ಕರ್ನಾಟಕ

karnataka

By

Published : May 18, 2023, 3:49 PM IST

ETV Bharat / bharat

ಗುಜರಾತ್​ನಲ್ಲಿ ಧೀರೇಂದ್ರ ಶಾಸ್ತ್ರಿ ದಿವ್ಯ ದರ್ಬಾರ್​

ಗುಜರಾತ್​ನ ಸೂರತ್, ಅಹಮದಾಬಾದ್ ಮತ್ತು ರಾಜ್​ಕೋಟ್​ನಲ್ಲಿ ಮಧ್ಯಪ್ರದೇಶದ ಧೀರೇಂದ್ರ ಶಾಸ್ತ್ರಿ ತಮ್ಮ ದಿವ್ಯ ದರ್ಬಾರ್​ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.

baba bageshwar  divya darbar-function in gujarat
ಗುಜರಾತ್​ನಲ್ಲಿ ಧೀರೇಂದ್ರ ಶಾಸ್ತ್ರಿ ದಿವ್ಯ ದರ್ಬಾರ್​

ಅಹಮದಾಬಾದ್ (ಗುಜರಾತ್​):ನಿರಂತರ ವಿವಾದಗಳಿಂದ ಸುದ್ದಿಯಲ್ಲಿರುವ ಮಧ್ಯಪ್ರದೇಶದ ಬಾಗೇಶ್ವರ ಧಾಮದ ಬಾಬಾ ಬಾಗೇಶ್ವರ ಧೀರೇಂದ್ರ ಶಾಸ್ತ್ರಿ ಮೇ 26ರಿಂದ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದ ಪ್ರಮುಖ ನಗರಗಳಾದ ಸೂರತ್, ಅಹಮದಾಬಾದ್ ಮತ್ತು ರಾಜ್​ಕೋಟ್​ನಲ್ಲಿ ಧೀರೇಂದ್ರ ಶಾಸ್ತ್ರಿಗಳ ದಿವ್ಯ ದರ್ಬಾರ್​ ನಡೆಯಲಿದ್ದು, ಅದಕ್ಕಾಗಿ ಎಲ್ಲ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ.

26 ಮತ್ತು 27ರಂದು ಸೂರತ್ ನಗರದ ಲಿಂಬಾಯತ್‌ ಪ್ರದೇಶದ ನೀಲಗಿರಿ ಮೈದಾನದಲ್ಲಿ ಧೀರೇಂದ್ರ ಶಾಸ್ತ್ರಿಯವರ ದಿವ್ಯ ದರ್ಬಾರ್​ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಹಲವು ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲದೇ, ಧೀರೇಂದ್ರ ಶಾಸ್ತ್ರಿ ರೋಡ್ ಶೋ ಕೂಡ ನಡೆಸಲಿದ್ದಾರೆ ಎಂಬ ಮಾತುಗಳು ಅನುಯಾಯಿಗಳು ನಡುವೆ ಕೇಳಿ ಬರುತ್ತಿವೆ. ಧೀರೇಂದ್ರ ಶಾಸ್ತ್ರಿಗಳ ಈ ದಿವ್ಯ ದರ್ಬಾರ್​ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ವಿಶೇಷ ಎಂದರೆ ಈ ಕಾರ್ಯಕ್ರಮಕ್ಕಾಗಿ ಸೂರತ್​ ನಗರದ ಬಿಜೆಪಿ ಮುಖಂಡರು ಪೂರ್ವ ಸಿದ್ಧತೆ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸೂರತ್ ಬಳಿಕ ಮೇ 29 ಮತ್ತು 30ರಂದು ಅಹಮದಾಬಾದ್‌ನಲ್ಲಿ ದಿವ್ಯ ದರ್ಬಾರ್ ನಡೆಯಲಿದೆ.

ಅಹಮದಾಬಾದ್‌ನಲ್ಲಿ ಮೊದಲ ಬಾರಿಗೆ ಧೀರೇಂದ್ರ ಶಾಸ್ತ್ರಿಯವರ ದಿವ್ಯ ದರ್ಬಾರ್ ಆಯೋಜಿಸಲಾಗುತ್ತಿದೆ. ಎರಡು ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬಿಸಿಲಿನ ಬೇಗೆಯಿಂದಾಗಿ ಈ ಬಾರಿ ಇಡೀ ದರ್ಬಾರ್ ಸಂಜೆ 5ರಿಂದ ರಾತ್ರಿ 11ರವರೆಗೆ ನಡೆಯಲಿದೆ. ಧರ್ಮ, ಕರ್ಮ, ಜ್ಞಾನ, ಭಕ್ತಿ ಮತ್ತು ಸನಾತನ ಧರ್ಮದ ಪ್ರಚಾರದ ದೃಷ್ಟಿಯಿಂದ ಈ ದರ್ಬಾರ್​ ನಡೆಯಲಿದೆ ಎಂದು ರಾಧಿಕಾ ಸೇವಾ ಸಮಿತಿ ಸದಸ್ಯ ಆಚಾರ್ಯ ಪ್ರಮೋದ್ ಮಹಾರಾಜ್ ತಿಳಿಸಿದ್ದಾರೆ.

ದಿವ್ಯ ದರ್ಬಾರ್​ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಕಮಿಷನರ್‌ ಅವರಿಗೆ ಲಿಖಿತ ಮನವಿ ಪತ್ರ ಸಲ್ಲಿಸಲಾಗಿದೆ. 500ಕ್ಕೂ ಹೆಚ್ಚು ಪೊಲೀಸರ ಭದ್ರತೆ ಒದಗಿಸುವಂತೆ ಕೋರಲಾಗಿದೆ. ಇದಲ್ಲದೇ ಒಂದು ಸಾವಿರ ಅಂಗರಕ್ಷಕರು ಭದ್ರತೆಗೆ ನಿಯೋಜನೆಗೊಂಡಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜೂನ್ 1 ಮತ್ತು 2ರಂದು ಎರಡು ದಿನಗಳ ಕಾಲ ರಾಜ್‌ಕೋಟ್‌ನಲ್ಲಿ ಮುಂದಿನ ದಿವ್ಯ ದರ್ಬಾರ್​ ನಡೆಯಲಿದೆ. ರಾಜ್‌ಕೋಟ್‌ ದಿವ್ಯ ದರ್ಬಾರ್​ ಕಾರ್ಯಕ್ರಮದ ಉಸ್ತುವಾರಿ ರಜಪೂತ ಕರ್ಣಿ ಸೇನೆ ಮತ್ತು ಹಿಂದೂ ಧರ್ಮ ಸೇನೆ ವಹಿಸಿಕೊಂಡಿದೆ.

ಈ ದರ್ಬಾರ್​ನಲ್ಲಿ ರಾಜ್‌ಕೋಟ್ ಮತ್ತು ಸೌರಾಷ್ಟ್ರದಾದ್ಯಂತ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಇದರಲ್ಲಿ ಪಾಲ್ಗೊಳ್ಳಲು ಬಯಸುವ ಜನತೆ ಒಂದು ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಇದಕ್ಕೆ ನೋಂದಣಿ ಸೇರಿ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಧೀರೇಂದ್ರ ಶಾಸ್ತ್ರಿಗಳು ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಯಾವುದೇ ವಿವಾದ ಆಗಬಾರದು ಮತ್ತು ಯಾರೂ ಇಲ್ಲಿ ಪ್ರತಿಭಟನೆಗೆ ಇಳಿಯಬಾರದು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ರಜಪೂತ ಕರ್ಣಿ ಸೇನೆ ಹಾಗೂ ಹಿಂದೂ ಧರ್ಮ ಸೇನೆಯ 400 ಕಾರ್ಯಕರ್ತರು ಭದ್ರತೆ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂದು ರಜಪೂತ ಕರ್ಣಿ ಸೇನೆಯ ಸೌರಾಷ್ಟ್ರ ಅಧ್ಯಕ್ಷ ಕೃಷ್ಣ ಸಿಂಗ್ ಜಡೇಜಾ ಮತ್ತು ಬಾಗೇಶ್ವರ್ ಧಾಮ್ ಸೇವಾ ಸಮಿತಿಯ ಸದಸ್ಯ ಯೋಗಿನ್‌ಭಾಯ್ ಚನಿಯಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ನಾನು ಸಂತನಲ್ಲ, ಸರಳ ವ್ಯಕ್ತಿ.. ಮದುವೆ ಬಗ್ಗೆ ಧೀರೇಂದ್ರ ಶಾಸ್ತ್ರಿ ಅಚ್ಚರಿ ಹೇಳಿಕೆ

ABOUT THE AUTHOR

...view details