ಕರ್ನಾಟಕ

karnataka

By PTI

Published : Nov 13, 2023, 9:37 AM IST

ETV Bharat / bharat

ಸುಪ್ರೀಂ ಕೋರ್ಟ್​ ಆದೇಶ ಉಲ್ಲಂಘಿಸಿ ದೆಹಲಿಯಲ್ಲಿ ಪಟಾಕಿ ಸಿಡಿಸಿದ ಜನರು; ಹದಗೆಟ್ಟ ಹವಾಮಾನ

firecrackers in Delhi: ದೆಹಲಿಯ ವಿವಿಧ ಪ್ರದೇಶಗಳಲ್ಲಿ ಪಟಾಕಿ ಸಿಡಿಸಿದ ಜನರು, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ಈ ವಿಚಾರಕ್ಕೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ban on firecrackers
ಸುಪ್ರೀಂ ಕೋರ್ಟ್​ ಆದೇಶ ಉಲ್ಲಂಘಿಸಿ ದೆಹಲಿಯಲ್ಲಿ ಪಟಾಕಿ ಸಿಡಿಸಿದ ಜನರು

ನವದೆಹಲಿ:ದೆಹಲಿಯ ಹಲವು ಪ್ರದೇಶಗಳಲ್ಲಿ ಪಟಾಕಿ ನಿಷೇಧ ಮಾಡಿರುವ ನಿಯಮವನ್ನು ಉಲ್ಲಂಘಿಸಿ, ಜನರು ಭಾನುವಾರ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಶಹಪುರ್ ಜಾಟ್ ಮತ್ತು ಹೌಜ್ ಖಾಸ್ ಪ್ರದೇಶದಲ್ಲಿ ಜನರು ಪಟಾಕಿ ಸಿಡಿಸಿದರು. ಪಟಾಕಿ ಸಿಡಿಸಲು ಹಲವಾರು ಜನರು ಇಲ್ಲಿನ ಉದ್ಯಾನವನದಲ್ಲಿ ಜಮಾಯಿಸಿದ್ದು ಕಂಡುಬಂತು.

ಸಂಜೆ 4 ಗಂಟೆಯ ನಂತರ ಪಟಾಕಿ ಸಿಡಿಸುವ ತೀವ್ರತೆ ಹೆಚ್ಚಿರುವುದು ಕಂಡು ಬಂತು. ಆದರೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಕೆಲವರನ್ನು ಹೊರತುಪಡಿಸಿದರೆ, ಹೆಚ್ಚಿನ ಜನರು ಸ್ಥಳೀಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮ ಮನೆಗಳಿಂದ ಹೊರಗೆ ಬಂದಿರಲಿಲ್ಲ.

ಪರಿಸರವಾದಿ ಭವ್ರೀನ್ ಕಂಧಾರಿ ಕಿಡಿ:ಪರಿಸರವಾದಿ ಭವ್ರೀನ್ ಕಂಧಾರಿ ಮಾತನಾಡಿ, ''ವಸತಿ ಪ್ರದೇಶ ಡಿಫೆನ್ಸ್ ಕಾಲೋನಿಯಲ್ಲಿಯೂ ಪಟಾಕಿ ಸಿಡಿಸಿರುವುದು ವರದಿಯಾಗಿದೆ. ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದ್ದರೂ ಯಾವುದೇ ಬದಲಾವಣೆ ಕಂಡುಬಂದಿಲ್ಲ'' ಎಂದು ಕಿಡಿಕಾರಿದರು. "ಸುಪ್ರಿಂಕೋರ್ಟ್‌ ಆದೇಶ ಉಲ್ಲಂಘಿಸಿ ಪಟಾಕಿಗಳನ್ನು ಸಿಡಿಸಲಾಗಿದೆ. ಇದನ್ನು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಸುಪ್ರೀಂ ಕೋರ್ಟ್ ಈಗ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡುತ್ತೇವೆ'' ಎಂದರು.

ರಾತ್ರಿ 7.30ರ ವರೆಗೆ ಗ್ರೇಟರ್ ಕೈಲಾಶ್ ಮತ್ತು ಚಿತ್ತರಂಜನ್ ಪಾರ್ಕ್ ಪ್ರದೇಶದಲ್ಲಿ ಪಟಾಕಿ ಸಿಡಿಸುವ ತೀವ್ರತೆ ಕಡಿಮೆ ಇತ್ತು. ಪೂಜೆ ಸಲ್ಲಿಸಿದ ನಂತರ ಜನರು ಪಟಾಕಿ ಸಿಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದಕ್ಷಿಣ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ಸಂಜೆ 6 ಗಂಟೆಯಿಂದ ಪಟಾಕಿ ಸಿಡಿಸುವ ಸದ್ದು ಕೇಳಿಸುತ್ತಿತ್ತು. ಈ ಪ್ರದೇಶದಲ್ಲಿ ಅನೇಕ ಅಂಗಡಿಕಾರರು ನಿಷೇಧವನ್ನು ಉಲ್ಲಂಘಿಸಿ ಮಕ್ಕಳಿಗೆ ಸಣ್ಣ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದು ಕೂಡ ಕಂಡುಬಂತು. ಜೊತೆಗೆ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ ಕೆಲವರು ಪಟಾಕಿ ಸಿಡಿಸಿದ್ದಾರೆ. ಸಂಜೆ 6.30ರಿಂದ ದೂರದಲ್ಲಿ ಪಟಾಕಿ ಸಿಡಿಸುವ ಸದ್ದು ಮನೆಯಿಂದ ಕೇಳಿ ಬರುತ್ತಿತ್ತು.

ಇದೇ ವೇಳೆ ಲಕ್ಷ್ಮಿನಗರದ ಲಲಿತಾ ಪಾರ್ಕ್ ಪ್ರದೇಶದಲ್ಲಿ ರಾತ್ರಿ 7.30ರ ವರೆಗೆ ಕೆಲವು ಪಟಾಕಿಗಳನ್ನು ಸಿಡಿಸಲಾಯಿತು. ಪೂರ್ವ ದೆಹಲಿಯ ಇತರ ಹಲವು ಪ್ರದೇಶಗಳಲ್ಲಿ ಇದರ ಪರಿಣಾಮ ಸಾಧಾರಣವಾಗಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಪಟಾಕಿ ಸಿಡಿಸಿರುವುದು ಅತ್ಯಲ್ಪ ಎಂದು ಹೇಳುತ್ತಾರೆ ಇಲ್ಲಿನ ನಿವಾಸಿಗಳು.

ದೆಹಲಿಯ ಗಾಳಿ ಗುಣಮಟ್ಟ ಕಳಪೆ:ಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರವು ದೆಹಲಿಯಲ್ಲಿ ಪಟಾಕಿಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಆದರೂ ಸಹ ದೀಪಾವಳಿಯಂದು ಪಟಾಕಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ಭಾನುವಾರ ಸಂಜೆಯಿಂದ ರಾತ್ರಿವರೆಗೆ ಪಟಾಕಿ ಸಿಡಿಸಿದ್ದಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ ದೆಹಲಿಯಾದ್ಯಂತ ಗಾಳಿಯ ಗುಣಮಟ್ಟವು 'ಕಳಪೆ' ವಿಭಾಗದಲ್ಲಿದೆ. ಭಾನುವಾರ ಸಂಜೆ 4 ಗಂಟೆಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 218​​ಕ್ಕೆ ದಾಖಲಾಗಿದೆ. ಆದರೆ, ರಾತ್ರಿ 10 ಗಂಟೆಗೆ ಎಕ್ಯೂಐ 230 ತಲುಪಿತ್ತು. ಆನಂದ್ ವಿಹಾರ್‌ನಲ್ಲಿ 296, ಆರ್‌ಕೆ ಪುರಂನಲ್ಲಿ 290, ಪಂಜಾಬಿ ಬಾಗ್‌ನಲ್ಲಿ 280 ಮತ್ತು ಐಟಿಒದಲ್ಲಿ 263 ಎಕ್ಯೂಐ ದಾಖಲಾಗಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು?:''ಬೇರಿಯಂ ಹೊಂದಿರುವ ಪಟಾಕಿಗಳನ್ನು ನಿಷೇಧಿಸುವ ಆದೇಶವು ತೀವ್ರ ವಾಯುಮಾಲಿನ್ಯದಿಂದ ತತ್ತರಿಸುತ್ತಿರುವ ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಜೊತೆಗೆ ಪ್ರತಿ ರಾಜ್ಯಕ್ಕೂ ಈ ಆದೇಶ ಸಂಬಂಧಿಸಿದೆ'' ಎಂದು ಸುಪ್ರೀಂ ಕೋರ್ಟ್ ನವೆಂಬರ್ 7 ರಂದು ತಿಳಿಸಿತ್ತು.

ಇದನ್ನೂ ಓದಿ:ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವ ಪ್ರಮಾಣ ಅತಿ ಹೆಚ್ಚು

ABOUT THE AUTHOR

...view details