ಮುಂಬೈ:ಟ್ರಾಫಿಕ್ ಪೊಲೀಸರ ಜೀವಕ್ಕೇ ಇತ್ತೀಚೆಗೆ ರಕ್ಷಣೆ ಇಲ್ಲದಂತಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಕರ್ತವ್ಯನಿರತನಾಗಿದ್ದ ಟ್ರಾಫಿಕ್ ಪೊಲೀಸಪ್ಪನನ್ನೇ ಕುಡುಕರು ಕಿಡ್ನ್ಯಾಪ್ ಮಾಡಿ, ಸಿಟಿ ರೌಂಡ್ಸ್ ಹೊಡೆಸಿದ್ದಾರೆ.
ಜುಲೈ 16ರಂದು ಈ ಘಟನೆ ನಡೆದಿದ್ದು, ವಿಕಾಸ್ ಮುಂಡೆ ಎಂಬಾತ ಅಪಹರಣಗೊಂಡಿದ್ದ ಪೊಲೀಸ್ ಪೇದೆ. ಪೂರ್ವ ಮುಂಬೈ ಚೆಂಬೂರ ಪ್ರದೇಶದ ಛೇಡಾನಗರದ ರಸ್ತೆ ಮಧ್ಯೆ ಕಡು ಬೂದು ಕಲರ್ನ ಹೊಂಡಾ ಸಿಟಿ ಕಾರೊಂದು ನಿಂತಿತ್ತು. ಇದರಿಂದಾಗಿ ಸ್ಥಳದಲ್ಲಿ ಸಂಚಾರ ದಟ್ಟಣೆಯಾಗಿತ್ತು.
ಇದನ್ನ ಕ್ಲಿಯರ್ ಮಾಡಲು ಮುಂಡೆ ಸ್ಥಳಕ್ಕೆ ಧಾವಿಸಿದ್ದರು. ಲಾಕ್ ಮಾಡಿದ್ದ ಕಾರಿನ ವಿಂಡೋಗಳನ್ನ ಬಡಿದು ಅದರಲ್ಲಿದ್ದವರನ್ನ ಮಾತನಾಡಿಸಿದ್ದರು. ಅದರೊಲ್ಲಬ್ಬ ಗ್ಲಾಸ್ ಕೆಳಗಿಳಿಸಿದ್ದ. ಆಗ ಪೊಲೀಸನ ಮುಖಕ್ಕೆ ಕೆಟ್ಟ ಮದ್ಯದ ವಾಸನೆ ಬಡಿದಿತ್ತು. ಕಾರೊಳಗೆ ಖಾಲಿ ಬಿಯರ್ ಬಾಟಲ್ಗಳು ಬಿದ್ದಿದ್ವು. ಕಾರನ್ನ ರಸ್ತೆಯ ಸೈಡ್ಗೆ ಹಾಕುವಂತೆ ಡ್ರೈವರ್ಗೆ ಪೊಲೀಸ್ ಹೇಳಿದ್ದ. ಇಷ್ಟಾಗ್ತಿದ್ದಂತೆಯೇ ಮೂವರೂ ಅಲುಗಾಡ್ತಾನೆ ಕಾರಿನಿಂದ ಕೆಳಗಿಳಿದು ಪೊಲೀಸಪ್ಪನ ಜತೆಗೇ ವಾಗ್ವಾದಕ್ಕಿಳಿದರು.
ಪೊಲೀಸಪ್ಪನಿಗೆ ಅಶ್ಲೀಲ ಪದಗಳಿಂದ ನಿಂದನೆ, ಹಲ್ಲೆ!
ಅಶ್ಲೀಲವಾಗಿ ಬೈಯ್ದು ಪೇದೆಯನ್ನು ಎಳೆದಾಡಿದ ಕುಡುಕರು ಕೊನೆಗೆ ಕಾರಿನೊಳಗೆ ನೂಕಿದರು. ವಿಪರೀತ ವೇಗವಾಗಿ ಕಾರನ್ನ ಓಡಿಸಿದರು. ಕಾರಿನಲ್ಲಿಯೇ ಪೊಲೀಸ್ ಪೇದೆಯನ್ನ ಕೂರಿಸಿಕೊಂಡು ಇಡೀ ಸಿಟಿ ರೌಂಡ್ಸ್ ಹೊಡೆಸಿದ್ದಾರೆ. ಕೊನೆ ವಿಷಯ ಸ್ಥಳದಲ್ಲಿದ್ದ ಇತರ ಪೊಲೀಸರಿಗೆ ತಿಳಿದಿದೆ. ಅವರು ತಕ್ಷವೇ ವಾಕಿಟಾಕಿ ಮೂಲಕ ಪೊಲೀಸ್ ಕಂಟ್ರೋಲ್ ರೂಮ್ಗೆ ಮೆಸೇಜ್ ನೀಡಿದ್ದಾರೆ. ತಕ್ಷಣವೇ ವಿಕ್ರೋಲಿ ಸಂಚಾರಿ ಠಾಣೆ ಪೊಲೀಸರು ಕುಡುಕರಿದ್ದ ಕಾರನ್ನ ಚೇಸ್ ಮಾಡಿದ್ದಾರೆ.
ಸಿಗ್ನಲ್ನಲ್ಲೇ ಸಿಕ್ಕಿಬಿದ್ದ ಇಬ್ಬರು ಕುಡುಕರು, ಇನ್ನೊಬ್ಬ ಎಸ್ಕೇಪ್..
ಘಾಟ್ಕಪುರದ ವಾಯವ್ಯ ಎಕ್ಸ್ಪ್ರೆಸ್ ಹೈವೇಯಿಂದ 3 ಕಿ.ಮೀ ದೂರದಲ್ಲಿರುವ ಟ್ರಾಫಿಕ್ ಸಿಗ್ನಲ್ಸ್ನಲ್ಲಿ ಕಾರನ್ನ ಪೊಲೀಸರು ತಡೆ ಹಿಡಿದಿದ್ದಾರೆ. ಕಾರನ್ನ ಸೀಜ್ ಮಾಡಿದ್ದಲ್ಲದೇ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ, ಇನ್ನೊಬ್ಬ ದುಷ್ಕರ್ಮಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ.
21 ವರ್ಷದ ವಿರಾಜ್ ಶಿಂಧೆ ಮತ್ತು 22ರ ಹರೆಯದ ಗೌರವ್ ಪಂಜವಾಣಿ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಅಂತಾ ತಿಲಕನಗರ ಪೊಲೀಸ್ ಠಾಣೆ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಪಿ ಕಾಂಬ್ಳೆ ಹೇಳಿದ್ದಾರೆ. ತಪ್ಪಿಸಿಕೊಂಡ ಇನ್ನೊಬ್ಬ ಆರೋಪಿ ರಾಜ್ ಸಿಂಗ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹೇಳಿಕೆ ನೀಡೋಕಾಗದಷ್ಟು ಆರೋಪಿಗಳು ಸಿಕ್ಕಾಪಟ್ಟೆ ಕುಡಿರೋದು ಪತ್ತೆಯಾಗಿದೆ. ಮೋಟರ್ ವೆಹಿಕಲ್ ಆ್ಯಕ್ಟ್ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.