ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಭುಗಿಲೆದ್ದ ಆಕ್ರೋಶ, ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತಾಗುವ ಮೊದಲೇ ಅನುಮಾನಾಸ್ಪದ ಎನ್ಕೌಂಟರ್ ಪರಿಸಮಾಪ್ತಿಯಾಗಿದೆ. ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ನ್ಯಾಯ ವ್ಯವಸ್ಥೆ ಎಚ್ಚೆತ್ತುಕೊಳ್ಳಲು ಇರುವ ಕರೆಗಂಟೆಯಾಗಿದೆ.
ಸುಮಾರು 1.67 ಲಕ್ಷ ಅತ್ಯಾಚಾರ ಪ್ರಕರಣಗಳು ದೇಶದ ವಿವಿಧ ಕೋರ್ಟುಗಳಲ್ಲಿ ಬಾಕಿ ಇದ್ದು, ಅವುಗಳಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆಯೇ 1.60 ಲಕ್ಷದಷ್ಟು ಇವೆ. ಈ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು 1000 ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಕೇಂದ್ರ ಕಾನೂನು ಸಚಿವಾಲಯ ಮುಂದಾಗಿದೆ. ಇಂತಹ ಯೋಜನೆಗಳಲ್ಲಿ ರಾಜ್ಯ ಸರ್ಕಾರಗಳು ಮತ್ತು ಸಂಬಂಧಪಟ್ಟ ಹೈಕೋರ್ಟ್ಗಳು ಭಾಗಿಯಾಗುವುದು ಅಗತ್ಯ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ವಿಷಯ ಆಗಿರುವುದರಿಂದ, ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದು. ಅಂತಹ ಯೋಜನೆಗಳಿಗೆ ಧನಸಹಾಯ ನೀಡಲು ಕೇಂದ್ರ ತನ್ನ ಕೆಲ ನಿಯಮಗಳನ್ನು ಸಡಿಲಗೊಳಿಸುವ ಹೊಣೆ ಹೊರಬೇಕಿದೆ.
ಹೆಚ್ಚುತ್ತಿರುವ ಹತಾಶೆಗೆ ಹಲವು ವರ್ಷಗಳ ಕಾಲ ಪರಿಹಾರ ಸಿಗದಿದ್ದಾಗ ಜನರು ತಕ್ಷಣಕ್ಕೆ ದೊರೆಯುವ ತ್ವರಿತ ಹಾಗೂ ದಿಢೀರ್ ಪರಿಹಾರಗಳ ಮೂಲಕ ಸಾಂತ್ವನ ಕಂಡುಕೊಳ್ಳಲು ಮುಂದಾಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನಸಮೂಹ ಬೀದಿನ್ಯಾಯವನ್ನು ಮೆಚ್ಚುತ್ತದೆ ಎಂದಾಗ, ಅದು ಆಡಳಿತ ವೈಫಲ್ಯದ ಪ್ರತೀಕ ಆಗುತ್ತದೆ. ಘಟನೆ ನಡೆದು 7 ವರ್ಷಗಳ ಬಳಿಕವೂ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ. ಅತ್ಯಾಚಾರ ಆರೋಪಿಗಳಿಗೆ 7 ವರ್ಷಗಳ ನಂತರವೂ ಶಿಕ್ಷೆ ನೀಡದಿದ್ದರೆ ನಮ್ಮಲ್ಲಿರುವುದು ಯಾವ ರೀತಿಯ ನ್ಯಾಯ ವಿತರಣಾ ವ್ಯವಸ್ಥೆ? ನ್ಯಾಯದಾನದಲ್ಲಿ ಈ ರೀತಿಯ ವಿಳಂಬ ಧೋರಣೆಯು ತ್ವರಿತ ನ್ಯಾಯಕ್ಕಾಗಿ ಜನರು ಬೇಡಿಕೆ ಇಡುವಂತೆ ಮಾಡುತ್ತದೆ.
ಒಂದೆಡೆ ಕ್ರಿಮಿನಲ್ ಪ್ರಕರಣಗಳ ಆರೋಪಿಗಳು ನಿಗದಿತ ಶಿಕ್ಷೆ ಅನುಭವಿಸಿದ ನಂತರವೂ ವಿಚಾರಣೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ 2 - 3 ತಲೆಮಾರುಗಳ ಬಳಿಕ ಸಿವಿಲ್ ಪ್ರಕರಣಗಳು ಇತ್ಯರ್ಥಗೊಳ್ಳುತ್ತಿವೆ. ಇದು ಗಂಭೀರ ಸಮಸ್ಯೆ. ದೇಶದ ಮೊದಲ ಹಂತದ ನ್ಯಾಯಾಡಳಿತ ವ್ಯವಸ್ಥೆ ಮತ್ತುಜಿಲ್ಲಾ ನ್ಯಾಯಾಲಯಗಳಲ್ಲಿ 3 ಕೋಟಿಗೂ ಹೆಚ್ಚಿನ ಪ್ರಕರಣಗಳು ಬಾಕಿ ಉಳಿದಿದ್ದು ಸಂಖ್ಯೆ ವೃದ್ಧಿಸುತ್ತಲೇ ಇದೆ. ಬಾಕಿ ಇರುವ ಮೊಕದ್ದಮೆಗಳಲ್ಲಿ ಮೂರನೇ ಎರಡರಷ್ಟು ಭಾಗ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ. ಇದು ಪರಿಣಾಮಕಾರಿ ವಿಚಾರಣೆ ಮತ್ತು ಶೀಘ್ರ ವಿಲೇವಾರಿಯ ಕೊರತೆಯ ಸೂಚಕ ಆಗಿದೆ.
ಅಪರಾಧ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಇರುವುದು, ಎರಡು ಕಾರಣಗಳಿಗೆ ಆತಂಕಕಾರಿ ಆಗಿದೆ. ಮೊದಲನೆಯದಾಗಿ, ಅಪರಾಧಕ್ಕೆ ಬಲಿಯಾದ ಬಹುತೇಕರಿಗೆ ನ್ಯಾಯ ದೊರಕುವ ಅವಕಾಶವನ್ನು ಅದು ನಿರಾಕರಿಸುತ್ತದೆ. ಎರಡನೆಯದಾಗಿ, ಕ್ರಿಮಿನಲ್ ಪ್ರಕರಣಗಳ ನಿಧಾನಗತಿಯ ವಿಚಾರಣೆಯಿಂದಾಗಿ, ಹೆಚ್ಚಿನ ಸಂಖ್ಯೆಯ ಕೈದಿಗಳು ಜೈಲುಗಳಲ್ಲಿ ಕೊಳೆಯುವಂತಾಗಿದೆ. ಕೆಲವೊಮ್ಮೆ, ಅವರು ಮಾಡಿದ ಅಪರಾಧಕ್ಕೆ ಸೆರೆವಾಸದ ಶಿಕ್ಷೆ ಅನುಭವಿಸುವುದಕ್ಕಿಂತ ಹೆಚ್ಚಿನ ಸಮಯವನ್ನು ಜೈಲಿನಲ್ಲಿ ಕಳೆದಿರುತ್ತಾರೆ.
ನ್ಯಾಯಾಲಯಗಳಲ್ಲಿ ಅತ್ಯಾಚಾರ ಪ್ರಕರಣಗಳು ಬೃಹತ್ ಪ್ರಮಾಣದಲ್ಲಿ ಬಾಕಿ ಇರುವುದು ನಿಜವಾದ ಸಮಸ್ಯೆ. ತ್ವರಿತ ಗತಿಯ ಕೋರ್ಟ್ಗಳನ್ನು ಸ್ಥಾಪಿಸಿದರೂ ಕೂಡ ಸಮಸ್ಯೆಯ ಒಂದು ಮಗ್ಗಲು ಮಾತ್ರ ಬಗೆಹರಿದಂತಾಗುತ್ತದೆ. ಅತ್ಯಾಚಾರ ಪ್ರಕರಣಗಳಲ್ಲಿ ಕಡಿಮೆ ಪ್ರಮಾಣದ ಶಿಕ್ಷೆ ನೀಡುತ್ತಿರುವುದು ಕೂಡ ಕಾಡುವಂತಹ ಸಂಗತಿ ಆಗಿದ್ದು, ಅಂತಹ ಪ್ರಕರಣಗಳ ಸಂಖ್ಯೆ ಶೇ. 32ರಷ್ಟಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಪರಾಧ ನ್ಯಾಯ ವಿತರಣಾ ವ್ಯವಸ್ಥೆಯ ಪ್ರತಿಯೊಂದು ಬಾಹುವೂ ಮೊಟಕುಗೊಳ್ಳುತ್ತಿದೆ; ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಲು ಪೊಲೀಸರು ವಿಫಲರಾಗುತ್ತಿದ್ದಾರೆ; ಸರ್ಕಾರಿ ದಾವೆಗಳು ಮೊಕದ್ದಮೆಗಳನ್ನು ಗೆಲ್ಲುತ್ತಿಲ್ಲ; ನ್ಯಾಯಾಧೀಶರ ಕೊರತೆಯಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
ಮೇಲಿನ ಕೊನೆಯ ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣ ಎನ್ನುವುದು ಸಮಂಜಸ. ಹೈಕೋರ್ಟಿಗೆ ಮಂಜೂರಾದ ಹುದ್ದೆಗಳಲ್ಲಿ ಶೇ. 38ರಷ್ಟು ಖಾಲಿ ಇರುವುದು ಅಚ್ಚರಿದಾಯಕ ಸಂಗತಿ. 1079 ಹುದ್ದೆಗಳಲ್ಲಿ 410 ಹುದ್ದೆಗಳು ಭರ್ತಿ ಆಗಿಲ್ಲ. ಕಳೆದ ಶುಕ್ರವಾರ, ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಸೂಚಿಸಿದ ಹೆಸರುಗಳನ್ನು ಪರಿಗಣಿಸದೇ ಇರುವುದಕ್ಕೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರ ಆಕ್ಷೇಪಣೆಗಳೊಂದಿಗೆ ವಾಪಸ್ ಕಳುಹಿಸಿದ ಹೆಸರುಗಳನ್ನು ಕೊಲಿಜಿಯಂ ಮತ್ತೆ ಪರಿಗಣಿಸಿದರೆ ಅದನ್ನು ಕೇಂದ್ರ ನಿರಾಕರಿಸಲು ಸಾಧ್ಯ ಇಲ್ಲವೆಂದು ಈಗಾಗಲೇ ಕಾನೂನು ಜಾರಿಗೊಳಿಸಲಾಗಿದೆ. ಹೈಕೋರ್ಟ್ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಖಾಲಿ ಇರುವ ಹುದ್ದೆಗಳು ನ್ಯಾಯದಾನದ ಅಣಕಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಭಾರತೀಯ ಮಹಿಳೆಯರು ಅನಾಗರಿಕ ದುಷ್ಕೃತ್ಯಗಳಿಗೆ ಬಲಿಯಾಗುವುದು ನಿಲ್ಲದೇ ಹೋದರೆ ನ್ಯಾಯ ವಿತರಣಾ ವ್ಯವಸ್ಥೆಗೆ ಸಮಗ್ರ ಪುನಶ್ಚೇತನ ನೀಡಲು ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ನ್ಯಾಯಾಂಗ ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗಲಿದೆ.
ಭಾರತದ ವಿವಿಧ ನ್ಯಾಯಾಲಯಗಳಲ್ಲಿ 3. 5 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಈ ಪ್ರಕರಣಗಳಲ್ಲಿ ಹಲವು 10 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಇತ್ಯರ್ಥ ಆಗಿಲ್ಲ. ಭಾರತದ ಸುಪ್ರೀಂ ಕೋರ್ಟ್, ಹೈಕೋರ್ಟ್ಗಳು ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಅಂದಾಜು ಸಂಖ್ಯೆ ಈ ಕೆಳಗಿನಂತೆ ಇದೆ. ಸಿವಿಲ್ ಪ್ರಕರಣಗಳು ಸುಮಾರು 1.09 ಕೋಟಿ.
ಕ್ರಿಮಿನಲ್ ಪ್ರಕರಣಗಳು ಸುಮಾರು 2.28 ಕೋಟಿ ರಿಟ್ ಅರ್ಜಿಗಳು ಸುಮಾರು 13.1 ಲಕ್ಷ ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ಕಿರಿಯ ನ್ಯಾಯಾಲಯ 3 ರಿಂದ 4 ವರ್ಷಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಮೇಲ್ಮನವಿಯಿಂದಾಗಿ ಹೈಕೋರ್ಟ್ ಮೆಟ್ಟಿಲೇರಿದರೆ ಪ್ರಕರಣ ಇತ್ಯರ್ಥ ಆಗುವ ಸಮಯ ಸುಮಾರು 10 ವರ್ಷಗಳು. ಸಿವಿಲ್ ಸ್ವರೂಪದ ಪ್ರಕರಣ ಸುಪ್ರೀಂ ಕೋರ್ಟ್ಗೆ ಹೋದರೆ ತೀರ್ಪು ಹೊರಬರಲು ತೆಗೆದುಕೊಳ್ಳುವ ಸರಾಸರಿ ಸಮಯ ಸುಮಾರು 10 ವರ್ಷಗಳು. ಅದೇ ಕ್ರಿಮಿನಲ್ ಪ್ರಕರಣವಾದರೆ ಕೆಳ ಹಂತದ ಕೋರ್ಟುಗಳಲ್ಲಿ ಸರಾಸರಿ ಸಮಯ ಎರಡು ವರ್ಷ ಹಿಡಿಯುತ್ತದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರೆ ಅದು ಇತ್ಯರ್ಥಗೊಳ್ಳಲು ಸರಾಸರಿ 5 ರಿಂದ 8 ವರ್ಷಗಳ ಅವಧಿ ಬೇಕಾಗುತ್ತದೆ. ಸಾಕಷ್ಟು ಕಾರಣಗಳು ಬಾಕಿ ಉಳಿಯಲು ಕಾರಣ ಕೆಳ ಹಂತದ ನ್ಯಾಯಾಲಯಗಳಲ್ಲಿ ತಲೆದೋರಿರುವ ನೇಮಕಾತಿ ಕೊರತೆ ಮತ್ತು ಮೂಲ ಸೌಕರ್ಯ ಸಮಸ್ಯೆ.
ಪ್ರತಿ ವರ್ಷ ಕನಿಷ್ಠ 5 ಕೋಟಿ ಪ್ರಕರಣಗಳು ದಾಖಲಾಗುತ್ತವೆ ಮತ್ತು ನ್ಯಾಯಾಧೀಶರು ಕೇವಲ 2 ಕೋಟಿ ಪ್ರಕರಣಗಳ ವಿಲೇವಾರಿ ಮಾಡುತ್ತಾರೆ. ಅದಕ್ಕೆ ಕಾರಣಗಳು ಹೀಗಿವೆ -
1) ಜನ ಸಾಮಾನ್ಯರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿ:
ಇತ್ತೀಚೆಗೆ ಉಂಟಾಗಿರುವ ಸಾಮಾಜಿಕ - ಆರ್ಥಿಕ ಪ್ರಗತಿ ಮತ್ತು ಕಾನೂನು ಹಕ್ಕುಗಳ ಬಗೆಗಿನ ಅರಿವು ಜನ ಸಾಮಾನ್ಯರು ಧೈರ್ಯದಿಂದ ನ್ಯಾಯಾಲಯದ ಮೊರೆ ಹೋಗುವಂತೆ ಮಾಡಿವೆ.
2) ಹೊಸ ಕಾರ್ಯವಿಧಾನಗಳು (ಉದಾ: ಪಿಐಎಲ್) ಮತ್ತು ಹೊಸ ಹಕ್ಕುಗಳು (ಉದಾ: ಆರ್ಟಿಐ):
‘ಮಾಹಿತಿ ಹಕ್ಕು’, ‘ಶಿಕ್ಷಣದ ಹಕ್ಕು’ ಹೀಗೆ ಸರ್ಕಾರ, ಹಕ್ಕುಗಳಿಗೆ ಸ್ಪಷ್ಟ ಕಾಯ್ದೆ ರೂಪಿಸಿದ ನಂತರ ಸಂತ್ರಸ್ತರು ನ್ಯಾಯಾಲಯದ ಕದ ತಟ್ಟುವುದು ಹೆಚ್ಚಿದೆ. ಅಲ್ಲದೆ, ಸಕ್ರಿಯ ನ್ಯಾಯಾಂಗದಿಂದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತಹ ಹೊಸ ಸಾಧನಗಳ ಅನ್ವೇಷಣೆ ಆಗಿದೆ. ಇದರಿಂದಾಗಿ ಪ್ರಕರಣಗಳ ಸಂಖ್ಯೆ ಇನ್ನಷ್ಟು ಅಧಿಕ ಆಗಿದೆ.
3) ಸಾಕಷ್ಟು ನ್ಯಾಯಾಧೀಶರ ಕೊರತೆ: