ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ 10 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರ ಸ್ಥಿತಿ ಗಂಭೀರವಾಗಿದೆ. ವಿಷಾನಿಲ ಸೋರಿಕೆಯಾಗುತ್ತಿದ್ದಂತೆ ಜನರು ತಾವು ನಿಂತಿದ್ದ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ಇನ್ನು ಪ್ರಾಣಿ ಪಕ್ಷಿಗಳ ರೋದನ ಹೇಳತೀರದಾಗಿದೆ.
ದುರಂತದ ಮನಕಲಕುವ ದೃಶ್ಯಗಳು: ರಸ್ತೆ ಬದಿ ಕುಸಿದು ಬಿದ್ದ ಜನ, ತುಂಬಿದ ಆಸ್ಪತ್ರೆ, ಪ್ರಾಣಿಪಕ್ಷಿಗಳು ವಿಲವಿಲ!
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇಂದು ಬೆಳ್ಳಂಬೆಳಗ್ಗೆ ವಿಷಾನಿಲ ಸೋರಿಕೆಯಾಗಿ ಘನಘೋರ ದುರಂತ ಸಂಭವಿಸಿದೆ. ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜನರು ತಾವಿದ್ದ ಸ್ಥಳದಲ್ಲೇ ಕುಸಿದು ಬಿದ್ದರು. ಪಕ್ಷಿಗಳು ವಿಲವಿಲ ಒದ್ದಾಡಿ ಪ್ರಾಣಬಿಟ್ಟವು. ಜನರು ವಿಷ ಗಾಳಿ ಸೇವಿಸಿ ಉಸಿರಾಟದ ತೊಂದರೆ ಅನುಭವಿಸಿದರು. ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ಪ್ರಾಣಿಗಳು ಉಸಿರುಗಟ್ಟಿ ಸ್ಥಳದಲ್ಲೇ ಅಸುನೀಗಿದವು. ಆಸ್ಪತ್ರೆಗಳು ರೋಗಿಗಳಿಂದ ತುಂಬಿತುಳುಕುತ್ತಿವೆ. ಈ ದುರಂತ 1984ರಲ್ಲಿ ಮಧ್ಯ ಪ್ರದೇಶದ ಭೋಪಾಲ್ನಲ್ಲಿ ನಡೆದ ದೇಶದ ಇತಿಹಾಸ ಕಂಡರಿಯದ ಅನಿಲ ದುರಂತವನ್ನು ನೆನಪಿಸುವಂತಿದೆ.
Visakhapatnam LG polymers
ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿಷಾನಿಲ ಸೋರಿಕೆಯಿಂದಾಗಿ ಸಾವಿರಾರು ಜನರು ಅನಾರೋಗ್ಯಕ್ಕೊಳಗಾಗಿದ್ದು, ಇದರಲ್ಲಿ ಹೆಚ್ಚಿನವರು ಮಕ್ಕಳು ಎಂದು ತಿಳಿದು ಬಂದಿದೆ. ದುರ್ಘಟನೆಯಲ್ಲಿ ಈಗಾಗಲೇ 10 ಮಂದಿ ಸಾವನ್ನಪ್ಪಿದ್ದು, ಈ ಪ್ರದೇಶದಲ್ಲಿನ ಅದೆಷ್ಟೋ ಪ್ರಾಣಿ-ಪಕ್ಷಿಗಳು ಜೀವ ಕಳೆದುಕೊಂಡಿವೆ.
Last Updated : May 7, 2020, 3:13 PM IST