ಲಖನೌ:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಇಬ್ಬರು ಹಿರಿಯ ಸಚಿವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೋತಿ ಸಿಂಗ್ ಎಂದೇ ಪ್ರಸಿದ್ಧರಾಗಿರುವ ಉತ್ತರ ಪ್ರದೇಶ ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಸೋಂಕಿಗೆ ಒಳಗಾಗಿದ್ದು, ಅವರನ್ನು ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಸ್ಜಿಪಿಜಿಐಎಂಎಸ್) ದಾಖಲಿಸಲಾಗಿದೆ. ಸಚಿವರ ಪತ್ನಿ, ಮಗ, ಸೊಸೆ ಮತ್ತು ಮೊಮ್ಮಕ್ಕಳು ಎಲ್ಲರ ಕೋಬಿಡ್ ಪರೀಕ್ಷಾ ವರದಿ ಕೂಡ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಲಖನೌ ಸಿಎಂಒ ನರೇಂದ್ರ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಆಯುಷ್ ಸಚಿವಾಲಯ ಮುಖ್ಯಸ್ಥ ಧರಮ್ ಸಿಂಗ್ ಸೈನಿ ಅವರಿಗೂ ಸೋಂಕು ದೃಢಪಟ್ಟಿದ್ದು, ಅವರನ್ನು ಪಿಲಖ್ನಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ 27 ಜನರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಹರಾನ್ಪುರದ ಸಿಎಂಒ ಬಿಎಸ್ ಸೋಧಿ ತಿಳಿಸಿದ್ದಾರೆ.