ಕರ್ನಾಟಕ

karnataka

ಪಂಚರಾಜ್ಯಗಳ ಮತ ಎಣಿಕೆಗೆ ಕೆಲವೇ ಗಂಟೆ ಬಾಕಿ; ಇಲ್ಲಿವೆ ರೋಚಕ ಸಂಗತಿಗಳು

ಯಾವ ರಾಜ್ಯದಲ್ಲಿ ಯಾವೆಲ್ಲ ವಿಷಯಗಳು ಚುನಾವಣೆಯ ಪ್ರಮುಖ ಅಂಶವಾಗಿದ್ದವು, ಮತದಾನೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ ಹಾಗೂ ಇನ್ನಿತರ ಕೆಲ ರೋಚಕ ಅಂಕಿ - ಅಂಶಗಳ ಬಗ್ಗೆ ಒಂದು ಸಿಂಹಾವಲೋಕನ ಇಲ್ಲಿದೆ.

By

Published : May 1, 2021, 6:58 PM IST

Published : May 1, 2021, 6:58 PM IST

Battle for states: Pre-result low-down of 2021 Assembly elections
ಪಂಚರಾಜ್ಯಗಳ ಮತ ಎಣಿಕೆಗೆ ಕೆಲವೇ ಗಂಟೆ ಬಾಕಿ

ಹೈದರಾಬಾದ್: ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ನಡೆದ ಚುನಾವಣೆಗಳ ಮತ ಎಣಿಕೆಯು ಭಾನುವಾರ ಬೆಳಗ್ಗೆ (ಮೇ 2 ರಂದು) ಆರಂಭವಾಗಲಿದ್ದು, ಯಾವ ರಾಜ್ಯದಲ್ಲಿ ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂಬ ಬಗೆಗಿನ ವಿಶ್ಲೇಷಣೆಗಳು, ಊಹಾಪೋಹಗಳು ಜನರಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿವೆ.

ಪಶ್ಚಿಮ ಬಂಗಾಳ, ಅಸ್ಸೋಂ, ತಮಿಳುನಾಡು, ಕೇರಳ ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಕಳೆದ ಫೆ.26 ರಂದು ಭಾರತ ಚುನಾವಣಾ ಆಯೋಗವು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿತ್ತು. ಈಗ ಈ ಎಲ್ಲ ರಾಜ್ಯಗಳ ಚುನಾವಣೆ ಮುಗಿದಿದ್ದು, ಮತ ಎಣಿಕೆ ಮಾತ್ರ ಬಾಕಿ ಇದೆ. ಐದು ರಾಜ್ಯಗಳಲ್ಲಿ ಹರಡಿದ ಒಟ್ಟು 824 ವಿಧಾನಸಭಾ ಕ್ಷೇತ್ರಗಳಿಗೆ 2.7 ಲಕ್ಷ ಮತಗಟ್ಟೆಗಳಲ್ಲಿ ಮತದಾನ ನಡೆದು, ಸುಮಾರು 18.68 ಕೋಟಿ ಮತದಾರರು ತಮ್ಮ ಪರಮಾಧಿಕಾರ ಚಲಾಯಿಸಿದ್ದರು. ರವಿವಾರ ಬೆಳಗ್ಗೆ ಮತ ಯಂತ್ರಗಳು ಸ್ಟ್ರಾಂಗ್​ ರೂಂ ಗಳಿಂದ ಹೊರಗೆ ಬರಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿವೆ.

(ಓದಿ ಪಂಚರಾಜ್ಯ ಫೈಟ್​: ಯಾವ ರಾಜ್ಯದಲ್ಲಿ ಯಾರಿಗೆ ಗದ್ದುಗೆ? ಈಟಿವಿ ಭಾರತ ಎಕ್ಸಿಟ್​ ಪೋಲ್​ ಇಲ್ಲಿದೆ ನೋಡಿ...

ಯಾವ ರಾಜ್ಯದಲ್ಲಿ ಯಾವೆಲ್ಲ ವಿಷಯಗಳು ಚುನಾವಣೆಯ ಪ್ರಮುಖ ಅಂಶವಾಗಿದ್ದವು, ಮತದಾನೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ ಹಾಗೂ ಇನ್ನಿತರ ಕೆಲ ರೋಚಕ ಅಂಕಿ-ಅಂಶಗಳ ಬಗ್ಗೆ ಒಂದು ಸಿಂಹಾವಲೋಕನ ಇಲ್ಲಿದೆ.


ಅಸ್ಸೋಂ

126 ಸದಸ್ಯ ಬಲದ ಅಸ್ಸೋಂ ವಿಧಾನ ಸಭೆಗೆ 3 ಹಂತಗಳಲ್ಲಿ ಚುನಾವಣೆ ನಡೆದಿದೆ.

ಪ್ರಮುಖ ಚುನಾವಣಾ ವಿಷಯಗಳು ಮತ್ತು ಮತದಾರರ ಒಲವು

ಅಸ್ಸೋಂ ನಲ್ಲಿ ಕಳೆದ ಐದು ವರ್ಷಗಳ ಕಾಲ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ತಾನು ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿಯ ಸಾಧನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತೊಮ್ಮೆ ಮತದಾರರ ಬಳಿ ಹೋಗಿತ್ತು. ಇನ್ನು ಈ ಮಧ್ಯೆ ನಾಗರಿಕತೆ ತಿದ್ದುಪಡಿ ಕಾಯ್ದೆ ವಿಷಯವು ರಾಜ್ಯದಲ್ಲಿ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಪ್ರತಿಪಕ್ಷಗಳು ಇದೇ ವಿಷಯವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿವೆ. ಈ ಎರಡೂ ವಿಷಯಗಳ ಮಧ್ಯೆ ಮತದಾರ ಯಾವುದಕ್ಕೆ ಮನ್ನಣೆ ನೀಡುತ್ತಾನೆ ಎಂದು ನೋಡಬೇಕಿದೆ.

ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್​ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಅಸ್ಸೋಂ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನೇತಾರ ಸರ್ಬಾನಂದ ಸೋನೊವಾಲ್, ಬಿಜೆಪಿಯ ಹಿಮಂತಾ ಬಿಸ್ವಾ ಶರ್ಮಾ, ಅಸೋಂ ಗಣ ಪರಿಷದ್​ನ ಅತುಲ್ ಬೋರಾ, ಎಐಯುಡಿಎಫ್​ ನ ಬದ್ರುದ್ದೀನ್ ಅಜ್ಮಲ್, ಅಸ್ಸೋಂ ಪ್ರದೇಶ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ರಿಪುನ್ ಬೋರಾ ಮತ್ತು ಜೈಲಿನಲ್ಲಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೋಗೊಯ್ ಚುನಾವಣಾ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.

ಎಕ್ಸಿಟ್​ ಪೋಲ್ ಹೇಳುವುದೇನು?

ಕೆಲವೇ ಕೆಲ ಮತದಾರರ ಹೇಳಿಕೆಗಳನ್ನು ಆಧರಿಸಿ ತಯಾರಿಸಲಾದ ಮತದಾನೋತ್ತರ ಸಮೀಕ್ಷೆಗಳು ನೂರಕ್ಕೆ ನೂರರಷ್ಟು ಖಚಿತ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೂ ಇವುಗಳಿಂದ ಮತದಾರರ ಚಿತ್ತ ಯಾವ ಕಡೆ ಇದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯಬಹುದು.

ಅಸ್ಸೋಂ - ಎಕ್ಸಿಟ್ ಪೋಲ್

ಈಟಿವಿ ಭಾರತ ನಡೆಸಿದ ಎಕ್ಸಿಟ್​ ಪೋಲ್ ಪ್ರಕಾರ, 126 ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿಕೂಟವು 64 ಹಾಗೂ ಕಾಂಗ್ರೆಸ್​ ಬೆಂಬಲಿತ ಎಐಯುಡಿಎಫ್ ಮೈತ್ರಿಕೂಟವು 55 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಹೊಸದಾಗಿ ರಚಿತವಾದ ಅಸೋಂ ಜತಿಯಾ ಪರಿಷದ್ (ಎಜೆಪಿ), ಬಂಧಿತ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೋಗೊಯ್ ಸ್ಥಾಪಿಸಿದ ರೈಜೋರ್ ದಳ ಹಾಗೂ ಪಕ್ಷೇತರರು ಒಟ್ಟಾಗಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಅಂದಾಜು ಮಾಡಲಾಗಿದೆ. ಬಹುತೇಕ ರಾಷ್ಟ್ರೀಯ ವಾಹಿನಿಯ ಸಮೀಕ್ಷೆಗಳು ಅಧಿಕಾರಾರೂಢ ಬಿಜೆಪಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.

ತಮಿಳು ನಾಡು

234 ಸದಸ್ಯ ಬಲದ ತಮಿಳು ನಾಡು ವಿಧಾನ ಸಭೆಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ.

ಪ್ರಮುಖ ಚುನಾವಣಾ ವಿಷಯಗಳು ಮತ್ತು ಮತದಾರರ ಒಲವು

ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅಧಿಕಾರಾರೂಢ ಎಐಎಡಿಎಂಕೆ ಹಾಗೂ ಡಿಎಂಕೆ ಗಳ ಮಧ್ಯೆ ನೇರ ಸ್ಪರ್ಧೆ ಇದೆ. "ಸ್ಥಳೀಯರು ಹಾಗೂ ಹೊರಗಿನವರು" ಎಂಬ ವಿಷಯವನ್ನೇ ಡಿಎಂಕೆ ಪ್ರಮುಖವಾಗಿ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಒಂದೊಮ್ಮೆ ಎಐಎಡಿಎಂಕೆ ಗೆ ಮತ ನೀಡಿದಲ್ಲಿ ಅದರಿಂದ ಬಿಜೆಪಿಗೆ ನೇರವಾಗಿ ಲಾಭವಾಗಿ, ತಮಿಳು ನಾಡು ಸರ್ಕಾರವು ದೆಹಲಿಯಿಂದ ನಡೆಸಲ್ಪಡುವ ಅಪಾಯವಿದೆ ಎಂದು ಡಿಎಂಕೆ ಪ್ರಚಾರ ನಡೆಸಿತ್ತು. ಭ್ರಷ್ಟಾಚಾರ, ನೀಟ್​ ಪರೀಕ್ಷೆ ಹಾಗೂ ಕೊರೊನಾ ವೈರಸ್​ ಹಾವಳಿ ತಡೆಯುವುದೇ ಈ ಬಾರಿ ಇಲ್ಲಿನ ಪ್ರಮುಖ ಚುನಾವಣಾ ವಿಷಯಗಳಾಗಿದ್ದವು.

ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು

ಸದ್ಯ ಮುಖ್ಯಮಂತ್ರಿಯಾಗಿರುವ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮತ್ತೆ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಹತ್ತು ವರ್ಷಗಳ ನಂತರ ಮತ್ತೊಮ್ಮೆ ಡಿಎಂಕೆ ಯನ್ನು ಅಧಿಕಾರಕ್ಕೆ ತರಲು ಎಂ.ಕೆ. ಸ್ಟಾಲಿನ್ ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಮಕ್ಕಳ್ ನೀಧಿ ಮೈಯುಂ ಪಕ್ಷದ ನೇತಾರ ಕಮಲ ಹಾಸನ್ ಹಾಗೂ ಎಐಎಡಿಎಂಕೆಯ ಓ. ಪನ್ನೀರ ಸೆಲ್ವಂ ಕೂಡ ಈ ಚುನಾವಣೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಎಕ್ಸಿಟ್​ ಪೋಲ್ ಹೇಳುವುದೇನು?

ಈ ಬಾರಿ ರಾಜ್ಯದಲ್ಲಿ ಎಐಎಡಿಎಂಕೆ ಆಳ್ವಿಕೆ ಕೊನೆಯಾಗಿ ಡಿಎಂಕೆ ಅಧಿಕಾರಕ್ಕೇರುವುದು ಖಚಿತ ಎನ್ನಲಾಗಿದೆ. ಈಟಿವಿ ಭಾರತ ಮತದಾನೋತ್ತರ ಸಮೀಕ್ಷೆಯ ಪ್ರಕಾರ, ಡಿಎಂಕೆ ಮೈತ್ರಿಕೂಟವು 133, ಎಐಎಡಿಎಂಕೆ 89 ಹಾಗೂ ಇತರರು 12 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ತಿಳಿದು ಬಂದಿದೆ.

ತಮಿಳು ನಾಡು - ಎಕ್ಸಿಟ್ ಪೋಲ್

ಪ್ರಮುಖ ರಾಷ್ಟ್ರೀಯ ಸುದ್ದಿ ವಾಹಿನಿಗಳಾದ ಟೈಮ್ಸ್​ ನೌ-ಸಿ ವೋಟರ್​, ಇಂಡಿಯಾ ಟುಡೇ-ಮೈ ಆಕ್ಸಿಸ್​, ರಿಪಬ್ಲಿಕ್-ಸಿಎನ್​ಎಕ್ಸ್​ ಸಮೀಕ್ಷೆಗಳು ಸಹ ಡಿಎಂಕೆ ಅಧಿಕಾರಕ್ಕೆ ಬರುಲಿದೆ ಎಂದು ಅಂದಾಜಿಸಿವೆ.

ಕೇರಳ

140 ಸದಸ್ಯ ಬಲದ ಕೇರಳ ವಿಧಾನ ಸಭೆಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ.

ಪ್ರಮುಖ ಚುನಾವಣಾ ವಿಷಯಗಳು ಮತ್ತು ಮತದಾರರ ಒಲವು

ಶಬರಿಮಲೆ ವಿವಾದ, ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಹಾಗೂ ಸ್ವಹಿತಾಸಕ್ತಿ ಆರೋಪಗಳು, ಅಭಿವೃದ್ಧಿ ವಿಷಯಗಳು, ಕೊರೊನಾ ಹಾಗೂ ನಿಪಾ ವೈರಸ್​ ಬಿಕ್ಕಟ್ಟಿನ ನಿರ್ವಹಣೆ, ಅತಿವೃಷ್ಟಿ ಮುಂತಾದವು ಈ ಬಾರಿ ಪ್ರಮುಖ ಚುನಾವಣಾ ವಿಷಯಗಳಾಗಿದ್ದವು.

ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು

ಸಿಪಿಐ (ಎಂ) ನೇತೃತ್ವದ ಎಲ್​ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯೂಡಿಎಫ್ ಮಧ್ಯೆ ಇಲ್ಲಿ ನೇರ ಹಣಾಹಣಿ ಇದೆ. ಸದ್ಯ ಎಲ್​ಡಿಎಫ್​ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್​ನ ಸಿ. ರಘುನಾಥ, ಧರ್ಮಾದಮ್ ಕ್ಷೇತ್ರದಲ್ಲಿ ಬಿಜೆಪಿಯ ಸಿ.ಕೆ. ಪದ್ಮನಾಭನ್, ಸಿಪಿಐ (ಎಂ) ನ ಕೆಕೆ ಶೈಲಜಾ, ಕೆ.ಟಿ. ಜಲೀಲ್, ಕಾಂಗ್ರೆಸ್​ನ ಊಮ್ಮನ್ ಚಾಂಡಿ, ರಮೇಶ ಚೆನ್ನಿತಾಲ, ಬಿಜೆಪಿ ಈ. ಶ್ರೀಧರನ್ ಮುಂತಾದವರು ಈ ಬಾರಿಯ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಎಕ್ಸಿಟ್​ ಪೋಲ್ ಹೇಳುವುದೇನು?

ಕೇರಳ - ಎಕ್ಸಿಟ್ ಪೋಲ್

ಈ ಬಾರಿ ಎಲ್​ಡಿಎಫ್ ಒಕ್ಕೂಟವು 82 ಸ್ಥಾನಗಳನ್ನು ಗಳಿಸಿ ನಿರಂತರ ಎರಡನೇ ಬಾರಿ ಅಧಿಕಾರಕ್ಕೆ ಮರಳಲಿದೆ ಎಂದು ಈಟಿವಿ ಭಾರತ ನಡೆಸಿದ ಎಕ್ಸಿಟ್​ ಪೋಲ್​ನಲ್ಲಿ ತಿಳಿದು ಬಂದಿದೆ. ಕೇರಳದಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಕೆಲಸ ಮಾಡದು ಎಂದು ಇದರಿಂದ ಗೊತ್ತಾಗುತ್ತಿದೆ. ಇನ್ನು ಕಾಂಗ್ರೆಸ್ ನೇತೃತ್ವದ ಯೂಡಿಎಫ್ 56 ಸ್ಥಾನಗಳಲ್ಲಿ ಜಯ ಗಳಿಸಬಹುದು. ಇನ್ನು ಎನ್​ಡಿಎ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು.

ಪುದುಚೇರಿ

30 ಸದಸ್ಯ ಬಲದ ಪುದುಚೇರಿ ವಿಧಾನ ಸಭೆಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ.

ಪ್ರಮುಖ ಚುನಾವಣಾ ವಿಷಯಗಳು ಮತ್ತು ಮತದಾರರ ಒಲವು

ಪುದುಚೇರಿಗೆ ವಿಶೇಷ ಕೇಂದ್ರಾಡಳಿತದ ಸ್ಥಾನಮಾನ, ಪ್ರದೇಶದ ಅನುದಾನ ಪ್ರಮಾಣವನ್ನು ಶೇ 25 ರಿಂದ 40ಕ್ಕೆ ಹೆಚ್ಚಿಸುವುದು, ಪುದುಚೇರಿ ಕೇಂದ್ರಾಡಳಿತ ಪ್ರದೇಶವನ್ನು ಕೇಂದ್ರ ಹಣಕಾಸು ಆಯೋಗದಡಿ ತರುವುದು, ಹೆಣ್ಣು ಮಕ್ಕಳು ಹಾಗೂ ಹಿಂದುಳಿದವರಿಗೆ ಶಿಕ್ಷಣ, ಕೊರೊನಾ ವೈರಸ್ ಬಿಕ್ಕಟ್ಟು ಮುಂತಾದುವು ಈ ಬಾರಿ ಪ್ರಮುಖ ಚುನಾವಣಾ ವಿಷಯಗಳಾಗಿದ್ದವು.

ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು

ಆಲ್ ಇಂಡಿಯಾ ಎನ್​ಆರ್ ಕಾಂಗ್ರೆಸ್ಸಿನ ಎನ್​. ರಂಗಸ್ವಾಮಿ, ರಿಚರ್ಡ್​ ಜಾನ್ ಕುಮಾರ, ಬಿಜೆಪಿಯ ಎ. ನಮಸ್ಸಿವಾಯಂ, ಎ. ಜಾನ್ ಕುಮಾರ ಈ ಬಾರಿ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಎಕ್ಸಿಟ್​ ಪೋಲ್ ಹೇಳುವುದೇನು?

ಪುದುಚೇರಿ ಎಕ್ಸಿಟ್ ಪೋಲ್

ರಿಪಬ್ಲಿಕ್-ಸಿಎನ್​ಎಕ್ಸ್​, ಇಂಡಿಯಾ ಟುಡೇ-ಮೈ ಆಕ್ಸಿಸ್​, ಟೈಮ್ಸ್​ ನೌ-ಸಿ ವೋಟರ್​ ಸಮೀಕ್ಷೆಗಳು ಪುದುಚೇರಿಯಲ್ಲಿ ಎನ್​ಡಿಎ ಮೈತ್ರಿಕೂಟ ಜಯಗಳಿಸಲಿದೆ ಎಂದು ಹೇಳಿವೆ.

ಪಶ್ಚಿಮ ಬಂಗಾಳ

292 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನ ಸಭೆಗೆ ಎಂಟು ಹಂತಗಳಲ್ಲಿ ಮತದಾನ ನಡೆದಿದೆ.

ಪ್ರಮುಖ ಚುನಾವಣಾ ವಿಷಯಗಳು ಮತ್ತು ಮತದಾರರ ಒಲವು

ಅಧಿಕಾರಾರೂಢ ಟಿಎಂಸಿ ಸರ್ಕಾರವು ವ್ಯಾಪಕ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದ ಆರೋಪಗಳನ್ನು ಎದುರಿಸುತ್ತಿದೆ. ಅಂಫನ್ ಚಂಡಮಾರುತದಿಂದಾದ ಭಾರಿ ಹಾನಿ ಹಾಗೂ ಕೊರೊನಾ ವೈರಸ್​ ಬಿಕ್ಕಟ್ಟು ಚುನಾವಣೆಯ ಪ್ರಮುಖ ವಿಷಯಗಳಾಗಿವೆ. ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾರಿ ಪ್ರಮಾಣದ ಮತ ಧೃವೀಕರಣ ಹಾಗೂ ಸ್ಥಳೀಯ ಜಾತಿ ಆಧಾರದಲ್ಲಿ ಧೃವೀಕರಣ ನಡೆದಿದೆ ಎನ್ನಲಾಗಿದೆ.

ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಪ್ರತಿಪಕ್ಷ ಬಿಜೆಪಿ ಪ್ರಥಮ ಬಾರಿಗೆ ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದೆ.

ನಿರಾಶ್ರಿತರಿಗೆ ಕಾಯಂ ನಾಗರಿಕತೆ ನೀಡುವುದು, ಸಿಎಎ ಜಾರಿ, ಎಂಎಸ್​ಎಂಇ ಹಾಗೂ ಇತರ ಕೈಗಾರಿಕಾ ಮೂಲಸೌಕರ್ಯ, ಮಹಿಳೆಯರಿಗೆ ನೌಕರಿಯಲ್ಲಿ ಮೀಸಲಾತಿ, ಕುಟುಂಬಕ್ಕೊಂದು ಉದ್ಯೋಗ, 7ನೇ ವೇತನ ಆಯೋಗದ ಶಿಪಾರಸು ಜಾರಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ವಿಧವಾ ವೇತನ ಮುಂತಾದ ವಿಷಯಗಳು ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆಯ ಪ್ರಮುಖ ವಿಷಯಗಳಾಗಿವೆ.

ಪ್ರಮುಖ ಕ್ಷೇತ್ರ ಹಾಗೂ ಅಭ್ಯರ್ಥಿಗಳು

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಟಿಎಂಸಿ ಮುಖಂಡ ಪಾರ್ಥ ಚಟರ್ಜಿ, ಬಿಜೆಪಿಯ ಸುವೇಂದು ಅಧಿಕಾರಿ, ಮುಕುಲ್ ರಾಯ್, ಬಿಸ್ವಜಿತ್ ಸಿನ್ಹಾ ಮುಂತಾದವರು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಎಕ್ಸಿಟ್​ ಪೋಲ್ ಹೇಳುವುದೇನು?

ಅಧಿಕಾರಾರೂಢ ಟಿಎಂಸಿ 131 ಹಾಗೂ ಬಿಜೆಪಿ 126 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಈಟಿವಿ ಭಾರತ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇನ್ನು ಎಡಪಕ್ಷಗಳು 32 ಹಾಗೂ ಇತರರು 3 ಸ್ಥಾನಗಳಲ್ಲಿ ಜಯ ಸಾಧಿಸಬಹುದು.

ಪಶ್ಚಿಮ ಬಂಗಾಳ - ಎಕ್ಸಿಟ್ ಪೋಲ್

ಟೈಮ್ಸ್​ ನೌ-ಸಿ ವೋಟರ್​ ಸಮೀಕ್ಷೆಯು ಟಿಎಂಸಿ ನಿಚ್ಚಳ ಬಹುಮತ ಪಡೆಯಲಿದೆ ಎಂದು ಹೇಳಿದೆ. ಟಿಎಂಸಿ 128 ರಿಂದ 138 ಹಾಗೂ ಬಿಜೆಪಿ 138 ರಿಂದ 148 ಸ್ಥಾನಗಳನ್ನು ಗಳಿಸಬಹುದು ಎಂದು ರಿಪಬ್ಲಿಕ್-ಸಿಎನ್​ಎಕ್ಸ್​ ಮೀಡಿಯಾ ಎಕ್ಸಿಟ್​ ಪೋಲ್​ ಅಂದಾಜಿಸಿದೆ. ಟಿಎಂಸಿ 130 ರಿಂದ 156 ಸ್ಥಾನಗಳಲ್ಲಿ ಹಾಗೂ ಬಿಜೆಪಿ 134 ರಿಂದ 160 ಸ್ಥಾನಗಳನ್ನು ಪಡೆಯಬಹುದು ಎಂದು ಇಂಡಿಯಾ ಟುಡೇ - ಮೈ ಆಕ್ಸಿಸ್​ ಸಮೀಕ್ಷೆ ಹೇಳಿದೆ.

ABOUT THE AUTHOR

...view details