ತಿರುಪತಿ(ಆಂಧ್ರಪ್ರದೇಶ): ದೇಶದ ಅತಿ ದೊಡ್ಡ ಮೃಗಾಲಯಗಳಲ್ಲಿ ಒಂದಾದ ತಿರುಪತಿಯ ಶ್ರೀವೆಂಕಟೇಶ್ವರ ಮೃಗಾಲಯವು ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ತತ್ತರಿಸಿದೆ. ಕೊರೊನಾ ಲಾಕ್ಡೌನ್ ಬಳಿಕ ಜನರು ಮೃಗಾಲಯಕ್ಕೆ ಆಗಮಿಸುತ್ತಿಲ್ಲ. ಸುಮಾರು 6 ತಿಂಗಳಿನಿಂದ ಪ್ರಾಣಿಗಳನ್ನು ಸಾಕಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮೃಗಾಲಯದ ಸಿಬ್ಬಂದಿ ಜನರಲ್ಲಿ ಮನವಿ ಮಾಡಿದ್ದಾರೆ.
"ಸಾಕಷ್ಟು ಪ್ರಮಾಣದಲ್ಲಿ ಪ್ರಾಣಿಗಳಿಗೆ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ, ಹಸಿವಿನಿಂದ ಪ್ರಾಣಿಗಳು ವಿಚಿತ್ರವಾಗಿ ಕೂಗುತ್ತಿವೆ. ಕೊರೊನಾ ಬಂದ ಬಳಿಕ ಉದ್ಯಾನವನವು ತನ್ನ ನಿಯಮಿತ ಆದಾಯವನ್ನು ಕಳೆದುಕೊಂಡಿದೆ. ಸದ್ಯ ನಮ್ಮಲ್ಲಿರುವ ಹಣದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮೃಗಾಲಯದ ವ್ಯವಸ್ಥಾಪಕರು ಈಗ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಪ್ರತಿದಿನ ಸರಾಸರಿ 2000-3000 ಜನರು ಮೃಗಾಲಯ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದರು. ಈ ಮೃಗಾಲಯವು ಪ್ರತಿವರ್ಷ ಸುಮಾರು 6 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಕಳೆದ ಆರು ತಿಂಗಳಿನಿಂದ ಆದಾಯವಿಲ್ಲದೆ ನಷ್ಟದಲ್ಲಿದೆ" ಎಂದು ಇಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.