ಕರ್ನಾಟಕ

karnataka

ETV Bharat / bharat

ಲಾಕಪ್​ ಡೆತ್​: ಜನರ ವಿಶ್ವಾಸ ಕಳೆದುಕೊಳ್ಳದಿರಲಿ ಪೊಲೀಸ್ ವ್ಯವಸ್ಥೆ - ರಿಬೇರೊ ಕಮೀಟಿ

ಭಾರತದಲ್ಲಿ ಲಾಕಪ್​ ಡೆತ್​ ಪ್ರಕರಣಗಳು ಹೊಸದೇನೂ ಅಲ್ಲ. ಆದರೆ ಕಾನೂನು ಗೌರವಿಸುವ ಹಾಗೂ ಸುಸಂಸ್ಕೃತ ಸಮಾಜಕ್ಕೆ ಇಂಥ ಘಟನೆಗಳು ಮಸಿ ಬಳಿಯುತ್ತಿವೆ. ಕಾನೂನು ರಕ್ಷಕರೇ ಜನರನ್ನು ಠಾಣೆಯಲ್ಲಿ ಹೊಡೆದು ಕೊಂದರೆ ಜನ ಯಾರನ್ನು ನಂಬುವುದು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈಗ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿರುವ ಕಾರಣದಿಂದ ಪೊಲೀಸ್ ದೌರ್ಜನ್ಯ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ.

Custodial deaths
Custodial deaths

By

Published : Jul 2, 2020, 6:31 PM IST

Updated : Jul 3, 2020, 6:51 PM IST

ತಮಿಳುನಾಡಿನ ತೂತುಕುಡಿಯಲ್ಲಿ ಜೂನ್ 23 ರಂದು ಜಯರಾಜ್ (58) ಹಾಗೂ ಅವರ ಮಗ ಬೆನಿಕ್ಸ್​ (31) ಎಂಬುವರು ಪೊಲೀಸ್​ ಕಸ್ಟಡಿಯಲ್ಲಿರುವಾಗ ಸಾವನ್ನಪ್ಪಿದ ಘಟನೆಯಿಂದ ದೇಶಾದ್ಯಂತ ಭಾರೀ ಆಕ್ರೋಶ ಸ್ಫೋಟವಾಗುವಂತಾಗಿದೆ. ಲಾಕ್​ಡೌನ್​ನಲ್ಲಿ ಅಂಗಡಿ ತೆರೆದಿದ್ದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾದ ಮಾಡಿದ ಕ್ಷುಲ್ಲಕ ಕಾರಣಕ್ಕೆ ಪೊಲೀಸರು ಇಬ್ಬರನ್ನೂ ಲಾಕಪ್​ನಲ್ಲಿ ಹಿಂಸಿಸಿ ಸಾಯಿಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಭಾರತದಲ್ಲಿ ಲಾಕಪ್​ ಡೆತ್​ ಪ್ರಕರಣಗಳು ಹೊಸದೇನೂ ಅಲ್ಲ. ಆದರೆ ಕಾನೂನು ಗೌರವಿಸುವ ಹಾಗೂ ಸುಸಂಸ್ಕೃತ ಸಮಾಜಕ್ಕೆ ಇಂಥ ಘಟನೆಗಳು ಮಸಿ ಬಳಿಯುತ್ತಿವೆ. ಕಾನೂನು ರಕ್ಷಕರೇ ಜನರನ್ನು ಠಾಣೆಯಲ್ಲಿ ಬಡಿದು ಕೊಂದರೆ ಜನ ಯಾರನ್ನು ನಂಬುವುದು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈಗ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿರುವ ಕಾರಣದಿಂದ ಪೊಲೀಸ್ ದೌರ್ಜನ್ಯ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಕಳೆದ ಕೆಲ ವರ್ಷಗಳಲ್ಲಿ ಭಾರತದಲ್ಲಿ ಘಟಿಸಿದ ಲಾಕಪ್ ಡೆತ್ ಹಾಗೂ ಅಂಥ ಎಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂಬುದನ್ನು ಈ ಸಂದರ್ಭದಲ್ಲಿ ತಿಳಿಯುವುದು ಅಗತ್ಯ.

2014 ರಿಂದ 2018 ರ ಮಧ್ಯೆ ಭಾರತದಲ್ಲಿ ನಡೆದ ಲಾಕಪ್ ಡೆತ್, ದಾಖಲಾದ ಪ್ರಕರಣಗಳು ಮತ್ತು ಶಿಕ್ಷೆಯ ಪ್ರಮಾಣದ ಅಂಕಿ ಅಂಶಗಳು ಹೀಗಿವೆ:

ವರ್ಷ ಪೊಲೀಸರ ವಿರುದ್ಧ ದಾಖಲಾದ ಪ್ರಕರಣಗಳು ಪೊಲೀಸ್ ಸಿಬ್ಬಂದಿ ವಿರುದ್ಧ ಚಾರ್ಜ್​ಶೀಟ್ ಅಪರಾಧಿ ಸಾಬೀತು ದಾಖಲಾದ ಪ್ರಕರಣ ಮತ್ತು ಶಿಕ್ಷೆಯ ಶೇಕಡಾವಾರು ತುಲನೆ ಚಾರ್ಜ್​ಶೀಟ್​ ಆದ ಪ್ರಕರಣಗಳು ಮತ್ತು ಶಿಕ್ಷೆಯ ಶೇಕಡಾವಾರು ತುಲನೆ ಪೊಲೀಸ್​ ಕಸ್ಟಡಿಯಲ್ಲಿ ಸಂಭವಿಸಿದ ಸಾವಿನ ಸಂಖ್ಯೆಗಳು
2018 5479 918 41 0.74% 4.4% 70
2017 2005 1000 128 6.3% 12.8% 100
2016 3082 1104 31 1.0% 2.80% 92
2015 5526 1122 25 0.45% 2.22% 67
2014 2601 1132 44 1.69% 3.88% 61

(Source: NCRB Reports)

ಟಾರ್ಚರ್ ಇಂಡಿಯಾದ 2019 ರ ವಾರ್ಷಿಕ ವರದಿಯ ಪ್ರಕಾರ ದೇಶದಲ್ಲಿ ನ್ಯಾಯಾಂಗ ಬಂಧನದಲ್ಲಿ 1,606 ಹಾಗೂ ಪೊಲೀಸ್ ಕಸ್ಟಡಿಯಲ್ಲಿ 125 ಸಾವುಗಳು ಘಟಿಸಿವೆ.

ಪೊಲೀಸ್ ಕಾರ್ಯಕ್ಷಮತೆಯ ಬಗ್ಗೆ ವಿವಿಧ ಸಮೀಕ್ಷಾ ವರದಿಗಳು ಏನು ಹೇಳುತ್ತವೆ?

* ಸಿಎಸ್​ಡಿಎಸ್​ ಲೋಕನೀತಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ 25 ಕ್ಕೂ ಕಡಿಮೆ ಭಾರತೀಯರು ಪೊಲೀಸರ ಮೇಲೆ ಹೆಚ್ಚಿನ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಶೇ.54 ರಷ್ಟು ಭಾರತೀಯರು ಸೈನಿಕರ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. (2018 ರ ಸಮೀಕ್ಷೆಯ ಪ್ರಕಾರ)

* ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಯ ಕುರಿತ 2019 ರ ವರದಿಯ ಪ್ರಕಾರ (ಕಾಮನ್ ಕಾಸ್-ಸಿಎಸ್​​​ಡಿಎಸ್​ 2018), ಪ್ರತಿ ಐವರು ಭಾರತೀಯರಲ್ಲಿ ಇಬ್ಬರು ಪೊಲೀಸರ ಬಳಿ ಹೋಗಲು ಹೆದರುತ್ತಾರೆ.

* ಪೊಲೀಸರ ದುರ್ನಡತೆಯ ಕಾರಣದಿಂದ ನಾಲ್ಕರಲ್ಲಿ ಮೂರರಷ್ಟು ಭಾರತೀಯರು ಪೊಲೀಸರಿಗೆ ದೂರು ನೀಡಲು ಮುಂದಾಗುವುದೇ ಇಲ್ಲವೆಂದು ಟಾಟಾ ಇನ್​​ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್​ ಸಮೀಕ್ಷಾ ವರದಿ (2018) ಹೇಳಿದೆ.

ಸುಪ್ರೀಂ ಕೋರ್ಟ್ ಆದೇಶ ಹಾಗೂ ಅದರ ಕಡೆಗಣನೆ!

* 2006 ರಲ್ಲಿ ಪ್ರಕಾಶ್​ ಸಿಂಗ್ ಮತ್ತು ಇತರರು ವಿರುದ್ಧ ಯುನಿಯನ್ ಆಫ್ ಇಂಡಿಯಾ ಮತ್ತು ಇತರರು ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆಯ ಸುಧಾರಣೆಗಾಗಿ ಸುಪ್ರೀಂ ಕೋರ್ಟ್ 7 ನಿರ್ದೇಶನಗಳನ್ನು ಹೊರಡಿಸಿತ್ತು. ಎಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು, ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರವನ್ನು ಸ್ಥಾಪಿಸುವಂತೆ ಈ ಸಮಯದಲ್ಲಿ ಕೋರ್ಟ್ ಆದೇಶಿಸಿತ್ತು.

* ಪೊಲೀಸರ ದುರ್ವ್ಯವಹಾರ, ಕಸ್ಟಡಿಯಲ್ಲಿ ಅತ್ಯಾಚಾರ ಅಥವಾ ಅತ್ಯಾಚಾರದ ಯತ್ನ, ಕೊಲೆ ಅಥವಾ ಕೊಲೆ ಯತ್ನ, ಗಂಭೀರವಾದ ಹಿಂಸೆ, ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆ ಮುಂತಾದುವುಗಳ ಬಗ್ಗೆ ಜನರು ಈ ಪ್ರಾಧಿಕಾರಕ್ಕೆ ದೂರು ನೀಡಬಹುದು. ಈ ದೂರು ಪ್ರಾಧಿಕಾರಗಳು ಪೊಲೀಸ್ ಇಲಾಖೆಯಿಂದ ಹೊರಗಿರುತ್ತವೆ.

ಏನಾಯಿತು ಸುಪ್ರೀಂ ಕೋರ್ಟ್ ಆದೇಶ?

* ಪೊಲೀಸ್ ದೂರು ಪ್ರಾಧಿಕಾರಗಳ ಕಾರ್ಯನಿರ್ವಹಣೆಯನ್ನು ಕಾಮನ್​ವೆಲ್ತ್​ ಹ್ಯೂಮನ್ ರೈಟ್ಸ್​ ಇನಿಶಿಯೇಟಿವ್​ (ಸಿಹೆಚ್​ಆರ್​ಐ) ನೋಡಿಕೊಳ್ಳುತ್ತಿದೆ. ಆದರೆ ಇದರ ಕಾರ್ಯ ಸಾಕಾಗುತ್ತಿಲ್ಲ.

* ಸಿಹೆಚ್​ಆರ್​ಐ ವರದಿಯ ಪ್ರಕಾರ, ರಾಜ್ಯಗಳು ಕೇವಲ ಕಾಗದದಲ್ಲಿ ಮಾತ್ರ ದೂರು ಪ್ರಾಧಿಕಾರಗಳನ್ನು ಸ್ಥಾಪಿಸಿವೆ ಅಥವಾ ಕೆಲ ರಾಜ್ಯಗಳು ಸುಪ್ರೀಂ ಕೋರ್ಟ್​ ಆದೇಶವನ್ನು ಕಡೆಗಣಿಸಿವೆ.

* ಅಸ್ಸೋಂ, ಛತ್ತೀಸಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ, ಪಂಜಾಬ್, ರಾಜಸ್ಥಾನ, ತ್ರಿಪುರಾ ಮತ್ತು ಉತ್ತರಾ ಖಂಡ್​ ರಾಜ್ಯಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರಗಳು ಕಾರ್ಯನಿರ್ಹಿಸುತ್ತಿವೆ. ಹಾಗೆಯೇ ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೂರು ಪ್ರಾಧಿಕಾರಗಳಿವೆ. ಆದರೆ ಅಸ್ಸೋಂ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ನಾಗಾಲ್ಯಾಂಡ್​ ಮತ್ತು ರಾಜಸ್ಥಾನಗಳಲ್ಲಿ ಮಾತ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟಗಳ ದೂರು ಪ್ರಾಧಿಕಾರಗಳಿವೆ.

* ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು, ಒಡಿಶಾ, ಹಿಮಾಚಲ ಪ್ರದೇಶ, ಬಿಹಾರ ಮತ್ತು ಆಂಧ್ರ ಪ್ರದೇಶಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರ ಇಲ್ಲ.

ಪೊಲೀಸ್ ವ್ಯವಸ್ಥೆ ಸುಧಾರಣೆಗೆ ನೇಮಕವಾಗಿದ್ದ ಕಮೀಟಿಗಳು:

ಕಮೀಟಿವರ್ಷವರದಿ
ರಾಷ್ಟ್ರೀಯ ಪೊಲೀಸ್ ಆಯೋಗ (ಎನ್​ಪಿಸಿ) 1977-81 ತುರ್ತು ಪರಿಸ್ಥಿತಿಯ ನಂತರ ರಚಿಸಲಾದ ಈ ಕಮೀಟಿಯು ಸಮಗ್ರ ಪೊಲೀಸ್ ವ್ಯವಸ್ಥೆಯ ಸುಧಾರಣೆಗಾಗಿ 8 ವರದಿಗಳನ್ನು ನೀಡಿತ್ತು.
ರಿಬೇರೊ ಕಮಿಟಿ 1998 ಎನ್​ಪಿಸಿಯ ವರದಿಗಳ ಜಾರಿ ನಿಗಾವಣೆಗಾಗಿ ಸುಪ್ರೀಂ ಕೋರ್ಟ್ ಈ ಕಮಿಟಿಯನ್ನು ನೇಮಿಸಿತ್ತು.
ಪದ್ಮನಾಭಯ್ಯ ಕಮಿಟಿ 2000 ಪೊಲೀಸ್​ ವ್ಯವಸ್ಥೆಯಲ್ಲಿ ರಾಜಕೀಯ ಹಾಗೂ ಅಪರಾಧೀಕರಣ ತಡೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಅಧ್ಯಯನಕ್ಕಾಗಿ ಈ ಕಮೀಟಿ ರಚಿಸಲಾಗಿತ್ತು.
ಮಳೀಮಠ ಕಮೀಟಿ 2002-03 ಭಾರತೀಯ ದಂಡ ಸಂಹಿತೆಯಲ್ಲಿ ಬದಲಾವಣೆ ಮಾಡುವಂತೆ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಸರಳೀಕರಿಸುವಂತೆ ಈ ಕಮೀಟಿ ಶಿಫಾರಸು ಮಾಡಿತ್ತು.
ಪೊಲೀಸ್​ ಆ್ಯಕ್ಟ್​ ಕರಡು ರಚನಾ ಕಮಿಟಿ 1 2005 1861 ರ ಪೊಲೀಸ್ ಕಾಯ್ದೆಯ ಬದಲಿಗೆ ಹೊಸ ಪೊಲೀಸ್ ಮಾದರಿ ಪೊಲೀಸ್ ಕಾಯ್ದೆಯ ಕರಡನ್ನು ತಯಾರಿಸಿತು.
Last Updated : Jul 3, 2020, 6:51 PM IST

ABOUT THE AUTHOR

...view details