ಕರ್ನಾಟಕ

karnataka

ETV Bharat / bharat

ಡೆಂಘೀ..ಡೆಂಘೀ..ಡೆಂಘೀ.. ಮಾರಕ ರೋಗದ ಬಗ್ಗೆ ಒಂದು ಸಮಗ್ರ ವರದಿ - A complete report about dengue

ಯಾವಾಗ ಕೇಳಿದರೂ ಅದೇ ಶಬ್ದ ಇದು. ಯಾರಿಗಾದರೂ ಜ್ವರ ಬಂದಾಗ ಅನುಮಾನದ ಮುಳ್ಳು ತಿರುಗುವುದು ಇದರತ್ತಲೇ. ಇದೊಂದು ಸಾಮಾನ್ಯ ಜ್ವರವಾಗಿದ್ದರೂ, ಕೆಲವರ ಪಾಲಿಗೆ ಇದು “ಜೀವಕ್ಕೆ ಮಾರಕ”ವಾಗಿದ್ದು ಏಕೆ? ಜಾಗೃತಿಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಯಾವಾಗ ಅದು ಅಪಾಯಕಾರಿಯಾಗುತ್ತದೆ? ವಿವಿಧ ಹಂತಗಳಲ್ಲಿ ಬೇಕಾಗುವಂತಹ ಚಿಕಿತ್ಸೆಗಳು ಯಾವವು? ಇದನ್ನು ತಡೆಗಟ್ಟುವುದು ಹೇಗೆ?

ಡೆಂಘಿ..ಡೆಂಘಿ..ಡೆಂಘಿ.

By

Published : Nov 11, 2019, 12:52 PM IST

ವೈರಾಣು ರೋಗಗಳ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಪ್ರತಿ ವರ್ಷ ಹವಾಮಾನ ಬದಲಾದಾಗ ಈ ರೀತಿಯ ಸಮಸ್ಯೆಗಳು ಹೆಚ್ಚುತ್ತವೆ. ಆದರೆ, ವರ್ಷದುದ್ದಕ್ಕೂ ಭೀತಿ ಹುಟ್ಟಿಸುವ ಹೊಸ ರೋಗ ಎಂದರೆ ಡೆಂಘಿ. ಇತ್ತೀಚಿನವರೆಗೆ ಅಂದಾಜು 3.3 ಕೋಟಿ ಜನರು ಇದರಿಂದ ಬಾಧಿತರಾಗಿದ್ದಾರೆ. ಇನ್ನು, ಯಾವುದೇ ಲಕ್ಷಣ ಕಾಣಿಸದಿದ್ದರೂ ಅಂದಾಜು 10 ಕೋಟಿಗೂ ಹೆಚ್ಚು ಜನ ರೋಗದಿಂದ ಬಳಲಿದ್ದಾರೆ. ಒಂದು ಕಾಲದಲ್ಲಿ, ಡೆಂಘಿ ಕೇವಲ ನಗರ ಪ್ರದೇಶದ ಮಕ್ಕಳನ್ನು ಮಾತ್ರ ಕಾಡುತ್ತಿತ್ತು. ಈಗ, ವಯಸ್ಸಿನ ಮಿತಿ ಇಲ್ಲದೇ, ಎಲ್ಲಾ ಪ್ರದೇಶದ ಜನರಿಗೂ ಸಮಸ್ಯೆ ಉಂಟು ಮಾಡುತ್ತಿದೆ. ಈ ಮುಂಚೆ, ಸಮಸ್ಯೆ ಉಲ್ಬಣಗೊಂಡಾಗ, ಪ್ಲೆಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತ, ರಕ್ತ ಮಂದವಾಗುವುದು, ರಕ್ತಸ್ರಾವ ಕಾಣಿಸಿಕೊಳ್ಳುತ್ತಿತ್ತು. ಈಗ, ಈ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ, ಮೆದುಳು, ಹೃದಯ ಮತ್ತು ಪಿತ್ತಜನಕಾಂಗಗಳಿಗೆ ತೀವ್ರ (ವಿಲಕ್ಷಣ) ಸಮಸ್ಯೆ ತರುತ್ತಿದೆ. ಹೀಗಾಗಿ ಜನ ಗಾಬರಿಗೆ ಒಳಗಾಗುತ್ತಿದ್ದಾರೆ. ಈ ರೋಗ ಕಣ್ಣುಗಳು ಮತ್ತು ಸಂದುಗಳ ಮೇಲೂ ಪರಿಣಾಮ ಉಂಟು ಮಾಡುತ್ತದೆ. ಹಾಗೆ ನೋಡಿದರೆ, ಶೇ 98ರಷ್ಟು ಡೆಂಘೀ ಕೇವಲ ಜ್ವರವಾಗಿ ಬಂದು ಹೋಗುತ್ತದೆ. ಕೆಲವೊಮ್ಮೆ, ಜನರಿಗೆ ಅದರ ತೀವ್ರತೆಯ ಅರಿವೂ ಆಗಿರುವುದಿಲ್ಲ. ಕೇವಲ ಶೇಕಡಾ ಒಂದರಷ್ಟು ರೋಗಿಗಳಿಗೆ ಮಾತ್ರ ಅದರ ತೀವ್ರತೆ ಉಂಟಾಗುತ್ತದೆ. ಪ್ರಸ್ತುತ ಸಾವಿನ ಪ್ರಮಾಣದಲ್ಲಿ ಈ ವಲಯವೇ ಹೆಚ್ಚು ಸಮಸ್ಯಾತ್ಮಕವಾಗಿರುವುದು. ಸೂಕ್ತ ಚಿಕಿತ್ಸೆ ಪಡೆದುಕೊಂಡರೆ, ಬಹುತೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ ಬಳಸುವುದರ ಮೂಲಕ ಸೋಂಕು ತಗಲದಂತೆ ನೋಡಿಕೊಳ್ಳಬಹುದು. ಡೆಂಘಿ ಕುರಿತು ತಿಳಿವಳಿಕೆ ಹಾಗೂ ಎಚ್ಚರಿಕೆ ರೂಢಿಸಿಕೊಳ್ಳುವುದೇ ಸದ್ಯದ ಅವಶ್ಯಕತೆ.

ಡೆಂಘೀ ಮೂಲ ಎಲ್ಲಿಯದು?

ಫ್ಲಾವಿ ವೈರಸ್‌ ಎಂಬುದು ಡೆಂಘಿ ರೋಗದ ಮೂಲ ಕಾರಣ. ಇದರಲ್ಲಿ ನಾಲ್ಕು ವಿಧಗಳಿವೆ. ಡೆಂಘಿ 1, ಡೆಂಘಿ 2, ಡೆಂಘಿ 3 ಮತ್ತು ಡೆಂಘಿ 4. ಇವೆಲ್ಲ ಹರಡುವುದು ಏಡೀಸ್‌ ಈಜಿಪ್ತಿ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ. ಮೇಲ್ಕಾಣಿಸಿದ ನಾಲ್ಕು ವಿಧದ ಡೆಂಘಿ ಪೈಕಿ ಯಾವುದಾದರೂ ಒಂದರಿಂದ ಜ್ವರ ಬಂದರೂ, ವ್ಯಕ್ತಿಗೆ ಅದೇ ವಿಧದ ಜ್ವರ ಮತ್ತೆ ಬರುವುದಿಲ್ಲ. ಆದರೆ, ಬೇರೆ ರೀತಿಯ ಸೊಳ್ಳೆಗಳ ಕಡಿತದಿಂದ ಜ್ವರ ಬರಬಹುದು. ಅಂದರೆ, ವ್ಯಕ್ತಿಯೊಬ್ಬನಿಗೆ ಅವನ ಜೀವಿತಾವಧಿಯಲ್ಲಿ ಕೇವಲ ನಾಲ್ಕು ಸಲ ಮಾತ್ರ ಡೆಂಘಿ ಬರಬಹುದು ಎಂಬುದು ಇದರರ್ಥ. ಒಂದು ವೇಳೆ ಬೇರೆ ವಿಧದ ವೈರಸ್‌ನಿಂದ ಆತನಿಗೆ ಜ್ವರ ಬಂದರೆ, ಅದು ಗಂಭೀರವಾಗುವ ಸಾಧ್ಯತೆಗಳಿವೆ.

ಸೊಳ್ಳೆ ಕಡಿತಕ್ಕೆ ಒಳಗಾದ ಪ್ರತಿಯೊಬ್ಬರಿಗೂ ಡೆಂಘಿ ಬರುತ್ತದೆಯೇ?

ಇಲ್ಲ. ಕಚ್ಚಿದ ಸೊಳ್ಳೆಯು ಡೆಂಘಿ ತರುವ ವೈರಸ್‌ ಹೊಂದಿದ್ದರೆ ಮಾತ್ರ ಸಮಸ್ಯೆ. ಒಂದು ವೇಳೆ ವೈರಸ್‌ ಇದ್ದರೂ ಸಹ, ಜ್ವರ ಬರುವ ಸಾಧ್ಯತೆಗಳು ಇಲ್ಲ. ಏಕೆಂದರೆ, ಅಂತಹ ವ್ಯಕ್ತಿಗೆ ಹಿಂದೆ ಯಾವಾಗಾದರೂ ಡೆಂಘಿ ಬಂದಿರಬಹುದು. ವೈರಸ್‌ ವಿರುದ್ಧ ಹೋರಾಡುವಂತಹ ಪ್ರತಿರೋಧಕಗಳು ಆತನ ದೇಹದಲ್ಲಿ ಇದ್ದಿರಬಹುದು. ಡೆಂಘಿ ವೈರಸ್‌ ದೇಹವನ್ನು ಪ್ರವೇಶಿಸಿದರೂ, ಜ್ವರದ ಲಕ್ಷಣಗಳು ಎಲ್ಲರಲ್ಲಿಯೂ ಕಾಣುವುದಿಲ್ಲ. ಕೇವಲ ಶೇ10 ರಷ್ಟು ಜನರಲ್ಲಿ ಮಾತ್ರ ರೋಗದ ಲಕ್ಷಣಗಳು ಕಾಣಿಸುತ್ತವೆ. ಉಳಿದವರಲ್ಲಿ ರೋಗದ ಕೇವಲ ಒಂದು ಅಥವಾ ಎರಡು ಲಕ್ಷಣಗಳು ಮಾತ್ರ ಕಾಣಿಸಬಹುದು. ಕೆಲವರು ತೀವ್ರ ತಲೆನೋವು ಮತ್ತು ಮೈ, ಕೈ ನೋವಿನಿಂದ ಬಳಲಬಹುದು.

ಆಸ್ಪತ್ರೆಗೆ ಯಾವಾಗ ದಾಖಲಾಗಬೇಕು?

ಹೊಟ್ಟೆ ನೋವು, ಸತತವಾಗಿ ವಾಂತಿಯಾಗುವುದು, ಹೊಟ್ಟೆ ಮತ್ತು ಎದೆಯಲ್ಲಿ ನೀರು ತುಂಬಿಕೊಳ್ಳುವುದು, ಸುಸ್ತು, ಪಿತ್ತಜನಕಾಂಗದ ಹಿಗ್ಗುವಿಕೆ ಕಾಣಿಸಿಕೊಂಡರೆ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಒಂದು ವೇಳೆ ರಕ್ತದೊತ್ತಡದಲ್ಲಿ ಕುಸಿತವಾದರೆ, ಅನಿಯಂತ್ರಿತ ರಕ್ತಸ್ರಾವ ಪ್ರಾರಂಭವಾದರೆ, ಯಾವುದಾದರೂ ಅಂಗ ವೈಫಲ್ಯದ ಸೂಚನೆಗಳು ಕಂಡುಬಂದರೆ (ಎದೆ ನೋವು, ಉಸಿರಾಟದ ಸಮಸ್ಯೆ, ಮೂರ್ಛೆ ರೋಗ ಇತ್ಯಾದಿ) ಕಂಡುಬಂದರೆ ತಡ ಮಾಡದೇ ಆಸ್ಪತ್ರೆಗೆ ದಾಖಲಿಸಬೇಕು. ಮಧುಮೇಹ, ಅತಿಯಾದ ರಕ್ತದೊತ್ತಡ, ಹೊಟ್ಟೆ ಹುಣ್ಣು, ರಕ್ತ ಹೀನತೆ, ಗರ್ಭಿಣಿಯರು, ಸ್ಥೂಲಕಾಯದವರು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ವೃದ್ಧರನ್ನು ಡೆಂಘಿ ತೀವ್ರವಾಗಿ ಬಾಧಿಸಬಹುದು. ಆದ್ದರಿಂದ, ರೋಗಲಕ್ಷಣಗಳು ಸ್ಪಷ್ಟವಾಗಿರದಿದ್ದರೂ, ಅಂತಹ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು.

ಸಂದರ್ಭಕ್ಕೆ ತಕ್ಕಂತೆ ಚಿಕಿತ್ಸೆ :

ಸಾಧಾರಣ ಜ್ವರಕ್ಕೆ ಪ್ಯಾರಾಸಿಟಮಲ್‌ ಸಾಕಾಗುತ್ತದೆ. ವಾಂತಿ ಇಲ್ಲದಿದ್ದರೆ, ಓಆರ್‌ಎಸ್‌ ದ್ರವವನ್ನು ಕೊಡಬೇಕು. ವಾಂತಿ ಕಡಿಮೆಯಾಗುತ್ತಿದ್ದರೂ, ಓಆರ್‌ಎಸ್‌ ದ್ರವ ನೀಡುವುದನ್ನು ಮುಂದುವರಿಸಬೇಕು. ಮುಖ್ಯವಾಗಿ, ಮಕ್ಕಳನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಒಂದು ವೇಳೆ ಪ್ಲೆಟ್‌ಲೆಟ್‌ ಕೋಶಗಳ ಸಂಖ್ಯೆಯಲ್ಲಿ ಕುಸಿತ, ರಕ್ತದ ಸಾಂದ್ರತೆ ಮಂದವಾಗುವ ಲಕ್ಷಣಗಳು ಕಾಣಿಸಿಕೊಂಡರೆ, ಒಟ್ಟು ರಕ್ತದಲ್ಲಿ ಕೆಂಪು ರಕ್ತಕಣಗಳ ಲಭ್ಯತೆ / ರಕ್ತದ ಒಟ್ಟು ಕೋಶ ಮೊತ್ತದ ಪರೀಕ್ಷೆ ಮಾಡಿಸಬೇಕು. ಪ್ಲೆಟ್‌ಲೆಟ್‌ಗಳ ಸಂಖ್ಯೆ ತಿಳಿಯಲು ರಕ್ತ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಬೇಕು. ಬಾಯಿಂದ ಆಹಾರ ಸೇವನೆ ಸಾಧ್ಯವಾಗದಿದ್ದಾಗ ಅಥವಾ ಹೆಮೊಗ್ಲೊಬಿನ್‌ ಪ್ರಮಾಣ ಹೆಚ್ಚಳವಾದಾಗ ಅಥವಾ ರಕ್ತದೊತ್ತಡದಲ್ಲಿ ಕುಸಿತವಾದಾಗ, ಸಲೈನ್‌ (ಲವಣಯುಕ್ತ ದ್ರಾವಣ) ಹಾಕಿಸಬೇಕು. ಶ್ವಾಸಕೋಶದಲ್ಲಿ ದ್ರವ ಸೋರಿಕೆಯಾಗಿ ಉಸಿರಾಟದ ತೊಂದರೆಗೆ ಒಳಗಾಗಿದ್ದರೆ, ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ಮುಂದುವರಿಸಬೇಕು. ಶ್ವಾಸಕೋಶ ಮತ್ತು ಹೊಟ್ಟೆಯೊಳಗಿನ ದ್ರವವನ್ನು ಹೊರಹಾಕುವ ಯಾವ ಪ್ರಯತ್ನವನ್ನೂ ಮಾಡಬಾರದು. ಹಾಗೇನಾದರೂ ಮಾಡಿದಲ್ಲಿ, ರಕ್ತಸ್ರಾವ ಉಂಟಾಗುವ ಅಪಾಯವಿರುತ್ತದೆ. ಒಂದು ವೇಳೆ ಪಿತ್ತಜನಕಾಂಗ ಮತ್ತು ಹೃದಯ ಘಾಸಿಗೊಂಡಿದ್ದರೆ, ಸೂಕ್ತ ಚಿಕಿತ್ಸೆಯನ್ನು ತಕ್ಷಣ ನೀಡಬೇಕು.

ರಕ್ತ ಮಂದವಾಗುವುದು ತೀವ್ರ ಸಮಸ್ಯೆ :

ಡೆಂಘೀ ಜ್ವರದಲ್ಲಿ, ಪ್ಲೆಟ್‌ಲೆಟ್‌ಗಳ ಸಂಖ್ಯೆಯ ಕುಸಿತಕ್ಕಿಂತ, ರಕ್ತ ಮಂದವಾಗುವುದು ಹೆಚ್ಚು ಅಪಾಯಕಾರಿ ಲಕ್ಷಣ. ರಕ್ತನಾಳಗಳಿಂದ ಪ್ಲಾಸ್ಮಾ ದ್ರವ ಸೋರಿಕೆಯಾಗುವುದೇ ಇದಕ್ಕೆ ಮುಖ್ಯ ಕಾರಣ. ಸಾಮಾನ್ಯವಾಗಿ ರಕ್ತನಾಳಗಳ ಗೋಡೆಗಳಲ್ಲಿ, ಜೀವಕೋಶಗಳು ಒಂದಕ್ಕೊಂದು ಒತ್ತಾಗಿ ಅಂಟಿಕೊಂಡಿರುತ್ತವೆ. ಡೆಂಘಿ ಆಕ್ರಮಣವಾದಾಗ, ಜೀವಕೋಶಗಳೊಂದಿಗೆ ಪರಸ್ಪರ ಸಂವಹನ ಸಾಧ್ಯವಾಗಿಸುವ ರಸಾಯನಿಕಗಳು ಸ್ರವಿಸಲ್ಪಡುತ್ತವೆ. ರಕ್ತಕಣಗಳ ಒಳಗೋಡೆಗಳಲ್ಲಿರುವ ಜೀವಕೋಶಗಳನ್ನು ಇವು ಸ್ಥಳಾಂತರಗೊಳಿಸುವುದರಿಂದ ಅಲ್ಲಿ ಸೂಕ್ಷ್ಮ ರಂಧ್ರಗಳಾಗಿ, ಅವುಗಳ ಮೂಲಕ ದ್ರವ ಸೋರಿಕೆಯಾಗುವುದು. ಹೆಮೊಗ್ಲೊಬಿನ್‌, ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳಂತಹ ಘನ ಪದಾರ್ಥಗಳ ಪ್ರಮಾಣ ಹೆಚ್ಚುವುದರಿಂದ ರಕ್ತದ ಸಾಂದ್ರತೆ ಹೆಚ್ಚುತ್ತದೆ. ಹೀಗೆ ರಕ್ತ ಗಟ್ಟಿಯಾದಾಗ, ರಕ್ತದೊತ್ತಡ ಕುಸಿಯುತ್ತದೆ. ಪರಿಣಾಮವಾಗಿ, ಇತರೆಲ್ಲ ಅಂಗಗಳು ಘಾಸಿಗೊಳ್ಳುತ್ತವೆ ಹಾಗೂ ರೋಗಿ ಆಘಾತಕ್ಕೆ ಈಡಾಗುತ್ತಾನೆ. ಪ್ರಸ್ತುತ ಬಹುತೇಕ ಡೆಂಗೀ ಪ್ರಕರಣಗಳಲ್ಲಿ ಸಾವು ಸಂಭವಿಸುತ್ತಿರುವುದು ಹೀಗೆ.

ಆಸ್ಪತ್ರೆಯಿಂದ ಬಿಡುಗಡೆಯಾಗುವುದು ಯಾವಾಗ?

  • ಪ್ಯಾರಾಸಿಟಮಲ್‌ ಮಾತ್ರೆಗಳನ್ನು ನೀಡದಿರುವಾಗಲೂ ಸತತ ಎರಡು ದಿನಗಳ ಕಾಲ ಯಾವುದೇ ಜ್ವರ ಇಲ್ಲದಿದ್ದಾಗ.
  • ಬಾಯಿರುಚಿ ಮತ್ತೆ ವಾಪಾಸಾದಾಗ.
  • ನಾಡಿ ಗತಿ, ಉಸಿರಾಟ ಗತಿ, ಮತ್ತು ರಕ್ತದೊತ್ತಡ ಸಹಜಸ್ಥಿತಿಗೆ ಮರಳಿದಾಗ.
  • ಮೂತ್ರವಿಸರ್ಜನೆ ಸರಾಗವಾದಾಗ.
  • ಸಹಜ ಸ್ಥಿತಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿರಬೇಕಾದ ಪ್ಲೆಟ್‌ಲೆಟ್‌ಗಳ ಸಂಖ್ಯೆ ಕನಿಷ್ಠ 50,000 ಕ್ಕಿಂತ ಹೆಚ್ಚಾದಾಗ.
  • ಸಲೈನ್‌ ನೀಡದಿದ್ದಾಗೂ ಹೆಮಟೊಕ್ರಿಟ್‌ ಮಟ್ಟ ಸಾಮಾನ್ಯ ಸ್ಥಿತಿಯಲ್ಲಿ ಇದ್ದಾಗ.

ಗುಣಮುಖ ಹಂತ ಯಾವಾಗ?

ಜ್ವರ ಇಳಿದ ನಂತರ, 3-5 ದಿನಗಳಲ್ಲಿ ಪ್ಲೆಟ್‌ಲೆಟ್‌ಗಳ ಸಂಖ್ಯೆ ಹೆಚ್ಚಾಗುವುದು. ನಾಡಿಗತಿ, ರಕ್ತದೊತ್ತಡ, ಉಸಿರಾಟ ಸಹಜ ಸ್ಥಿತಿಗೆ ಬರುತ್ತವೆ. ವಾಂತಿ ಇರುವುದಿಲ್ಲ, ಹೊಟ್ಟೆನೋವು ನಾಪತ್ತೆಯಾಗುವುದು, ಬಾಯಿರುಚಿ ಹೆಚ್ಚುವುದು, ಮೂತ್ರವಿಸರ್ಜನೆ ಸರಾಗವಾಗವುದು, ಹೆಮೊಗ್ಲೊಬಿನ್‌ ಮಟ್ಟ ಸ್ಥಿರವಾಗುವ ಲಕ್ಷಣಗಳೆಲ್ಲ ಜ್ವರ ಇಳಿಯುತ್ತಿರುವುದರ ಸಂಕೇತಗಳು. ಕೆಲವರಲ್ಲಿ, ಚರ್ಮದ ಕೀವು ಗುಳ್ಳೆಗಳು ಮಾಯವಾಗಬಹುದು ಮತ್ತು ತುರಿಕೆ ಹೆಚ್ಚಬಹುದು. ಇದಕ್ಕಾಗಿ ಭಯಪಡಬೇಕಿಲ್ಲ.

ವಿವಿಧ ರೀತಿಯ ಲಕ್ಷಣಗಳು :

ಸೊಳ್ಳೆ ಕಡಿತದ ನಂತರ 3-14 ದಿನಗಳಲ್ಲಿ ಡೆಂಘಿ ಸೋಂಕು ಕಾಣಿಸಿಕೊಳ್ಳಬಹುದು. ಇದರಲ್ಲಿ ಪ್ರಾರಂಭಿಕ, ಗಂಭೀರ ಹಾಗೂ ಗುಣಮುಖ ಎಂಬ ಹಂತಗಳಿರುತ್ತವೆ. ಮೊದಲ ಹಂತದಲ್ಲಿ 5 ದಿನಗಳು ಹಾಗೂ ಗಂಭೀರ ಹಂತದಲ್ಲಿ 2-3 ದಿನಗಳಿರುತ್ತವೆ.

ಮೊದಲ ಹಂತದಲ್ಲಿ:

  • ಇದ್ದಕ್ಕಿದ್ದಂತೆ ತೀವ್ರ ಜ್ವರ
  • ತೀವ್ರ ತಲೆನೋವು
  • ಕಣ್ಣುಗಳ ಹಿಂದೆ ನೋವು
  • ವಾಂತಿ, ವಾಕರಿಕೆ
  • ಬಾಯಿರುಚಿ ಇಲ್ಲವಾಗುವುದು

ಗಂಭೀರ ಹಂತದಲ್ಲಿ:

  • ಹೊಟ್ಟೆನೋವು, ಉಸಿರಾಟದ ತೊಂದರೆ
  • ಹೊಟ್ಟೆ ಅಥವಾ ಎದೆಯಲ್ಲಿ ನೀರು ತುಂಬಿಕೊಳ್ಳುವುದು
  • ಪದೆಪದೇ ವಾಂತಿಯಾಗುವುದು
  • ವಸಡಿನಂತಹ ಸ್ಥಳಗಳಲ್ಲಿ ರಕ್ತಸ್ರಾವ
  • ಚರ್ಮದ ಮೇಲೆ ಕೆಂಪು ಕಲೆಗಳು
  • ರಕ್ತದೊತ್ತಡ ಕುಸಿತ, ಪ್ರಜ್ಞಾಹೀನತೆ
  • ಕೈಗಳು ಮತ್ತು ಕಾಲುಗಳು ತಣ್ಣಗಾಗುವುದು
  • ನಿಶ್ಯಕ್ತಿ ಮತ್ತು ಚಡಪಡಿಕೆ
  • ಕಿರಿಕಿರಿ, ತೂಕಡಿಕೆ
  • ಪಿತ್ತಜನಕಾಂಗದ ಹಿಗ್ಗುವಿಕೆ
  • ದೇಹದಲ್ಲಿ ಹೆಮೊಗ್ಲೊಬಿನ್‌ ಹೆಚ್ಚಳ
  • ಪ್ಲೆಟ್‌ಲೆಟ್‌ಗಳ ಸಂಖ್ಯೆಯಲ್ಲಿ ತೀವ್ರ ಕುಸಿತ

ರೋಗಪತ್ತೆ ಹೇಗೆ?

ಜ್ವರ ಕಾಣಿಸಿಕೊಂಡ ನಂತರ ಎಸ್‌ಎಸ್‌1 ಆಂಟಿಜೆನ್‌ ಪರೀಕ್ಷೆಯನ್ನು ನಡೆಸಬೇಕು. ಒಂದು ವೇಳೆ ಫಲಿತಾಂಶ ಧನಾತ್ಮಕವಾದರೆ, ರೋಗಿಗೆ ಡೆಂಘಿ ಬಂದಿದೆ ಎಂದರ್ಥ. ಒಂದು ವೇಳೆ ಇದು 5 ದಿನಗಳ ನಂತರ ಆಗಿದ್ದರೆ, ಐಜಿಎಂ ಆಂಟಿಬಾಡಿ ಟೆಸ್ಟ್‌ ಮಾಡಿಸಬೇಕು. ಏಕೆಂದರೆ, ಎಸ್‌ಎಸ್‌1 ಆಂಟಿಜೆನ್‌ ಈ ಹಂತದಲ್ಲಿ ಗೋಚರಿಸದು. ಒಂದು ವೇಳೆ ಐಜಿಎಂ ಧನಾತ್ಮಕವಾದರೆ, ಡೆಂಘಿ ಇನ್ನೂ ಇದೆ ಎಂದರ್ಥ. ಕ್ಷಿಪ್ರ ರೋಗಪತ್ತೆ ಪರೀಕ್ಷೆಗಳಲ್ಲಿ ಡೆಂಘಿ ಧನಾತ್ಮಕವಾಗಿದ್ದರೂ, ದೃಢಪಡಿಸಿಕೊಳ್ಳಲು ನಿಗದಿತ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲೇಬೇಕು. ಅವಶ್ಯ ಬಿದ್ದರೆ, ಐಜಿಜಿ ಆಂಟಿಬಾಡಿ ಪರೀಕ್ಷೆಯನ್ನು ನಡೆಸಬೇಕು. ಈ ಮುಂಚೆ ಡೆಂಘಿ ಬಾಧಿತರಾಗಿದ್ದರೆ, ಇದು ಧನಾತ್ಮಕವಾಗಿರುತ್ತದೆ. ಅಂದರೆ, ಡೆಂಘಿ ಎರಡನೇ ಅಥವಾ ಮೂರನೇ ಸಲ ಬಂದಿದೆ ಎಂದರ್ಥ. ಇಂತಹ ಡೆಂಘಿ ಅಪಾಯಕಾರಿಯಾಗಿರುವುದರಿಂದ, ಐಜಿಜಿ ಪರೀಕ್ಷೆಯನ್ನು ಹೆಚ್ಚಿನ ಎಚ್ಚರಿಕೆಯಿಂದ ನಡೆಸಬೇಕು.

ಮಾಡುವುದು ಮತ್ತು ಮಾಡದಿರುವುದು :

  • ಜ್ವರ ತಗ್ಗಿಸಲು ಪ್ಯಾರಾಸಿಟಮಲ್‌ ತೆಗೆದುಕೊಳ್ಳಬಹುದು.
  • ನೋವು ನಿವಾರಕಗಳಾದ ಬ್ರುಫೆನ್‌, ಅನಾಲ್ಜಿನ್‌, ಡೈಕ್ಲೊಫೆನ್ಯಾಕ್‌, ಆಸ್ಪಿರಿನ್‌ಗಳಂತಹ ಔಷಧಗಳನ್ನು ಬಳಸಬಾರದು.
  • ಚುಚ್ಚುಮದ್ದನ್ನು (ಇಂಜೆಕ್ಷನ್)‌ ತೆಗೆದುಕೊಳ್ಳಬಾರದು.
  • ಆಂಟಿಬಯಾಟಿಕ್‌, ಆಂಟಿವೈರಲ್‌ ಔಷಧಿಗಳನ್ನು ತೆಗೆದುಕೊಳ್ಳಬಾರದು.
  • ಅವಶ್ಯವಿಲ್ಲದ್ದರೆ ರಕ್ತ, ಪ್ಲೆಟ್‌ಲೆಟ್‌ಗಳು, ಸಲೈನ್‌ಗಳನ್ನು ಹಾಕಿಸಿಕೊಳ್ಳಬಾರದು. ಈ ಕುರಿತು ವೈದ್ಯರ ಮೇಲೆ ಒತ್ತಡ ಹೇರಬಾರದು.
  • ಸಾಕಷ್ಟು ದ್ರವವನ್ನು ತೆಗೆದುಕೊಳ್ಳಬೇಕು.
  • ಸಾಕಷ್ಟು ವಿಶ್ರಾಂತಿ ಪಡೆಯಬೇಕು.
  • ಜ್ವರ ಇಳಿದ ನಂತರ, ಹೆಚ್ಚಿನ ಎಚ್ಚರಿಕೆ ವಹಿಸಬೇಕು.
  • ಹಣ್ಣು ಮತ್ತು ಹಣ್ಣಿನ ರಸವನ್ನು ಅನಗತ್ಯವಾಗಿ ತೆಗೆದುಕೊಳ್ಳಬಾರದು. ಅವುಗಳ ಮೂಲಕ ರಕ್ತದಲ್ಲಿ ಪೊಟ್ಯಾಷಿಯಂ ಮಟ್ಟ ಹೆಚ್ಚಿ, ಹೃದಯ ಬಡಿತ ಏರುಪೇರಾಗುತ್ತದೆ.
  • ಜ್ವರ ಇನ್ನೂ ಇದ್ದು, ವಾಂತಿ ಇಲ್ಲದಿದ್ದಾಗ ಹಾಗೂ ಆಹಾರ ಸೇವಿಸಲು ರೋಗಿ ಸಮರ್ಥನಿದ್ದಾಗ, ಆಹಾರವನ್ನು ಸೇವಿಸಬಹುದು.
  • ಜ್ವರ ಇಳಿದ ನಂತರ, ಸಹಜ ಆಹಾರವನ್ನು ಸೇವಿಸಬಹುದು. ಪಥ್ಯಾಹಾರದ ಅವಶ್ಯಕತೆ ಇಲ್ಲ.
  • ಪಪ್ಪಾಯದ ಎಲೆಗಳು / ಹಣ್ಣಿನ ರಸ ಪ್ಲೆಟ್‌ಲೆಟ್‌ ಕೋಶಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಆದರೆ, ಅವು ಡೆಂಘಿಯನ್ನು ತಗ್ಗಿಸುವ ಪ್ರಮಾಣದಲ್ಲಿ ಹೆಚ್ಚಲಾರವು. ಆದ್ದರಿಂದ, ಅವುಗಳ ಮೇಲಷ್ಟೇ ಪೂರ್ತಿ ಅವಲಂಬನೆಯಾಗಿ, ಚಿಕಿತ್ಸೆ ಪಡೆಯುವುದನ್ನು ಯಾರೂ ಬಿಡಬಾರದು.

ಜ್ವರ ಇಳಿದ ನಂತರ ಹೆಚ್ಚು ಅಪಾಯ :

ಜ್ವರ ತೀವ್ರವಾಗಿರುವಾಗ ಮಾತ್ರ ಆಸ್ಪತ್ರೆಯಲ್ಲಿರಬೇಕು ಎಂದು ತುಂಬಾ ಜನ ಭಾವಿಸುತ್ತಾರೆ. ಒಮ್ಮೆ ಜ್ವರ ಇಳಿಯಿತೋ, ಮನೆಗೆ ಕರೆದೊಯ್ಯುವಂತೆ ಹಠ ಹಿಡಿಯುತ್ತಾರೆ. ವಾಸ್ತವವಾಗಿ, ನಿಜವಾದ ಅಪಾಯ ಪ್ರಾರಂಭವಾಗುವುದೇ ಜ್ವರ ಸಹಜ ಸ್ಥಿತಿಗೆ ಹಿಂದಿರುಗಿದ ನಂತರ. ರಕ್ತದೊತ್ತಡ, ಪ್ಲೆಟ್‌ಲೆಟ್‌ಗಳ ಸಂಖ್ಯೆಯಲ್ಲಿ ಇಳಿಕೆ ಪ್ರಾರಂಭವಾಗುವುದೇ ಈ ಸಮಯದಲ್ಲಿ. ಆದ್ದರಿಂದ, ಜ್ವರ ಇಳಿದಿದೆ ಎಂಬ ಕಾರಣಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಯಾರೂ ಭಾವಿಸಬಾರದು. ಆಗ ನಾವು ಇನ್ನಷ್ಟು ಜಾಗರೂಕರಾಗಿರಬೇಕು.

ಪ್ಲೆಟ್‌ಲೆಟ್‌ಗಳನ್ನು ಯಾವಾಗ ನೀಡಬೇಕು? ಯಾರಿಗೆ ನೀಡಬೇಕು?

ಪ್ರತಿಯೊಬ್ಬ ಡೆಂಘಿ ಪೀಡಿತನಿಗೂ ಪ್ಲೆಟ್‌ಲೆಟ್‌ಗಳನ್ನು ನೀಡಬೇಕಾದ ಅವಶ್ಯಕತೆ ಇಲ್ಲ. ಪ್ಲೆಟ್‌ಲೆಟ್‌ಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆಯಾದಾಗ, ಅವರನ್ನು ವೈದ್ಯರ ಸುಪರ್ದಿಯಲ್ಲಿ ಇರಿಸಬೇಕು. ಒಂದು ವೇಳೆ ಪ್ಲೆಟ್‌ಲೆಟ್‌ಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆಯಾದರೆ, ಆಗ ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು ಮತ್ತು ತೀವ್ರ ನಿಗಾ ವಹಿಸಬೇಕು. ಒಂದು ವೇಳೆ ಪ್ಲೆಟ್‌ಲೆಟ್‌ಗಳ ಸಂಖ್ಯೆ 20 ಸಾವಿರಕ್ಕಿಂತ ಕಡಿಮೆಯಾಗಿ, ರಕ್ತಸ್ರಾವದ ಲಕ್ಷಣಗಳು ಕಾಣಿಸಿಕೊಂಡ ಸಂದರ್ಭದಲ್ಲಿ, ಆಗ ಪ್ಲೆಟ್‌ಲೆಟ್‌ಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ಅದು 10 ಸಾವಿರಕ್ಕೆ ಕುಸಿದರೆ, ರಕ್ತಸ್ರಾವ ಇರಲಿ ಇಲ್ಲದಿರಲಿ, ಪ್ಲೆಟ್‌ಲೆಟ್‌ಗಳನ್ನು ನೀಡಬೇಕು.

ಮುನ್ನೆಚ್ಚರಿಕೆ ಮಹತ್ವದ್ದು:

ಡೆಂಘಿಯಿಂದ ತೊಂದರೆಗೆ ಒಳಗಾಗುವುದಕ್ಕಿಂತ ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ. ಸೊಳ್ಳೆಗಳು ನಮ್ಮನ್ನು ಕಚ್ಚದಂತೆ ನೋಡಿಕೊಳ್ಳುವ ಮೂಲಕ ನಾವು ಡೆಂಘಿ ಬಾರದಂತೆ ಪೂರ್ತಿಯಾಗಿ ತಡೆಗಟ್ಟಬಹುದು. ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಬೇಕು. ಹೊರಗೆ ಹೋಗುವಾಗ ತುಂಬುತೋಳಿನ ಅಂಗಿ ಮತ್ತು ಪ್ಯಾಂಟ್‌ ಧರಿಸಬೇಕು. ಸೊಳ್ಳೆ ನಿರೋಧಕ ಮುಲಾಮನ್ನು ಕೈಗಳು ಮತ್ತು ಕಾಲುಗಳಿಗೆ ಲೇಪಿಸಿಕೊಳ್ಳಬೇಕು.

ABOUT THE AUTHOR

...view details