ಮುಳಗುಮೂಡು(ತಮಿಳುನಾಡು): ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ 'ಭಾರತ್ ಜೋಡೋ ಯಾತ್ರೆ' ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. 3,500 ಕಿಲೋಮೀಟರ್ ದೂರದ ಈ ಯಾತ್ರೆಯ ಸಾರಥ್ಯವನ್ನು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ. ನಿನ್ನೆ ತಮಿಳುನಾಡಿನ ನಾಗರಕೋಯಿಲ್ನಿಂದ ಯಾತ್ರೆ ಆರಂಭಗೊಂಡು ಮುಳಗುಮೂಡುದಲ್ಲಿ ವಾಸ್ತವ್ಯ ಮಾಡಲಾಗಿತ್ತು. ಇಂದು ಬೆಳಗ್ಗೆ ಯಾತ್ರೆ ಪುನಾರಂಭಗೊಂಡಿದ್ದು, ಸಂಜೆ ವೇಳೆಗೆ ಕೇರಳ ತಲುಪುವ ಸಾಧ್ಯತೆ ಇದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು, ಹಿರಿಯ ಮುಖಂಡರು ಭಾಗಿಯಾಗಿದ್ದಾರೆ. 150 ದಿನಗಳ ಕಾಲ ನಡೆಯಲಿರುವ ಯಾತ್ರೆ ಜಮ್ಮು-ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಸಂಸದ ರಾಹುಲ್ ಗಾಂಧಿ ಇದರ ನೇತೃತ್ವ ವಹಿಸಿಕೊಂಡಿದ್ದು, ಅನೇಕ ಮುಖಂಡರು ಸಾಥ್ ನೀಡಿದ್ದಾರೆ. ಭಾರತ ಒಗ್ಗೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಳ್ಳಲಾಗಿದೆ ಎಂದು ಈಗಾಗಲೇ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತ ಜೋಡೋ ಯಾತ್ರೆ.. ಚರ್ಚೆಗೀಡಾದ ರಾಹುಲ್ ಟೀ ಶರ್ಟ್ ಬೆಲೆ: ಬಿಜೆಪಿ ಟ್ವೀಟ್ ವ್ಯಂಗ್ಯ.. ಕಾಂಗ್ರೆಸ್ ತಿರುಗೇಟು
ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ಆರ್ಎಸ್ಎಸ್ ಮಾಡಿರುವ ಭ್ರಷ್ಟಾಚಾರದ ಬಗ್ಗೆ ತಿಳಿಸುವುದಾಗಿದೆ. ದೇಶದಲ್ಲಿರುವ ಎಲ್ಲ ಸಂಸ್ಥೆಗಳ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ. ಬಿಜೆಪಿ ಸಿದ್ಧಾಂತ ಈ ದೇಶಕ್ಕೆ ಹಾನಿಕಾರಕ. ದ್ವೇಷದ ರಾಜಕಾರಣ ಮಾಡುತ್ತಿರುವ ಅವರ ಬಗ್ಗೆ ದೇಶದ ಜನರಿಗೆ ತಿಳಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ನ ಭಾರತ ಜೋಡೋ ಯಾತ್ರೆ ಒಟ್ಟು 12 ರಾಜ್ಯಗಳಲ್ಲಿ ಹಾಯ್ದು ಹೋಗಲಿದ್ದು, ಒಟ್ಟು 3,500 ಕಿಲೋ ಮೀಟರ್ ನಡೆಯಲಿದೆ. ಇದರ ವಿರುದ್ಧ ಕೇಂದ್ರ ಸಚಿವರು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಈಗಾಗಲೇ ಒಗ್ಗೂಡಿದೆ. ದೇಶವನ್ನು ವಿಭಜಿಸಲು ನಾವು ಬಿಡಲ್ಲ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿರುವ ನಡ್ಡಾ, ಕಾಂಗ್ರೆಸ್ ನಾಯಕರು ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಬದಲು ತಮ್ಮದೇ ಪಕ್ಷವನ್ನು ಒಟ್ಟುಗೂಡಿಸಬೇಕು. ನಮ್ಮ ಹೋರಾಟ ಕುಟುಂಬ ರಾಜಕಾರಣದ ವಿರುದ್ಧ ಎಂದಿದ್ದಾರೆ. ಭಾರತ್ ಜೋಡೋ ಯಾತ್ರೆ ಕೇರಳ ತಲುಪಿದ ಬಳಿಕ, ಸೆಪ್ಟೆಂಬರ್ 30ರಂದು ಕರ್ನಾಟಕ ಪ್ರವೇಶಿಸಲಿದೆ. ಇಲ್ಲಿ ಸುಮಾರು 21 ದಿನಗಳ ಕಾಲ ಯಾತ್ರೆ ನಡೆಯಲಿದೆ.