ಕರ್ನಾಟಕ

karnataka

By

Published : May 24, 2023, 6:56 PM IST

ETV Bharat / bharat

ದ್ವೇಷ ಭಾಷಣ.. ಶಾಸಕ ಸ್ಥಾನ ಕಳೆದುಕೊಂಡಿದ್ದ ಪ್ರಕರಣದಲ್ಲಿ ಅಜಂ ಖಾನ್ ಖುಲಾಸೆ

ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರನ್ನು ಉತ್ತರ ಪ್ರದೇಶದ ರಾಂಪುರ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶಿಸಿದೆ.

ಶಾಸಕ ಸ್ಥಾನ ಕಳೆದುಕೊಂಡಿದ್ದ ಪ್ರಕರಣದಲ್ಲಿ ಅಜಂ ಖಾನ್ ಖುಲಾಸೆ
azam-khan-acquitted-in-hate-speech-case

ರಾಂಪುರ (ಉತ್ತರ ಪ್ರದೇಶ): ದ್ವೇಷ ಭಾಷಣ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ, ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ತಮ್ಮ ಶಾಸಕ ಸ್ಥಾನ ಕಳೆದುಕೊಂಡಿದ್ದ 2019ರ ದ್ವೇಷ ಭಾಷಣ ಪ್ರಕರಣದಿಂದ ಬುಧವಾರ ರಾಂಪುರ ನ್ಯಾಯಾಲಯವು ಅಜಂ ಖಾನ್ ಅವರನ್ನು ಖುಲಾಸೆಗೊಳಿಸಿ ಆದೇಶಿಸಿದೆ.

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಿಲಾಕ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಭೆಯೊಂದರಲ್ಲಿ ಅಜಂ ಖಾನ್ ಆಕ್ಷೇಪಾರ್ಹ ಭಾಷಣ ಮಾಡಿದ್ದರು. ಸಾರ್ವಜನಿಕ ಸಭೆಯಲ್ಲಿ ಅಜಂ ಖಾನ್ ಮಾಡಿದ್ದ ಭಾಷಣದ ವೇಳೆ ಪ್ರಧಾನಿ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ವಿರುದ್ಧ ಅವಹೇಳನಕಾರಿಯಾಗಿ ಟೀಕಿಸಿದ್ದರು. ಅಲ್ಲದೇ, ಕೋಮ ಸೌಹಾರ್ದತೆ ಕೆರಳಿಸುವ ಮಾತನಾಡಿದ್ದರು. ಇದರ ವಿಡಿಯೋ ವೈರಲ್​ ಆಗಿತ್ತು.

ಈ ಸಂಬಂಧ ಬಿಜೆಪಿ ಮುಖಂಡ ಆಕಾಶ್ ಸಕ್ಸೇನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರದಲ್ಲಿ ಈ ವಿಷಯವು ರಾಂಪುರದ ಎಂಪಿ ಎಂಎಲ್ಎ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು 2022ರ ಅಕ್ಟೋಬರ್​ 17ರಂದು ಅಜಂ ಖಾನ್‌ ಅವರನ್ನು ಕೋರ್ಟ್​ ದೋಷಿ ಎಂದು ಪ್ರಕಟಿಸಿತ್ತು. ಅಲ್ಲದೇ, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಇದರ ಪರಿಣಾಮ ಅಜಂ ಖಾನ್ ತಮ್ಮ ಶಾಸಕತ್ವವನ್ನು ಕಳೆದುಕೊಂಡಿದ್ದರು. ಇದಲ್ಲದೇ ಅವರ ಮತದಾನದ ಹಕ್ಕನ್ನೂ ಕಳೆದುಕೊಳ್ಳಬೇಕಾಗಿ ಬಂದಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಅಜಂ ಖಾನ್ ಅದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಆಲಿಸಿದ ನ್ಯಾಯಾಲಯವು ಇದೀಗ ಪ್ರಕರಣದಿಂದಲೇ ದೋಷಮುಕ್ತಗೊಳಿಸಿದೆ. ಹೀಗಾಗಿ ನ್ಯಾಯಾಲಯದಿಂದ ಅಜಂ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.

ಇದನ್ನೂ ಓದಿ:ಅನರ್ಹ ಜನಪ್ರತಿನಿಧಿ ಪಟ್ಟಿಗೆ ಸೇರಿದ ರಾಹುಲ್ ಗಾಂಧಿ: ಚುನಾಯಿತ ಸ್ಥಾನ ಕಳೆದುಕೊಂಡ ರಾಜಕಾರಣಿಗಳು ಎಷ್ಟು?

2017ರಲ್ಲಿ ನಡೆದ ರಾಂಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಜಂ ಖಾನ್ ಗೆದ್ದಿದ್ದರು. ಬಳಿಕ 2019ರಲ್ಲಿ ಲೋಕಸಭೆ ಚುನಾವಣೆಗೂ ಸ್ಪರ್ಧಿಸಿ ಜಯ ಸಾಧಿಸಿದ್ದರು. ಇದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದರಾಗಿ ಮುಂದುವರೆದಿದ್ದರು. ಆದರೆ, 2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅದೇ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಸಕರಾಗಿಯೇ ಮುಂದುವರೆದಿದ್ದರು.

ಇದರ ನಡುವೆ ಕೋರ್ಟ್​ನಿಂದ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ಇದರಿಂದ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಆಕಾಶ್ ಸಕ್ಸೇನಾ ಗೆಲುವು ಸಾಧಿಸಿ ಶಾಸಕರಾಗಿ ಮುಂದುವರೆದಿದ್ದಾರೆ. ಎರಡು ವರ್ಷಕ್ಕಿಂತ ಅಧಿಕ ಜೈಲು ಶಿಕ್ಷೆಗೆ ಒಳಗಾಗುವ ಜನಪ್ರತಿನಿಧಿ ತನ್ನ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ನಿಯಮ ಇದೆ. ಇದೀಗ ಕೋರ್ಟ್​ ಅಜಂ ಖಾನ್ ಅವರನ್ನು ದೋಷ ಮುಕ್ತಗೊಳಿಸಿದೆ. ಹೀಗಾಗಿ ಮುಂದೆ ಅವರಿಗೆ ಮತ್ತೆ ಶಾಸಕತ್ವ ಸಿಗುತ್ತಾ ಎಂಬುವುದು ಪ್ರಶ್ನೆ ಉದ್ಭವಿಸಿದೆ.

ಮತ್ತೊಂದೆಡೆ, ಅಜಂ ಖಾನ್ ಪುತ್ರ ಅಬ್ದುಲ್ಲಾ ರಾಜಕಾರಣಿಯಾಗಿದ್ದಾರೆ. ರಾಂಪುರ ಜಿಲ್ಲೆಯ ಸೂರ್ ವಿಧಾನಸಭೆ ಕ್ಷೇತ್ರವನ್ನು ಅಬ್ದುಲ್ಲಾ ಪ್ರತಿನಿಧಿಸುತ್ತಿದ್ದರು. 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇತ್ತೀಚೆಗೆ ಅಬ್ದುಲ್ಲಾ ಕೂಡ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ವಿಧಾನಸಭೆಯಿಂದ ಇದೇ ಫೆಬ್ರವರಿಯಲ್ಲಿ ಅನರ್ಹಗೊಳಿಸಲಾಗಿದೆ. ಇದರಿಂದ ನಡೆದ ಉಪ ಚುನಾವಣೆಯಲ್ಲಿ ಅಪ್ನಾ ದಳದ ಶಫೀಕ್ ಅಹ್ಮದ್ ಅನ್ಸಾರಿ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ:ದ್ವೇಷ ಭಾಷಣಕ್ಕೆ ಜೈಲು ಶಿಕ್ಷೆ ಎಫೆಕ್ಟ್‌: ಶಾಸಕ ಸ್ಥಾನದಿಂದ ಅಜಂ ಖಾನ್​ ಅನರ್ಹ

ABOUT THE AUTHOR

...view details