ರಿಯಾಸಿ (ಜಮ್ಮು ಮತ್ತು ಕಾಶ್ಮೀರ): ಜಿಲ್ಲೆಯಲ್ಲಿನ ಚೆನಾಬ್ ನದಿ ತೀರದಲ್ಲಿ ವಾಸಿಸುತ್ತಿರುವ ಜನರಿಗೆ ತಮ್ಮ ಸ್ಥಳದಿಂದ ದೂರವಿರಲು ಸಲಾಲ್ ವಿದ್ಯುತ್ ಕೇಂದ್ರ ಎಚ್ಚರಿಕೆ ನೀಡಿದೆ.
ಚೆನಾಬ್ ನದಿ ತೀರದ ಜನತೆಗೆ ಮುನ್ನೆಚ್ಚರಿಕೆ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಲಾಲ್ ವಿದ್ಯುತ್ ಕೇಂದ್ರದ ಸೂಚನೆ
ಜಮ್ಮು- ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿನ ಸಲಾಲ್ ಜಲಾಶಯದ ಗೇಟ್ಗಳನ್ನು ತೆರೆಯಲು ನಿರ್ಧರಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ಜನತೆಗೆ ಸ್ಥಳಾಂತರಗೊಳ್ಳಲು ಸಲಾಲ್ ವಿದ್ಯುತ್ ಕೇಂದ್ರದ ಅಧಿಕಾರಿಗಳು ಸೂಚಿಸಿದ್ದಾರೆ.
ಆಗಸ್ಟ್ 22 ರಂದು ಬೆಳಗ್ಗೆ 5:45 ರಿಂದ ಸಂಜೆ 6: 30 ರವರೆಗೆ ಸಲಾಲ್ ಅಣೆಕಟ್ಟೆಯ ಗೇಟ್ಗಳನ್ನು ತೆರೆಯಲು ನಿರ್ಧರಿಸಿದ್ದು, ನದಿ ತೀರದ ಜನರಿಗೆ ಯಾವುದೇ ಹಾನಿ ಉಂಟಾಗಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಗೊಳ್ಳಲು ಎಚ್ಚರಿಕೆ ನೀಡಲಾಗಿದೆ. ಜಲಾಶಯದ ಗೇಟ್ಗಳನ್ನು ತೆರೆದಾಗ ನೀರಿನೊಂದಿಗೆ ಹೂಳು ಸಹ ಹರಿಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಹಾನಿ ಉಂಟಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಸೂಚನೆ ನೀಡಲಾಗಿದೆ.
ಬೆಳಗ್ಗೆಯಿಂದ ಸಂಜೆಯವರೆಗೆ ಅಣೆಕಟ್ಟೆ ಗೇಟ್ಗಳನ್ನು ತೆರೆಯುವುದರಿಂದ ಜಲಾಶಯದ ಕೆಳಭಾಗದಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಬಾರದು ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ಈ ಸೂಚನೆ ನೀಡಲಾಗಿದೆ ಎಂದು ಸಲಾಲ್ ವಿದ್ಯುತ್ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.