ಹೈದಾರಾಬಾದ್:ತೆಲಂಗಾಣದಲ್ಲಿ ಹೊಸದಾಗಿ 10 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ. ಈ ಬಗ್ಗೆ ಹೈದಾರಾಬಾದ್ನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಒಟ್ಟು ಪಾಸಿಟಿವ್ ಬಂದಿರುವವರ ಸಂಖ್ಯೆ 59 ಆಗಿದೆ. ಇದರಲ್ಲಿ ಓರ್ವರು ಗುಣಮುಖರಾಗಿ ಹೋಗಿದ್ದಾರೆ. ಸದ್ಯ 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜೊತೆಗೆ 20 ಸಾವಿರ ಮಂದಿ ಹೋಂ ಕ್ವಾರಂಟೈನ್ ಹಾಗೂ ಸರ್ಕಾರ ವ್ಯವಸ್ಥೆ ಮಾಡಿರುವ ಇತರೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಬಗ್ಗೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಜನ ನಮಗೆ ಉತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಒಂದೇ ದಿನ 10 ಮಂದಿಗೆ ಕೊರೊನಾ: ಕೆಸಿಆರ್ ಕೋವಿಡ್ ಸೋಂಕಿತರ ಪೈಕಿ ಹೆಚ್ಚು ಮಂದಿ ವಿದೇಶಿದಿಂದ ಬಂದವರೇ ಆಗಿದ್ದಾರೆ. ಅದರಲ್ಲಿ ಒಂದಿಬ್ಬರು ಸ್ಥಳೀಯರಿದ್ದಾರೆ. ಅವರು ಕೂಡ ವಿದೇಶದಿಂದ ಬಂದಿರುವವರ ಕುಟುಂಬಸ್ಥರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೆ ದೇಶದಿಂದ ಬಂದವರು ತಮ್ಮ ಕುಟುಂಬದವರಿಗೂ ಸೋಂಕನ್ನು ಹರಡಿಸಿದ್ದಾರೆ. ಓರ್ವ ವ್ಯಕ್ತಿ ದುಬೈನಿಂದ ಸಿಕಂದಾರಾಬಾದ್ಗೆ ಬಂದಿದ್ದಾನೆ. ಅವರಿಂದ ಮಗನಿಗೆ ಸೋಂಕು ತಗುಲಿದೆ. ಆದ್ರೆ ಸೋಂಕು ಇರೋದು ಅವರಿಗೆ ಗೊತ್ತಿರುವುದಿಲ್ಲ. ಎಲ್ಲಾ ಪ್ರಕರಣ ಇದೇ ರೀತಿ ಆಗಿವೆ ಎಂದಿದ್ದಾರೆ. ಕೋವಿಡ್ಗೆ ಇಲ್ಲಿ ತನಕ ಔಷಧಿ ಕಂಡು ಹಿಡಿದಿಲ್ಲ. ಹೀಗಾಗಿ ಇದು ಹರಡುವುದನ್ನ ತಡೆಯವುದೇ ದೊಡ್ಡ ಔಷಧಿ ಅಂತ ಸಿಎಂ ಕೆಸಿಆರ್ ಹೇಳಿದ್ದಾರೆ.
ರಾಜ್ಯದಲ್ಲಿ ಯಾವುದೇ ಖಾಸಗಿ ಆಸ್ಪತ್ರೆ, ಸಂಸ್ಥೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಲು ಅವಕಾಶ ನೀಡಿಲ್ಲ. ನಮ್ಮಲ್ಲೇ 6 ಪರೀಕ್ಷಾ ಕೇಂದ್ರಗಳು ಇವೆ. ಜೊತೆಗೆ ಕೇಂದ್ರ ಸರ್ಕಾರ ಕೇಂದ್ರಗಳು ಇವೆ. ಪರಿಸ್ಥಿತಿ ಸರ್ಕಾರದ ಶಕ್ತಿ ಮೀರಿದರೆ ಮಾತ್ರ ಖಾಸಗಿ ಆಸ್ಪತ್ರೆಗಳ ನೆರವು ಪಡೆಯುತ್ತೇವೆ ಅಂತ ಹೇಳಿದ್ದಾರೆ. ರೈತರಿಗೆ ತಮ್ಮಲ್ಲಿನ ದವಸ ಧಾನ್ಯಗಳು, ತರಕಾರಿಗಳನ್ನು ಊರಿನಲ್ಲೇ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ನೀವು ಮಾರುಕಟ್ಟೆಗೆ ಹೋಗುವ ಅವಶ್ಯಕತೆ ಇಲ್ಲ. ಮಾರುಕಟ್ಟೆಯಲ್ಲಿ ಯಾರೂ ಇರೋದಿಲ್ಲ. ನಿಮ್ಮ ಊರಿಗೆ ಬಂದು ಉತ್ತಮ ದರ ನೀಡಿ ಎಲ್ಲಾ ಧಾನ್ಯ, ತರಕಾರಿಗಳನ್ನು ಖರೀದಿ ಮಾಡಿ ಅಲ್ಲೇ ಚೆಕ್ ನೀಡಲಾಗುತ್ತದೆ. ಎಲ್ಲರೂ ಶಾಂತಿಯುತವಾಗಿ ಸರತಿ ಸಾಲಿನಲ್ಲಿ ನಿಂತು ಧಾನ್ಯ, ಬೇಳೆಗಳನ್ನು ನೀಡುವ ಮೂಲಕ ಸಹಕರಿಸಬೇಕು. ಇದಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸರ್ಕಾರಕ್ಕೆ ಸಮಯ ಬೇಕು. ನಾ ಮುಂದು, ತಾ ಮುಂದು ಅಂತ ನೂಕುನುಗ್ಗಲು ಮಾಡಬೇಡಿ. ಎಲ್ಲರ ಹಿತವನ್ನು ಕಾಪಾಡಬೇಕಾಗಿದೆ. ಹೀಗಾಗಿ ಯಾವೊಬ್ಬ ರೈತರು ಆತಂಕ ಪಡಬೇಕಿಲ್ಲ ಎಂದು ಅಭಯ ನೀಡಿದ್ದಾರೆ.
ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ, ಹಡಗುಗಳ ನಿಷೇಧ ಮಾಡಿರುವ ಪರಿಣಾಮ ವಿದೇಶದಿಂದ ಕೋವಿಡ್ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಈಗೇನಿದ್ರೂ ರಾಜ್ಯಕ್ಕೆ ಪ್ರವೇಶಿಸಿರುವ ವೈರಸ್ಅನ್ನು ಹರಡದಂತೆ ತಡೆಗಟ್ಟಬೇಕಿರೋದು ದೊಡ್ಡ ಸವಾಲಾಗಿದೆ. ಕೆಲ ಗ್ರಾಮಗಳಲ್ಲಿ ನಮ್ಮ ಊರಿಗೆ ಯಾರೂ ಬರಬಾರದೆಂದ ಬೆಲಿ ಹಾಕಿಕೊಂಡಿದ್ದಾರೆ. ಅದು ಒಳ್ಳೆಯದೇ. ಆದ್ರೆ ಅಗತ್ಯ ವಸ್ತುಗಳನ್ನು ನೀಡಲು ಅಥವಾ ಕೊಳ್ಳಲು ನಿಮ್ಮ ಊರಿಗೆ ಲಾರಿ ಬರಬೇಕಾಗುತ್ತದೆ, ವೈದ್ಯಕೀಯ ಸೌಲಭ್ಯಕ್ಕಾಗಿ ಆಂಬ್ಯುಲೆನ್ಸ್ ಬರಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.