ಹೈದರಾಬಾದ್:ಚಂದಮಾಮನ ಅಂಗಳಕ್ಕೆ ಚಂದ್ರಯಾನ-2 ಇಳಿಯಲು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಎಲ್ಲ ಹಂತದ ಕಾರ್ಯ ಇಸ್ರೋದಿಂದ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಶನಿವಾರ ರಾತ್ರಿ ಫೈನಲ್ ಹಂತದ ಕೆಲಸ ಆರಂಭಗೊಳ್ಳಲಿದೆ.
ಸೆ.7ರಂದು ತಡರಾತ್ರಿ 1ರಿಂದ 2ಗಂಟೆ ನಡುವ ಲ್ಯಾಂಡರ್ ಚಂದ್ರನ ಅಂಗಳದ ಕಡೆಗೆ ಇಳಿಯುವ ಕಕ್ಷಾವತರಣ ಕ್ರಿಯೆ ಆರಂಭಗೊಳ್ಳಲಿದ್ದು, ಇದಾದ ಬಳಿಕ 1.30ರಿಂದ 2.30ರ ನಡುವೆ ಟಚ್ಡೌನ್ ಪ್ರಕ್ರಿಯೆ ನಡೆಯಲಿದೆ. ಇದಾದ ಬಳಿಕ ಬೆಳಗ್ಗೆ 5.30ರಿಂದ 6.30ರ ನಡುವೆ ವಿಕ್ರಮ್ ಲ್ಯಾಂಡರ್ ಒಳಗಿಂದ ರೋವರ್ ಪ್ರಗ್ಯಾನ್ ಹೊರ ಬಂದು ಚಂದ್ರನ ಅಂಗಳದ ಮೇಲೆ ಇಳಿಯಲಿದೆ. ಇಲ್ಲಿಗೆ ಇಳಿದ ಬಳಿಕ ಚಂದ್ರನ ಅಧ್ಯಯನದಲ್ಲಿ ಇದು ನಿರತವಾಗಲಿದೆ. ಚಂದ್ರನ ಸ್ಪರ್ಶಿಸುವ ಕೊನೆಯ 15 ನಿಮಿಷ ನಮಗೆ ಸತ್ವಪರೀಕ್ಷೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.