ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈನ ಆರ್ಥಿಕ ಅಪರಾಧ ವಿಭಾಗದ (ಇಒಡಬ್ಲ್ಯೂ) ಪೊಲೀಸ್ ಅಧಿಕಾರಿಗಳು ಬಿಜೆಪಿಯ ಪ್ರಭಾವಿ ಮುಖಂಡನ ಪುತ್ರನನ್ನು ಬಂಧಿಸಿದ್ದಾರೆ.
ಮುಲುಂಡ್ ಕ್ಷೇತ್ರದ ಮಾಜಿ ಶಾಸಕ/ ಬಿಜೆಪಿಯ ಮುಖಂಡ ಸರ್ದಾರ್ ತಾರಾ ಸಿಂಗ್ ಅವರ ಪುತ್ರ ಎಸ್. ರಜನೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಎಂಸಿ ಬ್ಯಾಂಕ್ ನಿರ್ದೇಶಕರು ಮತ್ತು ಎಚ್ಡಿಐಎಲ್ ಸಮೂಹದ ನಿರ್ದೇಶಕರು ಎಸಗಿದ್ದ ಸುಮಾರು 4,355 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಜನೀತ್ ಸಿಂಗ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರಣಾಯ ಅಶೋಕ್ ಹೇಳಿದ್ದಾರೆ.
ಬಿಜೆಪಿಯ ಮುಖಂಡ ಸರ್ದಾರ್ ತಾರಾ ಸಿಂಗ್ ಅವರ ಪುತ್ರ ಎಸ್. ರಜನೀತ್ ಸಿಂಗ್ ರಜನೀತ್ ಬ್ಯಾಂಕ್ನ ಸಾಲ ವಸೂಲಾತಿ ಸಮಿತಿ ಸದಸ್ಯರಾಗಿ ಸುಮಾರು 13 ವರ್ಷ ಬ್ಯಾಂಕ್ನಲ್ಲಿ ನಿರ್ದೇಶಕರಾಗಿದ್ದರು. ಎಚ್ಡಿಐಎಲ್ ಸಮೂಹ ಕಂಪನಿಗಳಿಗೆ ನೀಡಲಾದ ಸಾಲ, ದೀರ್ಘಾವಧಿಯ ಬಾಕಿ ಮತ್ತು ಅದನ್ನು ಮರುಪಡೆಯಲು ಮಾಡಿದ ಪ್ರಯತ್ನಗಳ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು ಎಂದರು.
ವಿಚಾರಣೆಯಲ್ಲಿ ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ ಸರಿಯಾದ ವಿವರಣೆ ನೀಡಲಿಲ್ಲ. ಮೇಲ್ನೋಟಕ್ಕೆ ಹಗರಣದಲ್ಲಿ ಪಾಲುದಾರರು ಎಂಬ ಅನುಮಾನ ಮೂಡಿದೆ. ಸಂಜೆ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಭಾನುವಾರ ನ್ಯಾಯಮೂರ್ತಿಗಳ ಮುಂದೆ ಹಾಜರಿಪಡಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.