ಕರ್ನಾಟಕ

karnataka

ಬಿಹಾರ ವಿಧಾನಸಭೆ ಚುನಾವಣೆ: ಎರಡೂ ಮೈತ್ರಿ ಕೂಟಗಳಲ್ಲಿ ಸೀಟು ಹಂಚಿಕೆ ಗೊಂದಲ

By

Published : Sep 28, 2020, 7:43 PM IST

ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಮೈತ್ರಿ ಕೂಟಗಳಲ್ಲಿ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ. ಆದರೆ ಎರಡೂ ಕಡೆ ಹೊಂದಾಣಿಕೆ ದೊಂಬರಾಟ ಮುಂದುವರೆದಿದೆ.

confusion-prevails-over-seat-sharing-in-bihar-election
ಬಿಹಾರ ವಿಧಾನಸಭೆ ಚುನಾವಣೆ : ಎರಡೂ ಮೈತ್ರಿ ಕೂಟಗಳಲ್ಲಿ ಸೀಟು ಹಂಚಿಕೆಯ ಗೊಂದಲ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಒಂದು ತಿಂಗಳಿಗೂ ಕಡಿಮೆ ಅವಧಿ ಇದೆ. ಆದರೂ ಸೀಟು ಹಂಚಿಕೆ ವಿಚಾರದಲ್ಲಿ ಎನ್‌ಡಿಎ ಹಾಗೂ ಮಹಾಘಟಬಂಧನ ಎರಡರಲ್ಲೂ ಗೊಂದಲ ಮುಂದುವರಿದೆ. ಇದು ಟಿಕೆಟ್‌ ಆಕಾಂಕ್ಷಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

ಬಿಹಾರದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮಿಸಿದರೆ ಎರಡೂ ಕ್ಯಾಂಪ್‌ಗಳಲ್ಲಿ ಸೀಟು ಹಂಚಿಕೆ ಸಮಸ್ಯೆ ನಿವಾರಣೆ ಅಷ್ಟು ಸುಲಭದ ಕೆಲಸವಲ್ಲ. ಕಳೆದ ಎರಡು ದಿನಗಳ ಹಿಂದಷ್ಟೇ ಜೆಡಿಯು ಅಧ್ಯಕ್ಷ ನಿತೀಶ್‌ ಕುಮಾರ್‌ ವಿಧಾನಸಭಾ ಕ್ಷೇತ್ರಗಳ ಹಂಚಿಕೆ ಬಗ್ಗೆ ಅತಿ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಎಲ್‌ಜೆಪಿ ನಿತೀಶ್‌ ಕುಮಾರ್‌ ವಿರುದ್ಧ ಸೆಟೆದು ನಿಂತಿದ್ದು, ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಮಾತನ್ನು ಹೇಳಿದೆ. ಹೀಗಾಗಿ ಎನ್‌ಡಿಎ ಮೈತ್ರಿ ಕೂಟದಲ್ಲಿನ ಜೆಡಿಯು, ಎಲ್‌ಜೆಪಿ ಶೀತಲ ಸಮರ ಆರಂಭವಾದಂತೆ ಕಾಣುತ್ತಿದೆ. ಸೀಟು ಹಂಚಿಕೆಯಲ್ಲಿ ಈ ಎರಡೂ ಪಕ್ಷಗಳು ಒಮ್ಮತಕ್ಕೆ ಬರುವ ಸಾಧ್ಯತೆ ಕಡಿಮೆ ಅಂತಲೂ ಹೇಳಲಾಗುತ್ತಿದೆ.

ಲೋಕ ಜನಶಕ್ತಿ ಪಕ್ಷ ಈಗಾಗಲೇ 143 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದಿದೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಆ ಪಕ್ಷದ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಮ್‌ವಿಲಾಸ್‌ ಪಾಸ್ವಾನ್‌ ಆರೋಗ್ಯದ ಕುರಿತು ನಿತೀಶ್‌ ಕುಮಾರ್‌ ಅವರ ನೀಡಿರುವ ಹೇಳಿಕೆಗಳಿಂದ ಪಾಸ್ವಾನ್‌ ಪುತ್ರ ಚಿರಾಕ್‌ ಪಾಸ್ವಾನ್‌ ನಿತೀಶ್‌ ಕುಮಾರ್‌ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ರಾಮ್‌ವಿಲಾಸ್‌ ಪಾಸ್ವಾನ್‌ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಆ ಬಗ್ಗೆ ನನಗೆ ಗೊತ್ತಿಲ್ಲ ಎಂಬ ಬಿಹಾರ ಸಿಎಂ ಪ್ರತಿಕ್ರಿಯಿಸಿದ್ದರು, ಹೀಗಾಗಿ ಜೆಡಿಯು ಹಾಗೂ ಎಲ್​​‌ಜೆಪಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಇನ್ನು, ಮಹಾಘಟಬಂಧನ್‌ ಎನ್‌ಡಿಎ ಮೈತ್ರಿ ಕೂಟಕ್ಕಿಂತ ಭಿನ್ನವಾಗಿಲ್ಲ. ಇಲ್ಲೂ ಕೂಡ ಸೀಟು ಹಂಚಿಕೆ ವಿಚಾರದಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಆರ್‌ಎಲ್‌ಎಸ್ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾ ಈಗಾಗಲೇ ಆರ್‌ಜೆಡಿಯ ತೇಜಸ್ವಿ ಯಾದವ್‌ ಅವರ ನಾಯಕತ್ವವನ್ನು ಒಪ್ಪುವುದಿಲ್ಲ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್‌ ಕೂಡ ಸೀಟು ಹಂಚಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಮುಖ್ಯಸ್ಥ ಅವಿನಾಶ್ ಪಾಂಡೆ ತಿಳಿಸಿದ್ದಾರೆ.

ಒಟ್ಟಾರೆ, ಎರಡೂ ಮೈತ್ರಿ ಕೂಟಗಳಲ್ಲಿ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇರುವುದು ಸತ್ಯ. ಆದರೆ ಇದನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details