್ಥೆಯು ಭ್ರಷ್ಟರನ್ನು ತೊಡೆದು ಹಾಕುತ್ತದೆ ಎಂದು ಎರಡನೇ ಆಡಳಿತ ಸುಧಾರಣಾ ಆಯೋಗ ಹೇಳಿದೆ. ಆಯೋಗದ ವರದಿ ಅನೇಕ ರೀತಿಯ ಬುದ್ಧಿಮಾತುಗಳನ್ನು ಹೇಳಿದೆ. ವಿಪರ್ಯಾಸ ಎಂದರೆ, ಸುಧಾರಣಾ ಆಯೋಗ ರಚಿಸಿದ ಯುಪಿಎ ಆಡಳಿತ ಭ್ರಷ್ಟಾಚಾರ ಉತ್ತುಂಗಕ್ಕೆ ಕೊಂಡೊಯ್ದು ಕುಖ್ಯಾತಿ ಗಳಿಸಿತು. ʼಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ʼ ಸಂಸ್ಥೆ ಮೊದಲ ಬಾರಿಗೆ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಭಾರತ ಚೀನಾಕ್ಕಿಂತ ಉತ್ತಮವಾಗಿದೆ ಎಂದು ಸುಮಾರು ಐದು ವರ್ಷಗಳ ಹಿಂದೆ ಹೇಳಿತ್ತು. ಆದರೆ, ಅದೇ ಸಂಸ್ಥೆ ನೀಡಿರುವ ಇತ್ತೀಚಿನ ವರದಿ ಪ್ರಸ್ತುತ ಸಂಪೂರ್ಣ ಭಿನ್ನ ಚಿತ್ರಣ ನೀಡುತ್ತದೆ. ಜಾಗತಿಕ ಭ್ರಷ್ಟಾಚಾರ ಪ್ರವೃತ್ತಿಯ ಬಗ್ಗೆ ವರದಿ ನೀಡುವ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಪ್ರಕಾರ, 2014ರಲ್ಲಿ ಭಾರತದ ಭ್ರಷ್ಟಾಚಾರ ಶ್ರೇಯಾಂಕವು 85 ನೇ ಸ್ಥಾನದಲ್ಲಿತ್ತು. ಈ ವರ್ಷ ಭಾರತದ ಶ್ರೇಯಾಂಕ ಮತ್ತಷ್ಟು ಕುಸಿತ ಕಂಡಿದೆ.
ʼಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ʼ ನಡೆಸಿರುವ ಪ್ರಾಮಾಣಿಕತೆ ಪರೀಕ್ಷೆಯಲ್ಲಿ ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್ ದೇಶಗಳು 100ರಲ್ಲಿ ಶೇ88 ಹಾಗೂ ಫಿನ್ಲ್ಯಾಂಡ್, ಸಿಂಗಾಪುರ, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ಗಳು ಶೇಕಡಾ 85ರಷ್ಟು ಅಂಕ ಗಳಿಸಿದ್ದು, ಇದರಿಂದಾಗಿ ಇವು ವಿಶ್ವದ ಅತ್ಯಂತ ಕಡಿಮೆ ಭ್ರಷ್ಟರಾಷ್ಟ್ರಗಳು ಎಂದು ಸಾಬೀತಾಗಿದೆ. ಈ ಪರೀಕ್ಷೆಯಲ್ಲಿ ಭಾರತವು ಕೇವಲ ಶೇ 40ರಷ್ಟು ಅಂಕ ಗಳಿಸಲು ಸಾಧ್ಯವಾಗಿದೆ. ಜಾಗತಿಕ ಸರಾಸರಿ 43 ಆಗಿದ್ದು, 31 ಏಷ್ಯಾ - ಪೆಸಿಫಿಕ್ ರಾಷ್ಟ್ರಗಳು ಗಳಿಸಿದ ಸರಾಸರಿ ಅಂಕ ಶೇ 45ರಷ್ಟು ಇದೆ. ಭಾರತದ ಶ್ರೇಯಾಂಕ ಏಷ್ಯಾ - ಪೆಸಿಫಿಕ್ ದೇಶಗಳ ಸರಾಸರಿಗಿಂತಲೂ ಕೆಟ್ಟದಾಗಿದೆ. ಚೀನಾ 42 ಅಂಕಗಳೊಂದಿಗೆ 78ನೇ ಶ್ರೇಯಾಂಕ ಗಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಕೇವಲ ಆರ್ಥಿಕ ಮತ್ತು ಆರೋಗ್ಯ ವಿಪತ್ತು ಮಾತ್ರವಲ್ಲ, ಭ್ರಷ್ಟಾಚಾರದ ವಿಷವನ್ನೂ ಉಣಿಸಿದೆ ಎಂದು ʼಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ʼ ಹೇಳಿದೆ. ಸರ್ಕಾರಗಳು ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದು ಅದು ಟೀಕಿಸಿದೆ.
ಎರಡು ತಿಂಗಳ ಹಿಂದೆ ಜಾಗತಿಕ ಭ್ರಷ್ಟಾಚಾರ ಮಾಪಕ ಹೇಳಿರುವ ಪ್ರಕಾರ, ಶೇಕಡಾ 39ರಷ್ಟು ಸ್ವೀಕರಿಸುವುದರೊಂದಿಗೆ ಭ್ರಷ್ಟಾಚಾರದ ವಿಷಯದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದೆ. ಭಾರತದಲ್ಲಿ ಸಾಮಾನ್ಯ ಮನುಷ್ಯ ತನ್ನ ಯಾವುದೇ ಕಾರ್ಯಗಳನ್ನು ಶಿಫಾರಸು ಪತ್ರವಿಲ್ಲದೆ ಅಥವಾ ಲಂಚ ನೀಡುವ ಸಾಮರ್ಥ್ಯ ಇಲ್ಲದೆ ಮಾಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರಿಸ್ಥಿತಿ ಪ್ರತಿಬಿಂಬಿಸುತ್ತದೆ. ಸ್ವಯಂ ಸಮೃದ್ಧ ಭಾರತವನ್ನು ( ಸೆಲ್ಫ್ ರಿಲಯಂಟ್ ಇಂಡಿಯಾ ) ಸಾಧಿಸಲು ಭ್ರಷ್ಟಾಚಾರವು ಅತಿದೊಡ್ಡ ಅಡಚಣೆಯಾಗಿದೆ ಎಂದು ವಿಷಾದಿಸಿ, ಪ್ರಧಾನಿ ನರೇಂದ್ರ ಮೋದಿ ಕಳೆದ ಅಕ್ಟೋಬರ್ನಲ್ಲಿ ಭ್ರಷ್ಟಾಚಾರದ ವಿರುದ್ಧ ಪೂರ್ಣ ಪ್ರಮಾಣದ ಸಮರಕ್ಕೆ ಕರೆ ನೀಡಿದ್ದರು. ಆ ಯುದ್ಧಕ್ಕೆ ರಾಷ್ಟ್ರವನ್ನು ಯಾರು ಅಣಿ ಮಾಡಬೇಕು?.