ರಕ್ಷಣಾ ಮೈತ್ರಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧ್ಯವಾಗಿದೆ ಎಂದು ಆಸ್ಟ್ರೇಲಿಯಾದ ನಿರ್ಗಮಿತ ರಾಯಭಾರಿ ಹರೀಂದರ್ ಸಿಧು ಹೇಳಿದ್ದಾರೆ. ವಿವಿಧ ರಕ್ಷಣಾ ಚಟುವಟಿಕೆಗಳಲ್ಲಿ ದ್ವಿಪಕ್ಷೀಯ ಮತ್ತು ಬಹು ಆಯಾಮದ ಯುದ್ಧಾಭ್ಯಾಸಗಳು ಮತ್ತು ಮಾತುಕತೆಗಳು ಸಹ ಸೇರಿವೆ. 2014ರಲ್ಲಿ 11 ಇದ್ದ ಇವುಗಳ ಸಂಖ್ಯೆ ಕಳೆದ ವರ್ಷ 39ಕ್ಕೆ ಏರಿದೆ ಎಂದು ಅವರು ವಿವರಿಸಿದರು.
ನಾಲ್ಕು ವರ್ಷಗಳ ರಾಯಭಾರತ್ವದ ಹೊಣೆಗಾರಿಕೆಯನ್ನು ನವದೆಹಲಿಯಲ್ಲಿ ಪೂರೈಸಿದ ನಂತರ ಕ್ಯಾನ್ಬೆರಾದಲ್ಲಿರುವ ಸಚಿವಾಲಯದ ಪ್ರಧಾನ ಕಚೇರಿಗೆ ಹಿಂದಿರುಗುತ್ತಿದ್ದ ಅವರು ಆಯ್ದ ಕೆಲ ವಿದೇಶಿ ಸಂಪಾದಕರ ಜೊತೆ ಮಾತನಾಡುತ್ತಿದ್ದರು.
ಎರಡೂ ದೇಶಗಳ ರಕ್ಷಣಾ ಪಡೆಗಳ ನಡುವಿನ ಪರಸ್ಪರ ಸರಕು ವಿನಿಮಯ ಹಂಚಿಕೆ ಒಪ್ಪಂದವನ್ನು ಮುಂದಿನ ಕೆಲ ತಿಂಗಳುಗಳಲ್ಲಿ ಉಭಯ ದೇಶಗಳು ಅಂತಿಮಗೊಳಿಸುವ ವಿಶ್ವಾಸವಿದೆ. “ಆಸ್ಟ್ರೇಲಿಯಾ ಮತ್ತು ಭಾರತ ದೇಶಗಳು ಏಷ್ಯಾದ ಎರಡು ಆತ್ಮೀಯ ಪಾಲುದಾರ ದೇಶಗಳಾಗಬಾರದು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗೆ ನೋಡಿದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಡೆತಡೆಗಳು ಸಹ ಇಲ್ಲ. ಎರಡೂ ದೇಶಗಳ ನಡುವೆ ಪರಿಹರಿಸಲು ಆಗದಂತಹ ಯಾವುದೇ ವಿಷಯಗಳಾಗಲಿ ಅಥವಾ ಸವಾಲುಗಳಾಗಲಿ ಇಲ್ಲ. ಇಬ್ಬರ ನಡುವೆ ಸಮಾನ ದೃಷ್ಟಿಕೋನವಿದೆ. ಇಂಡೊ - ಪೆಸಿಫಿಕ್ ಪ್ರದೇಶದಲ್ಲಿ ನಾವು ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುತ್ತಿರುವ ಈ ಸಂದರ್ಭದಲ್ಲಿ, ಭಾರತಕ್ಕೆ ಆಸ್ಟ್ರೇಲಿಯಾಗಿಂತ ಉತ್ತಮ ಮಿತ್ರನಿಲ್ಲ. ಅಲ್ಲದೇ ನಾವು ಭಾರತವನ್ನು ಅತಿ ಆತ್ಮೀಯ ಮಿತ್ರನಾಗಿ ನೋಡುತ್ತಿದ್ದೇವೆ” ಎಂದು ಶ್ರೀಮತಿ ಸಿಧು ಹೇಳಿದರು. ಸರಕು ಸಾಗಣೆ ಚರ್ಚೆಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಈ ಮಾತುಕತೆಗಳಲ್ಲಿ ನಾವು ಪ್ರಗತಿಯನ್ನು ಸಾಧಿಸುತ್ತಿದ್ದು, ಈ ವರ್ಷ ಅವು ಫಲಪ್ರದವಾಗುವಂತೆ ನೋಡಿಕೊಳ್ಳುವ ಕುರಿತು ನನಗೆ ಭರವಸೆಯಿದೆ” ಎಂದು ಹೇಳಿದರು.
ಭಾರತ ಇಂಥದೇ ಒಪ್ಪಂದವನ್ನು ಅಮೆರಿಕ, ಫ್ರಾನ್ಸ್ ಮತ್ತು ಸಿಂಗಾಪುರ ದೇಶಗಳೊಂದಿಗೂ ಹೊಂದಿದೆ. ಸ್ವಾಧೀನತೆ ಮತ್ತು ಉಭಯತ್ರ ಸೇವಾ ಒಪ್ಪಂದವನ್ನು (ಅಕ್ವಿಜಿಶನ್ ಅಂಡ್ ಕ್ರಾಸ್-ಸರ್ವೀಸಿಂಗ್ ಅಗ್ರೀಮೆಂಟ್ – ಎಸಿಎಸ್ಎ) ಜಪಾನ್ ದೇಶದೊಂದಿಗೆ ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ನಡುವೆ ಕಳೆದ ನವೆಂಬರ್ನಲ್ಲಿ ನಡೆದಿದ್ದ 2+2 ಉದ್ಘಾಟನಾ ಮಾತುಕತೆಯಲ್ಲಿ ಪ್ರಗತಿ ಸಾಧಿಸಲಾಗಿತ್ತು. ಜಪಾನ್ನೊಂದಿಗೆ ಒಪ್ಪಂದ ಪೂರ್ಣಗೊಂಡ ನಂತರ, ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ನೌಕಾ ಪಡೆಗಳ ಪರಸ್ಪರ ಕಾರ್ಯಾಚರಣಾ ಸಾಮರ್ಥ್ಯವನ್ನು ಎಚ್ಎ/ಡಿಆರ್ (ಹ್ಯುಮ್ಯಾನಿಟೇರಿಯನ್ ಅಸಿಸ್ಟನ್ಸ್ ಅಂಡ್ ಡಿಸಾಸ್ಟರ್ ರಿಲೀಫ್ – ಮಾನವೀಯ ನೆರವು ಮತ್ತು ಸಂಕಷ್ಟ ಪರಿಹಾರ) ಕಾರ್ಯಾಚರಣೆಗಳ ಮೂಲಕ ಸುಧಾರಿಸುತ್ತಲೇ ಭಾರತೀಯ ನೌಕಾ ಪಡೆಯ ಪೂರ್ವದ ಕಡೆಗಿನ ಕಾರ್ಯಾಚರಣೆಗಳನ್ನು ಆಸ್ಟ್ರೇಲಿಯಾ ಬಲಪಡಿಸಲಿದೆ. ಇಂತಹ ವಿಷಯಗಳನ್ನು ಒಳಗೊಂಡಿದ್ದ ರೈಸಿನಾ ಮಾತುಕತೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರು ಈ ತಿಂಗಳು ನವದೆಹಲಿಗೆ ನೀಡಬೇಕಿತ್ತು ಹಾಗೂ ಈ ನಿಗದಿತ ಭೇಟಿಯಲ್ಲಿ ಒಪ್ಪಂದಗಳ ಕುರಿತ ಔಪಚಾರಿಕ ಘೋಷಣೆ ಹೊರಬೀಳಬೇಕಿತ್ತು. ಆದರೆ, ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದರಿಂದ, ಭಾರತ ಭೇಟಿಯನ್ನು ಜುಲೈ ತಿಂಗಳಿಗೆ ಮರುನಿಗದಿಪಡಿಸಲಾಗಿದೆ.
ʼಇಂಡೊ-ಪೆಸಿಫಿಕ್ನಲ್ಲಿ ಚೀನಾ ಸೇರ್ಪಡೆಯ ಗುರಿ ಇಲ್ಲʼ
ಆಸ್ಟ್ರೇಲಿಯಾದ ಇಂಡೊ-ಪೆಸಿಫಿಕ್ ವ್ಯೂಹವು ಆಸಿಯನ್ (ಎಎಸ್ಇಎನ್) ಅನ್ನು ಕೇಂದ್ರವಾಗಿರಿಸಿಕೊಂಡಿದ್ದು, ಈ ಪ್ರದೇಶದಲ್ಲಿ ದೃಢವಾಗಿ ನೆಲೆಯೂರಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆಗೆ ಕೆಲಸ ಮಾಡುವ ಉದ್ದೇಶವನ್ನು ಹೊಂದಿದೆ. ಇದರ ಜೊತೆಗೆ ವಾಣಿಜ್ಯ ಒಪ್ಪಂದಗಳನ್ನು ಬಲಪಡಿಸುವುದು, ಅಮೆರಿಕದ ಜೊತೆಗಿನ ಮಿತ್ರತ್ವಕ್ಕೆ ಆದ್ಯತೆ ಕೊಡುವುದು ಹಾಗೂ ಆ ಮೂಲಕ ಚೀನಾ ಜೊತೆಗೆ ರಚನಾತ್ಮಕ ಸಂಬಂಧಗಳನ್ನು ಕಟ್ಟುವುದು ನಮ್ಮ ಆದ್ಯತೆಯೇ ಹೊರತು ಚೀನಾವನ್ನು ಪ್ರತಿಬಂಧಿಸುವುದಲ್ಲ ಎಂಬ ಅಂಶಗಳಿಗೆ ನಿರ್ಗಮಿತ ರಾಯಭಾರಿ ಸಿಧು ಒತ್ತು ನೀಡಿದರು.
“ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯ ಹೊಂದಿರುವ ದೇಶಗಳನ್ನು ಒಳಗೊಂಡಿರುವ ಮುಕ್ತ ಇಂಡೊ-ಪೆಸಿಫಿಕ್ ಅನ್ನು ನಾವು ಬಯಸುತ್ತೇವೆ. ತಮ್ಮ ಇಚ್ಛೆಯಂತೆ ಸ್ವಾತಂತ್ರ್ಯವನ್ನು ಬಳಸಿಕೊಂಡು ಸ್ಥಿರತೆ ಮತ್ತು ಸಮೃದ್ಧಿಯನ್ನು ಅವು ಸಾಧಿಸುವಂತಾಗಬೇಕು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಯಾವುದೇ ತಕರಾರು ಇಲ್ಲ ಎಂದುಕೊಳ್ಳುತ್ತೇನೆ,” ಎಂದು ಇಂಡೊ-ಪೆಸಿಫಿಕ್ ಕುರಿತ ಸಾಮಾನ್ಯ ದೃಷ್ಟಿಕೋನದ ಕುರಿತು ಅವರು ವಿವರಿಸಿದರು.
ಇಂಡೊ-ಪೆಸಿಫಿಕ್ ಪ್ರಾದೇಶಿಕತೆ ಎಂಬುದು ಅಮೆರಿಕ ಚಾಲಿತ ಪರಿಕಲ್ಪನೆಯಾಗಿದ್ದು, ಚೀನಾ ದೇಶವನ್ನು ಒಳಗೊಂಡಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಅವರು ರೈಸಿನಾ ಮಾತುಕತೆ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಮತಿ ಸಿಧು, “ಯಾವುದೋ ಒಂದು ದೇಶ ಹಿಡಿತ ಹೊಂದಿರುವಂತಹ ಪರಿಕಲ್ಪನೆ ಇದಲ್ಲ ಹಾಗೂ ಯಾರನ್ನಾದರೂ ಒಳಗೊಳ್ಳುವ ಅಥವಾ ಹೊರಗಿಡುವಂತಹ ಪರಿಕಲ್ಪನೆಯೂ ಇಲ್ಲಿಲ್ಲ. ಯಾವ ವ್ಯೂಹಾತ್ಮಕ ವಾತಾವರಣದಲ್ಲಿ ನಾವು ವಾಸವಾಗಿದ್ದೇವೆಯೋ ಮತ್ತು ಯಾವುದನ್ನು ಅಲ್ಲಿಂದ ಪಡೆಯಲು ಬಯಸುತ್ತೇವೆಯೋ ಅಂತಹ ಪರಿಸರವನ್ನು ಸಾಕಾರಗೊಳಿಸಲು ಮಾಡಲಾಗುತ್ತಿರುವ ಪ್ರಾಮಾಣಿಕ ಪ್ರಯತ್ನವಷ್ಟೇ ಇದು. ಇಂತಹ ಭೌಗೋಳಿಕ ಪರಿಕಲ್ಪನೆಯಲ್ಲಿ, ಚೀನಾ ಸಹ ಇಂಡೊ-ಪೆಸಿಫಿಕ್ನ ಭಾಗವೇ” ಎಂದು ಉತ್ತರಿಸಿದರು.
ಅಮೆರಿಕ ಮತ್ತು ಜಪಾನ್ ಜೊತೆಗೆ ತಾನು ನಡೆಸಿದ ನೌಕಾ ಸಮರಾಭ್ಯಾಸದಲ್ಲಿ ಕ್ಯಾನ್ಬೆರಾ ಕೂಡಾ ಸೇರ್ಪಡೆಯಾಗುವುದಕ್ಕೆ ಭಾರತ ಕೊನೆಗೂ ಹಸಿರು ನಿಶಾನೆ ತೋರಬಹುದು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಸಿಧು, “ಮಲಬಾರ್ ಸಮರಾಭ್ಯಾಸಕ್ಕೆ ಭಾರತ ಆಹ್ವಾನ ನೀಡುವುದಾದರೆ, ಆಸ್ಟ್ರೇಲಿಯಾ ಅದಕ್ಕೆ ಒಪ್ಪಿಕೊಂಡು, ಸ್ವೀಕರಿಸುವ ಸಾಧ್ಯತೆಗಳಿವೆ” ಎಂದು ಸ್ಪಷ್ಟಪಡಿಸಿದರು.
ʼಎಫ್ಎಟಿಎಫ್ ಅವಶ್ಯಕತೆಗಳಿಗೆ ಪೂರಕವಾಗಿ ಪಾಕಿಸ್ತಾನ ಇನ್ನೂ ಸ್ಪಂದಿಸಬೇಕಿದೆʼ
ಅಂತಾರಾಷ್ಟ್ರೀಯ ಕಾಳಧನ ವಹಿವಾಟು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಟ್ಟಿರುವ ವಿಶ್ವಸಂಸ್ಥೆಯ ಕಾವಲು ಸಮಿತಿಯು, ಪ್ರಸ್ತುತ ನಿಗಾ ಪಟ್ಟಿಯಲ್ಲಿರುವ ಪಾಕಿಸ್ತಾನವನ್ನು ನಿಷೇಧಿತ ಪಟ್ಟಿಯಲ್ಲಿರಿಸದೇ ಮುಕ್ತಗೊಳಿಸುವ ಸಾಧ್ಯತೆಗಳ ಕುರಿತು ಪ್ರತಿಕ್ರಿಯಿಸಿದ ರಾಯಭಾರಿಯು, ಅದು ತಾಂತ್ರಿಕ ಮೌಲ್ಯಮಾಪನವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಅದಾಗ್ಯೂ, ಸದ್ಯಕ್ಕೆ ಪಾಕಿಸ್ತಾನವನ್ನು ನಿಗಾ ಪಟ್ಟಿಯಲ್ಲಿಯೇ ಮುಂದುವರಿಸಲು ಆಸ್ಟ್ರೇಲಿಯಾ ಬಯಸುತ್ತದೆ. ಏಕೆಂದರೆ, ಈ ಮುಂಚಿನ ಸಭೆಗಳಲ್ಲಿ ನಿಗದಿಪಡಿಸಿರುವ ಮಾನದಂಡಗಳ ಪಾಲನಾ ಅವಶ್ಯಕತೆಗಳನ್ನು ಆ ದೇಶ ಇನ್ನೂ ಪೂರೈಸಿಲ್ಲ ಎಂದು ಅವರು ಹೇಳಿದರು.
“ಎಫ್ಎಟಿಎಫ್ನ ಪ್ರತಿಯೊಂದು ಸಭೆಯಲ್ಲಿಯೂ ಆಸ್ಟ್ರೇಲಿಯಾ ದೇಶವು ಪಕ್ಕಾ ತಾಂತ್ರಿಕ ಧೋರಣೆಯನ್ನು ಪ್ರದರ್ಶಿಸಿದೆ. ನಾವು ಸಾಧಿಸಬೇಕೆಂದಿರುವುದನ್ನು ಸಾಧ್ಯವಾಗಿಸುವುದಕ್ಕೆ ಇರುವ ಅತ್ಯುತ್ತಮ ಉಪಯುಕ್ತ ವಿಧಾನವಿದು. ನಿಜಕ್ಕೂ ಉತ್ತಮ ಫಲಿತಾಂಶ ಹೊರಬರಬೇಕು ಎಂದು ನಾವು ಬಯಸುತ್ತೇವೆ. ಇದರ್ಥ: ತನ್ನ ಮೇಲೆ ಹೇರಲಾಗಿರುವ ಈ ಮಾನದಂಡಗಳನ್ನು ಪಾಕಿಸ್ತಾನ ಪೂರೈಸಲೇಬೇಕು. ಆದ್ದರಿಂದ, ಸದರಿ ವಿಷಯ ಕುರಿತಂತೆ ನಾವು ತಾಂತ್ರಿಕ ಮಾರ್ಗವನ್ನು ಅನುಸರಿಸುತ್ತಿದ್ದು, ಪಾಕಿಸ್ತಾನದ ಪ್ರಗತಿಯನ್ನು ಗುಣಾತ್ಮಕ ನಿಯಮಗಳ ಆಧಾರದ ಮೇಲೆ ಅಳೆಯುತ್ತೇವೆ. ಅದು ಎಷ್ಟರ ಮಟ್ಟಿಗಿನ ಪ್ರಗತಿ ಸಾಧಿಸಿದೆ ಎಂಬುದನ್ನು ಪರಿಶೀಲಿಸುತ್ತೇವೆ,” ಎಂದು ಸಿಧು ವಿವರಿಸಿದರು.