ಕರ್ನಾಟಕ

karnataka

ಮಾಜಿ ಸಚಿವ, ಶಾಸಕ, ಸಂಸದರ ಕರುಳಬಳ್ಳಿಗಳಿಗೇ ಬಿಜೆಪಿ ಮಣೆ.. ಮಹಾರಾಷ್ಟ್ರ ಕೇಸರಿ ಪಡೆಯ ಕುಟುಂಬ ರಾಜಕಾರಣ!

By

Published : Oct 7, 2019, 6:32 PM IST

ಮಹಾರಾಷ್ಟ್ರದಲ್ಲಿ ಇದೇ 21ರಂದು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿ(ಬಿಜೆಪಿ) ತನ್ನ ಗತಕಾಲದ ಗೆಳೆಯ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದಿದೆ.

ಮಹಾರಾಷ್ಟ್ರ ಕೇಸರಿ ಪಡೆಯ ಕುಟುಂಬ ರಾಜಕಾರಣ

ಮುಂಬೈ: ಬಿಜೆಪಿ ಕುಟುಂಬ ರಾಜಕಾರಣವನ್ನ ಬಲವಾಗಿ ವಿರೋಧಿಸುತ್ತಲೇ ಬಂದಿದೆ. ಆದರೆ, ಅದೇ ಬಿಜೆಪಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ. ಬಿಜೆಪಿಯ ಮಾಜಿ ಸಚಿವರು, ಸಂಸದರು ಹಾಗೂ ಶಾಸಕರ ಮಗಳು, ಮಗ, ಸೊಸೆ, ಅಳಿಯ, ಪತ್ನಿ ಹಾಗೂ ತಮ್ಮಂದಿರಿಗೆ ಟಿಕೆಟ್‌ ನೀಡಿ ತನ್ನ ನಿಲುವಿಗೆ ವಿರುದ್ಧವಾಗಿ ಕಾಣಿಸಿಕೊಂಡಿದೆ.

ಪ್ರತಿ ಆರು ಮಂದಿಯಲ್ಲಿ ಒಬ್ಬ ಸಂಬಂಧಿಗೆ ಬಿಜೆಪಿ ಟಿಕೆಟ್‌:ಅ.1ರಂದು ಬಿಜೆಪಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ 125 ಅಭ್ಯರ್ಥಿಗಳನ್ನ ಘೋಷಿಸಿದೆ. ಅದರಲ್ಲಿ 19 ಅಭ್ಯರ್ಥಿಗಳು ಕುಟುಂಬ ರಾಜಕಾರಣದ ಹಿನ್ನೆಲೆಯುಳ್ಳವರು ಅನ್ನೋದು ವಿಶೇಷ. ಅಂದರೆ ಪ್ರತಿ ಆರು ಮಂದಿಯಲ್ಲಿ ಓರ್ವ ಅಭ್ಯರ್ಥಿ ಕುಟುಂಬ ರಾಜಕಾರಣದ ಕಾರಣಕ್ಕಾಗಿಯೇ ಬಿಜೆಪಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರು, ಮಾಜಿ ಸಂಸದರು, ಶಾಸಕರ ಪತ್ನಿ, ಪುತ್ರ, ಪುತ್ರಿ, ಅಳಿಯ, ಸೊಸೆ, ಸೋದರ ಹೀಗೆ ರಕ್ತ ಸಂಬಂಧಿಗಳಿಗೆ ಕೇಸರಿ ಪಡೆಯ ಅಭ್ಯರ್ಥಿಗಳಾಗಿದ್ದಾರೆ. ಈ ಸಾರಿ ವಿಧಾನಸಭೆ ಚುನಾವಣೆಯಲ್ಲಿ ಹೇಗಾದ್ರೂ ಸರಿ ಮತ್ತೆ ಬಿಜೆಪಿ ಅಧಿಕಾರಿದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದೆ.

ಮಾಜಿ ಸಚಿವರ ಮಗ-ಮಗಳಿಗೂ ಬಿಜೆಪಿ ಮಣೆ:ಕೇಂದ್ರ ಮಾಜಿ ಸಚಿವ ಗೋಪಿನಾಥ ಮುಂಡೆ ಪುತ್ರಿ ಪಂಕಜ್‌ ಮುಂಡೆ ಪರ್ಲಿ ಕ್ಷೇತ್ರದಲ್ಲಿ ಕಣಕ್ಕಿಳಿದಿದಾರೆ. ಮಾಜಿ ಸಚಿವ ಬಾವೂ ಸಾಹೇಬ್​​ ಫುಡ್‌ಕರ್‌ ಪುತ್ರ ಆಕಾಶ ಫುಡ್‌ಕರ್‌ಗೆ ಕಾಮಗಾಂವ್‌ ಟಿಕೆಟ್‌ ಸಿಕ್ಕಿದೆ. ಮಾಜಿ ಸಚಿವ ಗಣೇಶ್‌ ನಾಯ್ಕ್‌ ಮಗ ಸಂದೀಪ್‌ ನಾಯ್ಕ್‌ ಔರೋಲಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ. ಮಾಜಿ ಸಚಿವ ಮಧುಕರ್‌ ಪಿಚಾಡ್‌ ಪುತ್ರ ವೈಭವ್ ಪಿಚಾಡ್‌ಗೆ ಅಕೋಲಾ ಹುರಿಯಾಳು. ಮಾಜಿ ಸಚಿವ ಮಾಣಿಕರಾವ್‌ ಗಾವಿತ್‌ ಮಗ ಭರತ್‌ ಗಾವಿತ್‌ಗೆ ನವಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಮಹಾ ಚುನಾವಣೆ: ಬಿಜೆಪಿ- ಶಿವಸೇನೆ ಮೈತ್ರಿ ಕಗ್ಗಂಟಿಗೆ 162-126 ಮದ್ದು

ಬೋಕರದನ್‌ಗೆ ಮಾಜಿ ಸಚಿವ ರಾವ್‌ಸಾಹೇಬ್‌ ದಾನ್ವೆ ಪುತ್ರ ಸಂತೋಷ ದಾನ್ವೆ ಬಿಜೆಪಿ ಅಭ್ಯರ್ಥಿ. ವಾಯಿ ಕ್ಷೇತ್ರಕ್ಕೆ ಮಾಜಿ ಸಚಿವ ಪ್ರತಾಪರಾವ್‌ ಭೌಂಸ್ಲೆ ಮಗ ಮದನ್‌ ಭೌಂಸ್ಲೆ, ಪುಣೆ ಸ್ಟೇಷನ್‌ನಿಂದ ಮಾಜಿ ಸಚಿವ ದೀಲಿಪ್‌ ಕಾಂಬ್ಳೆ ಸಹೋದರ ಸುನೀಲ್‌ ಕಾಂಬ್ಳೆಗೆ ಟಿಕೆಟ್‌ ಸಿಕ್ಕಿದೆ. ಕೋಪರಗಾಂವ್‌ ಟಿಕೆಟ್‌ನ ಮಾಜಿ ಮಂತ್ರಿ ಶಂಕರ್‌ರಾವ್‌ ಕೌಲ್ಹೆ ಸೊಸೆ ಸ್ನೇಹಲತಾ ಕೊಲ್ಹೆಗೆ ಬಿಜೆಪಿ ದಯಪಾಲಿಸಿದೆ.

ಮಾಜಿ ಶಾಸಕರುಗಳ ಸಂಬಂಧಿಗಳಿಗೆ ಟಿಕೆಟ್‌:ವಿಕ್ರಮಗಢದ ಎಸ್‌ಟಿ ಮೀಸಲು ಕ್ಷೇತ್ರಕ್ಕೆ ಮಾಜಿ ಶಾಸಕ ವಿಷ್ಣು ಸಾವರ್‌ ಪುತ್ರ ಹೇಮಂತ್‌ ಸಾವರ್‌, ಶೇವಗಾಂವ್‌ ಕ್ಷೇತ್ರಕ್ಕೆ ಮಾಜಿ ಶಾಸಕ ರಾಜೀವ್‌ ರಾಜ್ವೆ ಪತ್ನಿ ಮೋನಿಕಾ ರಾಜ್ವೆಗೆ ಟಿಕೆಟ್‌ ಸಿಕ್ಕಿದೆ. ಕೊಲ್ಹಾಪುರ ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಶಾಸಕ ಮುನ್ನಾ ಮಹಾಂಡಿಕ್‌ ಸೋದರ ಅಮಲ್‌ ಮಾಂಡಿಕ್‌, ನಾಸಿಕ್‌ ಸೆಂಟ್ರಲ್‌ ಕ್ಷೇತ್ರದಲ್ಲಿ ಮಾಜಿ ಶಾಸಕ ಎನ್‌ ಸಿ ಫರಾಂಡೆ ಸೊಸೆ ದೇವಯಾನಿ ಫರಾಂಡೆ ಅಭ್ಯರ್ಥಿ. ದಕ್ಷಿಣ ಕರಾಡ್‌ ಕ್ಷೇತ್ರಕ್ಕೆ ಮಾಜಿ ಶಾಸಕ ದಿಲೀಪ್‌ರಾವ್‌ ದೇಶ್‌ಮುಖ್‌ ಅಳಿಯ ಅತುಲ್‌ ಭೌಂಸ್ಲೆಗೆ ಬಿಜೆಪಿ ಹುರಿಯಾಳು ಮಾಡಲಾಗಿದೆ.

ಮಾಜಿ ಸಂಸದರ ಪುತ್ರ-ಪುತ್ರಿಯರಿಗೂ ಸಿಕ್ಕಿದೆ ಬಿಜೆಪಿ ಟಿಕೆಟ್‌:ಹಿಂಗಾನಾ ಕ್ಷೇತ್ರದಲ್ಲಿ ಮಾಜಿ ಸಂಸದ ದತ್ತಾ ಮೇಘೆ ಪುತ್ರಿ ಸಮೀರಾ ಮೇಘೆ, ತುಳಜಾಪುರ ಕ್ಷೇತ್ರಕ್ಕೆ ಮಾಜಿ ಎಂಪಿ ಪ್ರಜ್ಞಾಸಿಂಗ್‌ ಪಾಟೀಲ್‌ ಪುತ್ರ ರಾಣಾ ಜಗಜೀವಸಿಂಗ್‌ ಪಾಟೀಲ್‌, ಶಿವಾಜಿನಗರ ಪೂರ್ವ ಕ್ಷೇತ್ರಕ್ಕೆ ಮಾಜಿ ಸಂಸದ ಅನಿಲ್ ಶಿರೋಲಿ ಪುತ್ರ ಸಿದ್ಧಾರ್ಥ ಶಿರೋಲಿ ಬಿಜೆಪಿ ಕ್ಯಾಂಡಿಡೇಟಾಗಿದಾರೆ. ನಿಲಂಗಾ ಕ್ಷೇತ್ರದಲ್ಲಿ ಮಾಜಿ ಸಂಸದೆ ರೂಪತಾಯಿ ನಿಲಂಗಕರ್‌ ಪುತ್ರ ಸಂಭಾಜಿ ನಿಲಂಗಕರ್‌, ಪನವೇಲ್‌ ಕ್ಷೇತ್ರಕ್ಕೆ ಮಾಜಿ ಸಂಸದ ರಾಮಸೇಟ್ ಠಾಕೂರ್‌ ಪುತ್ರ ಪ್ರಶಾಂತ ಠಾಕೂರ್‌ ಉಮೇದುವಾರರಾಗಿದ್ದಾರೆ.

ABOUT THE AUTHOR

...view details