ಬಿಹಾರ:ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಜಲ್-ಜೀವನ್-ಹರಿಯಾಲಿ’ (ಹಸಿರು ಜಲಜೀವನ) ಅಭಿಯಾನದ ಅಂಗವಾಗಿ ಬಿಹಾರದ ಹಲವಡೆ ಇಂದು ಮಾನವ ಸರಪಳಿ ರಚಿಸಲಾಗಿದೆ.
ಬಕ್ಸರ್ನಿಂದ ಜಾರ್ಖಂಡ್ ರಾಜ್ಯದ ಗಡಿಭಾಗ ಭಗಲ್ಪುರದವರೆಗೆ ಗಂಗಾನದಿಯ ತೀರದುದ್ದಕ್ಕೂ ಸುಮಾರು 18,000 ಕಿ.ಮೀ ಉದ್ದಕ್ಕೆ ನಿರ್ಮಿಸಲಾದ ಬೃಹತ್ ಮಾನವ ಸರಪಳಿ ವಿಶ್ವದ ಅತಿ ಉದ್ದದ ಮಾನವ ಸರಪಳಿಯಾಗಿ ದಾಖಲೆ ಸೃಷ್ಟಿಸಿದೆ. ಸುಮಾರು 4.27 ಕೋಟಿ ಜನರು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು. ಸಿಎಂ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಹಾಗೂ ಇತರ ಸಚಿವರು ಪಾಟ್ನಾದ ಗಾಂಧಿ ಮೈದಾನದಲ್ಲಿ ಇಂದು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೆರೆದಿದ್ದರು.
ಮುಜಾಫರ್ಪುರ್ದ ಗಂಡಕ್ ನದಿಯಲ್ಲಿ ದೋಣಿಗಳಲ್ಲಿ ನಿಂತು ಮಾನವ ಸರಪಳಿ ಇನ್ನು ಮುಜಾಫರ್ಪುರ್ದ ಗಂಡಕ್ ನದಿಯಲ್ಲಿ ದೋಣಿಗಳಲ್ಲಿ ನಿಂತು ಅಥರ್ ಗ್ರಾಮದ ನಿವಾಸಿಗಳು ಮಾನವ ಸರಪಳಿ ರಚಿಸಿದ್ದಾರೆ.
ಬಾಗಾಹಾದ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಿದ 206 ಕಿ.ಮೀ.ವರೆಗಿನ ಮಾನವ ಸರಪಳಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು, ಕಾರ್ಮಿಕರು, ವಿವಿಧ ಇಲಾಖೆಗಳ ನೌಕರರು ಉತ್ಸಾಹದಿಂದ ಭಾಗವಹಿಸಿದ್ದರು. ಇಲ್ಲಿ ಸಸಿಗಳನ್ನು ನೆಡುವ ಮೂಲಕ, ರಂಗೋಲಿಗಳನ್ನು ಬಿಡಿಸುವ ಮೂಲಕ ಹಸಿರು ಜೀವನದ ಸಂದೇಶವನ್ನು ಜನರಿಗೆ ನೀಡಲಾಯಿತು.
ಸರನ್ ಜಿಲ್ಲೆಯಲ್ಲಿ ವಾಟರ್ ಲೈಫ್ ಗ್ರೀನರಿ ಎಂಬ ಹೆಸರಲ್ಲಿ 726 ಕಿ.ಮೀ ಉದ್ದದ ಮಾನವ ಸರಪಳಿಯನ್ನು ನಿರ್ಮಿಸಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳು, ಅಧಿಕಾರಿಗಳು, ಜನ ಪ್ರತಿನಿಧಿಗಳು, ನೌಕರರು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.
ಮಾನವ ಸರಪಳಿಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಹವಾಮಾನ ಬದಲಾವಣೆ ಹಾಗೂ ಸಾಮಾಜದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳ ವಿರುದ್ಧ ಹೋರಾಡಬೇಕೆಂಬ ಉದ್ದೇಶದಡಿ ಸಿಎಂ ನಿತೀಶ್ ಕುಮಾರ್ ‘ಜಲ್-ಜೀವನ್-ಹರಿಯಾಲಿ’ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ಬೆಂಬಲ ಸೂಚಿಸಿ ರಾಜ್ಯದ ಹಲವೆಡೆ ಮಾನವ ಸರಪಳಿ ನಿರ್ಮಿಸಿ ಒಗ್ಗಟ್ಟು ಪ್ರದರ್ಶಿಸಲಾಗಿದೆ. ಈ ಹಿಂದೆ ಬಿಹಾರ್ ಸರ್ಕಾರ 2017 ರಲ್ಲಿ ಮದ್ಯ ನಿಷೇಧಕ್ಕೆ ಬೆಂಬಲಿಸಿ ಹಾಗೂ ವರದಕ್ಷಿಣೆ ವಿರುದ್ಧವಾಗಿ, 2018ರಲ್ಲಿ ಬಾಲ್ಯ ವಿವಾಹದ ವಿರುದ್ಧವಾಗಿ ಮಾನವ ಸರಪಳಿ ನಿರ್ಮಿಸಿತ್ತು.