ಕರ್ನಾಟಕ

karnataka

ಯಾರಾಗಲಿದ್ದಾರೆ ಕಾಂಗ್ರೆಸ್​ ಪಕ್ಷದ ನೂತನ ಸಾರಥಿ? ಇಂದು ನಿರ್ಧಾರ ಸಾಧ್ಯತೆ

ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಹಲವಾರು ಉನ್ನತ ಮಟ್ಟದ ಸಭೆಗಳನ್ನು ಆಯೋಜನೆ ಮಾಡಲಾಗಿತ್ತು. ಆದ್ರೆ, ಅಧ್ಯಕ್ಷರ ಆಯ್ಕೆ ಮಾಡುವಲ್ಲಿ ಸಭೆ ವಿಫಲವಾಗಿತ್ತು. ಈ ಕಾರಣದಿಂದ ಇಂದು ಅಂತಿಮವಾಗಿ ಕಾಂಗ್ರೆಸ್​ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಭವವಿದೆ.

By

Published : Aug 10, 2019, 9:43 AM IST

Published : Aug 10, 2019, 9:43 AM IST

ಯಾರಾಗಲಿದ್ದಾರೆ ಕಾಂಗ್ರೆಸ್​ ಪಕ್ಷದ ನೂತನ ಸಾರಥಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ನಂತರ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ಭಾರೀ ವಿರೋಧದ ನಡುವೆಯೇ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಇಂದು ನಡೆಯಲಿರುವ ಪಕ್ಷದ ಮಹತ್ವದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ನೂತನ ವ್ಯಕ್ತಿಯನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ರಾಹುಲ್ ಗಾಂಧಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಹುದಿನಗಳೇ ಕಳೆದುಹೋಗಿವೆ. ಹೀಗಾಗಿ ಕಾಂಗ್ರೆಸ್‌ನ ಅಧ್ಯಕ್ಷಗಾದಿಗೆ ಯಾರೂ ಇಲ್ಲದೆ ಇದ್ದುದರಿಂದ ಇಂದು ಮಹತ್ವದ ಸ್ಥಾನ ತುಂಬಲು ಆಯ್ಕೆ ನಡೆಯಲಿದೆ.

ಯಾರಾಗಬಹುದು ಕೈ ನಾಯಕ:
ಕಾಂಗ್ರೆಸ್​ ಅಧ್ಯಕ್ಷ ಹುದ್ದೆಗೆ ಮುಕುಲ್ ವಾಸ್ನಿಕ್ ಪ್ರಮುಖ ವ್ಯಕ್ತಿ ಎಂದು ಹೇಳಲಾಗುತ್ತಿದೆ. 59 ವರ್ಷದ ವಾಸ್ನಿಕ್ ಹೆಚ್ಚಿನ ಆಡಳಿತಾತ್ಮಕ ಅನುಭವ ಹೊಂದಿದ್ದು, ಕನಿಷ್ಠ ಸಾಂಸ್ಥಿಕ ಚುನಾವಣೆಯವರೆಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಇದಲ್ಲದೆ ಪ್ರಸ್ತುತ ಇರುವ ಸಾಂಸ್ಥಿಕ ದೌರ್ಬಲ್ಯಗಳನ್ನು ಸರಿಪಡಿಸಲು ಇವರು ಸೂಕ್ತ ವ್ಯಕ್ತಿ ಎನ್ನಲಾಗಿದೆ.

ವಾಸ್ನಿಕ್, ಪಿ.ವಿ.ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರ್ಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಸೋನಿಯಾ ಗಾಂಧಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಸಮರ್ಥ:
2014-19 ರ ವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಗಮನ ಸೆಳೆದಿದ್ದ ಮಲ್ಲಿಕಾರ್ಜುನ ಖರ್ಗೆ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸಿದ್ದರು. ಅದಲ್ಲದೆ ಕಾಂಗ್ರೆಸ್​ನ ಹಿರಿಯ ನಾಯಕರಾಗಿರುವ ಖರ್ಗೆಯವರಿಗೆ ಕಾಂಗ್ರೆಸ್​ನ ಎಲ್ಲಾ ಸಾಧಕ ಬಾಧಕಗಳು ಗೊತ್ತಿರುವುದರಿಂದ ಇವರನ್ನು ಕಾಂಗ್ರೆಸ್​ ಅಧ್ಯಕ್ಷನನ್ನಾಗಿ ಮಾಡುವ ಸಾಧ್ಯತೆ ಇದೆ.

ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಕಾಂಗ್ರೆಸ್ಸಿನ ಹಿರಿಯ ನಾಯಕ. ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಖರ್ಗೆ ಅವರು 17ನೇ ಲೋಕಸಭೆಯಲ್ಲಿ ಸೋತು ಮೊದಲ ಬಾರಿಗೆ ಸೋಲಿನ ನೋವು ಕಂಡಿದ್ದಾರೆ. 2009 ರಿಂದ ಸಂಸತ್ತಿನ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದ ಇವರು, ರಾಜ್ಯದ ಹಿರಿಯ ದಲಿತ ರಾಜಕಾರಣಿ ಮತ್ತು 2014 ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಕರ್ನಾಟಕ ಶಾಸನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. ಅದಕ್ಕೂ ಮುಂಚೆ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿದ್ದರು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕನಾಗಿ ನಾಮನಿರ್ದೇಶನಗೊಂಡಿದ್ದರು. ಜೊತೆಗೆ ಅವರು ಕಾಂಗ್ರೆಸ್‌ ಅಧ್ಯಕ್ಷ ಪಟ್ಟಕ್ಕೇರಿದರೆ ಕಾಂಗ್ರೆಸ್‌ ಕಳೆದುಕೊಂಡ ಅಹಿಂದ ಮತಗಳು ಮತ್ತೆ ಕ್ರೊಡೀಕರಣಗೊಳ್ಳಬಹುದು. ಅಲ್ಲದೆ ಅತ್ಯುನ್ನತ ಸ್ಥಾನಮಾನ ನೀಡುವ ಮೂಲಕ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಮತ್ತೆ ಪ್ರಬಲಗೊಳ್ಳಬಹುದು ಎಂಬೆಲ್ಲಾ ಕಾರಣಗಳಿಂದ ಇವರಿಗೆ ಪಕ್ಷ​ ಮಣೆ ಹಾಕುತ್ತದೆ ಎನ್ನಲಾಗುತ್ತದೆ.

ಶಶಿ ತರೂರ್​ಗೆ ಒಲಿಯುತ್ತಾ ಪಟ್ಟ?
63 ವರ್ಷದ ಶಶಿ ತರೂರ್‌ ಅವರದ್ದು ಬಹುಮುಖ ವ್ಯಕ್ತಿತ್ವ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಕೋಫಿ ಅನ್ನಾನ್‌ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ, ವಿಶ್ವಸಂಸ್ಥೆಯ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯವಹಿಸಿದರು.

ಉತ್ತಮ ಲೇಖಕರೂ, ಅಂಕಣಕಾರರೂ, ಪತ್ರಕರ್ತರೂ, ಮಾನವ-ಹಕ್ಕುಗಳ ಹೋರಾಟಗಾರರೂ ಹೌದು. ಮಾಜಿ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಮತ್ತು ಮೂರು ಬಾರಿ ಕೇರಳದ ತಿರುವನಂತಪುರಂನಿಂದ ಚುನಾಯಿತರಾಗಿ ಸಂಸತ್‌ ಸದಸ್ಯರಾಗಿದ್ದಾರೆ.

ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್​ ಬಲಾಬಲ:
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ತುಂಬಾ ಹೀನಾಯವಾಗಿ ಬಿಜೆಪಿ ವಿರುದ್ಧ ಸೋತು ಸುಣ್ಣವಾಯಿತು. ಇದಕ್ಕೆ ಹಲವಾರು ಕಾರಣಗಳೂ ಕೂಡ ಇರಬಹುದು. ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ರಾಹುಲ್​ ಗಾಂದಿ ಬಿಜೆಪಿ ವಿರುದ್ಧ ಬಾಣ ಬಿಡುತ್ತಲೇ ಇದ್ದರು. ಇದನ್ನೇ ತಮ್ಮ ಪ್ರಬಲ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಜನರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಯಿತು. ರಾಹುಲ್​ ಗಾಂಧಿ ಮೋದಿ ಉದ್ದೇಶಿಸಿ, ಮೋದಿ ಒಬ್ಬ ಚೌಕಿದಾರ್​ ಎಂದು ಕಿಡಿಕಾರಿದ್ದರು. ಇದನ್ನೆ ಬಳಸಿಕೊಂಡ ಕಮಲ ಪಕ್ಷ, ಹೌದು ನಾನು ಈ ದೇಶದ ಕಾವಲುಗಾರ ಎಂದು ಹೇಳಿ ದೇಶದ ಜನರ ಮನಗೆದ್ದ ಮೋದಿ ಈಗ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿದಿದ್ದಾರೆ.

ಕಳೆದ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ನೋಡೋದಾದ್ರೆ,

ಬಿಜೆಪಿ 353 ಸ್ಥಾನಗಳನ್ನು ಪಡೆದು ಗೆದ್ದು ಬೀಗಿದರೆ, ಕಾಂಗ್ರೆಸ್​ 52 ಸ್ಥಾನಗಳನ್ನು ಪಡೆದು ಬಿಜೆಪಿ ವಿರುದ್ಧ ಮಂಡಿಯೂರಿತು. ಈ ಮೂಲಕ ಇತಿಹಾಸದಲ್ಲಿ ಭಾರಿ ಹೀನಾಯ ಸೋಲನ್ನು ಕಾಂಗ್ರೆಸ್​ ಅನುಭವಿಸಿದಂತಾಗಿದೆ.

ಕರ್ನಾಟಕದ ವಿಷಯಕ್ಕೆ ಬರೋದಾದ್ರೆ ಬಿಜೆಪಿ: 25 ಸ್ಥಾನಗಳನ್ನ ಪಡೆದರೆ ಕಾಂಗ್ರೆಸ್​ ಕೇವಲ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಎಲ್ಲಾ ಕಾರಣಗಳಿಂದ ಮನನೊಂದು ರಾಹುಲ್​ ಗಾಂಧಿ ತನ್ನ ಅಧ್ಯಕ್ಷಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ABOUT THE AUTHOR

...view details